Site icon Vistara News

BBK Season 10: ಕಳಪೆ ಪಟ್ಟ ಸಂಗೀತಾಗೆ; ಹಳ್ಳಿಮನೆ ಯಜಮಾನ್ತಿ ಜೈಲಿನೊಳಗೆ!

sangeetha sringeri

ಬೆಂಗಳೂರು: ವಿನಯ್‌ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾದ (BBK Season 10) ಮರುಕ್ಷಣವೇ ಎದುರಾಳಿ ತಂಡದ ನಾಯಕಿ ಸಂಗೀತಾ ಶೃಂಗೇರಿ ಅವರಿಗೆ ಏನೋ ಕಾದಿದೆ ಎಂಬುದು ನಿಕ್ಕಿಯಾಗಿಹೋಗಿತ್ತು. ಅವರಿಗೆ ಒದಗಿ ಬಂದಿದ್ದು ಏನು ಎಂಬುದು ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ. ಈ ವಾರ ಕಳಪೆ ಪ್ರದರ್ಶನ ನೀಡಿದವರು ಯಾರು ಎಂಬುದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಗಳಿಗೆಯಲ್ಲಿ ರಕ್ಷಕ್, ತುಕಾಲಿ ಅವರು, ನಮ್ರತಾ, ಸ್ನೇಹಿತ್‌, ವಿನಯ್ ಎಲ್ಲರೂ ಸಂಗೀತಾ ಅವರ ಹೆಸರು ಹೇಳಿದ್ದಾರೆ.

ಎಲ್ಲರ ಮಾತಿನಲ್ಲಿಯೂ ಸಂಗೀತಾ ವ್ಯಕ್ತಿತ್ವದ ಬಗ್ಗೆ, ಅವರು ಉಳಿದ ಸ್ಫರ್ಧಿಗಳಿಗೆ ಸರಿಯಾಗಿ ಗೌರವ ಕೊಡುವುದಿಲ್ಲ ಎನ್ನುವುದರ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ಸ್ನೇಹಿತ್ ಅವರಂತೂ, ‘ಇಡೀ ಮನೆಯ ವಾತಾವರಣವೇ ಹಾಳಾಗಿದೆ’ ಎಂದೂ ಹೇಳಿದ್ದಾರೆ. ಆದರೆ ಸಂಗೀತಾ ಮಾತ್ರ, ಮೊದಲು ತಪ್ಪಾಗಿದ್ದು ನನ್ನಿಂದಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ‘ಇಡೀ ಮನೆ ನನ್ನ ಅಗೇನಸ್ಟ್ ಇರೋ ಹಾಗಿದೆ ಅನಿಸ್ತಿದೆ’ ಎಂದೂ ಹೇಳಿದ್ದಾರೆ.
ಅಂತಿಮವಾಗಿ ಜೈಲಿನ ಉಡುಗೆ ತೊಟ್ಟುಕೊಂಡು ಸಂಗೀತಾ ಜೈಲಿನೊಳಗೆ ಇಳಿದಿದ್ದಾರೆ. ವಿನಯ್‌ ಜೈಲಿನ ಬಾಗಿಲಿಗೆ ಬೀಗ ಹಾಕಿದ್ದಾರೆ. ಕಾರ್ತಿಕ್ ಮೌನವಾಗಿ ಇದನ್ನೆಲ್ಲ ನೋಡುತ್ತಿದ್ದಾರೆ. ಕಾರ್ತಿಕ್ ಮೌನದ ಹಿಂದಿರುವ ಕೋಪ, ಸಂಗೀತಾ ನೋವಿನ ಪರಿಣಾಮ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ.

ಇದನ್ನೂ ಓದಿ: BBK Season 10: ವಿನಯ್‌ಗೆ ಕ್ಯಾಪ್ಟನ್ ಪಟ್ಟಾಭಿಷೇಕ; ಶೋ ಮುಂಚೆಯೂ ಇತ್ತು ಸಂಗೀತಾ ಜತೆ ವೈಮನಸ್ಸು?

ವಿನಯ್‌ಗೆ ಕ್ಯಾಪ್ಟನ್ ಪಟ್ಟಾಭಿಷೇಕ

ಕೊನೆಗೂ ವಿನಯ್‌ ಬಿಗ್‌ಬಾಸ್‌ ಮನೆಯಲ್ಲಿ ಕ್ಯಾಪ್ಟನ್ ಆಗುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲನೇ ವಾರದಿಂದಲೂ ಕ್ಯಾಪ್ಟನ್‌ ಆಗಲು ಒಂದಿಲ್ಲ ಒಂದು ಬಗೆಯಲ್ಲಿ ಪ್ರಯತ್ನಿಸುತ್ತಲೇ ಇದ್ದ ವಿನಯ್‌ಗೆ ನಾಲ್ಕನೇ ವಾರದಲ್ಲಿ ಯಶಸ್ಸು ದೊರಕಿದೆ. ಹಳ್ಳಿಜೀವನದ ಟಾಸ್ಕ್‌ನಲ್ಲಿ ವಿನಯ್‌ ತಂಡ ಗೆದ್ದು ಬೀಗಿತ್ತು. ಸಂಗೀತಾ ತಂಡ ಸೋತು ತಣ್ಣಗಾಗಿತ್ತು. ಹಾಗಾಗಿ ವಿನಯ್ ತಂಡದ ಎಲ್ಲರ ಜೊತೆ ತುಕಾಲಿ ಸಂತೋಷ್ ಕೂಡ ಕ್ಯಾಪ್ಟನ್ಸಿ ಟಾಸ್ಕ್‌ಗೆ ಅರ್ಹರಾಗಿದ್ದರು. ಟಾಸ್ಕ್‌ನಲ್ಲಿ ಕೊನೆಗೆ ಉಳಿದಿದ್ದು ತುಕಾಲಿ ಮತ್ತು ವಿನಯ್ ಇಬ್ಬರೇ. ತುಕಾಲಿ ಅವರಿಗೆ ವಿನಯ್‌ ಅವರನ್ನು ಕ್ಯಾಪ್ಟನ್ಸಿ ರೇಸ್‌ನಿಂದ ಹೊರಗೆ ಹಾಕುವ ಅವಕಾಶವಿದ್ದಾಗಲೂ ಅವರು ಅದನ್ನು ಬಳಸಿಕೊಳ್ಳದೆ ಸಿರಿ ಅವರನ್ನು ಹೊರಗೆ ಹಾಕಿದ್ದರು. ಇದರ ಪರಿಣಾಮವಾಗಿ ತುಕಾಲಿ ತಾವೇ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸೋತು ಕ್ಯಾಪ್ಟನ್‌ ಪಟ್ಟವನ್ನು ವಿನಯ್‌ ಅವರಿಗೆ ಬಿಟ್ಟುಕೊಡಬೇಕಾಗಿತ್ತು.

ಪ್ರತಾಪ್‌ ಅವರು ‘ವಿನಯ್ ಅವರು ಈ ವಾರ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ’ ಎಂದು ಘೋಷಿಸಿದ ಗಳಿಗೆಯಲ್ಲಿ ಸಂಗೀತಾ ಗ್ಯಾಂಗ್‌ ಪೂರ್ತಿ ಮೌನವಾಗಿ ಕೂತುಬಿಟ್ಟಿತ್ತು. ವಿನಯ್‌, ತಮ್ಮದೇ ಸ್ಟೈಲ್‌ನಲ್ಲಿ, ‘ಆನೆ ಬಂತೊಂದಾನೆ…’ ಎಂದು ಸಂಭ್ರಮಿಸುತ್ತಿರುವಾಗ ಕಾರ್ತಿಕ್ ಮುಖದಲ್ಲಿ ಆತಂಕ ಎದ್ದು ಕಾಣಿಸುವಂತಿತ್ತು.

ಡ್ರೆಸ್ಸಿಂಗ್ ರೂಮಿನಲ್ಲಿ ಸಂಗೀತಾ ಕನ್ನಡಿ ಮುಂದೆ ನಿಂತು, ‘ನಾವು ಆನೆ ವಿರೋಧಿಗಳಲ್ಲ; ನಾವು ಆನೆಗೆ ಹೆದರೋದೂ ಇಲ್ಲ’ ಎಂದು ಡೈಲಾಗ್ ಹೊಡೆದಿರುವುದು ಮುಂದಿನ ವಾರ ಇನ್ನಷ್ಟು ಹಗ್ಗ ಜಗ್ಗಾಟ ನಡೆಯುವ ಸ್ಪಷ್ಟ ಸೂಚನೆಯನ್ನಂತೂ ನೀಡಿದೆ. ಹಾಗಾದರೆ ಈಗ ಸ್ಪಷ್ಟವಾಗಿ ಗುಂಪಾಗಿರುವ ಎರಡು ಗ್ಯಾಂಗಿನ ಮುಂದಿನ ವಾರ ಹೇಗಿರಲಿದೆ? ಕ್ಯಾಪ್ಟನ್‌ ಅಧಿಕಾರವನ್ನು ವಿನಯ್ ತಮ್ಮ ವಿರೋಧಿಗಳ ಮೇಲೆ ಸೇಡು ತೀರಿಕೊಳ್ಳಲು ಬಳಸಿಕೊಳ್ಳುತ್ತಾರಾ? ಎಂಬುದು ಮುಂಚಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

Exit mobile version