Site icon Vistara News

BBK Season 10: ಸಂತೋಷ್ ಡ್ರಗ್ಸ್ ಅಡಿಕ್ಟ್, ರೈತರು ನಂಬಬೇಡಿ; ಕೇಳಿಬಂತು ಆರೋಪ!

varthur Santosh Yalahanka Manjunath

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK Season 10) ಹಲವು ವಿಚಾರಗಳಿಂದ ಚರ್ಚೆಗೆ ಕಾರಣವಾಗುತ್ತಿದೆ. ಸ್ಪರ್ಧಿಗಳ ವರ್ತನೆ, ಜಗಳ, ಸ್ನೇಹ ಎಲ್ಲವೂ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ವೈಯಕ್ತಿಕ ಕಾರಣದಿಂದ ಬಿಗ್‌ ಬಾಸ್‌ ಮನೆಯಿಂದ ಹೊರ ಹೋಗುವುದಾಗಿ ಹಠ ಹಿಡಿದಿದ್ದ ಕೃಷಿಕ ವರ್ತೂರು ಸಂತೋಷ್ (Varthur Santhosh)​ ಮದುವೆಯ ವಿಚಾರಕ್ಕೂ ಸುದ್ದಿಯಲ್ಲಿದ್ದಾರೆ. ಮಾತ್ರವಲ್ಲ ಅವರು ಡ್ರಗ್ಸ್‌ ಕೂಡ ಸೇವನೆ ಮಾಡುತ್ತಿದ್ದರು ಎಂದು ಅವರ ಮಾವ ಸೋಮನಾಥ್ ಆರೋಪಿಸಿದ್ದಾರೆ. ಇದೀಗ ಯಾರು ರೈತರು ವರ್ತೂರ್‌ ಸಂತೋಷ್‌ರನ್ನು ನಂಬಿ ಮೋಸ ಹೋಗಬೇಡಿ ಎಂದು ಹೋರಾಟಗಾರ ಯಲಹಂಕ ಮಂಜುನಾಥ್ ಹೇಳಿಕೆ ನೀಡಿದ್ದಾರೆ.

ʻʻಹೆಣ್ಣು ಮಗು ಹುಟ್ಟಿತ್ತು ಎಂದು ಗೊತ್ತಾದ ಮೇಲೂ ನೋಡಲು ಬರಲಿಲ್ಲ. ಆಗ ಎಲ್ಲರಿಗೂ ನನಗೆ ಮಗು ಹುಟ್ಟಿಲ್ಲ ಎಂದು ಹೇಳಿಕೊಂಡು ಬಂದರು. ಮದುವೆ ಆದ ಮೂರು ದಿನಕ್ಕೆ ಡಿವೋರ್ಸ್ ತೆಗೆದುಕೊಳ್ಳಿ ಎಂದು ಸಂತೋಷ್ ತಾಯಿ ಹೇಳಿಬಿಟ್ಟರು’ ಎಂದು ಸೋಮನಾಥ್ ಮಾಧ್ಯಮದ ಮುಂದೆ ಅನೇಕ ವಿಚಾರಗಳನ್ನು ಹೇಳಿದ್ದಾರೆ. ಇದೀಗ ಹೋರಾಟಗಾರ ಯಲಹಂಕ ಮಂಜುನಾಥ್ ರೈತರ ವಿಚಾರದಲ್ಲಿ ವರ್ತೂರ್‌ ತಪ್ಪು ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ʻʻರೈತ ಎಂದು ಹೇಳಿಕೊಂಡ ರೈತನ ವಿಚಾರದಲ್ಲಿ ತಪ್ಪು ಮಾಡಿದ್ದಾರೆ. ವರ್ಷಕ್ಕೆ ಒಮ್ಮೆ ಹಳ್ಳಿಕಾರ್ ರೇಸ್‌ ಮಾಡುತ್ತಿದ್ದ. ರೇಸ್ ಮಾಡೋದಕ್ಕೆ 60 ಲಕ್ಷ ರೂ. ಕಲೆಕ್ಟ್‌ ಮಾಡುತ್ತಿದ್ದ. ಒಬ್ಬೊಬ್ಬ ರೈತರಿಂದ ಸಾವಿರ ರೂ. ಕಲೆಕ್ಟ್ ಮಾಡಿದ್ದಾನೆ ವರ್ತೂರ್‌. ನನಗೆ ಒಂದುವರೆ ವರ್ಷದಿಂದ ಸಂತೋಷ್ ಗೊತ್ತು. ವರ್ತೂರು ಸಂತೋಷ್ ಡ್ರಗ್ಸ್ ಅಡಿಕ್ಟ್ ಆಗಿದ್ದರು. ನಂದಿನಿ ಲೇಔಟ್ ಸ್ಪಂದನಾ ಆಸ್ಪತ್ರೆಗೆ ಅವರ ಮಾವ ಅಡ್ಮಿಟ್ ಕೂಡ ಮಾಡಿದ್ದರು. ಹೆಂಡತಿ ಜತೆ ಜಗಳವಾಗಿ ಚಾಕುನಲ್ಲಿ ಇರಿದಿದ್ದರು. ಮಾವ ಕೇಳಿದ್ದಕ್ಕೆ ಅವರ ಕೈಗು ಚಾಕು ಹಾಕಿದ್ರು. ರೈತ ಎಂದು ಹೇಳಿಕೊಂಡು ಓಡಾಡುವ ಸಂತೋಷ್‌ ರೈತನೇ ಅಲ್ಲ ಅವನೊಬ್ಬ ನಾಲಾಯಕ್. ಯಾರು ರೈತರು ಅವನನ್ನು ನಂಬಿ ಮೋಸ ಹೋಗಬೇಡಿ ಎಂದು ಹೋರಾಟಗಾರ ಯಲಹಂಕ ಮಂಜುನಾಥ್ ಹೇಳಿಕೆ ನೀಡಿದರು.

ಇದನ್ನೂ ಓದಿ: BBK SEASON 10: ಈ ಟಕ್ಕು ಟಕ್ಕು ಅಂದ್ರೇನು ಮೈಕಲ್? ನೆಟ್ಟಿಗರ ಪ್ರಶ್ನೆ; ಕ್ಯಾಪ್ಟನ್‌ ರೂಲ್ಸ್‌ ಬ್ರೇಕ್‌!

‘ಹಳ್ಳಿಕಾರ್ ಒಡೆಯ’ ಎಂದೇ ಜನಪ್ರಿಯತೆ ಪಡೆದಿರುವ ವರ್ತೂರು ಸಂತೋಷ್‌ ಬಿಗ್‌ಬಾಸ್‌ ಪ್ರವೇಶಿಸಿದ ಬಳಿಕ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಹುಲಿ ಉಗುರು (Tiger Nail) ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಅವರು ಬಳಿಕ ಆಟ ಮುಂದುವರಿಸಿದ್ದರು. ಈ ಮಧ್ಯೆ ಅವರು ವೈಯಕ್ತಿಕ ಕಾರಣ ನೀಡಿ ಸಾಕಷ್ಟು ವೋಟ್‌ ಬಂದಿದ್ದರೂ ಸ್ಪರ್ಧೆಯನ್ನು ಅರ್ಧದಲ್ಲೇ ಮೊಟಕುಗೊಳಿಸುವ ನಿರ್ಧಾರ ಪ್ರಕಟಿಸಿದ್ದರು. ಮಾತ್ರವಲ್ಲ ತನಿಷಾ ಜತೆಗಿನ ಒಡನಾಟವೂ ಸದ್ದು ಮಾಡುತ್ತಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version