Site icon Vistara News

BBK Season 10: ವಿನಯ್‌ಗೆ ಕ್ಯಾಪ್ಟನ್ ಪಟ್ಟಾಭಿಷೇಕ; ಶೋ ಮುಂಚೆಯೂ ಇತ್ತು ಸಂಗೀತಾ ಜತೆ ವೈಮನಸ್ಸು?

Vinay gowda Sangeetha bbk 10

ಬೆಂಗಳೂರು: ಹಳ್ಳಿ ಟಾಸ್ಕ್‌ನಲ್ಲಿ (BBK Season 10) ವಿನಯ್ ತಂಡವನ್ನು ತುಕಾಲಿ ಸಂತು ಸೇರಿಕೊಂಡು ಆಟ ಆಡಿ ಕ್ಯಾಪ್ಟನ್‌ ಟಾಸ್ಕ್‌ವರೆಗೂ ಬಂದರು. ಈ ವಾರ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ವಿನಯ್ ಗೌಡ ವಿರುದ್ಧ ತುಕಾಲಿ ಸಂತು ಆಡಿ, ವಿನಯ್‌ ಗೆದ್ದು ಬೀಗಿದ್ದಾರೆ. ಕ್ಯಾಪ್ಟನ್ ಆದ ಬಳಿಕ ‘ಆನೆ ಬಂತೊಂದಾನೆ’ ಎಂದು ಹಾಡು ಹೇಳಿದ್ದಾರೆ. ಇದಕ್ಕೆ ಸಂಗೀತಾ ರಿಯಾಕ್ಷನ್ ನೀಡಿದ್ದಾರೆ. ‘ನಾವು ಆನೆ ವಿರೋಧಿಗಳಲ್ಲ, ಹಾಗಂತ ಆನೆಗೆ ಹೆದರೋದು ಇಲ್ಲ’ ಎಂದು ಖಡಕ್ ಆಗಿ ಹೇಳಿದ್ದಾರೆ. ಇದೀಗ ಈ ಪ್ರೋಮೊವನ್ನು ಕಲರ್ಸ್‌ ಕನ್ನಡ ವಾಹಿನಿ ಹಂಚಿಕೊಂಡಿದೆ.

ಕೊನೆಗೂ ವಿನಯ್‌ ಬಿಗ್‌ಬಾಸ್‌ ಮನೆಯಲ್ಲಿ ಕ್ಯಾಪ್ಟನ್ ಆಗುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲನೇ ವಾರದಿಂದಲೂ ಕ್ಯಾಪ್ಟನ್‌ ಆಗಲು ಒಂದಿಲ್ಲ ಒಂದು ಬಗೆಯಲ್ಲಿ ಪ್ರಯತ್ನಿಸುತ್ತಲೇ ಇದ್ದ ವಿನಯ್‌ಗೆ ನಾಲ್ಕನೇ ವಾರದಲ್ಲಿ ಯಶಸ್ಸು ದೊರಕಿದೆ. ಹಳ್ಳಿಜೀವನದ ಟಾಸ್ಕ್‌ನಲ್ಲಿ ವಿನಯ್‌ ತಂಡ ಗೆದ್ದು ಬೀಗಿತ್ತು. ಸಂಗೀತಾ ತಂಡ ಸೋತು ತಣ್ಣಗಾಗಿತ್ತು. ಹಾಗಾಗಿ ವಿನಯ್ ತಂಡದ ಎಲ್ಲರ ಜೊತೆ ತುಕಾಲಿ ಸಂತೋಷ್ ಕೂಡ ಕ್ಯಾಪ್ಟನ್ಸಿ ಟಾಸ್ಕ್‌ಗೆ ಅರ್ಹರಾಗಿದ್ದರು. ಟಾಸ್ಕ್‌ನಲ್ಲಿ ಕೊನೆಗೆ ಉಳಿದಿದ್ದು ತುಕಾಲಿ ಮತ್ತು ವಿನಯ್ ಇಬ್ಬರೇ. ತುಕಾಲಿ ಅವರಿಗೆ ವಿನಯ್‌ ಅವರನ್ನು ಕ್ಯಾಪ್ಟನ್ಸಿ ರೇಸ್‌ನಿಂದ ಹೊರಗೆ ಹಾಕುವ ಅವಕಾಶವಿದ್ದಾಗಲೂ ಅವರು ಅದನ್ನು ಬಳಸಿಕೊಳ್ಳದೆ ಸಿರಿ ಅವರನ್ನು ಹೊರಗೆ ಹಾಕಿದ್ದರು. ಇದರ ಪರಿಣಾಮವಾಗಿ ತುಕಾಲಿ ತಾವೇ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸೋತು ಕ್ಯಾಪ್ಟನ್‌ ಪಟ್ಟವನ್ನು ವಿನಯ್‌ ಅವರಿಗೆ ಬಿಟ್ಟುಕೊಡಬೇಕಾಗಿತ್ತು.

ಬಿಗ್‌ಬಾಸ್‌ ಈ ಸೀಸನ್‌ನ ಪ್ರಾರಂಭದ ದಿನದಿಂದಲೂ ಸಂಗೀತಾ ವರ್ಸಸ್ ವಿನಯ್‌ ಜಟಾಪಟಿ ನಡೆಯುತ್ತಲೇ ಇದೆ. ಹಳ್ಳಿಜೀವನದ ಟಾಸ್ಕ್‌ಗಳಲ್ಲಿಯಂತೂ ಅದು ಅತಿರೇಕಕ್ಕೇ ಹೋಗಿತ್ತು. ಸಂಗೀತಾ ಮತ್ತು ಅವರ ತಂಡದ ಎಲ್ಲ ಸದಸ್ಯರೂ ವಿನಯ್ ಅವರನ್ನು ಕೆಣಕಿ, ಅವರ ಮಾತಿಗೆ ನೇರವಾಗಿ ಕೌಂಟರ್ ಕೊಟ್ಟು ಸಾಕಷ್ಟು ಕೆರಳಿಸಿದ್ದರು. ಆದರೆ ಇದೀಗ ವಿನಯ್ ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಯಾವ ಅಧಿಕಾರ ಇಲ್ಲದಿದ್ದಾಗಲೂ ವಿನಯ್ ಅವರನ್ನು ತಡೆಯುವುದು ಕಷ್ಟ. ಇನ್ನು ಅಧಿಕಾರ ಸಿಕ್ಕ ಮೇಲೆ ಕೇಳಬೇಕೆ?

ಇದನ್ನೂ ಓದಿ: BBK Season 10: ಕ್ಯಾಪ್ಟನ್ ಆಗೋಕೆ ಈ ವಾರ ವಿನಯ್‌-ತುಕಾಲಿ  ಸೆಣಸಾಟ; ಸಂಗೀತಾರನ್ನು ದೂರಿದ ಸಂತೋಷ್‌!

ಪ್ರತಾಪ್‌ ಅವರು ‘ವಿನಯ್ ಅವರು ಈ ವಾರ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ’ ಎಂದು ಘೋಷಿಸಿದ ಗಳಿಗೆಯಲ್ಲಿ ಸಂಗೀತಾ ಗ್ಯಾಂಗ್‌ ಪೂರ್ತಿ ಮೌನವಾಗಿ ಕೂತುಬಿಟ್ಟಿತ್ತು. ವಿನಯ್‌, ತಮ್ಮದೇ ಸ್ಟೈಲ್‌ನಲ್ಲಿ, ‘ಆನೆ ಬಂತೊಂದಾನೆ…’ ಎಂದು ಸಂಭ್ರಮಿಸುತ್ತಿರುವಾಗ ಕಾರ್ತಿಕ್ ಮುಖದಲ್ಲಿ ಆತಂಕ ಎದ್ದು ಕಾಣಿಸುವಂತಿತ್ತು.

ಡ್ರೆಸ್ಸಿಂಗ್ ರೂಮಿನಲ್ಲಿ ಸಂಗೀತಾ ಕನ್ನಡಿ ಮುಂದೆ ನಿಂತು, ‘ನಾವು ಆನೆ ವಿರೋಧಿಗಳಲ್ಲ; ನಾವು ಆನೆಗೆ ಹೆದರೋದೂ ಇಲ್ಲ’ ಎಂದು ಡೈಲಾಗ್ ಹೊಡೆದಿರುವುದು ಮುಂದಿನ ವಾರ ಇನ್ನಷ್ಟು ಹಗ್ಗ ಜಗ್ಗಾಟ ನಡೆಯುವ ಸ್ಪಷ್ಟ ಸೂಚನೆಯನ್ನಂತೂ ನೀಡಿದೆ. ಹಾಗಾದರೆ ಈಗ ಸ್ಪಷ್ಟವಾಗಿ ಗುಂಪಾಗಿರುವ ಎರಡು ಗ್ಯಾಂಗಿನ ಮುಂದಿನ ವಾರ ಹೇಗಿರಲಿದೆ? ಕ್ಯಾಪ್ಟನ್‌ ಅಧಿಕಾರವನ್ನು ವಿನಯ್ ತಮ್ಮ ವಿರೋಧಿಗಳ ಮೇಲೆ ಸೇಡು ತೀರಿಕೊಳ್ಳಲು ಬಳಸಿಕೊಳ್ಳುತ್ತಾರಾ? ಎಂಬುದು ಮುಂಚಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಮುಂಚೆಯೇ ಇತ್ತು ವೈಮನಸ್ಸು

ಬಿಗ್‌ ಬಾಸ್‌ ಮನೆಯಲ್ಲಿ ವಿನಯ್‌ ಹಾಗೂ ಸಂಗೀತಾ ನಡುವೆ ಕಿತ್ತಾಟ ಆಗುವುದೇ ಮೊದಲೇನಲ್ಲ. ಇದಕ್ಕೂ ಮುಂಚೆ ವಿನಯ್‌ ಹಾಗೂ ಸಂಗೀತಾ ‘ಹರ ಹರ ಮಹದೇವ’ ಧಾರಾವಾಹಿಯಲ್ಲಿ ಶಿವ ಹಾಗೂ ಪಾರ್ವತಿ ಪಾತ್ರ ಮಾಡಿದ್ದರು. ಒಟ್ಟಿಗೆ ನಟಿಸಿರುವ ಕಾರಣ ಇಬ್ಬರ ಮಧ್ಯೆ ಒಳ್ಳೆಯ ಫ್ರೆಂಡ್‌ ಶಿಪ್‌ ಇರಬೇಕಿತ್ತು. ಈ ವಾರವಂತೂ ಸಂಗೀತಾ ಹಾಗೂ ವಿನಯ್‌ ಜಗಳ ದೊಡ್ಡ ಮಟ್ಟದಲ್ಲಿ ಆಗಿತ್ತು. ಈ ಬಗ್ಗೆ ವರ್ತೂರು ಸಂತೋಷ್​ಗೆ ಪ್ರಶ್ನೆ ಮೂಡಿ ವಿನಯ್‌ ಅವರಿಗೆ ಪ್ರಶ್ನೆ ಇಟ್ಟಿದ್ದಾರೆ.

ಇದನ್ನೂ ಓದಿ: BBK Season 10: ಪ್ರತಾಪ್‌ ಹೆಣ್ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡ್ತಾನೆ; ವಿನಯ್‌ ಗಂಭೀರ ಆರೋಪ

‘ಅಣ್ಣ ನೀವಿಬ್ಬರೂ ಒಂದೇ ಧಾರಾವಾಹಿಯಲ್ಲಿ ನಟಿಸಿದವರು. ಆದರೂ ಯಾಕಿಷ್ಟು ಕಿತ್ತಾಟ? ಧಾರಾವಾಹಿಯಲ್ಲಿ ನಟಿಸುವಾಗಲೇ ನಿಮ್ಮ ಮಧ್ಯೆ ಜಗಳ ಇತ್ತಾ?’ ಎಂದು ವಿನಯ್​ಗೆ ವರ್ತೂರು ಸಂತೋಷ್ ಪ್ರಶ್ನೆ ಮಾಡಿದ್ದಾರೆ. ‘ಹೌದು ಇತ್ತು. ಅವಳಿಗೆ ಯಾವಾಗಲೂ ನನಗಿಂತ ಚೆನ್ನಾಗಿ ಆ್ಯಕ್ಟ್ ಮಾಡಬೇಕು, ನನಗಿಂತ ಉತ್ತಮವಾಗಿರಬೇಕು ಎಂದುಕೊಳ್ಳುತ್ತಾಳೆ’ ಎಂದಿದ್ದಾರೆ ವಿನಯ್. ಇದೇ ಇಬ್ಬರೂ ಜಗಳಕ್ಕೆ ಕಾರಣ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.

ಇದೀಗ ನೆಟ್ಟಿಗರು ವಿನಯ್‌ ಅವರ ವರ್ತನೆಗೆ ʻʻಕಿಚ್ಚ ಸುದೀಪ್ ಅವರು ಈ ವಾರ ವಿನಯ್ ಅವರಿಗೆ ಸರಿಯಾಗಿ ಕ್ಲಾಸ್ ತಗೋಬೇಕುʼʼ ಎಂದು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ʻಸಂಗೀತ ಕಾರ್ತಿಕ್ ತನಿಷಾ ಪ್ರತಾಪ್ ಒಳ್ಳೆ ಆಟ ಆಡಿದ್ದಾರೆ. ವಿನಯ್ ತರ ಗ್ರೂಪ್ ಮಾಡಿಕೊಂಡಿಲ್ಲʼʼ ಎಂದು ಕಮೆಂಟ್‌ ಮಾಡಿದ್ದಾರೆ.

ಬಿಗ್​ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

Exit mobile version