Site icon Vistara News

BBK Season 10: ಕ್ಯಾಪ್ಟನ್ ಆಗೋಕೆ ಈ ವಾರ ವಿನಯ್‌-ತುಕಾಲಿ  ಸೆಣಸಾಟ; ಸಂಗೀತಾರನ್ನು ದೂರಿದ ಸಂತೋಷ್‌!

Vinay gowda-Tukali santosh bbk 10

ಬೆಂಗಳೂರು: ವಿನಯ್‌ ಅವರು ಬಿಗ್‌ ಬಾಸ್‌ (BBK Season 10) ಮನೆಯಲ್ಲಿ ಒಂಟಿ ಸಲಗ ಎಂಬ ಬಿರುದು ಪಡೆದುಕೊಂಡಿದ್ದಾರೆ. ಕಳೆದ ವಾರ ವಿನಯ್‌ ತಮಗೆ ಕಾಂಪಿಟೇಶನ್‌ ವಿಚಾರದಲ್ಲಿ ತುಕಾಲಿ ಸಂತು ಅವರಿಗೆ 3 ಅಂಕಗಳನ್ನ ನೀಡಿದ್ದರು ಆದರೆ, ಹಳ್ಳಿ ಟಾಸ್ಕ್‌ನಲ್ಲಿ ವಿನಯ್ ತಂಡವನ್ನೇ ತುಕಾಲಿ ಸಂತು ಸೇರಿಕೊಂಡು ಬಿಟ್ಟಿದ್ದಾರೆ. ಅದು ಕೂಡ ಸೀಕ್ರೆಟ್ ಟಾಸ್ಕ್ ಕಾರಣವಾಗಿ. ಕೊನೆಗೂ ಈ ವಾರ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ವಿನಯ್ ಗೌಡ ವಿರುದ್ಧ ತುಕಾಲಿ ಸಂತು ಆಡಬೇಕಿದೆ.

ಹಳ್ಳಿ ಟಾಸ್ಕ್‌ನಲ್ಲಿ ಇರೋರು ಯಾರು?

ಹಳ್ಳಿ ಜೀವನ ಟಾಸ್ಕ್​ ಒಂದನ್ನು ಬಿಗ್​ಬಾಸ್ ನೀಡಿದ್ದರು. ವಿನಯ್ ಹಾಗೂ ಸಂಗೀತಾ ಅವರನ್ನು ನಾಯಕರನ್ನಾಗಿ ಮಾಡಲಾಗಿತ್ತು. ವಿನಯ್‌ ಮನೆಯಲ್ಲಿ ನೀತು, ಇಶಾನಿ, ನಮ್ರತಾ, ರಕ್ಷಕ್, ಸಿರಿ ಹಾಗೂ ಸ್ನೇಹಿತ್ ಇದ್ದಾರೆ. ಸಂಗೀತಾ ಮನೆಯಲ್ಲಿ ಕಾರ್ತಿಕ್ ಮಹೇಶ್, ಮೈಕಲ್, ತನಿಷಾ, ಭಾಗ್ಯಶ್ರೀ, ಡ್ರೋನ್ ಪ್ರತಾಪ್ ಹಾಗೂ ವರ್ತೂರು ಸಂತೋಷ್ ಇದ್ದಾರೆ. ಆದರೆ ತುಕಾಲಿಗೆ ಮಾತ್ರ ಬಿಗ್‌ ಬಾಸ್‌ ರಹಸ್ಯ ಟಾಸ್ಕ್‌ ನೀಡಿದ್ದರು.

ಸೀಕ್ರೆಟ್ ಟಾಸ್ಕ್ ಏನು?

ವಿನಯ್ ಹಾಗೂ ಸಂಗೀತಾ ಮನೆತನಗಳ ಪೈಕಿ ನೀವು ಯಾವುದಾದರೂ ಒಂದು ಮನೆತನವನ್ನು ಆರಿಸಿ, ಆ ಮನೆತನದ ಪರವಾಗಿ ತುಕಾಲಿ ಈ ವಾರದ ಟಾಸ್ಕ್ ಆಡಬೇಕಿತ್ತು. ಈ ವಿಷಯ ಇನ್ಯಾರಿಗೂ ತಿಳಿಯುವಂತಿರಲಿಲ್ಲ. ತುಕಾಲಿ ಬೆಂಬಲಿಸುವ ಮನೆತನ ಈ ಟಾಸ್ಕ್‌ನಲ್ಲಿ ಗೆದ್ದರೆ, ಅವರೊಂದಿಗೆ ತುಕಾಲಿ ಸಹ ಕ್ಯಾಪ್ಟನ್ಸಿ ಟಾಸ್ಕ್‌ಗೆ ಅರ್ಹತೆ ಪಡೆಯುತ್ತಾರೆ’’ ಎಂದು ತುಕಾಲಿ ಸಂತುಗೆ ‘ಬಿಗ್ ಬಾಸ್’ ತಿಳಿಸಿದ್ದರು. ವಿನಯ್ ತಂಡವನ್ನ ತುಕಾಲಿ ಸಂತು ಆಯ್ದುಕೊಂಡರು.

ಇದನ್ನೂ ಓದಿ: BBK Season 10: ಪ್ರತಾಪ್‌ ಹೆಣ್ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡ್ತಾನೆ; ವಿನಯ್‌ ಗಂಭೀರ ಆರೋಪ

ಗೆದ್ದು ಬೀಗಿದ ವಿನಯ್‌

ಮಣ್ಣಿನ ಲೋಟ ಮತ್ತು ತಟ್ಟೆ ಮಾಡುವ ಸ್ಪರ್ಧೆಯಲ್ಲಿ ಹಲವು ಜಗಳ, ಕೂಗಾಟ, ಬಳಿಕ ಸಂಗೀತಾ ಶೃಂಗೇರಿ ಅವರ ತಂಡವು ಜಯಗಳಿಸಿತು. ಅದಾದ ಬಳಿಕ ಸೆಗಣಿಯ ಬೆರಣಿಗಳನ್ನು ಮಾಡುವ ಟಾಸ್ಕ್‌ ಪ್ರಾರಂಭವಾಯ್ತು. ಎರಡನೇ ಚಟುವಟಿಕೆಯಲ್ಲಿ ಬೆರಣಿಗಳನ್ನು ವಿನಯ್ ಮತ್ತು ಸಂಗೀತಾ ಹಾಳು ಮಾಡಿದ್ದರಿಂದ ರದ್ದಾಯಿತು. ಮೂರನೇ ಚಟುವಟಿಕೆಯಾಗಿ ಕುಸ್ತಿ ಆಟ ನೀಡಲಾಯಿತು. ಕುಸ್ತಿ ಆಟದಲ್ಲಿ ವಿನಯ್ ಗೌಡ ತಂಡ ವಿನ್‌ ಆಯ್ತು. ಕ್ಯಾಪ್ಟೆನ್ಸಿ ಚಟುವಟಿಕೆಗೆ ವಿನಯ್ ಗೌಡ ತಂಡ ಆಯ್ಕೆ ಆಯ್ತು. ತುಕಾಲಿ ಕೂಡ ವಿನಯ್‌ ಬೆಂಬಲಕ್ಕೆ ನಿಂತ ಕಾರಣ ಕ್ಯಾಪ್ಟನ್ ರೇಸ್‌ಗೆ ಇಳಿದರು. ಬಳಿಕ ಬಿಗ್‌ ಬಾಸ್‌ ತುಕಾಲಿ ಸಂತು ಮಾಡಿಕೊಂಡಿದ್ದ ಆಯ್ಕೆಯನ್ನು ರಿವೀಲ್‌ ಮಾಡಿದರು.

ವಿನಯ್‌ ಈ ಬಗ್ಗೆ ಮಾತನಾಡಿ ʻʻನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ. ಸಂತು ಕೂಡ ಈ ಲಕ್ಷುರಿ ಬಜೆಟ್‌ ಮತ್ತು ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಇರಬೇಕುʼʼ ಎಂದರು. ಈ ಮೂಲಕ ಲಕ್ಷುರಿ ಬಜೆಟ್‌ ಹಾಗೂ ಕ್ಯಾಪ್ಟನ್ಸಿ ಟಾಸ್ಕ್‌ಗೆ ಸಂತು ಆಯ್ಕೆಯಾದರು.

ಸಂತು ಹೇಳಿದ್ದೇನು?

ವಿನಯ್‌ ತಂಡ ಹಾಗೂ ವಿನಯ್‌ ಜತೆ ಸಂತು ಅವರು ಈ ಬಗ್ಗೆ ಮಾತನಾಡಿ ʻʻಈ ಟೀಮ್‌ ಬರೋಕೆ ಕಾರಣ ಸಂಗೀತಾ ಮತ್ತು ಕಾರ್ತಿಕ್‌ ಅವರ ಅಸಭ್ಯ ಮಾತು, ಸಂಗೀತಾ – ಕಾರ್ತಿಕ್ ಮಾತ್ರ ಹೈಲೈಟ್ ಆಗಬೇಕು ಎಂಬ ಮನಸ್ಥಿತಿ ಅವರಿಗಿದೆ. ಹಾಗಾಗಿ ನಾನು ಇಲ್ಲಿ ಬಂದೆʼʼ ಎಂದರು.

ಇದನ್ನೂ ಓದಿ: BBK Season 10: ನಿಂಗೆ ಯಾವನೂ ಅಧಿಕಾರ ಕೊಟ್ಟಿಲ್ಲ ಎಂದು ಏಕವಚನದಲ್ಲಿ ವಿನಯ್‌ಗೆ ತನಿಷಾ ಕ್ಲಾಸ್‌!

ಕ್ಯಾಪ್ಟನ್ಸಿ ಟಾಸ್ಕ್‌ ಏನು?

ʻʻಈ ಟಾಸ್ಕ್‌ನಲ್ಲಿ ಬೆದರು ಗೊಂಬೆ ಮೇಲೆ ಚಕ್ರವನ್ನು ಹಾಕಬೇಕು. ಹಾಗೇ ಒಂದೊಂದೇ ಹಾಕಿ ಗೆದ್ದಾಗ ತನ್ನ ಇಚ್ಛೆಯ ಸದಸ್ಯನನ್ನು ಹೊರ ಹಾಕುವ ಅಧಿಕಾರ ಪಡೆಯುತ್ತಾರೆʼʼ. ಆರನೇ ಸುತ್ತಿನಲ್ಲಿ ಉಳಿಯುವ ಇಬ್ಬರು ಸದಸ್ಯರು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯೆಯಾಗುತ್ತಾರೆ. ವಿನಯ್‌ ಮೊದಲಿಗೆ ಗೆದ್ದಿದ್ದು, ನೀತು ಅವರನ್ನು ಹೊರಗೆ ಹಾಕಿದರು. ಬಳಿಕ ವಿನಯ್‌ ಅವರು ಮತ್ತೆ ವಿನ್‌ ಆಗಿದ್ದು, ರಕ್ಷಕ್‌ ಹೊರ ಹಾಕಿದರು. ವಿನಯ್‌ ಮತ್ತೆ ಸ್ನೇಹಿತ್‌ ಅವರನ್ನು ಹೊರಗೆ ಹಾಕಿದರು. ವಿನಯ್‌ ಅವರು ನಮ್ರತಾ ಅವರನ್ನು ಹೊರಗೆ ಹಾಕಿದರು. ಬಳಿಕ ತುಕಾಲಿ ಸಂತು ವಿನ್‌ ಆಗಿದ್ದು ಇಶಾನಿ ಅವರನ್ನು ಹೊರಗೆ ಹಾಕಿದರು. ಮತ್ತೆ ತುಕಾಲಿ ಸಂತುವೇ ವಿನ್‌ ಅಗಿದ್ದು ಸಿರಿ ಅವರನ್ನು ಹೊರಗೆ ಹಾಕಿದರು. ಬಳಿಕ ವಿನಯ್‌ ಅವರನ್ನು ಉಳಿಸಿಕೊಂಡರು. ಹೀಗಾಗಿ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ವಿನಯ್‌ ಹಾಗೂ ತುಕಾಲಿ ಸಂತು ಜತೆ ಜಿದ್ದಾ ಜಿದ್ದಿ ನಡೆಯಲಿದೆ.

ಇದಾದ ಬಳಿಕ ವರ್ತೂರ್‌ ಸಂತೋಷ್‌, ಪ್ರತಾಪ್‌ , ಕಾರ್ತಿಕ್‌ ಈ ಬಗ್ಗೆ ಚರ್ಚೆ ಮಾಡುತ್ತಿದ್ದರು. ವರ್ತೂರ್‌ ಸಂತೋಷ್‌ ಅವರು ತುಕಾಲಿಗೆ ʻʻಎಂತಹ ಚ್ಯಾನ್ಸ್‌ ಮಿಸ್‌ ಮಾಡ್ಕೊಂಡೆ. ನೀನು ಸರೆಂಡರ್ ಆಗಿ ಆಡಬೇಡ. ಹಂಗಿದ್ದರೆ ನೀನು ‘ಬಿಗ್ ಬಾಸ್‌’ಗೆ ಹೇಳಿಬಿಟ್ಟು ಹೋಗಿಬಿಡುʼʼ ಎಂದು ವಿನಯ್‌ ಅವರನ್ನು ಹೊರಗೆ ಹಾಕಬೇಕಿತ್ತು ಎಂಬ ಅರ್ಥದಲ್ಲಿ ಹೇಳಿದರು. ಈ ಬಗ್ಗೆ ತುಕಾಲಿ ಸಂತು ಮಾತನಾಡಿ ʻʻಗೆಲುವು, ಸೋಲು ಕಾಮನ್. ಅವನೂ ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದಾನೆ. ಕೈ ಮುರಿದರೂ, ಮ್ಯಾಚ್ ಗೆದ್ದಿದ್ದಾನೆ. ಒಂದು ಲಾಯಲ್. ನನ್ನ ಕಡೆಯಿಂದ ಗೌರವ ಕೊಟ್ಟಾಯಿತುʼʼ ಎಂದು ಮಾತನಾಡಿದ್ದಾರೆ.

ಬಿಗ್​ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

Exit mobile version