Site icon Vistara News

Actor Darshan: ದರ್ಶನ್ ಭೇಟಿ ಮಾಡಿದ ಪವಿತ್ರಾ ಗೌಡ ಆಪ್ತೆ; ನಟ ಧನ್ವೀರ್‌ಗೆ ಸಿಗದ ಅವಕಾಶ!

Actor Darshan

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅರೆಸ್ಟ್‌ ಆಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಪವಿತ್ರಾ ಗೌಡ ಆಪ್ತ ಸ್ನೇಹಿತೆ ಮಂಗಳವಾರ ಭೇಟಿ ಮಾಡಿದ್ದಾರೆ. ಒಂದು ಕಡೆ ಪವಿತ್ರಾ ಸ್ನೇಹಿತೆ 15 ನಿಮಿಷ ದರ್ಶನ್ ಜತೆ ಮಾತುಕತೆ ನಡೆಸಿದ್ದರೆ, ಮತ್ತೊಂದೆಡೆ ದರ್ಶನ್‌ರನ್ನು‌ (Actor Darshan) ಭೇಟಿಯಾಗಲು ನಟ ಧನ್ವೀರ್‌ಗೆ ಅವಕಾಶ ಸಿಗದಿರುವುದು ಕಂಡುಬಂದಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ದರ್ಶನ್ ಅಭಿಪ್ರಾಯ ತಿಳಿಯಲು ಪವಿತ್ರಾ ಗೌಡ ಯತ್ನಿಸಿದ್ದಾರೆ. ಹೀಗಾಗಿ ಅವರು ನೀಡಿದ ಮಾಹಿತಿಯನ್ನು ದರ್ಶನ್‌ಗೆ ಪವಿತ್ರಾ ಗೌಡ ಆಪ್ತ ಸ್ನೇಹಿತೆ ಸಮತಾ ರವಾನಿಸಿದ್ದಾರೆ ಎನ್ನಲಾಗಿದೆ.

ಜೈಲಿನಲ್ಲಿ ಬೇರೆ ಬೇರೆಯಾಗಿದ್ದರೂ ದರ್ಶನ್ ಮತ್ತು ಪವಿತ್ರಾಗೆ ಪರಸ್ಪರ ಮಾಹಿತಿ ಸಿಗುತ್ತಿದೆ. ಇದಕ್ಕೆ ಪವಿತ್ರಾ ಸ್ನೇಹಿತೆ ಸಮತಾ ಮಧ್ಯವರ್ತಿಯಾಗಿದ್ದಾರೆ. ನಟ ದರ್ಶನ್ ತನ್ನ ಬಗ್ಗೆ ಏನು ಹೇಳುತ್ತಿದ್ದಾರೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ಅವರ ಅಭಿಪ್ರಾಯ ತಿಳಿಯಲು ಪವಿತ್ರಾ ಪ್ರಯತ್ನಿಸಿದ್ದಾರೆ. ಹೀಗಾಗಿ ಸ್ನೇಹಿತೆ ಮೂಲಕ ದರ್ಶನ್‌ರನ್ನು ಭೇಟಿ ಮಾಡಿಸಿದ್ದಾರೆ ಎನ್ನಲಾಗಿದೆ. ನಟ ದರ್ಶನ್ ಕೂಡ ಸಮತಾ ಭೇಟಿಗೆ ಓಕೆ ಅಂದಿದ್ದರು. ಹೀಗಾಗಿ ಅವರನ್ನು ಜೈಲಿನೊಳಗೆ ಕಳುಹಿಸಲಾಗಿದೆ.

ದರ್ಶನ್ ‌ಭೇಟಿಯಾಗಿದ್ದಾಗಿ ಮಾಧ್ಯಮಗಳ ಬಳಿ ಸುಳ್ಳು ಹೇಳಿದ್ರಾ ಧನ್ವೀರ್?

ಜೈಲಿನಲ್ಲಿರುವ ದರ್ಶನ್ ಭೇಟಿಗೆ ನಟ ಧನ್ವೀರ್‌ಗೆ ಅವಕಾಶ ಸಿಕ್ಕಿಲ್ಲ ಎನ್ನಲಾಗಿದೆ. ಇದರಿಂದ ಬೇಸರದಲ್ಲಿಯೇ ಧನ್ವೀರ್‌ ವಾಪಸ್ ತೆರಳಿದ್ದಾರೆ. ಆದರೆ, ಮಾಧ್ಯಮಗಳ ಬಳಿ ಮಾತ್ರ ನಟ ದರ್ಶನ್‌ರನ್ನು ಭೇಟಿ ಮಾಡಿರುವುದಾಗಿ ಅವರು ಹೇಳಿರುವುದು ಅನುಮಾನಗಳಿಗೆ ಎಡೆಮಾಡಿದೆ.

ಮೊದಲಿಗೆ ದರ್ಶನ್‌ ಭೇಟಿ ಮಾಡಲು ಹೋಗಿದ್ದೆ, ಅವರ ಜತೆ ಹೆಚ್ಚು ಹೊತ್ತು ಮಾತನಾಡಲಾಗಲಿಲ್ಲ. ನಟ ದರ್ಶನ್ ಬೇಜಾರಿನಲ್ಲಿದ್ದಾರೆ ಎಂದು ಹೊರಟಿದ್ದರು. ಆದರೆ, ಜೈಲಿಗೆ ಭೇಟಿ ನೀಡಿದರೆ ಬಲಗೈಗೆ ಸೀಲ್ ಹಾಕಲಾಗುತ್ತದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಎಂಬ ಸೀಲ್ ಅನ್ನು ಕೈ ಮೇಲೆ ಹಾಕಲಾಗುತ್ತದೆ. ಆದರೆ ಧನ್ವೀರ್ ಕೈಯಲ್ಲಿ ಜೈಲಿನ ಸೀಲ್ ಇರದ ಕಾರಣ ಅವರು ದರ್ಶನ್‌ರನ್ನು ಭೇಟಿಯಾಗಿಲ್ಲ ಎನ್ನಲಾಗುತ್ತಿದೆ.

ಧನ್ವೀರ್‌ ಅಲ್ಲದೇ ಮೈಸೂರಿನಿಂದ ದರ್ಶನ್‌ ಅವರ ಬಾಲ್ಯ ಸ್ನೇಹಿತ ಶಿವಕುಮಾರ್ ಕೂಡ ಆಗಮಿಸಿದ್ದರು. ಆದರೆ, ಅವರಿಗೂ ಭೇಟಿ ಮಾಡಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ವಾಪಸ್‌ ತೆರಳಿದರು.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಹೆಸರು ಆಚೆ ಬಂದದ್ದು ಹೀಗೆ!

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ (Renuka Swamy Murder) ಪ್ರಕರಣದಲ್ಲಿ ನಟ ದರ್ಶನ್‌ (Actor Darshan) ಹೆಸರು ಆಚೆಗೇ ಬಾರದೆ ಮುಚ್ಚಿಹೋಗುವುದರಲ್ಲಿತ್ತು. ಆರಂಭದಲ್ಲಿ ಪೊಲೀಸರಿಗೂ (Police) ಇದರ ಅರಿವು ಇರಲಿಲ್ಲ. ಆದರೆ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ತನಿಖೆ ಮಾಡುತ್ತ ಹೋದಂತೆಲ್ಲಾ ಒಂದೊಂದೇ ಎಳೆಗಳು ಬಿಚ್ಚಿಕೊಂಡು ದರ್ಶನ್‌ ಜೈಲುಪಾಲಾಗುವಂತಾಯಿತು. ಅದೇ ಒಂದು ರೋಚಕ ಕಹಾನಿ.

ಹತ್ಯೆಯ ಹಿಂದಿದ್ದ ಮಾಸ್ಟರ್ ಮೈಂಡ್ ಹೆಸರು ಬಾಯಿ ಬಿಡಿಸುವುದಕ್ಕೆ ಪೊಲೀಸರಿಗೆ ಸರಿ ಸುಮಾರು ಹತ್ತು ಗಂಟೆ ತೆಗೆದುಕೊಂಡಿತ್ತು. ಅದು ನಡೆದದ್ದು ಹೀಗೆ- ರೇಣುಕಾ ಸ್ವಾಮಿಯನ್ನು ಹಂತಕ‌ ಪಡೆ ಕೊಲೆ ಮಾಡಿದ್ದು ಶನಿವಾರ. ಭಾನುವಾರ ಸುಮನಹಳ್ಳಿ ಕಾಲುವೆಯಲ್ಲಿ ಆತನ ಶವ ಸಿಕ್ಕಿತ್ತು. ಶವ ಯಾರದು ಎಂಬ ಹುಡುಕಾಟದಲ್ಲಿದ್ದ ಪೊಲೀಸರಿಗೆ ನಾಲ್ವರು ಆರೋಪಿಗಳು ತಾವಾಗಿ ಬಂದು ಶರಣಾಗಿದ್ದರು.

ಕಾರ್ತಿಕ್, ನಿಖಿಲ್, ಕೇಶವ ಮೂರ್ತಿ ಹಾಗೂ ರಾಘವೇಂದ್ರ ಪೊಲೀಸರ ಬಳಿಗೆ ಸೋಮವಾರ ಬಂದು, ಕೊಲೆ ಮಾಡಿದ್ದು ನಾವೇ ಅಂತ ಹೇಳಿದ್ದರು. ಹಣಕಾಸಿನ ವಿಚಾರಕ್ಕಾಗಿ ನಾವೇ ಹಲ್ಲೆ ಮಾಡಿದೆವು, ಹಲ್ಲೆ ಮಾಡಿದ್ದು ಜಾಸ್ತಿಯಾಗಿ ಆತ ಸತ್ತುಹೋದ ಎಂದಿದ್ದರು. ಎಷ್ಟು ಪ್ರಶ್ನಿಸಿದರೂ ಅದರಾಚೆಗೆ ಬಾಯಿ ಬಿಟ್ಟಿರಲಿಲ್ಲ. ಆದರೆ ಹಲ್ಲೆ ಮಾಡಿದ ಜಾಗ ಯಾವುದು, ಅಲ್ಲಿಂದ ಇಲ್ಲಿಗೆ ಹೆಣ ಸಾಗಿಸಿದ್ದು ಹೇಗೆ, ಯಾವ ವಾಹನದಲ್ಲಿ, ರೇಣುಕಾ ಸ್ವಾಮಿಗೆ ಕೊಟ್ಟ ಹಣ ನಿಮಗೆ ಬಂದಿದ್ದು ಹೇಗೆ, ಆತನಿಗೂ ನಿಮಗೂ ಹೇಗೆ ಲಿಂಕು, ಇತ್ಯಾದಿ ಸರಣಿ ಪ್ರಶ್ನೆಗಳನ್ನು ಪೊಲೀಸರು ಹಾಕತೊಡಗಿದ ಕೂಡಲೇ ಶರಣಾಗತರು ಉತ್ತರ ಕೊಡಲಾಗದೆ ತತ್ತರಿಸಲು ಆರಂಭಿಸಿದರು.

ಸತತ ಹತ್ತು ಗಂಟೆಗಳ ಪ್ರಶ್ನಾವಳಿಯ ಬಳಿಕ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಪ್ರದೂಷ್ ಹಾಗೂ ವಿನಯ್ ಹೆಸರುಗಳನ್ನು ಶರಣಾಗತರು ಬಾಯಿ ಬಿಟ್ಟಿದ್ದರು. ಇವರಿಬ್ಬರ ಹೆಸರು ಬಂದ ಕೂಡಲೇ ಜಾಗೃತರಾದ ಪೊಲೀಸರು, ಪ್ರಕರಣದಲ್ಲಿ ಇನ್ನಷ್ಟು ದೊಡ್ಡ ಹೆಸರುಗಳು ಇರಬಹುದು ಎಂಬ ಅರಿವಾಗಿ ಜಾಗೃತರಾದರು. ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪ್ರದೂಷ್ ಹಾಗೂ ವಿನಯ್‌ರನ್ನು ವಶಕ್ಕೆ ಪಡೆದರು.

ಪ್ರದೂಷ್‌ ಹಾಗೂ ವಿನಯ್‌ ಸುಲಭವಾಗಿ ಬಾಯಿ ಬಿಡಲಿಲ್ಲ. ಆರಂಭದಲ್ಲಿ, ಶರಣಾದವರು ಯಾರೂ ನಮಗೆ ಗೊತ್ತೇ ಇಲ್ಲ ಎಂದುಬಿಟ್ಟರು. ಪೊಲೀಸರು ವಿಚಾರಣೆ ತೀವ್ರಗೊಳಿಸಿದರು. ಆಗಲೂ ದರ್ಶನ್‌ ಹೆಸರು ಬಾಯಿ ಬಿಡಲಿಲ್ಲ ಪ್ರದೂಷ್ ಹಾಗೂ ವಿನಯ್. ಆದರೆ ಬೆಳಗಿನ ಜಾವ ಪೊಲೀಸರ ವಿಚಾರಣೆ ಧಾಟಿಗೆ ಬಳಲಿಹೋಗಿದ್ದ ವಿನಯ್ ಹಾಗೂ ಪ್ರದೂಷ್ ಪವಿತ್ರ ಗೌಡಳ ಹೆಸರು ಹೇಳಿದ್ದರು. ಪವಿತ್ರ ಗೌಡ ಯಾರು ಎಂದು ತಲೆ ಕೆಡಿಸಿಕೊಂಡ ಪೊಲೀಸರಿಗೆ ಆಕೆಗೆ ದರ್ಶನ್‌ ಲಿಂಕ್‌ ಇರುವುದು ಗೊತ್ತಾಗಿ ಇದು ಹೈ ಪ್ರೊಫೈಲ್‌ ಕೇಸು ಎಂಬುದು ಗೊತ್ತಾಗಿ ಹೋಗಿದೆ.

ನಂತರ ಪೊಲೀಸರು ಪವಿತ್ರ ಗೌಡಳ ಮನೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ಅಷ್ಟರಲ್ಲಿ ದರ್ಶನ್ ಜೊತೆ ಪವಿತ್ರ ಗೌಡ ಲಿಂಕ್ ಇರುವುದು ಚಾಟಿಂಗ್ಸ್, ಕಾಲ್ ಡಿಟೇಲ್ಸ್ ಮೂಲಕ ಪತ್ತೆಯಾಗಿದೆ. ಆರೋಪಿಗಳನ್ನೂ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ಕೂರಿಸಿಕೊಂಡು ಮತ್ತಷ್ಟು ವಿಚಾರಣೆ ನಡೆಸಿದಾಗ ಎಲ್ಲರೂ ಡಿ ಬಾಸ್‌ ಗ್ಯಾಂಗ್‌ ಆಗಿರುವುದು ಗೊತ್ತಾಗಿದೆ. ಪವಿತ್ರ ಗೌಡ ಕಾಲ್‌ ಹಿಸ್ಟರಿ, ಚಾಟ್‌ ಎಲ್ಲ ತೆಗೆದಾಗ ಅದರಲ್ಲಿ ರೇಣುಕ ಸ್ವಾಮಿಯ ಅಶ್ಲೀಲ ಮೆಸೇಜ್‌ಗಳ ಬಗೆಗಿನ ವಿವರಗಳು ಕಂಡುಬಂದಿವೆ. ಈ ಬಗ್ಗೆ ಪವನ್‌, ದರ್ಶನ್‌ಗೆ ಕಾಲ್‌ ಮಾಡಿ ರೇಣುಕಾ ಸ್ವಾಮಿಯ ಹಾವಳಿಯ ಬಗ್ಗೆ ತಿಳಿಸಿದ್ದು ಕೂಡ ಗೊತ್ತಾಗಿದೆ.

ಇದನ್ನೂ ಓದಿ: Actor Darshan: ದರ್ಶನ್‌ ಮೇಲಿನ ಅಂಧಾಭಿಮಾನ; ಮಗನನ್ನೇ ಕೈದಿ ಮಾಡಿದ ಹುಚ್ಚು ಫ್ಯಾನ್!

ಕೂಡಲೇ ಪ್ರಕರಣದ ತನಿಖೆ ನಡೆಸುತ್ತಿದ್ದ ಡಿಸಿಪಿ ಗಿರೀಶ್ ಈ ವಿಷಯವನ್ನು ಕಮೀಷನರ್‌ಗೆ ಮುಟ್ಟಿಸಿದ್ದರು. ಪ್ರಕರಣದ ಗಂಭೀರತೆ ಅರಿತ ಕಮೀಷನರ್, ದರ್ಶನ್ ಬಂಧನಕ್ಕೆ‌‌ ಸೂಚನೆ ನೀಡಿದ್ದರು. ಜೂನ್ 10ರ ರಾತ್ರಿಯೇ ಮೈಸೂರಿಗೆ ತೆರಳಿದ ಬೆಂಗಳೂರು ಪೊಲೀಸರು ದರ್ಶನ್ ಇರುವ ಸ್ಥಳದ ಮಾಹಿತಿ ಕಲೆ ಹಾಕಿದ್ದರು. ಜೂನ್ 11ರ ಬೆಳಗ್ಗೆ 6.30ಕ್ಕೆ ಮೈಸೂರಿನ ರ್ಯಾಡಿಸನ್ ಹೋಟೆಲ್​ನಲ್ಲಿ ಜಿಮ್ ಮಾಡುತ್ತಿದ್ದ ದರ್ಶನ್ ಹೊರಗೆ ಬಂದ ಕೂಡಲೇ ವಶಕ್ಕೆ ಪಡೆದರು.

Exit mobile version