Site icon Vistara News

ಖ್ಯಾತ ನಟಿ ಜೂಲಿ ಲಕ್ಷ್ಮೀಯವರ ಮಗಳಿಗೆ ಸಾಬೂನು ಮಾರುವ ಸ್ಥಿತಿ ಬಂದಿದ್ಯಾಕೆ?

ಬೆಂಗಳೂರು: ಇದೊಂದು ನಂಬಲಿಕ್ಕೇ ಅಸಾಧ್ಯವಾದ ಕಥೆ. ಒಂದು ಕಾಲದಲ್ಲಿ ಡಿಟರ್ಜೆಂಟ್‌ ಸೋಪಿಗೆ ರೂಪದರ್ಶಿಯಾಗಿದ್ದ ಅವರು ಈಗ ಜೀವನೋಪಾಯಕ್ಕಾಗಿ ಸಾಬೂನು ಮಾರುತ್ತಿದ್ದಾರೆ. ಸಿನಿಮಾಗಳಲ್ಲಿ ನಾಯಕಿಯಾಗಿ ಮೆರೆದಾಡಿದ್ದ ಅವರು ಈಗ ʻನಿಮ್ಮ ಮನೆ ಟಾಯ್ಲೆಟ್‌ ತೊಳೆಯುವ ಕೆಲಸ ಇದ್ದರೆ ಹೇಳಿ, ಅದಕ್ಕೂ ರೆಡಿʼ ಎನ್ನುವ ಸ್ಥಿತಿಗೆ ಬಂದಿದ್ದಾರೆ.

ಚಿತ್ರರಂಗದಲ್ಲಿ ಉತ್ತುಂಗಕ್ಕೇರಿ ಉಲ್ಕಾ ನಕ್ಷತ್ರದಂತೆ ಕಳಚಿಕೊಂಡು ಕಣ್ಮರೆಯಾದ ಅದೆಷ್ಟೋ ಮಂದಿಯನ್ನು ನಾವು ನೋಡಿದ್ದೇವೆ. ಜೀವನ ನಿರ್ವಹಣೆಗಾಗಿ ಕಷ್ಟಪಡುತ್ತಿರುವ ಕಲಾವಿದರು ಕಡಿಮೆ ಏನಿಲ್ಲ. ಆದರೆ ನಮ್ಮ ನಡುವೆ ಹೇಗೆಲ್ಲ ಮೆರೆದಾಡಿದ, ಭರವಸೆ ಮೂಡಿಸಿದ ನಟಿಯ ಬದುಕಿನಲ್ಲಿ ಹೀಗೆಲ್ಲ ಆಗಿ ಹೋಯ್ತಾ ಅಂತ ಕಲ್ಪಿಸಿಕೊಂಡರೇ ಅಚ್ಚರಿ ಆಗುತ್ತದೆ.

ಆ ನಟಿಯ ಹೆಸರು ಐಶ್ವರ್ಯಾ ಭಾಸ್ಕರನ್‌. ವಯಸ್ಸು ೫೧. ಕನ್ನಡ, ತಮಿಳು, ಮಲಯಾಳಂ ಚಿತ್ರಗಳಲ್ಲಿ ಸಾಕಷ್ಟು ಮಿಂಚಿದಾಕೆ. ಮಲಯಾಳಂನಲ್ಲಿ ಮೋಹನ್‌ ಲಾಲ್‌ ಅವರಂಥ ನಟರಿಗೆ ಸರಿ ಸಾಟಿಯಾಗಿ ಅಭಿನಯಿಸಿದಾಕೆ. ಚಿಟ್ಟೆಗಳು, ನರಸಿಂಹಂ, ಸತ್ಯಮೇವ ಜಯತೆ, ಪ್ರಜಾ, ದಿ ಫೈರ್, ಅಗ್ನಿ ನಕ್ಷತ್ರಂ ಮತ್ತು ನೋಟ್‌ ಬುಕ್‌ ಮೊದಲಾದ ಜನಪ್ರಿಯ ಚಿತ್ರಗಳ ನಾಯಕಿ. ಈ ಎಲ್ಲ ಪರಿಚಯಕ್ಕಿಂತ ಹತ್ತಿರವಾದುದು ಆಕೆ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿ ಜೂಲಿ ಲಕ್ಷ್ಮಿ ಅವರ ಮಗಳು!

ಹುಟ್ಟಿನಿಂದಲೇ ನಟನಾ ಶಕ್ತಿಯನ್ನು ಬಳುವಳಿಯಾಗಿಯೇ ಪಡೆದು ಬಂದವರೀಕೆ. ಐಶ್ವರ್ಯಾ ಭಾಸ್ಕರನ್ ಅವರ ತಾಯಿ ಎಪ್ಪತ್ತರ ದಶಕದಲ್ಲಿ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ನಂ.1 ನಾಯಕಿಯಾಗಿದ್ದ ಖ್ಯಾತ ನಟಿ ಲಕ್ಷ್ಮಿ ಹಾಗೂ ಇವರ ಅಜ್ಜಿ ಕುಮಾರಿ ರುಕ್ಮಿಣಿ ಕೂಡ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಅಮ್ಮನ ಪ್ರಭಾವ, ಮಗಳ ಸಾಮರ್ಥ್ಯಗಳೆಲ್ಲ ಸೇರಿ ಆಕೆ ಸಣ್ಣ ವಯಸ್ಸಿನಲ್ಲೇ ಮಾಡೆಲ್‌ ಅದರು. ಪ್ರಾದೇಶಿಕ ಭಾಷೆಗಳಲ್ಲಿನ ಟಿವಿಯಲ್ಲಿ ಸೋಪ್‌ ಜಾಹೀರಾತಿನಲ್ಲಿ ನಟಿಸಿ ಮನೆ ಮಾತಾದರು. ಸಿನಿಮಾಗಳು ಆಕೆಯನ್ನು ಕೈಬೀಸಿ ಕರೆದವು.

1989ರಲ್ಲಿ ತಮ್ಮ 18ನೇ ವಯಸ್ಸಿಗೇ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ ಆಕೆ ಮುಂದಿನ ಆರು ವರ್ಷಗಳ ಕಾಲ ರಾಣಿಯಂತೆಯೇ ಮೆರೆದರು. ಬಳಿಕ ನಾಯಕಿ ಅವಕಾಶ ಕಡಿಮೆಯಾಗುತ್ತಿದ್ದಂತೆಯೇ ಪೋಷಕ ಪಾತ್ರಗಳತ್ತ ಸರಿದರು. ಈ ನಡುವೆ ಧಾರಾವಾಹಿಗಳಲ್ಲೂ ಅವಕಾಶವಿತ್ತು. ಬರಬರುತ್ತಾ ಅವಕಾಶಗಳು ಕಡಿಮೆಯಾದವು. ಅವಕಾಶ ಸಿಕ್ಕರೂ ಅದು ಇಡೀ ವರ್ಷ ಜೀವನ ಸಾಗಿಸುವುದಕ್ಕೆ ಸಾಧ್ಯವಾಗಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಆಕೆ ಆಯ್ಕೆ ಮಾಡಿರುವುದು ಮನೆ ಮನೆಗೆ ಹೋಗಿ ಸಾಬೂನು ಮಾರುವ ವೃತ್ತಿ.

ಬದಲಾಗಿ ಹೋಯ್ತು ಬದುಕು..
ಐಶ್ವರ್ಯ ಖ್ಯಾತ ನಟಿ ಲಕ್ಷ್ಮೀ ಅವರಿಗೆ ಎರಡನೇ ಗಂಡನಿಂದ ಹುಟ್ಟಿದ ಮಗಳು. ಮೊದಲು ಶಿವಚಂದ್ರನ್‌ ಅವರನ್ನು ಮದುವೆಯಾಗಿ ಒಂದು ಮಗುವನ್ನು ಹೊಂದಿದ್ದರು ಲಕ್ಷ್ಮಿ. ಬಳಿಕ ಅವರಿಂದ ದೂರವಾಗಿ ಭಾಸ್ಕರನ್‌ ಅವರನ್ನು ಮದುವೆಯಾದರು. ಭಾಸ್ಕರನ್‌ ಅವರ ಸಂಬಂಧದಲ್ಲಿ ಹುಟ್ಟಿದವಳೇ ಐಶ್ವರ್ಯ. ಲಕ್ಷ್ಮಿ ಅವರು ಐಶ್ವರ್ಯ ಬಗ್ಗೆ ಬಣ್ಣ ಬಣ್ಣದ ಕನಸುಗಳನ್ನು ಹೊತ್ತೇ ಬೆಳೆಸಿದರು. ಆದರೆ ಅದೊಂದು ಘಟನೆಯಿಂದ ತಾಯಿ-ಮಗಳ ಸಂಬಂಧವೇ ಹದಗೆಟ್ಟು ಹೋಯಿತು.

ಮನೆ ಮುರಿದ ಮದುವೆ
ಸಾಂಪ್ರದಾಯಿಕ ಕುಟುಂಬದಿಂದ ಬಂದಿದ್ದ ಐಶ್ವರ್ಯ ಅವರಿಗೆ ಕಂಟಕವಾಗಿದ್ದು ಮದುವೆ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರ. 1994ರ ಹೊತ್ತಿಗೆ ಐಶ್ವರ್ಯ ತನ್ವೀರ್‌ ಅಹಮದ್‌ ಎಂಬವರನ್ನು ಪ್ರೀತಿಸಿದರು. ಆವರನ್ನೇ ಮದುವೆಯಾಗಬೇಕೆಂಬ ಹಠಕ್ಕೆ ತಾಯಿ ಲಕ್ಷ್ಮಿ ಒಪ್ಪಲಿಲ್ಲ. ಎಲ್ಲರ ಮಾತನ್ನು ಧಿಕ್ಕರಿಸಿ ಮದುವೆ ಆಗೇ ಬಿಟ್ಟರು. ಈ ನಡುವೆ ತಾಯಿ ಮನೆಯ ಸಂಪರ್ಕವೇ ಕಡಿದು ಹೋಯಿತು. ಈ ವಿಚಾರಗಳನ್ನು ಸ್ವತಃ ಲಕ್ಷ್ಮಿ ಅವರೂ ತಾವು ನಡೆಸಿಕೊಡುತ್ತಿದ್ದ ಬದುಕು ಜಟಕಾ ಬಂಡಿ ಕಾರ್ಯಕ್ರಮದಲ್ಲಿ ಹೇಳಿಕೊಂಡು ಕಣ್ಣೀರು ಹಾಕಿದರು. ಎಲ್ಲರನ್ನೂ ಎದುರು ಹಾಕಿಕೊಂಡು ಮಾಡಿಕೊಂಡ ಮದುವೆ ಕೂಡಾ ಹೆಚ್ಚು ಸಮಯ ಬಾಳಲಿಲ್ಲ ಐಶ್ವರ್ಯ ಪಾಲಿಗೆ.

ಹಾಗಿದ್ದರೆ ಮುಂದೇನಾಯಿತು?
ಐಶ್ವರ್ಯ ಭಾಸ್ಕರನ್‌ ಅವರ ಬದುಕಿನ ದಯನೀಯ ಕಥೆ ಹೊರಜಗತ್ತಿಗೆ ತಿಳಿದದ್ದು ಇತ್ತೀಚೆಗೆ ಅವರೇ ತಮಿಳು ಚಾನೆಲ್‌ ಒಂದಕ್ಕೆ ನೀಡಿದ ಸಂದರ್ಶನದ ವೇಳೆ. ಆಕೆ ಅತ್ಯಂತ ಮನ ಬಿಚ್ಚಿ ಮಾತಾಡಿದ್ದಾರೆ ಇಲ್ಲಿ.

ʻʻವೈವಾಹಿಕ ಬದುಕು ನನಗೆ ಸ್ವಲ್ಪವೂ ನೆಮ್ಮದಿಯನ್ನು ನೀಡಲಿಲ್ಲ. ಬದಲಾಗಿ ಕಷ್ಟ ಮತ್ತು ವೈಫಲ್ಯಗಳ ಸುಳಿಗೆ ಬಿದ್ದೆ. ಮದುವೆಯಾಗಿ ಆರೇ ತಿಂಗಳಲ್ಲಿ ನಮ್ಮ ಸಂಬಂಧ ಹದಗೆಟ್ಟಿತು. (ಅವರಿಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಬೇಕೆಂಬ ಒತ್ತಡವೂ ಇತ್ತು ಎನ್ನಲಾಗುತ್ತಿದೆ). ಆದರೂ ಹೇಗೋ ಸಂಭಾಳಿಸಿಕೊಂಡೆ. ಕೊನೆಗೆ 1997ರಲ್ಲಿ ಆ ಸಂಬಂಧದಿಂದ ಹೊರಗೆ ಬರಲು ಗಟ್ಟಿ ನಿರ್ಧಾರ ಮಾಡಿದೆ. ಆಗ ನನ್ನ ಮಗಳಿಗೆ ಇನ್ನೂ ಒಂದೂವರೆ ವರ್ಷʼʼ ಎಂದು ಐಶ್ವರ್ಯ ತಮ್ಮ ಕಥೆ ಹೇಳಿಕೊಂಡಿದ್ದಾರೆ.

ಐಶ್ವರ್ಯಾ ಈಗಿನ ಜೀವನ ಪರಿಸ್ಥಿತಿ
ಬಟರ್‌ಫ್ಲೈಸ್, ನರಸಿಂಹಂ ಮತ್ತು ಪ್ರಜಾ ಮುಂತಾದ ಚಿತ್ರಗಳಲ್ಲಿ ಮೋಹನ್‌ಲಾಲ್ ಅವರಿಗೆ ನಾಯಕಿಯಾಗಿ ನಟಿಸಿದ್ದ ಐಶ್ವರ್ಯಾ ಭಾರಿ ಜನಪ್ರಿಯರೇ ಆಗಿದ್ದರು. ಆದರೆ, ಬಳಿಕ ಅವಕಾಶಗಳು ಕಡಿಮೆಯಾದವು. ಕೆಲವರು ಕೆಲಸ ಕೊಟ್ಟರೂ ದುಡ್ಡು ಕೊಡಲಿಲ್ಲ. ಈಗ ಸಣ್ಣ ಪುಟ್ಟ ಸಿನಿಮಾ ಅವಕಾಶ, ಕಿರುತೆರೆ ನಟನೆ ಆಗಾಗ ಸಿಗುತ್ತಿದೆ ಅಷ್ಟೆ. ಅದನ್ನು ಹೊರತಾಗಿ ಬೇರೆ ದಾರಿಗಳಿಲ್ಲ. ಮಗಳೂ ಈಗ ಬೆಳೆದು ನಿಂತಿದ್ದಾಳೆ. ಹಾಗಾಗಿ ಜೀವನೋಪಾಯಕ್ಕಾಗಿ ಒಂದು ದಾರಿ ಬೇಕೆಂದು ಮನೆ ಮನೆಗೆ ಹೋಗಿ ಸೋಪು ಮಾರುತ್ತಿದ್ದೇನೆ ಎಂದು ಆಕೆಯೇ ಹೇಳಿಕೊಂಡಿದ್ದಾರೆ.

ಇವತ್ತಲ್ಲ ನಾಳೆ ಒಳ್ಳೆಯ ಆಫರ್‌ ಬರಬಹುದು ಎನ್ನುವ ಆಸೆಯೊಂದಿಗೆ ಈ ಐವತ್ತೊಂದನೇ ವಯಸ್ಸಿನಲ್ಲೂ ಕಾಯುತ್ತಿದ್ದಾರೆ. ʻʻಸದ್ಯಕ್ಕೆ ನನಗೆ ಕೆಲಸವಿಲ್ಲ. ಯಾವುದೇ ಕೆಲಸವಿದ್ದರೂ ನಾನು ಮಾಡಲು ಸಿದ್ದ, ಯಾವುದೇ ಕೆಲಸ ಮಾಡಲು ನಾನು ಹಿಂಜರಿಯುವುದಿಲ್ಲ. ನಾಳೆ ನಿಮ್ಮ ಆಫೀಸಿನಲ್ಲಿ ಕೆಲಸ ಕೊಟ್ಟರೆ ಅದನ್ನೂ ಸಹ ಒಪ್ಪಿಕೊಳ್ಳುತ್ತೇನೆ. ಟಾಯ್ಲೆಟ್ ತೊಳೆಯುವ ಕೆಲಸವಿದ್ದರೂ ನಾನು ಸಂತೋಷದಿಂದ ಮಾಡುತ್ತೇನೆʼʼ ಎಂದು ಐಶ್ವರ್ಯ ಹೇಳಿದ್ದಾರೆ. ಇದು ಆಕೆಯ ಈಗಿನ ಪರಿಸ್ಥಿತಿಗೆ ಕನ್ನಡಿಯಾಗಿದೆ.

ಇದನ್ನೂ ಓದಿ: ನಟಿ ಅಮೂಲ್ಯಾಳ ಮುದ್ದಾದ ಮುಖಕ್ಕೆ ಮುದ್ದಾದ ಪಾದಗಳ ಸ್ಪರ್ಶ!

Exit mobile version