Site icon Vistara News

Adipurush: ಪ್ರಭಾಸ್​ ನಟನೆಯು ಆದಿಪುರುಷ್​ ಸಿನಿಮಾದ ಕೊನೇ ಟ್ರೈಲರ್​ ಬಿಡುಗಡೆ

Adipurush

#image_title

ತಿರುಪತಿ: ನಿರ್ಮಾಪಕ ಓಂ ರೌತ್ ಅವರ ಸಿನಿಮಾ ಆದಿಪುರುಷ್ ಜೂನ್ 16ರಂದು 3ಡಿ ಮಾದರಿಯಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಅದಕ್ಕೆ ಮುಂಚಿತವಾಗಿ ಮಂಗಳವಾರ ತಿರುಪತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂತಿಮ ಟ್ರೈಲರ್ ಬಿಡುಗಡೆಗೊಂಡಿತು. ಕಳಪೆ ವಿಎಫ್ಎಕ್ಸ್ ಮತ್ತು ಅನಿಮೇಷನ್​ ಕಾರಣಕ್ಕೆ ಈ ಹಿಂದೆ ವೀಕ್ಷಕರಿಂದ ತಿರಸ್ಕರಿಸಲ್ಪಟ್ಟಿದ್ದ ಟೀಸರ್ ವೀಡಿಯೊಗೆ ಹೋಲಿಸಿದರೆ ಹೊಸ ಟ್ರೈಲರ್ ಪ್ರಭಾವಶಾಲಿಯಾಗಿದೆ. ಈ ಚಿತ್ರದಲ್ಲಿ ರಾಘವನಾಗಿ ಪ್ರಭಾಸ್, ಜಾನಕಿಯಾಗಿ ಕೃತಿ ಸನೋನ್, ಲಕ್ಷ್ಮಣನಾಗಿ ಸನ್ನಿ ಸಿಂಗ್ ಮತ್ತು ಲಂಕೇಶ್ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ.

2 ನಿಮಿಷಕ್ಕೂ ಹೆಚ್ಚು ಅವಧಿಯ ಟ್ರೈಲರ್ ರಾಮಾಯಣದ ಕಥಾಹಂದರವನ್ನು ಹೊಂದಿದೆ. ಇದರಲ್ಲಿ ಕೃತಿ ಜಾನಕಿಯಾಗಿ ಮತ್ತು ಸೈಫ್ ಲಂಕೇಶ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯುದ್ಧಭೂಮಿಯಲ್ಲಿ ರಾಘವನಾಗಿ ಪ್ರಭಾಸ್ ಮಿಂಚುತ್ತಾರೆ. ಹಿಂದಿನ ಟ್ರೈಲರ್​ಗಳು ಮತ್ತು ಟೀಸರ್​ಗಳಿಗೆ ಹೋಲಿಸಿದರೆ ಅಂತಿಮ ವೀಡಿಯೊದ ಮೊದಲಾರ್ಧವು ಉತ್ತಮ ದೃಶ್ಯಗಳನ್ನು ಹೊಂದಿದೆ. ಆದರೆ, ಕೊನೆಯಲ್ಲಿ ಸ್ವಲ್ಪ ಕಳೆಗುಂದುತ್ತದೆ.

ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಭಾರತದ 5 ವಿವಿಧ ಭಾಷೆಗಳಲ್ಲಿ ಆದಿಪುರುಷ್ ಬಿಡುಗಡೆಯಾಗಲಿದೆ. ಇದು ಜೂನ್ 16 ರಂದು ಚಿತ್ರಮಂದಿರದಲ್ಲಿ ತೆರೆಗೆ ಬರಲಿದೆ. ಈ ಚಿತ್ರವು ಜೂನ್ 13 ರಂದು ನ್ಯೂಯಾರ್ಕ್​​ನಲ್ಲಿ ನಡೆಯುವ ಟ್ರಿಬೆಕಾ ಫಿಲ್ಮ್ ಫೆಸ್ಟಿವಲ್​​ನ 2023 ಆವೃತ್ತಿಯಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.

ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರಭಾಸ್

ಟ್ರೈಲರ್ ಬಿಡುಗಡೆಗೂ ಮುನ್ನ ನಟ ಪ್ರಭಾಸ್ ತಿರುಪತಿಯ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪ್ರಭಾಸ್ ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಆದಿಪುರುಷ್ ನಲ್ಲಿ ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸಲು ಅವಕಾಶ ಸಿಕ್ಕಿದ್ದಕ್ಕೆ ಧನ್ಯ ಎಂದು ಹೇಳಿದ್ದರು.

ಪಿಟಿಐ ಜೊತೆ ಮಾತನಾಡಿದ ಪ್ರಭಾಸ್, “ನನಗೆ ಈ ಅವಕಾಶವನ್ನು ನೀಡಿದ್ದಕ್ಕಾಗಿ ನಾನು ಓಂ ಅವರಿಗೆ ಧನ್ಯವಾದ ಹೇಳಬೇಕು. ನಾವು ಈ ಚಿತ್ರವನ್ನು ಸಾಕಷ್ಟು ಪ್ರೀತಿ ಮತ್ತು ಗೌರವದಿಂದ ಮಾಡಿದ್ದೇವೆ. ನೀವೆಲ್ಲರೂ ಇದನ್ನು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಆದಿಪುರುಷ್ ಬಗ್ಗೆ ಓಂ ರೌತ್

ತನ್ಹಾಜಿ: ದಿ ಅನ್ಸಂಗ್ ವಾರಿಯರ್ ಚಿತ್ರದ ನಿರ್ದೇಶಕ ಓಂ ರೌತ್, ಚಿತ್ರವನ್ನು ರಾಮ್ ಲೀಲಾ ಕಲಾವಿದರಿಗೆ ಅರ್ಪಿಸಿದ್ದಾರೆ. “ರಾಮ್ ಲೀಲಾದ ಭಾಗವಾಗಿರುವ ಪ್ರತಿಯೊಬ್ಬ ಕಲಾವಿದರಿಗೂ ಈ ಚಿತ್ರವನ್ನು ಅರ್ಪಿಸಲು ನಾನು ಬಯಸುತ್ತೇನೆ. ‘ರಾಮಾಯಣ’ದ ಕಥೆ ಹಲವು ವರ್ಷಗಳಿಂದ ಇದೆ. ಅದು ಒಂದು ಬಸ್ಸು ಇದ್ದಂತೆ. ನಾವು ಈ ಬಸ್ಸನ್ನು ಹತ್ತಿದ್ದೇವೆ ಮತ್ತು ನಾವು ಕೆಲವು ವರ್ಷಗಳವರೆಗೆ ಮುಂದುವರಿಯುತ್ತೇವೆ. ನಾವು ಇಳಿದ ಬಳಿಕ ಯಾರಾದರೂ ಬಸ್ ಹತ್ತುತ್ತಾರೆ. ಆದರೆ ರಾಮಲೀಲಾದ ಪ್ರಯಾಣ ಮುಂದುವರಿಯುತ್ತದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Exit mobile version