Site icon Vistara News

Puneeth Parva | ಬೊಂಬೆ ಹೇಳುತೈತೆ ಎಂದು ಹಾಡಿದ ಶಿವಣ್ಣ, ವೇದಿಕೆ ಮೇಲೆ ಅಶ್ವಿನಿ ಪುನೀತ್‌ ಕಣ್ಣೀರು

Ashwini

ಬೆಂಗಳೂರು: ಅರಮನೆ ಮೈದಾನದಲ್ಲಿ ನಡೆದ ಪುನೀತ ಪರ್ವ (Puneeth Parva) ಕಾರ್ಯಕ್ರಮವು ಹಲವು ಭಾವುಕ ಘಟನೆಗಳಿಗೆ ಸಾಕ್ಷಿಯಾಗಿದೆ. ಅದರಲ್ಲೂ, ದೊಡ್ಮನೆಯ ಎಲ್ಲ ಸದಸ್ಯರು ವೇದಿಕೆ ಮೇಲಿದ್ದಾಗ ಶಿವರಾಜ ಕುಮಾರ್‌ ಅವರು “ಬೊಂಬೆ ಹೇಳುತೈತೆ” ಹಾಡು ಹಾಡಿದ್ದು, ಆಗ ಪುನೀತ್‌ ರಾಜಕುಮಾರ್‌ ಅವರ ಪತ್ನಿ ಅಶ್ವಿನಿ ಪುನೀತ್‌ ರಾಜಕುಮಾರ್‌ ಅವರ ಕಣ್ಣಾಲಿಗಳು ಒದ್ದೆಯಾದವು. ಹಾಗೆಯೇ, ಹಾಡು ಮುಗಿಯುತ್ತಲೇ ವೇದಿಕೆ ನಿಲ್ಲಲು ಆಗದೆ ಅಶ್ವಿನಿ ಅವರು ವೇದಿಕೆಯಿಂದ ಇಳಿದರು.

ನಾನು ಅಪ್ಪು ಅಭಿಮಾನಿ ಎಂದ ಸುಮಲತಾ ಅಂಬರೀಶ್

ಹಲವಾರು ಗಣ್ಯರು ಅಪ್ಪು ಜತೆ ತಾವು ಕಳೆದ ಸುಮಧುರ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅದೇ ರೀತಿ, ನಟಿ, ಸಂಸದೆ ಸುಮಲತಾ ಅಂಬರೀಶ್‌ ಅವರೂ ಪುನೀತ್‌ ಜತೆ ತಮಗಿದ್ದ ಆತ್ಮೀಯತೆ ಬಗ್ಗೆ ಮಾತನಾಡಿದ್ದಾರೆ. “ನಾನು ಅಪ್ಪುವಿನ ಅಭಿಮಾನಿ” ಎಂದಿದ್ದಾರೆ.

“ನಾನು ಅಪ್ಪುವಿನ ದೊಡ್ಡ ಅಭಿಮಾನಿ. ಅಪ್ಪು ನಟನೆ, ಅವರ ಸ್ನೇಹಪರತೆ, ಸರಳ ಸ್ವಭಾವ, ವಿನಯ, ಸಮಾಜ ಸೇವೆಯನ್ನು ಮರೆಯುವುದಿಲ್ಲ. ನನಗೆ ಅಪ್ಪು ತುಂಬ ವಿಶೇಷ ವ್ಯಕ್ತಿ. ನನ್ನನ್ನು ಕನ್ನಡ ಸಿನಿಮಾ ರಂಗಕ್ಕೆ ಪರಿಚಯಿಸಿದ್ದೇ ಡಾ.ರಾಜಕುಮಾರ್‌ ಹಾಗೂ ಪಾರ್ವತಮ್ಮ ರಾಜಕುಮಾರ್‌ ಅವರು. ಹಲವು ವರ್ಷಗಳ ಬಳಿಕ ನಾನು ಹಾಗೂ ಅಂಬರೀಶ್‌ ಅವರು ಅಪ್ಪು ಸಿನಿಮಾದಲ್ಲಿ ನಟಿಸಿದೆವು. ಅಪ್ಪುವಿನ ಬಹುಮುಖ ವ್ಯಕಿತ್ವಕ್ಕೆ ಗಂಧದ ಗುಡಿ ಸಾಕ್ಷಿಯಾಗಿದೆ. ಅಪ್ಪು ಒಬ್ಬ ಪರಿಸರ ಪ್ರೇಮಿ ಎಂಬುದು ಎಲ್ಲರಿಗೂ ಗೊತ್ತಿರಲಿಕ್ಕಿಲ್ಲ. ಗಂಧದ ಗುಡಿ ಮೂಲಕ ಅವರು ಕರ್ನಾಟಕವನ್ನು ಪರಿಚಯಿಸುತ್ತಿದ್ದಾರೆ” ಎಂದು ಹೇಳಿದರು.

ಸಂಭ್ರಮ ಅಲ್ಲ, ಮಹಾ ಸಂಗಮ ಎಂದ ರವಿಚಂದ್ರನ್

ನಟ ರವಿಚಂದ್ರನ್‌ ಮಾತನಾಡಿ, ” ಸಂಭ್ರಮ ಅಲ್ಲ ಇದು, ಮಹಾ ಸಂಗಮ. ಮನುಷ್ಯ ಸಂಪಾದನೆ ಮಾಡಬೇಕಾಗಿರುವುದು ಇದನ್ನೇ. ಎಲ್ಲರೂ ಇಲ್ಲಿ ಸೇರಿದ್ದೇವೆ ಎಂದರೆ, ಅಪ್ಪುಗೋಸ್ಕರ ಸೇರಿದ್ದೇವೆ ಎಂದರೆ ಸುಮ್ಮನೆ ಅಲ್ಲ. ಇದೆಲ್ಲ ಅಪ್ಪು ಮೇಲಿರುವ ಪ್ರೀತಿಗೆ ಸಾಕ್ಷಿಯಾಗಿದೆ. ಡಾ.ರಾಜಕುಮಾರ್‌ ಅವರ ಅಪ್ಪುಗೆಯಿಂದ ನಾನೊಬ್ಬ ಕಲಾವಿದನಾದೆ. ನನ್ನಪ್ಪ ವೀರಸ್ವಾಮಿ ಅವರ ಅಪ್ಪುಗೆಯಿಂದ ನಾನೊಬ್ಬ ನಿರ್ದೇಶಕನಾದೆ. ಅಪ್ಪು ಅವರ ಅಪ್ಪುಗೆಯಿಂದ ನಾನೊಬ್ಬ ಅದೃಷ್ಟವಂತನಾದೆ” ಎಂದು ಸ್ಮರಿಸಿದರು.

“ಇಂದು ಗಂಧದ ಗುಡಿ ಎಂದರೆ ಡಾ.ರಾಜಕುಮಾರ್‌, ಶಿವರಾಜಕುಮಾರ್‌ ಹಾಗೂ ಪುನೀತ್‌ ರಾಜಕುಮಾರ್.‌ ಯಾರು ಬೇಕಾದರೂ ಹೀರೊ ಆಗಬಹುದು, ಆದರೆ, ಒಬ್ಬ ಮನುಷ್ಯನಾಗಬೇಕು ಎಂದರೆ ಪುನೀತ್‌ ಅವರನ್ನು ನೋಡಿ ಕಲಿಯಬೇಕು. ಅಪ್ಪು ಅವರು ಒಬ್ಬ ಹೀರೊ ಆಗಿ ಗಂಧದ ಗುಡಿ ಸಿನಿಮಾ ಮಾಡುವುದಕ್ಕಿಂತ ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಮಾಡಿದ್ದಾರೆ. ಹಾಗಾಗಿ ಎಲ್ಲರೂ ಅದನ್ನು ನೋಡಬೇಕು” ಎಂದು ಹೇಳಿದರು.

ಅಪ್ಪು ಡಾನ್ಸ್ ಕುರಿತು ಪ್ರಭುದೇವ ಮೆಚ್ಚುಗೆ

ಪುನೀತ್‌ ರಾಜಕುಮಾರ್‌ ಅವರ ಹಾಡುಗಳಿಗೆ ಪ್ರಭುದೇವ ನೃತ್ಯ ಮಾಡಿದರು. ಇದಾದ ಬಳಿಕ ಮಾತನಾಡಿದ ಅವರು, “ಅಪ್ಪು ಒಬ್ಬ ಸ್ನೇಹಜೀವಿ. ಅವರು ಅದ್ಭುತ ಡಾನ್ಸರ್‌ ಆಗಿರುವ ಜತೆಗೆ ಉತ್ತಮ ವ್ಯಕ್ತಿಯಾಗಿದ್ದರು” ಎಂದು ಹೇಳಿದರು.

ಇದನ್ನೂ ಓದಿ | Puneeth Parva | ಅಪ್ಪುವಿನ ಡ್ಯಾನ್ಸ್‌ಗೆ ನಾನು ದೊಡ್ಡ ಅಭಿಮಾನಿ ಅಂದ್ರು ಶಿವಣ್ಣ: ವೇದಿಕೆಯಲ್ಲಿ ನಟರ ಸಮಾಗಮ!

Exit mobile version