Site icon Vistara News

BBK Season 10: ಚರ್ಚೆ ಹುಟ್ಟು ಹಾಕಿದೆ ವರ್ತೂರು ಸಂತೋಷ್‌ ಮದುವೆ ವಿಚಾರ; ಅಸಲಿಯತ್ತೇನು?

varthur santhosh

varthur santhosh

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK Season 10) ಹಲವು ವಿಚಾರಗಳಿಂದ ಚರ್ಚೆಗೆ ಕಾರಣವಾಗುತ್ತಿದೆ. ಸ್ಪರ್ಧಿಗಳ ವರ್ತನೆ, ಜಗಳ, ಸ್ನೇಹ ಎಲ್ಲವೂ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ವೈಯಕ್ತಿಕ ಕಾರಣದಿಂದ ಬಿಗ್‌ ಬಾಸ್‌ ಮನೆಯಿಂದ ಹೊರ ಹೋಗುವುದಾಗಿ ಹಠ ಹಿಡಿದಿದ್ದ ಕೃಷಿಕ ವರ್ತೂರು ಸಂತೋಷ್ (Varthur Santhosh)​ ಇದೀಗ ಮದುವೆಯ ವಿಚಾರಕ್ಕೂ ಸುದ್ದಿಯಲ್ಲಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ವರ್ತೂರು ಸಂತೋಷ್ ಹಾಗೂ ತನಿಷಾ ಕುಪ್ಪಂಡ ಮಧ್ಯೆ ಸ್ನೇಹ, ಆತ್ಮೀಯತೆ ಇದೆ. ಹೀಗಾಗಿ ಇಬ್ಬರ ಮಧ್ಯೆ ಗೆಳತನಕ್ಕಿಂತ ವಿಶೇಷವಾದುದು ಏನೋ ಇದೆ ಎಂದು ಇತರ ಸ್ಪರ್ಧಿಗಳು ರೇಗಿಸುತ್ತಿದ್ದಾರೆ. ಜತೆಗೆ ವೀಕ್ಷಕರಿಗೂ ಅದೇ ರೀತಿಯ ಅನುಮಾನವೂ ಮೂಡುತ್ತಿದೆ. ಮಾತ್ರವಲ್ಲ ಇತ್ತೀಚಿನ ವೀಕೆಂಡ್‌ ಸಂಚಿಕೆಯಲ್ಲಿ ಸುದೀಪ್‌ ಕೂಡ ವರ್ತೂರು ಅವರನ್ನು ಈ ವಿಚಾರವಾಗಿ ರೇಗಿಸಿದ್ದರು. ಇದೆಲ್ಲದರ ಮಧ್ಯೆ ವರ್ತೂರು ಅವರದ್ದು ಎನ್ನಲಾದ ಮದುವೆ ಫೋಟೋಗಳು ಇದೀಗ ಎಲ್ಲೆಡೆ ಹರಿದಾಡುತ್ತಿವೆ.

ಫೋಟೊಗಳು ವೈರಲ್‌

ವರ್ತೂರು ಸಂತೋಷ್ ಅವರಿಗೆ ಅದಾಗಲೇ ಮದುವೆ ಆಗಿದೆ ಎನ್ನುವ ಸುದ್ದಿ ಚರ್ಚೆಗೆ ಗ್ರಾಸವಾಗಿರುವುದಲ್ಲದೆ ಈ ಕುರಿತಾದ ಫೋಟೊಗಳು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿವೆ. ಅವರು ಮದುವೆಯಾಗಿ ವಿಚ್ಛೇದನ ಪಡೆದುಕೊಂಡಿದ್ದಾರಾ? ಎನ್ನುವ ಬಗ್ಗೆಯೂ ಹಲವರು ಮಾತನಾಡುತ್ತಿದ್ದಾರೆ. ಈ ಬಗ್ಗೆ ವರ್ತೂರು ಸಂತೋಷ್ ಆಗಲಿ, ಅವರ ಮನೆಯವರಾಗಲೀ ಬಾಯಿ ಬಿಟ್ಟಿಲ್ಲ.

ಅನುಮಾನ ಹುಟ್ಟು ಹಾಕಿದ್ದ ರಕ್ಷಕ್‌ ಮಾತು

ಇತ್ತೀಚೆಗೆ ಎಲಿಮಿನೇಟ್‌ ಆಗಿದ್ದ ಬುಲೆಟ್‌ ರಕ್ಷಕ್‌ ಹೇಳಿದ್ದ ಮಾತು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ʼʼಹೊರಗಡೆ ವರ್ತೂರು ಸಂತೋಷ್ ಅವರಿಗಾಗಿ ಹುಡುಗಿಯೊಬ್ಬರು ಕಾಯುತ್ತಿದ್ದಾರೆ. ‘ಬಿಗ್ ಬಾಸ್‌’ ಮನೆಯಿಂದ ಹೊರಗೆ ಬಂದ್ಮೇಲೆ ವರ್ತೂರು ಸಂತೋಷ್ ಜತೆ ಅವರ ನಿಶ್ಚಿತಾರ್ಥ ನಡೆಯಲಿದೆ. ತಮಾಷೆಗಾಗಿ ವರ್ತೂರು ಸಂತೋಷ್ ಮತ್ತು ತನಿಷಾ ಅವರನ್ನ ರೇಗಿಸುತ್ತಿದ್ವಿ. ವರ್ತೂರು ಸಂತೋಷ್ – ತನಿಷಾ ಮಧ್ಯೆ ಏನೂ ಇಲ್ಲ’’ ಎಂದು ರಕ್ಷಕ್ ಬುಲೆಟ್‌ ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೆ ಆ ಹುಡುಗಿ ಯಾರು ಎಂಬುದನ್ನು ಅವರು ಬಹಿರಂಗ ಪಡಿಸಿರಲಿಲ್ಲ. ಇದರ ಬೆನ್ನಲ್ಲೇ ವರ್ತೂರು ಅವರಿಗೆ ಈಗಾಗಲೇ ಮದುವೆಯಾಗಿದೆ ಎನ್ನುವ ವದಂತಿ ಹರಡಿದೆ. ಇನ್ನು ಕೆಲವರು ವರ್ತೂರು ಅವರಿಗೆ ಮದುವೆನೇ ಆಗಿಲ್ಲ. ಇದು ಸುಳ್ಳು ಸುದ್ದಿ ಎಂದು ವಾದಿಸುತ್ತಿದ್ದಾರೆ. ಮನೆಯವರು ಅಧಿಕೃತ ಹೇಳಿಕೆ ನೀಡಿದ ಬಳಿಕವಷ್ಟೇ ಈ ಗೊಂದಲ ನಿವಾರಣೆಯಾಗಲಿದೆ.

ಇದನ್ನೂ ಓದಿ: BBK Season 10: ಹೊರಗೆ ಹೋಗ್ತೀನಿ ಎಂದು ಕಣ್ಣೀರಿಟ್ಟ ವರ್ತೂರ್‌; ವೇದಿಕೆ ತೊರೆದ ಸುದೀಪ್‌!

ಕೆಲವು ದಿನಗಳಿಂದ ಸುದ್ದಿಯಲ್ಲಿರುವ ವರ್ತೂರು

‘ಹಳ್ಳಿಕಾರ್ ಒಡೆಯ’ ಎಂದೇ ಜನಪ್ರಿಯತೆ ಪಡೆದಿರುವ ವರ್ತೂರು ಸಂತೋಷ್‌ ಬಿಗ್‌ಬಾಸ್‌ ಪ್ರವೇಶಿಸಿದ ಬಳಿಕ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಹುಲಿ ಉಗುರು (Tiger Nail) ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಅವರು ಬಳಿಕ ಆಟ ಮುಂದುವರಿಸಿದ್ದರು. ಈ ಮಧ್ಯೆ ಅವರು ವೈಯಕ್ತಿಕ ಕಾರಣ ನೀಡಿ ಸಾಕಷ್ಟು ವೋಟ್‌ ಬಂದಿದ್ದರೂ ಸ್ಪರ್ಧೆಯನ್ನು ಅರ್ಧದಲ್ಲೇ ಮೊಟಕುಗೊಳಿಸುವ ನಿರ್ಧಾರ ಪ್ರಕಟಿಸಿದ್ದರು. ಮಾತ್ರವಲ್ಲ ತನಿಷಾ ಜತೆಗಿನ ಒಡನಾಟವೂ ಸದ್ದು ಮಾಡುತ್ತಿದೆ. ಇದೀಗ ಅವರ ಮದುವೆ ವಿಚಾರವೂ ಮತ್ತೆ ಚರ್ಚೆಗೆ ಕಾರಣವಾಗಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version