Site icon Vistara News

Darshan: ದರ್ಶನ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ‘ಕಾಟೇರ’ ಬಿಡುಗಡೆ ದಿನಾಂಕ ಘೋಷಣೆ

katera

katera

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ತೂಗುದೀಪ (Darshan Thoogudeepa) ಅಭಿಮಾನಿಗಳು ಬಹು ದಿನಗಳಿಂದ ಕಾಯುತ್ತಿರುವ ಆ ದಿನ ಬಂದೇ ಬಿಟ್ಟಿದೆ. ದರ್ಶನ್‌ ಅಭಿನಯದ ಮುಂದಿನ ಚಿತ್ರ ‘ಕಾಟೇರ’ (Kaatera)ದ ಬಿಡುಗಡೆ ದಿನಾಂಕ ಘೋಷಿಸಲಾಗಿದೆ. ಈ ವರ್ಷಾಂತ್ಯದಲ್ಲಿ ಅಭಿಮಾನಿಗಳು ದರ್ಶನ್‌ ಅವರನ್ನು ಬೆಳ್ಳಿ ತೆರೆ ಮೇಲೆ ಕಣ್ತುಂಬಿಕೊಳ್ಳಬಹುದು. ಡಿಸೆಂಬರ್‌ 29ರಂದು ಕಾಟೇರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ.

ಹೊಸದಾಗಿ ಪ್ರೋಮೊ ಬಿಡುಗಡೆ ಮಾಡಿ ಚಿತ್ರತಂಡ ರಿಲೀಸ್‌ ದಿನಾಂಕವನ್ನು ಘೋಷಿಸಿದೆ. ಈ ಚಿತ್ರಕ್ಕೆ ನಿರ್ದೇಶಕ ತರುಣ್​ ಸುಧೀರ್​ ಆ್ಯಕ್ಷನ್​-ಕಟ್​ ಹೇಳಿದ್ದು, ರಾಕ್​ಲೈನ್​ ವೆಂಕಟೇಶ್​ ನಿರ್ಮಿಸಿದ್ದಾರೆ. ‘ಕಾಟೇರ’ ದರ್ಶನ್‌ ಅಭಿನಯದ 56ನೇ ಸಿನಿಮಾ. ಇದು 70ರ ದಶಕದ ನೈಜ ಘಟನೆಯೊಂದನ್ನು ಆಧರಿಸಿ ತಯಾರಾಗಿದೆ. ಹಳ್ಳಿಯಲ್ಲಿ ನಡೆಯುವ ಕಥೆಯನ್ನೊಳಗೊಂಡ ಈ ಚಿತ್ರದಲ್ಲಿ ದರ್ಶನ್‌ ರಗಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವರ್ಷಾರಂಭದಲ್ಲಿ ʼಕ್ರಾಂತಿʼ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ಚಾಲೆಂಜಿಂಗ್‌ ಸ್ಟಾರ್‌ ವರ್ಷಾಂತ್ಯದಲ್ಲಿ ʼಕಾಟೇರʼ ಮೂಲಕ ದರ್ಶನ ನೀಡುತ್ತಿದ್ದಾರೆ.

ಮಾಲಾಶ್ರೀ ಪುತ್ರಿಯ ಮೊದಲ ಚಿತ್ರ

ಮತ್ತೊಂದು ವಿಶೇಷ ಎಂದರೆ ಸ್ಯಾಂಡಲ್‌ವುಡ್‌ ʼಕನಸಿನ ರಾಣಿʼ ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್‌ ನಾಯಕಿಯಾಗಿ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದರ್ಪಣೆ ಮಾಡುತ್ತಿದ್ದಾರೆ. ಪ್ರಭಾವತಿ ಎನ್ನುವ ಹಳ್ಳಿ ಹುಡುಗಿಯಾಗಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಹಿರಿಯ ನಟಿ ಶ್ರುತಿ ಕೂಡಾ ನಟಿಸಿದ್ದಾರೆ. ಅಲ್ಲದೆ ಹಿರಿಯ ಕಲಾವಿದರಾದ ಅವಿನಾಶ್, ಜಗಪತಿ ಬಾಬು, ವಿನೋದ್ ಆಳ್ವ, ಕುಮಾರ್ ಗೋವಿಂದ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇತ್ತೀಚೆಗೆ ತೆರೆಕಂಡ ಯೋಗರಾಜ್‌ ಭಟ್‌ ನಿರ್ದೇಶನದ ʼಗರಡಿʼ ಚಿತ್ರದಲ್ಲಿ ದರ್ಶನ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರ ಸಿನಿಮಾ ರಿಲೀಸ್‌ ಡೇಟ್‌ ರಿವೀಲ್‌ ಆಗಿದ್ದು ಅಭಿಮಾನಿಗಳು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದೆ. ಈ ಹಿಂದೆ ತರುಣ್​ ಸುಧೀರ್​ ನಿರ್ದೇಶನದ ʼಚೌಕʼ ಚಿತ್ರದಲ್ಲಿ ದರ್ಶನ್‌ ಅತಿಥಿ ಪಾತ್ರ ಮಾಡಿದ್ದರು.

”ಕಾಟೇರ ಏನು ಅಂತ ಎಲ್ರೂ ಕೇಳ್ತಾ ಇದ್ದರು. ಇದು 70ರ ದಶಕದ ಸಿನಿಮಾ. ಎಲ್ಲ ಸ್ಟಾರ್‌ಗಳಿಗಿಂತ ಸಿನಿಮಾ ದೊಡ್ಡದು. ಈ ಸಿನಿಮಾಕ್ಕೆ 85 ದಿನ ಮೀಸಲಿಟ್ಟಿದ್ದೆ. ವಿನೋದ್ ಆಳ್ವಾ ಸರ್ ಜತೆ ನಂಗೆ ಮೊದಲ ಸಿನಿಮಾ. ಅವರ ಸಿನಿಮಾದಲ್ಲಿ ನಾನು ಲೈಟ್ ಬಾಯ್ ಆಗಿದ್ದೆʼʼ ಎಂದು ಈ ಹಿಂದೆ ಚಿತ್ರದ ಬಗ್ಗೆ ಮಾತನಾಡುತ್ತ ದರ್ಶನ್‌ ಹೇಳಿದ್ದರು. ʼʼಈ ಸಿನಿಮಾದಲ್ಲಿ ಆಶ್ಲೀಲತೆ ಇಲ್ಲ. ಸಭ್ಯವಾದ ಸಂಭಾಷಣೆ ಇದೆʼʼ ಎಂದು ತಿಳಿಸಿ ನಿರೀಕ್ಷೆ ಹೆಚ್ಚಿಸಿದ್ದರು.

ಇದನ್ನೂ ಓದಿ: Kaatera Press Meet: ಬರೋಬ್ಬರಿ 2 ವರ್ಷದ ಬಳಿಕ ಮಾಧ್ಯಮಗಳ ಮುಂದೆ ನಟ ದರ್ಶನ್! ‘ಕಾಟೇರ’ ಬಗ್ಗೆ ಹೇಳಿದ್ದೇನು?

ʼಕಾಟೇರʼ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನಿರ್ದೇಶನವಿದೆ. ಸುಧಾಕರ್ ಎಸ್‌. ರಾಜ್ ಚಿತ್ರವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಪಂಚೆಯುಟ್ಟು ಹಳ್ಳಿ ಹೈದನಾಗಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಭರಪೂರ ಮನರಂಜನೆ ಜತೆಗೆ ಮಾಸ್ ದೃಶ್ಯಗಳು ರೋಮಾಂಚನಗೊಳಿಸಲಿದೆ ಎಂದು ಅಭಿಮಾನಿಗಳು ಈಗಾಗಲೆ ಲೆಕ್ಕಾಚಾರ ಹಾಕಲು ಆರಂಭಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version