Site icon Vistara News

ಸಮಂತಾ ಕೇಳಿದ ಪ್ರಶ್ನೆಗೆ ದಿಗಂತ್ ಶಾಕ್! ‘ದೂದ್ ಪೇಡ’ ಅಂದ್ರೆ ಯಾರು ಎಂದಿದ್ದಕ್ಕೆ ‘ಚಾಕೊಲೇಟ್ ಹೀರೊ’ ನೀಡಿದ ರಿಯಾಕ್ಷನ್ ಹೇಗಿತ್ತು?

ಕನ್ನಡ ಚಿತ್ರರಂಗದ ಚಾಕೊಲೇಟ್ ಹೀರೊ ದಿಗಂತ್ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು ಈಗ ಭರ್ತಿ 20 ವರ್ಷಗಳಾಗಿವೆ. 2006ರಲ್ಲಿ ‘ಮಿಸ್ ಕ್ಯಾಲಿಫೋರ್ನಿಯಾ’ ಮೂಲಕ ಆರಂಭವಾದ ಇವರ ಸಿನಿ ಪಯಣ ಇಂದು ‘ರುದ್ರ ಕಾಲ’ ಎಂಬ ವಿಭಿನ್ನ ಸಬ್ಜೆಕ್ಟ್‌ನ ಸಿನಿಮಾವರೆಗೆ ಬಂದು ನಿಂತಿದೆ. ಇತ್ತೀಚೆಗೆ ಈ ಚಿತ್ರದ ಪೋಸ್ಟರ್ ಅನ್ನು ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಅನಾವರಣಗೊಳಿಸಿದ್ದರು. ಈ ವೇಳೆ ನಡೆದ ಒಂದು ತಮಾಷೆಯ ಪ್ರಸಂಗದ ಬಗ್ಗೆ ದಿಗಂತ್ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ಪೋಸ್ಟರ್ ಲಾಂಚ್ ಆದ ಮೇಲೆ ಯೂಟ್ಯೂಬ್ ಕಮೆಂಟ್ ಬಾಕ್ಸ್‌ನಲ್ಲಿ ಅಭಿಮಾನಿಗಳು ಸತತವಾಗಿ ‘ದೂದ್ ಪೇಡ’ ಎಂದು ಕರೆಯುತ್ತಿರುವುದನ್ನು ನೋಡಿ ಸಮಂತಾ ಅವರು ಆಶ್ಚರ್ಯಚಕಿತರಾಗಿ ದಿಗಂತ್ ಅವರನ್ನೇ ಪ್ರಶ್ನೆ ಮಾಡಿದ್ದರಂತೆ!

“ಯಾರಿದು ದೂದ್ ಪೇಡ? ಕಮೆಂಟ್ಸ್‌ನಲ್ಲಿ ಯಾಕೆ ಈ ರೀತಿ ಬರೆಯುತ್ತಿದ್ದಾರೆ?” ಎಂದು ಸಮಂತಾ ಕುತೂಹಲದಿಂದ ದಿಗಂತ್ ಅವರನ್ನು ಕೇಳಿದ್ದಾರೆ. ಇದಕ್ಕೆ ಮುಗುಳ್ನಕ್ಕ ದಿಗಂತ್, “ಇದು ನನಗಿರುವ ಬಿರುದು, ‘ಗಾಳಿಪಟ’ ಸಿನಿಮಾದ ನಂತರ ಕನ್ನಡಿಗರು ಪ್ರೀತಿಯಿಂದ ನನ್ನನ್ನು ದೂದ್ ಪೇಡ ಎಂದು ಕರೆಯುತ್ತಾರೆ” ಎಂದು ವಿವರಿಸಿದ್ದಾರೆ. ಸಮಂತಾ ಅವರ ಈ ಮುಗ್ಧ ಪ್ರಶ್ನೆಗೆ ದಿಗಂತ್ ಒಂದು ಕ್ಷಣ ಶಾಕ್ ಆದರೂ, ನಂತರ ತಮ್ಮ ಹೆಸರಿನ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟು ನಗೆ ಬೀರಿದ್ದಾರೆ. ಸಮಂತಾ ಅವರು ದಿಗಂತ್ ಅವರ ಹೊಸ ಚಿತ್ರತಂಡಕ್ಕೆ ಶುಭ ಹಾರೈಸಿದ್ದಲ್ಲದೆ, ನಟನ ವೃತ್ತಿಜೀವನದ 20 ವರ್ಷಗಳ ಸಾಧನೆಯನ್ನು ಅಭಿನಂದಿಸಿದ್ದಾರೆ.

ತಮ್ಮ 20 ವರ್ಷಗಳ ಸುದೀರ್ಘ ಪಯಣದ ಬಗ್ಗೆ ಮಾತನಾಡಿದ ದಿಗಂತ್, “ಹಿಂತಿರುಗಿ ನೋಡಿದಾಗ ಒಂದಷ್ಟು ಏಳು-ಬೀಳುಗಳು, ಒಳ್ಳೆಯ ಅನುಭವಗಳು ಸಿಕ್ಕಿವೆ. ‘ರುದ್ರ ಕಾಲ’ ಸಿನಿಮಾದ ಕಥೆ ಇವತ್ತಿನ ಟ್ರೆಂಡ್‌ಗೆ ತಕ್ಕಂತಿದ್ದು, ದೈವಶಕ್ತಿಯ ಎಳೆಯನ್ನು ಹೊಂದಿದೆ. ನಿರ್ದೇಶಕರ ಪ್ರತಿಭೆ ಮತ್ತು ವಿಭಿನ್ನ ಸಬ್ಜೆಕ್ಟ್ ನನ್ನನ್ನು ಈ ಸಿನಿಮಾ ಒಪ್ಪಿಕೊಳ್ಳುವಂತೆ ಮಾಡಿತು” ಎಂದು ಹೇಳಿದ್ದಾರೆ. ಸದ್ಯ ಸಮಂತಾ ಮತ್ತು ದಿಗಂತ್ ನಡುವಿನ ಈ ‘ದೂದ್ ಪೇಡ’ ಸಂಭಾಷಣೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭ ಹಾರೈಸುತ್ತಿದ್ದಾರೆ

Exit mobile version