Site icon Vistara News

Gaalipata 2 | ಗಾಳಿಪಟ-2 ಪ್ರೀ ರಿಲೀಸ್ ಇವೆಂಟ್: ಭಾಗಿಯಾದ ಸ್ಯಾಂಡಲ್‌ವುಡ್‌ ತಾರಾ ಬಳಗ

gaalipata 2

ಬೆಂಗಳೂರು: ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ಗಾಳಿಪಟ-2 (Gaalipata 2) ರಾಜ್ಯಾದ್ಯಂತ ಆಗಸ್ಟ್‌ 12ರಂದು ತೆರೆಗೆ ಬರಲು ಸಜ್ಜಾಗಿದೆ. ಗಾಳಿಪಟ-2 ಪ್ರೀ ರಿಲೀಸ್ ಇವೆಂಟ್ ಆಯೋಜನೆ ಮಾಡಿದ್ದು, ‘ಕರುನಾಡ ಚಕ್ರವರ್ತಿ’ ಶಿವರಾಜ್‌ಕುಮಾರ್, ‘ರಿಯಲ್ ಸ್ಟಾರ್’ ಉಪೇಂದ್ರ , ರಮೇಶ್ ಅರವಿಂದ್ ಸೇರಿದಂತೆ ಅನೇಕರು ಸಮಾರಂಭದಲ್ಲಿ ಭಾಗಿಯಾಗಿ ಶುಭ ಹಾರೈಸಿದರು.

ರಂಗಾಯಣ ರಘು ಮಾತನಾಡಿ, ʻʻರಂಗ ಎಸ್‌ಎಸ್‌ಎಲ್‌ಸಿ, ಮುಂಗಾರು ಮಳೆ ನಂತರ ಅದ್ಭುತ ಚಿತ್ರಗಳನ್ನು ಯೋಗರಾಜ್‌ ಭಟ್‌ ನೀಡಿದ್ದಾರೆ. ಗಾಳಿಪಟ-2 ಸಿನಿಮಾ ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶಿಗರು ನೋಡುವಂತಹ ಸಿನಿಮಾʼʼ ಎಂದು ಹೇಳಿದರು.

ನಟಿ ಶರ್ಮಿಳಾ ಮಾಂಡ್ರೆ ಮಾತನಾಡಿ, ʻʻಪವನ್‌ ಅವರ ಜತೆ ಅಭಿನಯಿಸಲು ಹೆದರಿದ್ದೆ. ರೊಮ್ಯಾಂಟಿಕ್‌ ಹಾಡಿಗೆ ಡ್ಯಾನ್ಸ್‌ ಮಾಡಬೇಕಾದರೆ ಪವನ್‌ ನಡುಗುತ್ತಿದ್ದರು. ಅವರಿಗೆ ಯಾವಾಗಲೂ ಸಸ್ಪೆನ್ಸ್‌ ಸಿನಿಮಾ ಮಾಡಿ ಅಭ್ಯಾಸ. ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿರುವುದು ಇದೇ ಮೊದಲ ಬಾರಿʼʼ ಎಂದರು.

ಇದನ್ನೂ ಓದಿ | Gaalipata 2 | ಗೋಲ್ಡನ್‌ ಸ್ಟಾರ್‌ಗೆ ಸಿಕ್ತು ಚಿತ್ರ ತಂಡದಿಂದ ಜನ್ಮದಿನ ಗಿಫ್ಟ್‌

ಎವ್ರಿಬಡಿ ರಾಕ್ ಟು ದ ಬೀಟು ಹಾಡಿಗೆ ಸ್ಯಾಂಡಲ್‌ವುಡ್‌ ನಟರು ಹೆಜ್ಜೆ ಹಾಕಿದರು. ನೃತ್ಯಗಾರರ ಜತೆ ಡಾನ್ಸ್ ಮಾಡಿ ಉಪೇಂದ್ರ, ಶಿವಣ್ಣ ಹಾಗೂ ಗಣೇಶ್ ಜೋಶ್‌ ಹೆಚ್ಚಿಸಿದರು.

ನಿರ್ದೆಶಕ ಯೋಗರಾಜ್‌ ಭಟ್‌ ಮಾತನಾಡಿ ʻʻಆಗಸ್ಟ್‌ 12 ಗಾಳಿಪಟ-2 ಸಿನಿಮಾ ತೆರೆಗೆ ಬರಲಿದೆ. ತಂದೆ-ತಾಯಿಗೆ ಹೇಳದೆ ಇರುವುದನ್ನು ಸ್ನೇಹಿತರಿಗೆ ಹೇಳುತ್ತೇವೆ. ನನ್ನ ಬದುಕಿನಲ್ಲಿ ಸ್ನೇಹಿತರು ಕೈಹಿಡಿದಿದ್ದಾರೆʼʼ ಎಂದು ಹೇಳಿದರು.

ನಟ ಗಣೇಶ್‌ ಮಾತನಾಡಿ ʻʻಯೊಗರಾಜ್ ಭಟ್ ಹಾಗೂ ನನ್ನ ಕಾಂಬಿನೇಷನ್‌ಗಿಂತ ಬೇರೆ ಯಾವುದು ಇದೆ? ಯೋಗರಾಜ್ ಭಟ್ ಹಾಗೂ ನಾನು ಮಾಡಿರುವ ಸಿನಿಮಾಗಳಲ್ಲಿ ಗಾಳಿಪಟ-2 ಒಳ್ಳೆಯ ಸಿನಿಮಾ. ಪ್ರಪಂಚದಲ್ಲಿ ಎಂತಹ ಸ್ನೇಹಿತ ಬೇಕಾದರೂ ಸಿಗಬಹುದು. ಆದರೆ, ಯೋಗರಾಜ್‌ ಭಟ್‌ ತರ ಸ್ನೇಹಿತ ಎಲ್ಲಿಯೂ ಸಿಗುವುದಿಲ್ಲ.ʼʼ ಎಂದರು.

ಶಿವರಾಜ್‌ ಕುಮಾರ್‌ ಮಾತನಾಡಿ ʻʻಗಾಳಿಪಟ-2 ಟ್ರೈಲರ್‌ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಅರ್ಜುನ್‌ ಜನ್ಯಾ ಅವರ ಸಂಗೀತ ನನಗೆ ತುಂಬಾ ಅಚ್ಚು ಮೆಚ್ಚು. ಅರ್ಜುನ್‌ ಅವರು ನನಗೆ 45 ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆʼʼ ಎಂದು ಹಂಚಿಕೊಂಡರು.

ರಮೇಶ್‌ ಅರವಿಂದ್‌ ಮಾತನಾಡಿ ʻʻನಮ್ಮೂರ ಮಂದಾರ ಹೂವೇ ರಿಲೀಸ್ ಆಗಿ 26ವರ್ಷ ಆಗಿದೆ. ಆಗಿನಿಂದ ನಮ್ಮಿಬ್ಬರ ಸ್ನೇಹ ಹಾಗೆ ಇದೆ. ನಾನು ನೋಡಿದ ಅತಿ ಶ್ರೇಷ್ಠ ನಿರ್ಮಾಪಕ ರಮೇಶ್ ರೆಡ್ಡಿʼʼಎಂದರು.

ಕಾರ್ಯಕ್ರಮದಲ್ಲಿ ನಟ ಉಪೇಂದ್ರ ಅವರು ʻಪ್ರೀತಿ ಪುಸ್ತಕದ ಬದನೆಕಾಯಿ, ಸ್ನೇಹ ಪುಸ್ತಕದ ಬೆಂಡೆಕಾಯಿʼ ಡೈಲಾಗ್ ಹೇಳಿ ರಂಜಿಸಿದರು. ವಾಣಿಜ್ಯ ಮಂಡಳಿ ಅಧ್ಯಕ್ಷ ಭಾಮಾ ಹರೀಶ್, ಕೆ ಮಂಜು, ರಂಗಾಯಣ ರಘು, ವಿಎನ್ ಪ್ರೊಡಕ್ಷನ್ ಸಂಸ್ಥೆ ಮಾಲಿಕ ವೆಂಕಟ್, ನಿರ್ಮಾಪಕ ರಮೇಶ್ ರೆಡ್ಡಿ ಸೇರಿದಂತೆ ಹಲವು ಕಲಾವಿದರು ಉಪಸ್ಥಿತರಿದ್ದರು.

ಯೋಗರಾಜ್‌ ಭಟ್‌ ಈ ಚಿತ್ರದ ನಿರ್ದೇಶನ ಮಾಡಿದ್ದು, ಸದ್ಯ ಕೆವಿಎನ್‌ ಪ್ರೊಡಕ್ಷನ್‌ ವಿತರಣೆ ಹಕ್ಕನ್ನು ಪಡೆದಿದೆ. ಈ ಹಿಂದೆ ತೆರೆಕಂಡ ಗೋಲ್ಡನ್ ಸ್ಟಾರ್‌ ಗಣೇಶ್ ನಟನೆಯ ‘ಸಖತ್’ ಚಿತ್ರವನ್ನು ನಿರ್ಮಾಣ ಮಾಡುವ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಕೆವಿಎನ್‌ ಪ್ರೊಡಕ್ಷನ್ಸ್ ಆನಂತರ ‘ಬೈ ಟು ಲವ್’ ಚಿತ್ರಕ್ಕೂ ಹಣ ಹಾಕಿತ್ತು.

ಇದನ್ನೂ ಓದಿ | Gaalipata-2 | ಟ್ರೈಲರ್‌ ರಿಲೀಸ್‌ಗೆ ಮುಹೂರ್ತ ಫಿಕ್ಸ್; ಯಾವಾಗ ಗೊತ್ತಾ?

ವೈಭವಿ ಶಾಂಡಿಲ್ಯಾ, ಶರ್ಮಿಳಾ ಮಾಂಡ್ರೆ, ನಿಶ್ವಿಕಾ ನಾಯ್ಡು, ಸಂಯುಕ್ತಾ ಮೆನನ್, ಅನಂತ್ ನಾಗ್, ರಂಗಾಯಣ ರಘು, ಪದ್ಮಜಾ ರಾವ್, ಸುಧಾ ಬೆಳವಾಡಿ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಈಗಾಗಲೇ ಚಿತ್ರದ ಹಾಡುಗಳು ಸಖತ್ ಸದ್ದು ಮಾಡುತ್ತಿವೆ.

ಇದನ್ನೂ ಓದಿ | ಆಗಸ್ಟ್‌ 15ಕ್ಕೆ 3 ದಿನ ಮೊದಲು ಹಾರಲಿದೆ ʼಗಾಳಿಪಟ -2ʼ: ಗೋಲ್ಡನ್‌ ಸ್ಟಾರ್‌ ಯೋಗರಾಜ ಭಟ್‌ ಜೋಡಿ

Exit mobile version