Site icon Vistara News

Gaalipata 2 | ಗಮನ ಸೆಳೆಯುತ್ತಿದೆ ಗಣಿ-ದೂದ್‌ ಕಾಂಬಿನೇಷನ್‌; ಕಾಮಿಡಿ ಜತೆ ಎಮೋಷನ್‌ ಟಚ್!

Gaalipata 2

ಬೆಂಗಳೂರು: ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ಗಾಳಿಪಟ-2 (Gaalipata 2) ರಾಜ್ಯಾದ್ಯಂತ ಆಗಸ್ಟ್‌ 12ರಂದು ತೆರೆಗೆ ಬರಲು ಸಜ್ಜಾಗಿದೆ. ಈಗ ಬಿಡುಗಡೆಯಾಗಿರುವ ಟ್ರೈಲರ್‌ ಬಗ್ಗೆ ಸಿನಿಪ್ರೇಕ್ಷಕರಿಂದ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ.

ಟ್ರೈಲರ್‌ ಬಿಡುಗಡೆಯಾಗಿ ಒಂದೇ ದಿನಕ್ಕೆ ಉತ್ತಮ ರೆಸ್ಪಾನ್ಸ್‌ ಸಿಕ್ಕಿದ್ದು, ಈಗಾಗಲೇ ೧.೮ ಮಿಲಿಯನ್‌ (1,809,366) ವೀಕ್ಷಣೆ ಕಂಡಿದೆ. ಟ್ರೈಲರ್‌ನಲ್ಲಿ ಫ್ರೆಂಡ್‌ಶಿಪ್‌, ನೇಚರ್‌ ಹಾಗೂ ಡೈಲಾಗ್‌ ಮೂಲಕ ಸಿನಿಮಾದ ಒಟ್ಟಾರೆ ಚಿತ್ರಣವನ್ನು ಕಟ್ಟಿಕೊಡಲಾಗಿದೆ. ಪ್ರತಿ ಪಾತ್ರಕ್ಕೂ ಪ್ರಾಮುಖ್ಯತೆ ಇರುವುದನ್ನು ಟ್ರೈಲರ್‌ ಮೂಲಕವೇ ನಿರ್ದೇಶಕರಾದ ಯೋಗರಾಜ್‌ ಭಟ್‌ ಅವರು ಕಟ್ಟಿಕೊಟ್ಟಿದ್ದು, ಸಿನಿಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಟ್ರೈಲರ್‌ ಕರಾಮತ್ತು

ಟ್ರೈಲರ್‌ನಲ್ಲಿ ಗಣೇಶ್‌, ದಿಗಂತ್‌ ಹಾಗೂ ಪವನ್‌ ಕಾಂಬಿನೇಷನ್‌ ನಡುವಿನ ಹಾಸ್ಯ ಮಿಶ್ರಿತ ತುಣುಕುಗಳನ್ನು ತೋರಿಸಲಾಗಿದೆ. ಅಲ್ಲದೆ, ಕನ್ನಡ ಮೇಷ್ಟ್ರು ಅನಂತ್‌ನಾಗ್‌ ಅವರ ಕನ್ನಡ ಪ್ರೇಮ, ಕನ್ನಡಕ್ಕೆ ಸಾವಿಲ್ಲ, ಕನ್ನಡ ಸಾಯುತ್ತಿದೆ ಎಂದು ಹೇಳುವವರೇ ಬೇಗ ಸಾಯುತ್ತಾರೆ ಅನ್ನುವ ಕನ್ನಡಾಭಿಮಾನದ ಮಾತುಗಳು ಕನ್ನಡಿಗರ ಮನವನ್ನು ತಟ್ಟಿದೆ. ಜತೆಗೆ ರಂಗಾಯಣ ರಘು ಅವರ ಕಚಗುಳಿಯ ಮಾತುಗಳೂ ಗಮನ ಸೆಳೆದಿವೆ. ಈ ನಡುವೆ ಕನ್ನಡ ಮೇಷ್ಟ್ರಿಗೆ ಹುಚ್ಚು ಹಿಡಿದಿರುವ ಬಗ್ಗೆ ಕಂಡುಬರುವ ದೃಷ್ಯಾವಳಿಯು ಹಲವರನ್ನು ಈಗಾಗಲೇ ಭಾವುಕಗೊಳಿಸಿದೆ. ಹೀಗಾಗಿ ಸಿನಿಮಾದಲ್ಲಿ ಹಾಸ್ಯ, ತುಂಟಾಟ ಎಷ್ಟಿದೆಯೋ ಎಮೋಷನ್‌ ಮತ್ತು ಸೀರಿಯಸ್‌ ನಟನೆಯ ಭಾಗವೂ ಇದೆ ಎಂಬ ಸಂದೇಶವನ್ನು ಚಿತ್ರತಂಡ ರವಾನಿಸಿದೆ.

ಯೋಗರಾಜ್‌ ಭಟ್‌ ಈ ಚಿತ್ರದ ನಿರ್ದೇಶನ ಮಾಡಿದ್ದು, ಕೆವಿಎನ್‌ ಪ್ರೊಡಕ್ಷನ್‌ ವಿತರಣೆ ಹಕ್ಕನ್ನು ಪಡೆದಿದೆ. ವೈಭವಿ ಶಾಂಡಿಲ್ಯಾ, ಶರ್ಮಿಳಾ ಮಾಂಡ್ರೆ, ನಿಶ್ವಿಕಾ ನಾಯ್ಡು, ಸಂಯುಕ್ತಾ ಮೆನನ್, ಅನಂತ್ ನಾಗ್, ರಂಗಾಯಣ ರಘು, ಪದ್ಮಜಾ ರಾವ್, ಸುಧಾ ಬೆಳವಾಡಿ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಈಗಾಗಲೇ ಚಿತ್ರದ ಹಾಡುಗಳು ಸಖತ್ ಸದ್ದು ಮಾಡುತ್ತಿವೆ.

Exit mobile version