Site icon Vistara News

ಅದೊಂದು ರೂಮರ್‌ನಿಂದ ನನ್ನನ್ನು ಮದುವೆಯಾಗಲು ಯಾರೂ ಮುಂದೆ ಬರುತ್ತಿಲ್ಲ ಅಂತಾರೆ ನಟಿ ಕಂಗನಾ!

ಕಂಗನಾ ರಣಾವತ್‌-ಇತ್ತೀಚೆಗೆ ಈ ಹೆಸರು ಸಖತ್‌ ಫೇಮಸ್‌ ! ಒಂದಲ್ಲ ಒಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸುತ್ತಿರುವ ಬಾಲಿವುಡ್‌ ಕ್ವೀನ್‌ ಕಂಗನಾಗೆ ಮದುವೆಯಾಗಲು ಸಾಧ್ಯವಾಗುತ್ತಿಲ್ಲವಂತೆ. ಆಕೆಯನ್ನು ಮದುವೆಯಾಗಲು ಯಾವ ಹುಡುಗರೂ ಮುಂದೆ ಬರುತ್ತಿಲ್ಲವಂತೆ ! ಇದನ್ನು ಸ್ವತಃ ಕಂಗನಾ ರಣಾವತ್‌ (Kangana Ranaut) ಅವರೇ ಹೇಳಿಕೊಂಡಿದ್ದಾರೆ.

35 ವರ್ಷದ ಕಂಗನಾ ತಮ್ಮ ಬಾಲಿವುಡ್‌ ಜರ್ನಿಯಲ್ಲಿ ಯಶಸ್ಸು ಕಂಡವರು. ಕಳೆದ ವರ್ಷ ಪದ್ಮಶ್ರೀ ಪ್ರಶಸ್ತಿ ಪಡೆದ ಮೇಲೆ ಅವರ ಇಮೇಜ್‌ ಮತ್ತಷ್ಟು ಹೆಚ್ಚಿದೆ. ಸಾಲುಸಾಲು ಸಿನಿಮಾಗಳು ಕೈಯಲ್ಲಿದ್ದು, ಕಂಗನಾ ಖಡಕ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ಆಕ್ಷನ್‌ ಚಿತ್ರ ಧಾಕಡ್‌ ತೆರೆಕಾಣಲು ಸಿದ್ಧವಾಗಿದೆ. ಹಾಗೇ, ಅವರ ಚೊಚ್ಚಲ ನಿರ್ಮಾಣದ, ರೊಮ್ಯಾಂಟಿಕ್‌ ಚಿತ್ರ ಟಿಕು ವೆಡ್ಸ್‌ ಶೇರು ಕೂಡ ಕೆಲವೇ ದಿನಗಳಲ್ಲಿ ಅಮೇಜಾನ್‌ ಪ್ರೈಮ್‌ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಭಾರತೀಯ ವಾಯುಸೇನೆ ಕಥೆಯಾಧಾರಿತ ತೇಜಸ್‌ ಸಿನಿಮಾದಲ್ಲಿ ಕೂಡ ಕಂಗನಾ ರಣಾವತ್‌ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಅದರಲ್ಲಿ ತೇಜಸ್‌ ಯುದ್ಧವಿಮಾನದ ಪೈಲಟ್‌ ಆಗಿದ್ದಾರೆ. ಈ ಸಿನಿಮಾವೂ 2022ರ ಅಕ್ಟೋಬರ್‌ ಸುಮಾರಿಗೆ ಬಿಡುಗಡೆಯಾಗಲಿದೆ.

ಹೀಗೆ ವೃತ್ತಿ ಜೀವನದ ಯಶಸ್ಸಿನ ತುತ್ತ ತುದಿಯಲ್ಲಿದ್ದು, ನೋಡೋಕೂ ಸುಂದರವಾಗಿರುವ ಕಂಗನಾ ರಣಾವತ್‌ಗೆ ಮದುವೆಯಾಗಲು ಕಷ್ಟವಾಗುತ್ತಿರುವುದಾದರೂ ಯಾಕೆ ಎಂಬ ಪ್ರಶ್ನೆ ಮೂಡುವುದು ಸಹಜ. ಕಂಗನಾ ಹೇಳುವ ಪ್ರಕಾರ, ಅವರ ಬಗ್ಗೆ ಇಲ್ಲಸಲ್ಲದ ರೂಮರ್‌ಗಳು ಹರಡುತ್ತಿರುವುದೇ ಇದಕ್ಕೆ ಕಾರಣವಂತೆ. ಮೇ 20ಕ್ಕೆ ತೆರೆಕಾಣಲಿರುವ Dhaakad ಸಿನಿಮಾ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಕಂಗನಾರಿಗೆ ಕಾರ್ಯಕ್ರಮ ನಿರೂಪಕ ಸಿದ್ಧಾರ್ಥ್‌ ಕನ್ನನ್‌ ಪ್ರಶ್ನೆಯೊಂದನ್ನು ಕೇಳುತ್ತಾರೆ. ʼಧಾಕಡ್‌ ಸಿನಿಮಾದಲ್ಲಿ ನಿಮ್ಮದು ಏಜೆಂಟ್‌ ಅಗ್ನಿ ಎಂಬ ಒಬ್ಬ ಖಡಕ್‌ ಸ್ಪೈ (ಗೂಢಚಾರಿಣಿ) ಪಾತ್ರ. ನಿಮ್ಮ ನಿಜ ಜೀವನದಲ್ಲೂ ಇದೇ ಸ್ವಭಾವದವರಾ? ಧಾಕಡ್‌ನ ಏಜೆಂಟ್‌ ಅಗ್ನಿಯ ಪಾತ್ರಕ್ಕೂ, ನಿಮ್ಮ ನೈಜ ಸ್ವಭಾವಕ್ಕೂ ಎಷ್ಟು ಹೋಲಿಕೆಯಿದೆ?’ ಎಂದು ಕೇಳುತ್ತಾರೆ. ಅದಕ್ಕೆ ದೊಡ್ಡದಾಗಿ ನಗುತ್ತ ಉತ್ತರಿಸಿದ ಕಂಗನಾ, ‘ನೋಡಿ, ನಿಮ್ಮಂತವರು ನನ್ನ ಬಗ್ಗೆ ಹಬ್ಬಿಸುತ್ತಿರುವ ವದಂತಿಯಿಂದ ನನಗೆ ಮದುವೆಯಾಗುವುದೇ ಕಷ್ಟವಾಗಿದೆ. ಕಂಗನಾ ತುಂಬ ಟಫ್‌, ಆಕೆ ಹುಡುಗರಿಗೆ ಹೊಡೆಯುತ್ತಾಳೆ ಎಂಬಿತ್ಯಾದಿ ರೂಮರ್‌ಗಳಿಂದಾಗಿ ನನ್ನನ್ನು ಮದುವೆಯಾಗಲು ಯಾರೂ ಮುಂದೆ ಬರುತ್ತಿಲ್ಲ, ಆದರೆ ನಾನಾದರೂ ಯಾಕೆ ಹೊಡೆಯಲಿ?ʼ ಎಂದು ಹೇಳಿದ್ದಾರೆ. 

ಇದನ್ನೂ ಓದಿ | ʼದೇವರ ಪುತ್ರಿʼ ಬಾಲಿವುಡ್‌ ಎಂಟ್ರಿ?: ಸಾರಾ ತೆಂಡೂಲ್ಕರ್ ಸಿನಿಮಾ ಚರ್ಚೆ

ಇದೇ ಸಂದರ್ಶನದಲ್ಲಿ ಭಾಗವಹಿಸಿದ್ದ ನಟ ಅರ್ಜುನ್‌ ರಾಮ್‌ಪಾಲ್‌ ಕೂಡ ಕಂಗನಾರ ಮಾತಿಗೆ ನಕ್ಕಿದ್ದಾರೆ. ರೂಮರ್‌ ಹಬ್ಬಿಸಬೇಡಿ ಎಂದು ಕಾರ್ಯಕ್ರಮದ ಹೋಸ್ಟ್‌ ಸಿದ್ಧಾರ್ಥ್‌ ಬಳಿ ಜೋಕ್‌ ಮಾಡಿದ್ದಾರೆ. ಅಷ್ಟೇ ಅಲ್ಲ, ಕಂಗನಾ ರಣಾವತ್‌ ಅವರಲ್ಲಿರುವ ಒಳ್ಳೆಯ ಸ್ವಭಾವಗಳನ್ನೂ ತಿಳಿಸಿದ್ದಾರೆ. ʼಕಂಗನಾ ಒಬ್ಬರು ಅದ್ಭುತ ನಟಿ. ಅವರು ತೆರೆಯ ಮೇಲೆ ಕಾಣಿಸುವ ಹಾಗೆ ನಿಜ ಜೀವನದಲ್ಲಿ ಇಲ್ಲ. ಆಕೆ ತುಂಬ ಸ್ವೀಟ್‌ ಲೇಡಿ. ಎಲ್ಲರನ್ನೂ ಪ್ರೀತಿಸುತ್ತಾರೆ. ದೇವರೆಂದರೆ ಸಿಕ್ಕಾಪಟೆ ಭಯ. ಹೀಗಾಗಿ ಪೂಜೆ, ಪ್ರಾರ್ಥನೆಗಳನ್ನೆಲ್ಲ ತಪ್ಪದೆ ಮಾಡುತ್ತಾರೆ. ಒಂದಿನ ತಪ್ಪದೆ ಯೋಗವನ್ನೂ ಮಾಡುತ್ತಾರೆ. ಆಕೆ ತುಂಬ ನಾರ್ಮಲ್‌ ಆಗಿದ್ದಾರೆ. ಭಯ ಪಡಬೇಕಿಲ್ಲ ಎಂದಿದ್ದಾರೆ.   

ಕೆಲವು ದಿನಗಳ ಹಿಂದೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಕಂಗನಾ ರಣಾವತ್‌ ತಮ್ಮ ಭವಿಷ್ಯದ ಬಗ್ಗೆ ಮಾತನಾಡಿದ್ದರು. ಇನ್ನು ಐದು ವರ್ಷಗಳಲ್ಲಿ ನಾನು ಮದುವೆಯಾಗಿ, ಮಕ್ಕಳನ್ನು ಹೊಂದಲು ಬಯಸುತ್ತೇನೆ. ಪತ್ನಿ, ತಾಯಿಯಾಗುವ ಜತೆ ನವ ಭಾರತದ ಸಕ್ರಿಯ ಪ್ರಜೆಯಾಗಲು ಇಚ್ಛಿಸುತ್ತೇನೆ ಎಂದು ಹೇಳಿದ್ದರು.  

ಇದನ್ನೂ ಓದಿ | ಇಂದಿನಿಂದ ಉತ್ತರ ಪ್ರದೇಶದಲ್ಲಿ ʻಯೋಗಿʼ ದರ್ಬಾರ್: ಸಂಜೆ 4 ಗಂಟೆಗೆ ಪಟ್ಟಾಭಿಷೇಕ

Exit mobile version