Site icon Vistara News

ಕಾಳಿ ವಿವಾದ: ಅಣ್ಣಾವ್ರ ಬೇಡರ ಕಣ್ಣಪ್ಪ ಚಿತ್ರದ ಪೋಟೊ ಶೇರ್‌ ಮಾಡಿ ʼನನ್ನ ದೇವರು, ನನ್ನ ಹಕ್ಕುʼ ಎಂದ ನಟ ಕಿಶೋರ್

actor kishore

ಬೆಂಗಳೂರು: ಕಾಳಿ ಮಾತೆ ವಿವಾದ ಮುಗಿಯುವಂತೆ ಕಾಣುತ್ತಿಲ್ಲ, ಇತ್ತೀಚಿಗಷ್ಟೇ ಕಾಳಿ ವೇಷಧಾರಿ ಕೈಯಲ್ಲಿ ಸಿಗರೇಟ್​ ಇರುವ ಫೋಟೊ ಹಾಕಿ ಹಿಂದೂ ಸಂಘಟಕರ ಕೆಂಗಣ್ಣಿಗೆ ಗುರಿಯಾಗಿದ್ದ ನಿರ್ದೇಶಕಿ ಲೀನಾ ಪರ ಸ್ಯಾಂಡಲ್​ವುಡ್ ನಟ ಕಿಶೋರ್​ ಧ್ವನಿ ಎತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಡಾ. ರಾಜ್​ಕುಮಾರ್​ ನಟನೆಯ ಬೇಡರ ಕಣ್ಣಪ್ಪ ಚಿತ್ರದ ಪೋಸ್ಟರ್​ ಹಂಚಿಕೊಂಡಿರುವ ಕಿಶೋರ್ “”ನನ್ನ ದೇವರು, ನನ್ನ ಹಕ್ಕುʼʼ ಎಂದು ಬರೆದುಕೊಂಡಿದ್ದಾರೆ.

ಕಳೆದ ಎರಡು ಮೂರು ದಿನಗಳಿಂದ ಕಾಳಿ ದೇವತೆಯ ವಿಚಾರವಾಗಿ ಭಾರೀ ವಿವಾದ ಸೃಷ್ಟಿಯಾಗುತ್ತಿದೆ. ಈ ವಿವಾದದ ಕುರಿತಾಗಿ ಈ ಹಿಂದೆ ಕಾಂಗ್ರೆಸ್​ ಸಂಸದೆ ಮಹುವಾ ಮೊಯಿತ್ರಾ ದೇವರನ್ನು ಪೂಜಿಸುವಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕಲ್ಪನೆ ಇರುತ್ತದೆ ಎಂದು ಲೀನಾ ಪರವಾಗಿ ಹೇಳಿಕೆ ನೀಡಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು. ಈಗ ನಟ ಕಿಶೋರ್ ಕೂಡ ಲೀನಾ ಪರವಾಗಿ ಮಾತನಾಡಿ ಚರ್ಚೆ ಹುಟ್ಟು ಹಾಕಿದ್ದಾರೆ.

ಇದನ್ನು ಓದಿ| ನಟಿ ಸಾಯಿ ಪಲ್ಲವಿ ಕಾಶ್ಮೀರ್‌ ಫೈಲ್ಸ್‌ ಹೇಳಿಕೆ, ರಮ್ಯಾ ಬಳಿಕ ಕಿಶೋರ್‌, ಪ್ರಕಾಶ್‌ರಾಜ್‌ ಬೆಂಬಲ

ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ನಟ ಕಿಶೋರ್​ ಅಣ್ಣಾವ್ರ ನಟನೆಯ ಬೇಡರ ಕಣ್ಣಪ್ಪ ಪೋಸ್ಟರ್​ನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟರ್​ನಲ್ಲಿ ರಾಜ್​ಕುಮಾರ್​ ಅವರು ಶಿವಲಿಂಗದ ಮೇಲೆ ಕಾಲಿಟ್ಟಿರುವುದನ್ನು ಕಾಣಬಹುದು. ಇದರ ಜೊತೆಗೆ ನನ್ನ ದೇವರು, ನನ್ನ ಭಕ್ತಿ, ನನ್ನ ನೈವೇದ್ಯಗಳು, ನನ್ನ ಹಕ್ಕು, ನನ್ನ ಸ್ವಾತಂತ್ರ್ಯ ಅದು ನನ್ನ ನಾಡಿನ ಸೌಂದರ್ಯ, ನನ್ನ ನಾಡಿನ ಶಕ್ತಿ ಯಾರಿಗೂ ಅದನ್ನು ನಿರ್ದೇಶಿಸುವ, ರಾಜಕೀಯವಾಗಿಸುವ ಹಕ್ಕಿಲ್ಲ ಎಂದು ಬರೆದುಕೊಂಡಿದ್ದಾರೆ.  

ನಟ ಕಿಶೋರ್ ಹಂಚಿಕೊಂಡ ಈ ಪೋಸ್ಟರ್​ ನೋಡಿದ ಹಲವರು ಕಿಡಿಕಾರಿದ್ದಾರೆ. ನಿಮ್ಮ ಮೇಲೆ ಅಪಾರವಾದ ಗೌರವವಿತ್ತು. ಇಂದು ಅದನ್ನು ಕಳೆದುಕೊಂಡಿರಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು, ಕಿಶೋರ್​ಗೆ ಮಾಡೋಕೆ ಸಿನಿಮಾ ಇಲ್ಲ. ಅದಕ್ಕೆ ಈ ರೀತಿ ಪೋಸ್ಟ್ ಮಾಡ್ತಿದ್ದಾರೆ ಎಂದು ಟೀಕಿಸಿದ್ದಾರೆ. ಸದ್ಯ ಕಿಶೋರ್​ ಹಾಕಿರುವ ಈ ಪೋಸ್ಟ್​​ ಈಗ ಆನ್​ಲೈನ್​ನಲ್ಲಿ ವೈರಲ್ ಆಗಿದ್ದು, ಪರ ವಿರೋಧದ ಚರ್ಚೆಗಳು ಆಗುತ್ತಿವೆ. ನಟನ ಹೇಳಿಕೆಯನ್ನು ಕೆಲವರು ಒಪ್ಪಿದರೆ, ಮತ್ತೆ ಕೆಲವರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನು ಓದಿ| Kichcha Sudeep | ಕಿಚ್ಚನ ಬಗ್ಗೆ ಅವಹೇಳನಕಾರಿ ಹೇಳಿಕೆ: ಆಕ್ರೋಶ ವ್ಯಕ್ತಪಡಿಸಿದ ನಿರ್ದೇಶಕ ನಂದಕಿಶೋರ್‌

Exit mobile version