Site icon Vistara News

Kannada New Movies | ಸೆಪ್ಟೆಂಬರ್‌ನಲ್ಲಿ ತೆರೆಗೆ ಸಾಲು ಸಾಲು ಸಿನಿಮಾ: ನಿಮಗಿಷ್ಟದ ಚಿತ್ರ ಇದೆಯೇ?

Kannada New Movies

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ (Kannada New Movies) ಸಾಲು ಸಾಲು ಸಿನಿಮಾಗಳು ಬಿಡುಗಡೆ ಸಿದ್ಧಗೊಂಡಿದ್ದು, ಇದೇ ಸೆಪ್ಟೆಂಬರ್‌ನಲ್ಲಿ ಸಿನಿ ಪ್ರಿಯರಿಗೆ ರಸದೌತಣ ನೀಡಲಿದೆ. ಈಗಾಗಲೇ ಟ್ರೈಲರ್‌ ಮೂಲಕ ಹವಾ ಸೃಷ್ಟಿಸಿರುವ ಸಿನಿಮಾಗಳೇ ಈ ಪಟ್ಟಿಯಲ್ಲಿದ್ದು, ಪ್ರೇಕ್ಷಕರು ತಮ್ಮ ನೆಚ್ಚಿನ ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ.

ಲಕ್ಕಿಮ್ಯಾನ್‌ (Lucky Man Movie)
ಕನ್ನಡ ಚಿತ್ರರಂಗಕ್ಕೆ ಲಕ್‌ನಂತೆಯೇ (Lucky Man Movie) ಇದ್ದ ಪುನೀತ್ ರಾಜಕುಮಾರ್‌ ನಟನೆಯ ಲಕ್ಕಿ ಮ್ಯಾನ್‌ ಚಿತ್ರ ಸೆಪ್ಟೆಂಬರ್‌ 9ಕ್ಕೆ ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ. ನಟ ಪುನೀತ್‌ ರಾಜ್‌ಕುಮಾರ್‌ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾಗೆ ʻಯುʼ ಸರ್ಟಿಫಿಕೇಟ್‌ ಸಿಕ್ಕಿದೆ. ಶುಕ್ರವಾರ (ಸೆ.9) ಈ ಸಿನಿಮಾ ತೆರೆಕಾಣಲಿದ್ದು, ಪುನೀತ್ ಅಭಿಮಾನಿಗಳ ಪಾಲಿಗೆ ದೇವಮಾನವನಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್‌ ಕೂಡ ಶುರುವಾಗಿದೆ.

ಮಾನ್ಸೂನ್‌ ರಾಗ (Monsoon Raaga)
ಡಾಲಿ ಧನಂಜಯ ಹಾಗೂ ರಚಿತಾ ರಾಮ್ ನಟನೆಯ ಮಾನ್ಸೂನ್ ರಾಗ ಸಿನಿಮಾ (Monsoon Raaga) ವೀಕ್ಷಿಸಿದ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿ ಬಿಡುಗಡೆಗೆ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಸೆಪ್ಟೆಂಬರ್ 16ಕ್ಕೆ ಸಿನಿಮಾ ರಿಲೀಸ್‌ ಆಗಲಿದೆ.

ಇದನ್ನೂ ಓದಿ | Sita Ramam Film | ಒಟಿಟಿಗೆ ಬರಲಿದೆ ದುಲ್ಕರ್ ಸಲ್ಮಾನ್ ಅಭಿನಯದ ಸೀತಾ ರಾಮಂ ಸಿನಿಮಾ!

ಈ ಹಿಂದೆ ಚಿತ್ರದ ಟ್ರೈಲರ್‌ ಸಖತ್‌ ಸೌಂಡ್‌ ಮಾಡಿತ್ತು. ಟ್ರೈಲರ್‌ ನೋಡುವಾಗ ಚಿತ್ರ ಮಳೆಯ ಹಿನ್ನೆಲೆಯಲ್ಲಿ ಸಾಗುವ ಕಥೆಯನ್ನು ಹೊಂದಿರುವಂತೆ ಕಂಡುಬರುತ್ತಿದೆ. ಕೆಟ್ಟ ಜಗತ್ತಿನಲ್ಲಿ ಪ್ರೀತಿ ಅರಳುವ ಕಥಾ ಹಂದರವಿದೆ. ಒಂದು ಕಡೆ ಡಾಲಿ ಧನಂಜಯ್‌ ಹಾಗೂ ರಚಿತಾರಾಮ್‌ ಕಾಣಿಸಿಕೊಂಡರೆ, ಇನ್ನೊಂದೆಡೆ ಅಚ್ಯುತ್‌ ಕುಮಾರ್‌ ಹಾಗೂ ಸುಹಾಸಿನಿ ಅವರ ಪಾತ್ರ ಕುತೂಹಲವನ್ನು ಹುಟ್ಟುಹಾಕಿದೆ. ವಿಖ್ಯಾತ್‌ ನಿರ್ಮಿಸಿರುವ ಈ ಚಿತ್ರವನ್ನು ರವೀಂದ್ರನಾಥ್‌ ನಿರ್ದೇಶಿಸಿದ್ದಾರೆ.

ಗುರು ಶಿಷ್ಯರು
ಎಂಭತ್ತರ ದಶಕದಲ್ಲಿ ದ್ವಾರಕೀಶ್ ನಿರ್ಮಾಣದ “ಗುರು ಶಿಷ್ಯರು” ಚಿತ್ರ‌ ಕನ್ನಡಿಗರ ಮನ ಗೆದ್ದಿತ್ತು. ಈಗ ಅದೇ ಹೆಸರಿನ ಚಿತ್ರ ಮತ್ತೊಮ್ಮೆ ಬರುತ್ತಿದೆ. ಶರಣ್ ಕೃಷ್ಣ ಹಾಗೂ ತರುಣ್ ಕಿಶೋರ್ ಸುಧೀರ್ ನಿರ್ಮಿಸಿರುವ ಈ ಚಿತ್ರವನ್ನು ಜಡೇಶ್ ಕೆ. ಹಂಪಿ ನಿರ್ದೇಶಿಸಿದ್ದಾರೆ.

ಶರಣ್ ಹಾಗೂ ನಿಶ್ವಿಕಾ ನಾಯ್ಡು ನಾಯಕ-ನಾಯಕಿಯಾಗಿ ನಟಿಸಿರುವ ಈ ಚಿತ್ರವು ದೇಸಿ ಕ್ರೀಡೆಯಾದ ಖೊಖೊ ಆಟದ ಸುತ್ತ ನಡೆಯುತ್ತದೆ. ಖೊಖೊ ಕೋಚರ್ ಆಗಿ ಶರಣ್ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಹದಿಮೂರು ಜನ ಖೊಖೊ ಆಟಗಾರರ ಪೈಕಿ ಆರು ಮಂದಿ ಸಿನಿರಂಗದ ನಟರ ಪುತ್ರರು ನಟಿಸಿದ್ದಾರೆ. ಸೆಪ್ಟೆಂಬರ್ 23ಕ್ಕೆ ಈ ಚಿತ್ರ ತೆರೆ ಕಾಣುತ್ತಿದೆ.

ತೋತಾಪುರಿ (Totapuri Movie)
ನವರಸ ನಾಯಕ ಜಗ್ಗೇಶ್ ಹಾಗೂ ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ ತೋತಾಪುರಿ ಭಾಗ-1 (Totapuri Movie) ಸೆ.30ಕ್ಕೆ ವಿಶ್ವಾದ್ಯಂತ ತೆರೆ ಕಾಣಲಿದೆ. ಡೈರೆಕ್ಟರ್ ವಿಜಯಪ್ರಸಾದ್ ಈ ಹಾಸ್ಯಮಯ ಚಿತ್ರವನ್ನು ಎರಡು ಭಾಗದಲ್ಲಿ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಟ್ರೈಲರ್ ಹಾಗೂ ಹಾಡುಗಳಿಂದ ಮೆಚ್ಚುಗೆ ಪಡೆದಿರುವ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದೆ.

ತೋತಾಪುರಿ ಪಾರ್ಟ್-1ರಲ್ಲಿ ಒಂದು ಕಂಟೆಂಟ್ ಇದ್ದರೇ, ಎರಡನೇ ಪಾರ್ಟ್‌ನಲ್ಲಿ ಮತ್ತೊಂದಷ್ಟು ಹಾಸ್ಯ ತುಂಬಿರುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಆದರೆ, ಇವರೆಡೂ ಸಿನಿಮಾ ಒಟ್ಟಿಗೆ ಬರುತ್ತಿಲ್ಲ. ʻಡಾಲಿ ಧನಂಜಯ್‌ʼ ಈ ಸಿನಿಮಾದ ಮತ್ತೊಂದು ಆಕರ್ಷಣೆಯಾಗಿದೆ.

ಕಾಂತಾರ ( Kantara Movie)
ಹೊಂಬಾಳೆ ಫಿ‌ಲ್ಮ್ಸ್ ನಿರ್ಮಿಸಿರುವ‌ ರಿಷಭ್‌ ಶೆಟ್ಟಿ ನಿರ್ದೇಶಿಸಿ ನಾಯಕರಾಗಿ ನಟಿಸಿರುವ ಕಾಂತಾರ ಚಿತ್ರದ (Kantara Movie) ಟ್ರೈಲರ್‌ ಸೋಮವಾರ (ಸೆ. 5) ಬಿಡುಗಡೆಗೊಂಡಿತ್ತು. ಕಾಂತಾರ ಟ್ರೈಲರ್‌ನಲ್ಲಿ ಕುಂದಾಪುರದ ಜಾನಪದ ಹಾಡು ಮತ್ತು ತುಳು ನಾಡಿನ ದೈವ ಕೋಲ ಮತ್ತು ಕಂಬಳ ಕ್ರೀಡೆ ಹೈಲೈಟ್ ಆಗಿದೆ. ದಕ್ಷಿಣ ಕನ್ನಡದ ಆಚರಣೆಯ ಚಿತ್ರಣವನ್ನು ಕಟ್ಟಿಕೊಡುವಂತಿದೆ. ಚಿತ್ರ ಸೆ.30ಕ್ಕೆ ತೆರೆ ಕಾಣಲಿದೆ.

ಈಗಾಗಲೇ ಹಲವು ವಿಶೇಷಗಳಿಂದ ಕಾಂತಾರ ಮನೆಮಾತಾಗಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ, ವಿಜಯಪ್ರಕಾಶ್, ಅನನ್ಯ ಭಟ್ ಹಾಡಿರುವ ‘ಸಿಂಗಾರ ಸಿರಿಯೆ’ ಹಾಡಿಗೆ ಈಗಾಗಲೇ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಈ ಹಿಂದೆ ಕಾಂತಾರ ಸಿನಿಮಾದ ಪೋಸ್ಟರ್‌ ನೋಡುವಾಗಲೇ ʻಕಾಂತಾರʼ ಶೀರ್ಷಿಕೆಯೇ ಜನರನ್ನು ಕುತೂಹಲಕ್ಕೆ ಕೊಂಡೊಯ್ದಿತ್ತು. ಒಂದು ದಂತ ಕಥೆ ಎಂಬ ಟ್ಯಾಗ್‌ಲೈನ್‌ ಮೂಲಕ ಜನರನ್ನು ಸೆಳೆದಿತ್ತು. ಕಾಂತಾರ ಎಂದರೆ ಸೂರ್ಯನ ಬಿಸಿಲೇ ಬೀಳದ ಕಾಡು ಎಂದರ್ಥ. ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗದಲ್ಲಿ ಶ್ರೀದೇವಿ ದುಷ್ಟರನ್ನು ಸದೆಬಡಿಯಲು ಕದಂಬ ಕಾಂತಾರದಲ್ಲಿ ನೆಲೆಸಿರುತ್ತಾಳೆ ಎಂದು ತೋರಿಸಲಾಗುತ್ತದೆ. ಕಂಬಳ ಕ್ಷೇತ್ರದಲ್ಲಿ ಕಾಂತಾವರ ಎಂಬ ಹೆಸರು ಜನಪ್ರಿಯವಾಗಿದೆ. ಇದೆಲ್ಲವನ್ನೂ ಜೋಡಿಸಿಕೊಂಡು ಕಾಂತಾರದ ಕಥೆ ಹೆಣೆದಿರುವ ಸಾಧ್ಯತೆ ಇದೆ.

ಇದನ್ನೂ ಓದಿ | Hoysala Movie | ಡಾಲಿ ಧನಂಜಯ ಅಭಿನಯದ ಹೊಯ್ಸಳ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌!

Exit mobile version