Site icon Vistara News

Kichcha Sudeep | ಕಿಚ್ಚನ ಬಗ್ಗೆ ಅವಹೇಳನಕಾರಿ ಹೇಳಿಕೆ: ಆಕ್ರೋಶ ವ್ಯಕ್ತಪಡಿಸಿದ ನಿರ್ದೇಶಕ ನಂದಕಿಶೋರ್‌

Kichcha Sudeep

ಬೆಂಗಳೂರು : ನಟ ಕಿಚ್ಚ ಸುದೀಪ್‌ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವ್ಯಕ್ತಿಯ ವಿರುದ್ಧ ನಿರ್ದೇಶಕ ನಂದಕಿಶೋರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆನ್‌ಲೈನ್‌ ಗೇಮ್‌ಗಳ (ರಮ್ಮಿ) ಜಾಹೀರಾತಿನಲ್ಲಿ ಸುದೀಪ್‌ ಕಾಣಿಸಿಕೊಂಡಿರುವ ವಿಚಾರವಾಗಿ ನಟ ಕಿಚ್ಚ ಸುದೀಪ್‌ (Kichcha Sudeep) ಅವರ ವಿರುದ್ಧ ವ್ಯಕ್ತಿಯೊಬ್ಬ ಅವಹೇಳನಕಾರಿಯಾಗಿ ಮಾತನಾಡಿದ್ದು, ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದ. ಇದು ನಿರ್ದೇಶಕ ನಂದಕಿಶೋರ್‌ ಗಮನಕ್ಕೆ ಬಂದಿದೆ. ಈ ಬಗ್ಗೆ ಅವರು ವಿಡಿಯೊ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ʻಯಾವುದೇ ಕಲಾವಿದನ ಬಗ್ಗೆ ಮಾತನಾಡುವುದಕ್ಕೂ ಮುನ್ನ ಎಚ್ಚರಿಕೆ ಇರಲಿʼ ಎಂದು ಖಡಕ್‌ ವಾರ್ನಿಂಗ್‌ ಮಾಡಿರುವ ಅವರು, ಕಲಾವಿದರ ಅವ ಹೇಳನ ಸಹಿಸುವುದಿಲ್ಲ ಎಂದಿದ್ದಾರೆ. ನಂದಕಿಶೋರ್‌ ಅವರ ವಿಡಿಯೊ ವೈರಲ್‌ ಆಗಿದ್ದು, ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಇದನ್ನೂ ಓದಿ | Vikrant Rona | ವಿಕ್ರಾಂತ್‌ ರೋಣ ಎರಡನೇ ಹಾಡು ರಿಲೀಸ್‌: ರಾಜಕುಮಾರಿ ಲೋಕಕ್ಕೆ ಕೊಂಡೊಯ್ದ ಕಿಚ್ಚ

ನಂದಕಿಶೋರ್‌ ಹೇಳಿರುವುದೇನು?

‘ಕನ್ನಡ ಚಿತ್ರರಂಗದ ಮೇರು ನಟ ಕಿಚ್ಚ ಸುದೀಪ್‌ ಅವರ ಕುರಿತು ಮಾತನಾಡಿರುವ ಒಂದು ವಿಡಿಯೋ ನೋಡಿದೆ. ಕನ್ನಡದ ಕಲಾಭಿಮಾನಿಗಳೇ ನಮ್ಮ ತಂದೆ-ತಾಯಿ ಇದ್ದಂತೆ. ಕನ್ನಡದ ನಟರು ಅವರದೇ ಚೌಕಟ್ಟಿನಲ್ಲಿ ಅನೇಕ ಜನರಿಗೆ ಸಹಾಯ ಮಾಡಿದ್ದಾರೆ. ಕಲಾಭಿಮಾನಿಗಳನ್ನು ತಲೆ ಮೇಲೆ ಹೊತ್ತುಕೊಂಡು ತಿರುಗಾಡಿದ ಉದಾಹರಣೆಗಳು ನಮ್ಮಲ್ಲಿವೆ. ಚಿತ್ರರಂಗ ಒಂದು ಕುಟುಂಬ. ಆದ್ದರಿಂದ ನಾನು ಈಗ ಮಾತನಾಡುತ್ತಿದ್ದೇನೆʼ ಎಂದು ನಂದಕಿಶೋರ್‌ ವಿಡಿಯೊದಲ್ಲಿ ಹೇಳಿದ್ದಾರೆ.

ʻಸುದೀಪ್‌ ಅವರ ಸಾಧನೆ ಚಿತ್ರರಂಗದಲ್ಲಿ ದೊಡ್ಡದು. ಕನ್ನಡ ಚಿತ್ರರಂಗದ ಕಡೆಗೆ ಇಡೀ ಭಾರತೀಯ ಚಿತ್ರರಂಗ ತಿರುಗಿ ನೋಡುತ್ತಿದೆ ಎಂದರೆ ಅದಕ್ಕೆ ಇಂಥ ನಟರು ಕಾರಣ. ಇಂತವರ ಬಗ್ಗೆ ದಾರಿಯಲ್ಲಿ ಹೋಗುವವರೆಲ್ಲಾ ಎನೇನೋ ಮಾತನಾಡುತ್ತಾರೆ ಎಂದರೆ ಬಹಳ ನೋವಾಗುತ್ತದೆ. ಕನ್ನಡದ ನಟರಿಗೆ ನಪುಂಸಕರು ಎಂದು ಹೇಳುವ ನಿನ್ನ ಭಾಷೆಯಲ್ಲಿಯೇ ಗೊತ್ತಾಗುತ್ತದೆ. ನೀನು ಎಂಥ ಸಂಸ್ಕಾರದಿಂದ ಬಂದಿದ್ದೀಯ ಎಂಬುದು. ನಿನ್ನ ಪ್ರಚಾರಕ್ಕಾಗಿ ಕನ್ನಡದ ಧೀಮಂತ ನಟರ ಹೆಸರನ್ನು ಉಪಯೋಗಿಸಿಕೊಂಡು, ಅವರಿಗೆ ಅವಹೇಳನಕಾರಿಯಾದ ಮಾತುಗಳನ್ನು ಹೇಳಿದ್ದೀಯ. ನೀನು ನಪುಂಸಕನಾಗಿಲ್ಲದೇ ಇದ್ದರೆ, ಈಗ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ಎಲ್ಲಿದ್ದೀಯಾ?ʼʼ ಎಂದು ಖಡಕ್‌ ಆಗಿ ಕೇಳಿದ್ದಾರೆ ನಂದಕಿಶೋರ್‌.

“ಕನ್ನಡ ಚಿತ್ರರಂಗದವರ ಬಗ್ಗೆ ಮಾತನಾಡಬೇಕಾದರೆ ನಿನಗೊಂದು ಯೋಗ್ಯತೆ ಇರಬೇಕು. ಇಲ್ಲದಿದ್ದರೆ ನಿನ್ನಂಥವರಿಗೆ ಬೀದಿಯಲ್ಲಿ ನಿಲ್ಲಿಸಿ ಮೆಟ್ಟಲ್ಲಿ ಹೊಡೆಯುತ್ತಾರೆ. ಮೊಬೈಲ್‌ ಇದೆ ಎಂಬ ಕಾರಣಕ್ಕೆ ಎಲ್ಲಿ ಬೇಕಾದರೂ ಅಪ್‌ಲೋಡ್‌ ಮಾಡಬಹುದು ಎಂದು ಈ ರೀತಿ ಮಾತನಾಡಬಾರದು. ಯಾರಿಂದಲೂ ತಪ್ಪಾಗಿದ್ದರೆ ಕನ್ನಡ ಚಿತ್ರರಂಗದ ಚೇಂಬರ್‌ಗೆ ದೂರು ನೀಡುʼʼ ಎಂದು ಹೇಳಿದ್ದಾರೆ. ʼʼಕಲಾಭಿಮಾನಿಗಳಿಗೆ ಚಿತ್ರರಂಗದಲ್ಲಿ ದುಡಿಯುವವವರಿಗೆ ಪ್ರೋತ್ಸಾಹ ನೀಡಿ. ತುಚ್ಚವಾಗಿ ಮಾತನಾಡಬೇಡಿʼʼ ಎಂದು ಕಲಾಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಈಗಾಗಲೇ ಕಿಚ್ಚನ ಅಭಿಮಾನಿಗಳು ರೊಚ್ಚಿಗೆದ್ದಿದ್ದು, ವ್ಯಕ್ತಿಯ ಹುಡುಗಾಟದಲ್ಲಿ ಇದ್ದಾರೆ. ಸುದೀಪ್ ಈ ವಿಚಾರವಾಗಿ ಇನ್ನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ | ಕಿಚ್ಚನಿಗೆ ಈ ನಟಿ ಜೊತೆ ನಟಿಸಲು ಆಸೆಯಂತೆ, ಆದರೆ, ಆಕೆಯ ಗಂಡ ಅವಕಾಶ ಕೊಡ್ತಾರಾ?

Exit mobile version