Site icon Vistara News

Actor Darshan: ʻಸೌಂದರ್ಯ ಜಗದೀಶ್ʼ ಆತ್ಮಹತ್ಯೆಗೆ ಬಿಗ್​ ಟ್ವಿಸ್ಟ್; ದರ್ಶನ್‌, ಪವಿತ್ರಾ ವ್ಯವಹಾರವೇ ಸಾವಿಗೆ ಕಾರಣ?

Actor Darshan pavithra Gowda in Soundarya Jagadish case Big twist

ಬೆಂಗಳೂರು: ಕನ್ನಡ ಸಿನಿಮಾ (Actor Darshan) ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagadish) ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ತಮ್ಮ ನಿವಾಸದಲ್ಲಿ ಕಳೆದ ಏ.14ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸುದ್ದಿ ವೈರಲ್‌ ಆದ ಬಳಿಕ ಅವರ ಬಗ್ಗೆ ಹಲವಾರು ಅನುಮಾನಗಳು ವ್ಯಕ್ತವಾದವು. ಕೆಲವರು ಸೌಂದರ್ಯ ಜಗದೀಶ್ ಅವರಿಗೆ ಹೃದಯಾಘಾತವಾಗಿ ನಿಧನರಾದರು ಎಂದು ಹೇಳಿಕೊಂಡರು. ಇದೀಗ ಈ ಸಾವಿನ ಕುರಿತಂತೆ ಹೊಸ ಸುದ್ದಿಯೊಂದು ಬೆಳಕಿಗೆ ಬಂದಿದೆ. ಜಗದೀಶ್‌ ಅಕೌಂಟ್‌ನಿಂದ ಕೋಟಿಗಟ್ಟಲೆ ಹಣ ಪವಿತ್ರಾ ಗೌಡ ಅಕೌಂಟ್‌ಗೆ ಹೋಗಿರುವ ಮಾಹಿತಿ ಲಭ್ಯವಾಗಿದೆ. ಇದೀಗ ಜಗದೀಶ್ ಸೂಸೈಡ್‌ಗೂ ಈ ಹಣದ ವರ್ಗಾವಣೆಗೂ ಸಂಬಂಧ ಇದೆಯಾ ಎನ್ನುವ ಅನುಮಾನ ಶುರುವಾಗಿದೆ. ಜಗದೀಶ್‌ ಯಾವ ವಿಚಾರಕ್ಕಾಗಿ ಪವಿತ್ರಾಗೆ ಹಣ ಕೊಟ್ಟಿದ್ದರು? ಸಾಲ ಅಂತ ಕೊಟ್ಟಿದ್ರಾ ಎಂಬುದರ ಸತ್ಯ, ತನಿಖೆಯ ನಂತರ ಬಯಲಾಗಬೇಕಿದೆ.

ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್​ಗೆ ಬಿಗ್​ ಟ್ವಿಸ್ಟ್ ಸಿಕ್ಕಿದೆ. ಈ ಹಿಂದೆ ಜಗದೀಶ್‌ ಬ್ಯುಸಿನೆಸ್ ಪಾರ್ಟನರ್ಸ್ ಸುರೇಶ್, ಹೊಂಬಣ್ಣ ಹಾಗೂ ಸುಧೀಂದ್ರ ಎಂಬುವವರ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಸೌಂದರ್ಯ ಜಗದೀಶ್‌ ಮೃತಪಟ್ಟ ಒಂದು ತಿಂಗಳ ನಂತರ ಅವರ ರೂಮಿನಲ್ಲಿ ಡೆತ್‌ನೋಟ್‌ ಪತ್ತೆಯಾಗಿತ್ತು. ಸೌಂದರ್ಯ ಜಗದೀಶ್‌ ಬರೆದ ಡೆತ್‌ನೋಟ್‌ನಲ್ಲಿ ಸೌಂದರ್ಯ ಕನ್‌ಸ್ಟ್ರಕ್ಷನ್ಸ್‌ನ ಸಹ ಪಾಲುದಾರರಿಂದ ಸುಮಾರು 60 ಕೋಟಿ ರೂ. ನಷ್ಟವಾಗಿದ್ದು, ಮೋಸ ಮಾಡಿದ್ದಾರೆ ಎಂದು ಡೆತ್‌ನೋಟ್‌ನಲ್ಲಿ ಬರೆದಿತ್ತು. ಇದೀಗ ಸೌಂದರ್ಯ ಜಗದೀಶ್​, ದರ್ಶನ್​, ಪವಿತ್ರಾ ಗೌಡ ನಡುವೆ ಇದೇ ಹಣದ ವ್ಯವಹಾರ ನಡೆದಿತ್ತು ಎನ್ನಲಾಗಿದೆ.

ಇದನ್ನೂ ಓದಿ: Actor Darshan: ಪವಿತ್ರಾ ಬಗ್ಗೆ ಗೊತ್ತಿಲ್ಲ ಆದರೆ ʻದರ್ಶನ್‌ʼ ದಾಂಪತ್ಯದಲ್ಲಿ ಹುಳಿ ಹಿಂಡಿದ್ದೇ ನಿಖಿತಾ ಎಂದ ಓಂ ಪ್ರಕಾಶ್!

ಸೌಂದರ್ಯ ಜಗದೀಶ್ ಆತ್ಮಹತ್ಯೆ ಬಳಿಕ ಪಾಲುದಾರರ ಮೇಲೆ ಜಗದೀಶ್ ಪತ್ನಿ ರೇಖಾ ಆರೋಪ ಮಾಡಿದ್ದರು. ಪಾಲುದಾರರಿಂದ 60 ಕೋಟಿ ರೂ. ನಷ್ಟವಾಗಿತ್ತು ಎಂದು ಹೇಳಿಕೆ ನೀಡಿದ್ದರು. ರೇಖಾ ಜಗದೀಶ್​ ದೂರಿನ ಬೆನ್ನಲ್ಲೇ ಪಾಲುದಾರರು ಅಲರ್ಟ್ ಕೂಡ ಆಗಿದ್ದರು. ವ್ಯವಹಾರದ ದಾಖಲೆಯನ್ನು ಪಾಲುದಾರ ಸುರೇಶ್​ ಪೊಲೀಸರಿಗೆ ನೀಡಿದ್ದಾರೆ.

ಪವಿತ್ರಾ ಗೌಡ ಖರೀದಿಸಿದ ಮನೆಗೆ ದುಡ್ಡು ಕೊಟ್ಟಿದ್ರಾ ಸೌಂದರ್ಯ ಜಗದೀಶ್?

ಪವಿತ್ರಾ ಗೌಡ ಮನೆ ಖರೀದಿಗಾಗಿ ಸೌಂದರ್ಯ ಜಗದೀಶ್ 2 ಕೋಟಿ ರೂ. ಕೊಟ್ಟಿದ್ದರು ಎನ್ನಲಾಗಿದೆ. ಸೌಂದರ್ಯ ಜಗದೀಶ್ ಹಣ ಕೊಟ್ಟ ಮಾರನೇ ದಿನವೇ ಪವಿತ್ರಾ ಗೌಡ ಮನೆ ಖರೀದಿಸಿದ್ದರು. ಈ ದಾಖಲೆ ಇದೀಗ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ. ಈ ಎಲ್ಲ ಹಣದ ವ್ಯವಹಾರದ ದಾಖಲೆ ಪಾಲುದಾರ ಸುರೇಶ್​ ಪೊಲೀಸರಿಗೆ ನೀಡಿದ್ದಾರೆ. 2017 ನವೆಂಬರ್​ 13ರಂದು ಪವಿತ್ರಾಗೌಡಗೆ 1 ಕೋಟಿ ರೂ. ವರ್ಗಾವಣೆ ಮಾಡಿದ್ದರು ಜಗದೀಶ್‌. ಹಾಗೇ 2018, ಜನವರಿ 23ರಂದು ಪವಿತ್ರಾಗೌಡಗೆ ಮತ್ತೆ 1 ಕೋಟಿ ರೂ. ವರ್ಗಾವಣೆ ಮಾಡಿದ್ದರು. 2018, ಜನವರಿ 24 ರಂದು ಪವಿತ್ರಾಗೌಡ ಮನೆ ಖರೀದಿಸಿದ್ದರು.

ಕೆಂಚನಹಳ್ಳಿಯಲ್ಲಿ 1. 75 ಲಕ್ಷ ರೂ. ಮೌಲ್ಯದ ಮನೆ ಖರೀದಿಸಿದ್ದ ಪವಿತ್ರಾ ಗೌಡ

RR ನಗರ ಬಳಿಯ ಕೆಂಚನಹಳ್ಳಿಯಲ್ಲಿ 1. 75 ಲಕ್ಷ ಮೌಲ್ಯದ ಮನೆಯನ್ನು ಪವಿತ್ರಾ ಗೌಡ ಖರೀದಿಸಿದ್ದರು. ಪವಿತ್ರಾಗೌಡ ಮನೆ ಖರೀದಿ ಪತ್ರದಲ್ಲಿ ಸಾಕ್ಷಿಯಾಗಿ ಸೌಂದರ್ಯ ಜಗದೀಶ್​ ಸಹಿ ಕೂಡ ಇತ್ತು. ಈ ಹಣದ ವ್ಯವಹಾರವನ್ನು ಸೌಂದರ್ಯ ಜಗದೀಶ್​ ಪಾಲುದಾರರಿಂದ ಮುಚ್ಚಿಟ್ಟಿದ್ದರು. ಸೌಂದರ್ಯ ಜಗದೀಶ್ ಆತ್ಮಹತ್ಯೆ ಬಳಿಕ ಪಾಲುದಾರರ ವಿರುದ್ಧವೇ ಪತ್ನಿ ದೂರು ನೀಡಿದ ಹಿನ್ನೆಲೆಯಲ್ಲಿ ವಹಾರದ ದಾಖಲೆಯನ್ನು ಪಾಲುದಾರರು ಕಲೆ ಹಾಕಿದರು. ಪಾಲುದಾರರಿಗೆ ಸಿಕ್ಕ ದಾಖಲೆಯಲ್ಲಿ ದರ್ಶನ್​- ಪವಿತ್ರಾ, ಜಗದೀಶ್ ವ್ಯವಹಾರ ಪತ್ತೆಯಾಗಿದೆ. ದರ್ಶನ್​ ಕಾರಣಕ್ಕೆ ಪವಿತ್ರಾಗೆ 2 ಕೋಟಿ ರೂ.ಯನ್ನು ಸೌಂದರ್ಯ ಜಗದೀಶ್ ಕೊಟ್ಟರಾ ಎಂಬ ಪ್ರಶ್ನೆ ಈಗ ಎದುರಾಗಿದೆ. ಪವಿತ್ರಾಗೌಡಗೆ ಸೌಂದರ್ಯ ಜಗದೀಶ್​ ಹಣ ಕೊಟ್ಟ ದಾಖಲೆ ಮಾತ್ರ ಲಭ್ಯವಾಗಿದೆ. ಈವರೆಗೂ ಸೌಂದರ್ಯ ಜಗದೀಶ್​ಗೆ ಪವಿತ್ರಾಗೌಡ ಹಣ ವಾಪಸ್​ ನೀಡಿಲ್ಲ. ಹೀಗಾಗಿ ದರ್ಶನ್ ಒತ್ತಡಕ್ಕೆ ಮಣಿದು, ಜಗದೀಶ್‌ ಅವರು ಪವಿತ್ರಾ ಗೌಡಗೆ ಹಣ ನೀಡಿ ಸಂಕಷ್ಟಕ್ಕೆ ಸಿಲುಕಿದರು ಎನ್ನಲಾಗುತ್ತಿದೆ.

ಇದನ್ನೂ ಓದಿ: Actor Darshan: ಇನ್ಮುಂದೆ ದರ್ಶನ್‌ ಕೈದಿ ನಂಬರ್‌ ನನ್ನ ಗಾಡಿ ಮೇಲೆ ಇರತ್ತೆ ಎಂದು ಗಳಗಳನೇ ಅತ್ತ ಅಭಿಮಾನಿ!

ಇದೀಗ ಪೊಲೀಸರು ದರ್ಶನ್ ಅವರು ಸೌಂದರ್ಯ ಜಗದೀಶ್‌ಗೆ​ ಒತ್ತಡ ಹಾಕಿರಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಜಗದೀಶ್ ಸೂಸೈಡ್‌ಗೂ ಇದ್ದಕ್ಕೂ ಲಿಂಕ್‌ ಇರಬಹುದಾ ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಜಗದೀಶ್‌ ಯಾವ ವಿಚಾರಕ್ಕಾಗಿ ಪವಿತ್ರಾಗೆ ಹಣ ಕೊಟ್ಟಿದ್ರು?ಸಾಲ ಅಂತ ಕೊಟ್ಟಿದ್ರಾ? ಎಂಬುದರ ಸತ್ಯ ತನಿಖೆಯ ನಂತರ ಬಯಲಾಗಬೇಕಿದೆ .

ಈ ಹಿಂದೆ ಜಗದೀಶ್‌ ಪತ್ನಿ ಆರೋಪಿಸಿದ್ದೇನು?

ಪತಿ ಸೌಂದರ್ಯ ಜಗದೀಶ್‌ ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಒಂದು ವಾರದ ಹಿಂದೆ ಸುರೇಶ್‌ ಹಾಗೂ ಹೊಂಬಣ್ಣ ನಿರಂತರವಾಗಿ ಫೋನ್‌ ಮಾಡಿದ್ದರು. ಇವರ ಕರೆ ಬಂದಾಗ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದು, ಇದರಿಂದ ಮನನೊಂದು ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜಗದೀಶ್‌ ಪತ್ನಿ ಶಶಿರೇಖಾ ಆರೋಪಿಸಿದ್ದರು.

ಬ್ಯುಸಿನೆಸ್‌ ಪಾರ್ಟ್ನಸ್‌ಗಳಿಂದ ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ಪತಿ ಸೌಂದರ್ಯ ಜಗದೀಶ್‌ ಸಾವಿಗೆ ಸುರೇಶ್‌, ಹೊಂಬಣ್ಣ ಹಾಗೂ ಸೌಂದರ್ಯ ಕನ್‌ಸ್ಟ್ರಕ್ಷನ್ಸ್‌ ಕಂಪೆನಿಯ ಮ್ಯಾನೇಜರ್‌ ಸುದೀಂದ್ರ ಕಾರಣ ಎಂದು ಪತ್ನಿ ಶಶಿರೇಖಾ ದೂರು ನೀಡಿದ್ದಾರೆ. ಸದ್ಯ ಈ ಡೆತ್‌ನೋಟ್ ಆಧರಿಸಿ ಪತ್ನಿ ಶಶಿರೇಖಾ ಮಹಾಲಕ್ಷ್ಮಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಫ್‌ಐಆರ್ ದಾಖಲಾಗಿತ್ತು.

Exit mobile version