Site icon Vistara News

Kannada New Movie: ಸೌಂಡ್ ಮಾಡಲು ‘ಖಾಲಿ ಡಬ್ಬ’ ರೆಡಿ; ಹೊಸಬರ ಕನಸಿಗೆ ಸಾಥ್ ಕೊಟ್ಟ ವಿ.ನಾಗೇಂದ್ರ ಪ್ರಸಾದ್

Kannada New Movie

Kannada New Movie

ಬೆಂಗಳೂರು: ʼಖಾಲಿ ಡಬ್ಬʼ (Khali Dabba) ಹೀಗೊಂದು ಶೀರ್ಷಿಕೆಯ ಸಿನಿಮಾ ಬರುತ್ತಿದೆ. ಒಂದಷ್ಟು ವರ್ಷಗಳ ಕಾಲ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ಅನುಭವವಿರುವ ಪ್ರಕಾಶ್ ಕೆ. ಅಂಬ್ಳೆ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಪೂರ್ಣ ಪ್ರಮಾಣ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಪ್ರಕಾಶ್ ಮೊದಲ ಕನಸಿಗೆ ಮಂಜು ಗುರಪ್ಪ ಹಣ ಹಾಕಿದ್ದು, ರಾಮ್ ಗುಡಿ ನಾಯಕನಾಗಿ ನಟಿಸಿದ್ದು, ಆದ್ಯಾ ಪ್ರಿಯಾ, ಹರಿತಾ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಬೆಂಗಳೂರಿನ ಎಸ್.ಆರ್.ವಿ. ಥಿಯೇಟರ್‌ನಲ್ಲಿ ಮಾರ್ಚ್‌ 25ರಂದು ಹಮ್ಮಿಕೊಳ್ಳಲಾಗಿತ್ತು (Kannada New Movie).

ಈ ವೇಳೆ ಮಾತನಾಡಿದ ನಿರ್ದೇಶಕ ಪ್ರಕಾಶ್ ಕೆ.(ಅಂಬ್ಳೆ), ʼʼಈ ಸಿನಿಮಾದಲ್ಲಿ ಖಾಲಿ ಡಬ್ಬ ಕೂಡ ಒಂದು ಪಾತ್ರ. ವಯಸ್ಸು, ಸಮಯ ಮೀರಿದರೆ ಪ್ರತಿಯೊಬ್ಬರ ಲೈಫು ಖಾಲಿ. ಹೀಗಾಗಿ ಚಿತ್ರಕ್ಕೆ ʼಖಾಲಿ ಡಬ್ಬʼ ಎಂದು ಹೆಸರು ಇಡಲಾಗಿದೆ. ಈ ಹಿಂದೆ ಹತ್ತು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇನೆ. ಈ ಅನುಭವದಿಂದ ಈಗ ನಿರ್ದೇಶನಕ್ಕಿಳಿದಿದ್ದೇನೆ. ಚಿತ್ರಕಥೆ, ಸಂಭಾಷಣೆ ಬರೆದು ಸಿನಿಮಾ ನಿರ್ದೇಶನ ಮಾಡುತ್ತಿದ್ದೇನೆ. ಐದು ಹಾಡುಗಳಿಗೆ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದು ಸಂಗೀತ ನಿರ್ದೇಶನ ಮಾಡಿದ್ದಾರೆ. ಇಡೀ ತಂಡಕ್ಕೆ ನಾಗೇಂದ್ರ ಪ್ರಸಾದ್ ಬೆನ್ನೆಲುಬಾಗಿ ನಿಂತಿದ್ದಾರೆʼʼ ಎಂದರು.

ನಟ ರಾಮ್ ಗುಡಿ ಮಾತನಾಡಿ, ʼʼಖಾಲಿ ಡಬ್ಬʼ ಟೈಟಲ್ ಇಟ್ಟಾಗ್ಲೇ ನೆಗೆಟಿವ್ ಟಾಕ್ ಆಗಿತ್ತು. ಇನ್ನೂ ಕೆಲವರು ಚೆನ್ನಾಗಿದೆ ಎಂದರು. ಮೂಲ ಕಥೆಗಾರರು ಜೀವನವೊಂದು ಖಾಲಿ ಡಬ್ಬಾ ಅಂತಾ ಇಡಿ ಎಂದರು. ಇದು ಕೇವಲ ಸಿನಿಮಾವಲ್ಲ. ತೇರು ಇದ್ದಂಗೆ. ಎಲ್ಲರೂ ಕೈ ಜೋಡಿಸಿದರು. ಸರಿಯಾದ ಸಮಯಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡರೆ ಮಾತ್ರ ಜೀವನವೆಂಬ ಡಬ್ಬ ತುಂಬುತ್ತದೆ. ಇಲ್ಲ ಎಂದರೆ ಜೀವನೇ ಖಾಲಿ ಡಬ್ಬವಾಗುತ್ತದೆʼʼ ಎಂದು ಹೇಳಿದರು.

ವಿ.ನಾಗೇಂದ್ರ ಪ್ರಸಾದ್ ಮಾತನಾಡಿ, ʼʼಡೈರೆಕ್ಟರ್ ಹೇಳಿದಂತೆ ಸಿನಿಮಾದಲ್ಲಿ ಖಾಲಿ ಡಬ್ಬಾ ಅಕ್ಷಶರಃ ಪಾತ್ರ. ಡಬ್ಬವನ್ನು ಸಂಕೇತವಾಗಿ ಇಟ್ಟುಕೊಂಡು ಕಥೆ ಹೇಳಲಾಗಿದೆ. ಎಮೋಷನಲ್, ಲವ್, ಫ್ಯಾಮಿಲಿ ಎಲ್ಲ ಇರುವಂತಹ ಕಥೆ. ಕಾಲ್ಪನಿಕ ಅನಿಸಿದ್ರೂ ವಾಸ್ತವ ಅನಿಸುವ ಕಥೆ ಚಿತ್ರದಲ್ಲಿದೆ. ಈ ಸಿನಿಮಾದಲ್ಲಿ ನಟ ಅದ್ಭುತವಾಗಿ ನಟಿಸಿದ್ದಾರೆ. ನಾಯಕಿಯರು ಇಬ್ಬರು ಚೆನ್ನಾಗಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಒಳ್ಳೆ ಹಾಡುಗಳಿವೆʼʼ ಎಂದು ತಿಳಿಸಿದರು.

ʼಖಾಲಿ ಡಬ್ಬʼ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಬೆಂಗಳೂರು ಮಂಡ್ಯ ಮೈಸೂರು ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಕುರಿ ಪ್ರತಾಪ್, ಮಜಾಭಾರತ ಸೀತಾರಾಮ್, ಸುಧಾ, ಹನುಮಕ್ಕ ಹಾಗೂ ವಿ.ನಾಗೇಂದ್ರ ಪ್ರಸಾದ್ ತಾರಾಬಳಗದಲ್ಲಿದ್ದಾರೆ. ಎಸ್.ಯು.ಎ. ಎಂಟರ್‌ಟೈನ್‌ಮೆಂಟ್‌ನಡಿ ಮಂಜು ಗುರಪ್ಪ ನಿರ್ಮಾಣ ಮಾಡಿದ್ದು, ಅಪ್ಪಾಜಿ, ಸೌಮ್ಯಾ ರಾಮ್, ಲಕ್ಷ್ಮೀ ಮಹೇಂದ್ರ, ಚಿಕ್ಕೇಗೌಡ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ.

ಇದನ್ನೂ ಓದಿ: Kannada New Movie: ಸೆಟ್ಟೇರಿತು ಪವನ್ ಒಡೆಯರ್ ನಿರ್ಮಾಣದ ಮತ್ತೊಂದು ಸಿನಿಮಾ

ಲಕ್ಕಿ ಕ್ಯಾಮೆರಾ ಹಿಡಿದಿದ್ದು, ವೆಂಕಟ್ ಯುಡಿವಿ ಸಂಕಲನ, ಗಿರೀಶ್ ನೃತ್ಯ ಸಂಯೋಜನೆ ʼಖಾಲಿ ಡಬ್ಬʼ ಚಿತ್ರಕ್ಕಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಸೆನ್ಸಾರ್ ಅಂಗಳದಲ್ಲಿರುವ ಚಿತ್ರ ಆದಷ್ಟು ಬೇಗ ನಿಮ್ಮ ಮುಂದೆ ಬರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version