Site icon Vistara News

Actor Dhanush: ಕನ್ನಡದಲ್ಲಿಯೂ ಬರಲಿದೆ ಇಳಯರಾಜ ಬಯೋಪಿಕ್‌; ಪೋಸ್ಟರ್‌ ಔಟ್‌!

dhanush plays Ilaiyaraaja biopic

ಬೆಂಗಳೂರು: ತಮಿಳು ನಟ ಧನುಷ್ (Actor Dhanush) ಅವರು ಇಳಯರಾಜ ಬಯೋಪಿಕ್‌ನಲ್ಲಿ ಅವರ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದು ಅಧಿಕೃತಗೊಂಡಿದೆ. ಅರುಣ್ ಮಾಥೇಶ್ವರನ್ ನಿರ್ದೇಶನ ಕನೆಕ್ಟ್ ಮೀಡಿಯಾ ಮತ್ತು ಪಿಕೆ ಪ್ರೈಮ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರದ ಫಸ್ಟ್‌ ಲಕ್‌ ಪೋಸ್ಟರ್‌ (Ilaiyaraaja first poster) ಚೆನ್ನೈನಲ್ಲಿ ಅನಾವರಣಗೊಂಡಿದೆ. ಕನ್ನಡದಲ್ಲೂ ಸಿನಿಮಾ ಬರಲಿದೆ.

ಧನುಷ್ ಸಮಾರಂಭದಲ್ಲಿ ಮಾತನಾಡಿ, ʻʻರಾತ್ರಿ ಇಳಯರಾಜ ಅವರ ಸಂಗೀತವನ್ನು ಜನರು ಕೇಳಿ ಶಾಂತವಾಗಿ ಮಲಗುತ್ತಾರೆ. ನಾನು ಕೂಡ ಅವರ ಹಾಡುಗಳನ್ನು ಕೇಳುತ್ತಲೇ ಇರುತ್ತೇನೆ. ನನ್ನ ಜೀವನದಲ್ಲಿ ಕೇವಲ ಎರಡೇ ಎರಡು ಬಯೋಪಿಕ್‌ಗಳನ್ನು ಮಾಡಬೇಕು ಎಂದುಕೊಂಡಿದ್ದೆ. ಒಂದು ಇಳಯರಾಜ ಸರ್ ಅವರದ್ದು, ಇನ್ನೊಂದು ಸೂಪರ್ ಸ್ಟಾರ್ ರಜನಿಕಾಂತ್ ಅವರದ್ದು. ಒಂದು ಈಗ ಗ್ಲೀನ್‌ ಸಿಗ್ನಲ್‌ ಸಿಕ್ಕಿದೆ. ನನಗೆ ಬಹಳಷ್ಟು ಹೆಮ್ಮೆಯನ್ನು ನೀಡುತ್ತಿದೆ. ನಾನು ಇಳಯರಾಜರ ಅಭಿಮಾನಿ ಮತ್ತು ಭಕ್ತ. ಅವರ ಸಂಗೀತ ನನ್ನ ಒಡನಾಡಿʼʼ ಎಂದರು.

ʻʻಅವರ ಸಂಗೀತ ನನ್ನ ನಟನೆಯ ಟೀಚರ್. ನಟಿಸುವುದಕ್ಕೂ ಮೊದಲು ಅವರ ಹಾಡು ಅಥವಾ ಬಿಜಿಎಂ ಕೇಳುತ್ತೇನೆ. ನನಗೆ ನಟನೆ ಏನು ಎಂದು ತಿಳಿದಿಲ್ಲದ ಸಮಯದಲ್ಲಿ, ನಾನು ದೃಶ್ಯಗಳೊಂದಿಗೆ ಸಿಂಕ್ ಆಗಿರುವ ಅವರ ಹಾಡುಗಳನ್ನು ಕೇಳುತ್ತಿದ್ದೆ. ಹೇಗೆ ನಟಿಸಬೇಕು ಎಂಬುದನ್ನು ಅವರ ಸಂಗೀತ ಹೇಳುತ್ತದೆ. ಇದೊಂದು ದೊಡ್ಡ ಚಾಲೆಂಜ್ ಹಾಗೂ ಜವಾಬ್ದಾರಿ ಎಂದು ಅನೇಕರು ಹೇಳಿದ್ದಾರೆ. ಆದರೆ, ನನಗೆ ಹಾಗೆ ಅನಿಸುತ್ತಿಲ್ಲʼʼ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಮಲ್ ಹಾಸನ್, “ನಾನು ನಿರ್ದೇಶಕರನ್ನು ಕೇಳಿಕೊಳ್ಳುವುದು ಏನೆಂದರೆ ಅವರ ದೂರದೃಷ್ಟಿಯನ್ನು ಸಾಕಾರಗೊಳಿಸಿ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ. ಇದು ಇಳಯರಾಜರ ಕುರಿತಾದ ಚಿತ್ರವಲ್ಲ, ಭಾರತರತ್ನ ಇಳಯರಾಜ ಅವರ ಕುರಿತಾದ ಚಿತ್ರ. ಇದು ಕೇವಲ ಗೌರವವಲ್ಲ, ನಮ್ಮಿಂದ ಬೇಡಿಕೆ” ಎಂದರು.

ಇದನ್ನೂ ಓದಿ: Weight Loss Tips: ಕಚೇರಿಯ ಧಾವಂತದಲ್ಲಿಯೂ ತೂಕ ಇಳಿಸಲು ಇವಿಷ್ಟು ನೆನಪಿಡಿ!

ಚಿತ್ರವು ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ದೇಶಾದ್ಯಂತ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇಷ್ಟು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು ಸಾಕಾಗುವುದಿಲ್ಲ. ಇತರ ಹಲವು ಭಾರತೀಯ ಭಾಷೆಗಳಲ್ಲಿ ಬಿಡುಗಡೆಯಾಗಬೇಕು ಎಂದು ಕಮಲ್ ಹಾಸನ್ ಅಭಿಪ್ರಾಯಪಟ್ಟರು.

ಈ ಬಯೋಪಿಕ್‌ಗೆ ಇಳಯರಾಜ ಅವರೇ ಸ್ವತಃ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಚಿತ್ರಕ್ಕೆ ನೀರವ್ ಷಾ ಕ್ಯಾಮೆರಾ ನಿರ್ವಹಿಸುತ್ತಿದ್ದು, ಮುತ್ತುರಾಜ ನಿರ್ಮಾಣ ವಿನ್ಯಾಸವನ್ನು ನೋಡಿಕೊಳ್ಳುತ್ತಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕ ಮತ್ತು ಇತರ ವಿವರಗಳು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಇಳಯರಾಜ ಭಾರತೀಯ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ. ಏಳು ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. 1,400 ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. 20 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಸಂಗೀತವಾದ್ಯ ನೀಡಿದ್ದಾರೆ. ಭಾರತದ ಅದರಲ್ಲೂ ತಮಿಳಿನ ಜಾನಪದ ಸಂಗೀತವನ್ನು ಆಧರಿಸಿಯೇ ಹೆಚ್ಚಾಗಿ ಇವರು ಹಾಡು ಕಟ್ಟಿದ್ದಾರೆ. ಇದೀಗ ಇಳಯರಾಜ ಅವರ ಜೀವನ ಪ್ರಯಾಣದ ಕುರಿತಾದ ಚಿತ್ರ ಸೆಟ್ಟೇರಲು ಸಜ್ಜಾಗುತ್ತಿದೆ.

ಧನುಷ್ ಈಗಾಗಲೇ ʻಕುಬೇರʼ ಮತ್ತು ʻರಾಯನ್‌ʼ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ʻನಿಲವುಕು ಎನ್ಮೇಲ್ ಎನ್ನದಿ ಕೋಬಂʼ ಚಿತ್ರವನ್ನು ಸಹ ನಿರ್ದೇಶಿಸುತ್ತಿದ್ದಾರೆ.

Exit mobile version