Site icon Vistara News

Actor Rajinikanth: ರಜನಿಕಾಂತ್‌ ‘ಸಂಘಿ’ ಹೌದು ಎಂದು ವ್ಯಂಗ್ಯವಾಡಿದ ನಟ ಚೇತನ್‌

ahimsa chetan expressed opinion through a tweet regarding rajinikanths sanghi

ಬೆಂಗಳೂರು: ನಟ ರಜನಿಕಾಂತ್ ಅವರು ʻರಾಮ ಲಲ್ಲಾʼ ಪ್ರತಿಷ್ಠಾಪನೆ ದಿನ ಅಯೋಧ್ಯೆಗೆ ಹೋದ ಕಾರಣ, ಕೆಲವರು ಅವರನ್ನು ʻಸಂಘಿʼ ಎಂದು ಕರೆದಿದ್ದರು. ಅವರ ಮಗಳು ಐಶ್ವರ್ಯಾ ರಜನಿಕಾಂತ್‌ ಜನವರಿ 26ರಂದು ಚೆನ್ನೈನಲ್ಲಿ ನಡೆದ ಚಿತ್ರದ ಆಡಿಯೊ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ ʻನನ್ನ ತಂದೆ ʻಸಂಘಿʼ ಆಗಿದ್ದರೆ ʻಲಾಲ್ ಸಲಾಂʼ ಅಂಥ ಸಿನಿಮಾ ಮಾಡುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದರು. ಇದೀಗ ನಟ ಚೇತನ್‌ ಅಹಿಂಸಾ ಅವರು ಈ ಬಗ್ಗೆ ಎಕ್ಸ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ʻʻನಟ ರಜನಿಕಾಂತ್ ಅವರ ಮಗಳು ತನ್ನ ತಂದೆ ‘ಸಂಘಿ ಅಲ್ಲ’ ಎಂದು ಹೇಳಿದ್ದಾರೆ. ಅಲ್ಲದೆ, ಅವರ ನಿರ್ದೇನದ ‘ಲಾಲ್ ಸಲಾಮ್’ ಚಿತ್ರದಲ್ಲಿ ರಜನಿಕಾಂತ್ ನಟನೆ ಮಾಡುತ್ತಿರುವುದು, ಅವರು ʻಸಂಘಿʼ ಅಲ್ಲ ಎನ್ನುವುದು ಸಾಬೀತುಪಡಿಸುತ್ತದೆ ಎಂದಿದ್ದಾರೆ. ಆದರೆ ಇದು ಮನವರಿಕೆ ಆಗುವುದಿಲ್ಲʼʼ ಎನ್ನುವ ಮೂಲಕ ನಟ ಚೇತನ್‌ ಅವರು ರಜನಿಕಾಂತ್‌ ಸಂಘಿ ಎಂದು ಪರೋಕ್ಷವಾಗಿ ಹೇಳಿದ್ದಾರೆ. ರಜನಿಕಾಂತ್ ಅವರು 2014, 2017, 2019, 2021ರಲ್ಲಿ ಹೀಗೆ ಹಲವು ಬಾರಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದರು. ಅವರು 2023 ಮತ್ತು 2024ರಲ್ಲಿ ರಾಮ ಮಂದಿರಕ್ಕೆ (ಅಯೋಧ್ಯೆ) ಹಾಜರಾಗಿದ್ದರು. ಇದು ʻಸಂಘಿʼಯಂತೆ ಕಾಣುತ್ತದೆ. ನಟರು ಹಣಕ್ಕಾಗಿ ಮತ್ತು ಕೆಲಸಕ್ಕಾಗಿ ಚಲನಚಿತ್ರಗಳನ್ನು ಮಾಡುತ್ತಾರೆ. ರಜನಿಕಾಂತ್‌ಗೆ ತೆರೆಯ ಮೇಲಿನ ಸಿದ್ಧಾಂತ ಎಂದಾದರೂ ಮುಖ್ಯವಾಗಿದೆಯೇ ಎಂದೂ ಚೇತನ್‌ ಪ್ರಶ್ನಿಸಿದ್ದಾರೆ. ಈ ಮೂಲಕ ಅವರು, ರಜನಿ “ಲಾಲ್‌ ಸಲಾಂʼ ಚಿತ್ರ ಮಾಡಿದರೂ ಸಂಘಿಯೇ ಎಂದು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: Actor Rajinikanth: ʻಸಂಘಿʼ ಎನ್ನುವ ಶಬ್ದ ಕೆಟ್ಟದ್ದು ಎಂದು ನನ್ನ ಮಗಳು ಹೇಳಿಲ್ಲ ; ರಜನಿಕಾಂತ್!

ನಟ ಚೇತನ್‌ ಅಹಿಂಸಾ ಪೋಸ್ಟ್‌

ಆಗಿದ್ದೇನು?

ಐಶ್ವರ್ಯಾ ರಜನಿಕಾಂತ್‌ ಜನವರಿ 26 ರಂದು ಚೆನ್ನೈನಲ್ಲಿ ನಡೆದ ಚಿತ್ರದ ಆಡಿಯೊ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ ʻʻನಾನು ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾದಿಂದ ದೂರ ಇರುತ್ತೇನೆ. ಆದರೆ ನನ್ನ ತಂಡ ಹೊರಗಡೆ ಏನಾಗುತ್ತಿದೆ ಎಂದು ಅಪ್‌ಡೇಟ್‌ ಮಾಡುತ್ತಲೇ ಇರುತ್ತಾರೆ. ಕೆಲವು ಪೋಸ್ಟ್‌ಗಳನ್ನು ತೋರಿಸುತ್ತಲೇ ಇರುತ್ತಾರೆ. ಅವುಗಳನ್ನು ನೋಡಿ ನನಗೆ ಕೋಪ ಬರುತ್ತಿತ್ತು. ನಾವೂ ಮನುಷ್ಯರು. ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ನನ್ನ ತಂದೆ ʻಸಂಘಿʼ ಎಂದು ಕರೆದಿದ್ದಾರೆ. ಅದರ ಅರ್ಥವೇನೆಂದು ನನಗೆ ತಿಳಿದಿರಲಿಲ್ಲ, ನಂತರ ನಾನು ʻಸಂಘಿʼ ಪದದ ಅರ್ಥ ತಿಳಿದಾಗ, ನಿರ್ದಿಷ್ಟ ರಾಜಕೀಯ ಪಕ್ಷವನ್ನು ಬೆಂಬಲಿಸುವ ಜನರನ್ನು ಸಂಘಿ ಎಂದು ಕರೆಯುತ್ತಾರೆ ಎಂದು ಹೇಳಿದರು. ಅಷ್ಟೇ ಅಲ್ಲದೇ ʻಸಂಘಿʼ ಆಗಿದ್ದರೆ ಲಾಲ್ ಸಲಾಂ ಅಂಥ ಸಿನಿಮಾ ಮಾಡುತ್ತಿರಲಿಲ್ಲ’ ಎಂದಿದ್ದಾರೆ ಐಶ್ವರ್ಯಾ. ಮಗಳ ಹೇಳಿಕೆ ಕೇಳಿ ರಜನಿಕಾಂತ್ ಅವರು ಕಣ್ಣೀರು ಹಾಕಿದ್ದರು. ಈ ವಿಡಿಯೋ ವೈರಲ್ ಆಗಿತ್ತು.

ಮಗಳನ್ನು ಸಮರ್ಥಿಸಿಕೊಂಡಿದ್ದ ರಜನಿ!

ರಜನಿಕಾಂತ್ ಅವರು ಈ ವಿಚಾರವಾಗಿ ಈ ಹಿಂದೆ ಮಾತನಾಡಿದ್ದರು. ‘ನನ್ನ ಮಗಳು ಸಂಘಿ ಎನ್ನುವುದು ಕೆಟ್ಟ ಶಬ್ದ ಎಂದು ಎಂದಿಗೂ ಹೇಳಿಲ್ಲ. ನನ್ನ ತಂದೆಯನ್ನು ಏಕೆ ಬ್ರ್ಯಾಂಡ್ ಮಾಡುತ್ತೀರಿ ಎಂದಷ್ಟೇ ಕೇಳಿದ್ದಾರೆ’ ಎಂದಿದ್ದರು ರಜನಿಕಾಂತ್.

ರಜನಿಕಾಂತ್ ಮಗಳು ಐಶ್ವರ್ಯಾ ರಜನಿಕಾಂತ್ (Aishwarya Rajinikanth) ನಿರ್ದೇಶನದ ʻಲಾಲ್ ಸಲಾಮ್‌ʼ (Lal Salaam Poster) ಚಿತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಪಿಲ್ ದೇವ್ ಅತಿಥಿ ಪಾತ್ರವನ್ನು ನಿರ್ವಹಿಸಿದ್ದಾರೆ.ಲಾಲ್ ಸಲಾಮ್ ಲೈಕಾ ಪ್ರೊಡಕ್ಷನ್ಸ್ ನಿರ್ಮಿಸಿದೆ. ಎ ಸುಬಾಸ್ಕರನ್ ಪ್ರಸ್ತುತಪಡಿಸಿದ್ದಾರೆ. ಲಾಲ್ ಸಲಾಮ್ ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ. ಸ್ನೇಹ ಮತ್ತು ಕ್ರಿಕೆಟ್ ಸುತ್ತ ಸುತ್ತುವ ಈ ಚಿತ್ರದಲ್ಲಿ ರಜನಿಕಾಂತ್ ʻಮೊಯ್ದೀನ್ ಭಾಯ್ʼ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಐಶ್ವರ್ಯ, ವಿಷ್ಣು ಮತ್ತು ವಿಕ್ರಾಂತ್ ಅವರ ಮೊದಲ ಸಹಯೋಗದಲ್ಲಿ ಎಆರ್ ರೆಹಮಾನ್ ಸಂಗೀತ ಸಂಯೋಜಿಸುತ್ತಿದ್ದಾರೆ.

Exit mobile version