Site icon Vistara News

ಮಾನವೀಯ ಮೌಲ್ಯದ ಮೇರು ಸಂತ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

Balagangadharanatha swamiji

ನಂಜೇಗೌಡ ನಂಜುಂಡ, ಸ್ಥಾಪಕ ಅಧ್ಯಕ್ಷರು- ಒಕ್ಕಲಿಗ ಯುವ ಬ್ರಿಗೇಡ್ ಮತ್ತು ಅನಿವಾಸಿ ಭಾರತೀಯ ಒಕ್ಕಲಿಗ ಬ್ರಿಗೇಡ್
ನಾಥ ಸಂಪ್ರದಾಯದ ಮೂಲಕ ಸನಾತನ ಸಂಸ್ಕೃತಿಯನ್ನು ಪುನ್ನರುಜೀವನಗೊಳಿಸಿದ ಶತಮಾನದ ಸಂತ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ (Balagangadharanatha Swamiji) ಅವರು ಅನ್ನ, ಅಕ್ಷರ, ಆರೋಗ್ಯ ಕ್ಷೇತ್ರವನ್ನು ತಮ್ಮ ಮೂಲ ಮಂತ್ರವಾಗಿಸಿಕೊಂಡು ರೈತರಿಗೆ, ದೀನರಿಗೆ, ದಲಿತರಿಗೆ ನೀಡಿದ ಸೇವೆ ಅವಿಸ್ಮರಣೀಯ. ಶ್ರೀಗಳು ಕುವೆಂಪು ಚ ಅವರಂತೆ “ವಿಶ್ವಮಾನವ” ಪರಿಕಲ್ಪನೆಯನ್ನು, ಬಸವಣ್ಣನವರಂತೆ “ಸರ್ವರಿಗೂ ಸಮಬಾಳು” ಮತ್ತು ಮದರ್ ಥೆರೆಸಾ ಅವರಂತೆ “ಮಾತೃ ಹೃದಯದ ಸೇವಕರಾಗಿ ಸರ್ವರಿಗೆ ಸೇವೆ ಸಲ್ಲಿಸಿದ ಕೀರ್ತಿ ಪಡೆದುಕೊಂಡಿದ್ದಾರೆ.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಎಪ್ಪತ್ತೆರಡನೇ ಪೀಠಾಧ್ಯಕ್ಷರಾಗಿದ್ದ ಜಗದ್ಗುರು ಪದ್ಮಭೂಷಣ ಡಾ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳವರು ನಿಷ್ಕಾಮ ಕರ್ಮಯೋಗಿಗಳು. ಶ್ರೀಗಳು ಶ್ರೀಮಠದ ಸಿದ್ಧಸಿಂಹಾಸನವನ್ನೇರಿದ ಆ ಅಮೃತ ಘಳಿಗೆ ಹೊಸ ಮನ್ವಂತರಕ್ಕೆ ನಾಂದಿಯಾಯಿತು. ಭೈರವನ ಭಕ್ತರಿಗಷ್ಟೇ ಸೀಮಿತವಾಗಿದ್ದ ಶ್ರೀಕ್ಷೇತ್ರವನ್ನು ಕೇವಲ ಮೂರೂವರೆ ದಶಕಗಳಲ್ಲಿ ಮಹಾಕ್ಷೇತ್ರವನ್ನಾಗಿಸಿದ್ದು ವಿಶೇಷ. ತ್ರಿವಿಧ ದಾಸೋಹಿಗಳೆಂದೇ ಜನಮಾನಸದಲ್ಲಿ ನೆಲೆಯಾಗಿರುವ ಸ್ವಾಮಿಗಳವರು ಧಾರ್ವಿುಕ, ಶೈಕ್ಷಣಿಕ, ಸಾಮಾಜಿಕ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಅವಿಸ್ಮರಣೀಯ ಸೇವೆಗೈದಿದ್ದಾರೆ, ಶ್ರೀಗಳು ಭಿಕ್ಷಾಟನೆ ಮತ್ತು ಬರಿಗಾಲಿನಲ್ಲಿ ನಡೆಯುವ ಮೂಲಕ ಚುಂಚನಗಿರಿ ಬೆಟ್ಟವನ್ನು ಪುಣ್ಯ ಕ್ಷೇತ್ರವನ್ನಾಗಿ ಮಾಡಿದ್ದರು.

ಅಪ್ರತಿಮ ಶಿಕ್ಷಣ ಪ್ರೇಮಿ

“ Education is the most powerful weapon. which you can use to change the world “ ಎನ್ನುವಂತೆ ಬಾಲಗಂಗಾಧರನಾಥ ಸ್ವಾಮಿಗಳು ಪ್ರಾರಂಭದ ದಿನಗಳಲ್ಲಿ ಎಲ್ಲೂ ದೇವಾಲಯಗಳನ್ನು ಕಟ್ಟಲಿಲ್ಲ. ಜ್ಞಾನಪ್ರಸಾರದಿಂದ ಮಾತ್ರ ಸಮಾಜದ ಉನ್ನತಿ ಸಾಧ್ಯ ಎಂದರಿತು ಶಿಕ್ಷಣ ಕ್ಷೇತ್ರವನ್ನು ಆರಿಸಿಕೊಂಡರು. ಗ್ರಾಮೀಣ ಜನತೆ ಉದ್ಧಾರವಾಗಬೇಕಾದರೆ ಮೊದಲು ಆ ಪ್ರದೇಶದ ಬಡಮಕ್ಕಳು ವಿದ್ಯಾವಂತರಾಗಬೇಕು ಎಂಬ ದೃಷ್ಟಿಯಿಂದ ಹಳ್ಳಿಹಳ್ಳಿಗಳಲ್ಲೂ ವಿದ್ಯಾಸಂಸ್ಥೆಗಳನ್ನು ತೆರೆದರು. ನಾಡಿನಾದ್ಯಂತ 475ಕ್ಕೂ ಹೆಚ್ಚು ಶಾಲಾ ಕಾಲೇಜುಗಳನ್ನು, ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದರು. ಇಂದು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿವರ್ಷ 1.45 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಾರೆ, ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನದಲ್ಲಿದ್ದಾರೆ.

ಬಡವರ ಆರಾಧ್ಯದೈವ ಮತ್ತು ಆರೋಗ್ಯದ ಪರಿಚಾರಕರು

ಶಿಕ್ಷಣದ ನಂತರ ಶ್ರೀಗಳು ಆರಿಸಿಕೊಂಡುದು ಆರೋಗ್ಯಕ್ಷೇತ್ರವನ್ನು. ಬಡಜನರ ಆರೋಗ್ಯ ರಕ್ಷಣೆಗಾಗಿ ಜವರನಹಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲಿ ಎರಡು ಸಾವಿರ ಹಾಸಿಗೆಗಳನ್ನುಳ್ಳ ಬೃಹತ್ ಆಸ್ಪತ್ರೆಯನ್ನು ತೆರೆದರು. ನಂತರ ಮೈಸೂರು, ರಾಮನಗರ, ಮಂಡ್ಯ, ಬೆಂಗಳೂರು ಮುಂತಾದೆಡೆ ಅತ್ಯಾಧುನಿಕ ಆಸ್ಪತ್ರೆಗಳನ್ನು ತೆರೆದರು. ಜೊತೆಗೆ ಭಾರತೀಯ ವೈದ್ಯಪದ್ಧತಿ ಪುನರುಜ್ಜೀವನ ನಿಟ್ಟಿನಲ್ಲಿ ಚಿಂತಿಸಿ ಬೆಂಗಳೂರಿನ ವಿಜಯನಗರದಲ್ಲಿ 1996ರಲ್ಲಿಯೇ ಹತ್ತು ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಶ್ರೀ ಕಾಲಭೈರವೇಶ್ವರಸ್ವಾಮಿ ಆಯುರ್ವೆದ ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯವನ್ನು ಸ್ಥಾಪಿಸಿದರು, ಇಂದಿಗೂ ಬಹುತೇಕ ಬಡವರು ಬಿಜಿಎಸ್ ಆಸ್ಪತ್ರೆಗಳಿಂದ ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ : Raja Marga Column : ನಿಮಗೆ KVG ಗೊತ್ತಾ? ಕಲಿತಿದ್ದು 8ನೇ ಕ್ಲಾಸ್‌, ಕಟ್ಟಿದ್ದು ಮೆಡಿಕಲ್‌ ಕಾಲೇಜು!

ಗೋಮಾತೆಯ ಆರಾಧಕರು

ರೈತಾಪಿವರ್ಗದ ನೋವನ್ನು ಹತ್ತಿದಿಂದ ಕಂಡ ಶ್ರೀಗಳು,ಬರಪೀಡಿತ ಪ್ರದೇಶಗಳಿಂದ ಜಾನುವಾರುಗಳು ಕಸಾಯಿಖಾನೆಗೆ ಹೋಗುವುದನ್ನು ತಪ್ಪಿಸಲು ಮಂಡ್ಯ, ಬೆಂಗಳೂರು ಮತ್ತು ಚಿತ್ರದುರ್ಗಗಳಲ್ಲಿ ಅತ್ಯಾಧುನಿಕ ಗೋಶಾಲೆಗಳನ್ನು ತೆರೆದರು.

ಅನಾಥ ಮತ್ತು ಅಂಧ ಮಕ್ಕಳು ಮಹಾ ಪೋಷಕರು

ಶ್ರೀಗಳು ತಮ್ಮ ಜೀವನದಲ್ಲಿ ಕಂಡ ಹಸಿವು, ನೋವು, ಅವಮಾನಗಳು ಮುಂದೆ ಅಂಧಮಕ್ಕಳ ವಸತಿ ಶಾಲೆ, ಅನಾಥಾಲಯ, ವೃದ್ಧಾಶ್ರಮ, ಮಹಿಳಾ ಸೇವಾಶ್ರಮಗಳನ್ನು ಸ್ಥಾಪಿಸಲು ನೆರವಾದವು

ಅಪ್ಪಟ ಪರಿಸರ ಪ್ರೇಮಿಗಳು

ಸ್ವಾಮಿಗಳವರು ಪರಿಸರ ಸಂರಕ್ಷಣೆಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಮಾತ್ರವಲ್ಲದೆ, ತಮ್ಮ ಅಧ್ಯಕ್ಷತೆಯಲ್ಲಿ ನಾಡಿನ ವಿವಿಧ ಮಠಾಧಿಪತಿಗಳು ಹಾಗೂ ಧರ್ಮಗುರುಗಳನ್ನೊಳಗೊಂಡ ಕರ್ನಾಟಕ ವನಸಂವರ್ಧನ ಟ್ರಸ್ಟ್(ರಿ.) ರಚಿಸಿ, ತನ್ಮೂಲಕ ನಾಡಿನ ಐದು ಕೋಟಿ ಜನಸಂಖ್ಯೆಗೆ ಅನುಗುಣವಾಗಿ ಐದು ಕೋಟಿಗೂ ಹೆಚ್ಚು ಸಸಿಗಳನ್ನು ನೆಟ್ಟು ವನ ಸಂವರ್ಧನೆಗೆ ನೀಡಿದ ಕೊಡುಗೆ ಅನುಪಮವಾದುದು.

ಧರ್ಮ ಪ್ರಭುಗಳು

ಚಿತ್ರದುರ್ಗದ ಶ್ರೀ ಕಬೀರಾನಂದಾಶ್ರಮ, ಹಿರಿಯೂರಿನ ಆದಿಜಾಂಬವಮಠ, ಪಟ್ಟನಾಯಕನ ಹಳ್ಳಿಯ ಶ್ರೀ ಗುರುಗುಂಡ ಬ್ರಹ್ಮಾಂಡೇಶ್ವರ ಮಠ, ಮಳವಳ್ಳಿಯ ಶ್ರೀ ರಾಮಾರೂಢ ಮಠ, ಬೆಂಗಳೂರಿನ ಶ್ರೀ ಗೋಸಾಯಿ ಮಠ… ಮುಂತಾದ ಹಿಂದುಳಿದ ವರ್ಗಗಳ ಮಠಗಳ ಸ್ಥಾಪನೆಯಲ್ಲಿ, ಹಾಗೂ ಆ ಮಠಗಳಿಗೆ ಗುರುಗಳನ್ನು ನೇಮಿಸುವಲ್ಲಿ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳು ನೀಡಿದ ಸಹಕಾರ, ಪೋ›ತ್ಸಾಹ ಸ್ಮರಣಾರ್ಹ.

ಮಾತೃ ಹೃದಯದ ಸಂತ

ತಮಿಳುನಾಡಿನಲ್ಲಿ ಸುನಾಮಿ ಬಂದಾಗ, ಗುಲ್ಬರ್ಗ ಮುಂತಾದೆಡೆ ನೆರೆಹಾವಳಿ ಸಂಭವಿಸಿದಾಗ, ಶಿವಮೊಗ್ಗದಲ್ಲಿ ಉಂಟಾದ ಕಾಡ್ಗಿಚ್ಚಿನಿಂದ ಜನತೆ ತೊಂದರೆಗೆ ಸಿಲುಕಿದಾಗ, ಉತ್ತರ ಕರ್ನಾಟಕ ಜನತೆ ನೆರೆಹಾವಳಿಯಿಂದ ತತ್ತರಿಸಿ ನೆಲೆ ಕಳೆದುಕೊಂಡಾಗ…..ಹೀಗೆ ಜನತೆ ತೊಂದರೆಗೊಳಗಾದಾಗಲೆಲ್ಲ ಶ್ರೀಮಠದಿಂದ ತಕ್ಷಣವೇ ಸ್ಪಂದಿಸಿದ್ದರು; ತಾವೇ ಸ್ವತಃ ಹೋಗಿ ಸಂಕಷ್ಟಕ್ಕೀಡಾದವರಿಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದರು. ಶ್ರೀ ಬಾಲಗಂಗಾಧರನಾಥರು ಸಕಲ ಮಾನವ ಕುಲಕ್ಕೆ ಲೇಸನೇ ಬಯಸಿದ ಮಹಾನ್ ಮಾನವತಾವಾದಿ.

ಸಮುದಾಯದ ಕಾವಲುಗಾರರು

ಸ್ವಾಮೀಜಿಯವರು ರೈತರು, ಹಿಂದುಳಿದ ವರ್ಗದ ಜನರೊಂದಿಗೆ ನಿಂತು ನ್ಯಾಯಕ್ಕಾಗಿ ಹೋರಾಡಿದ್ದಾರೆ ಮತ್ತು ಸ್ವಾಮೀಜಿಗಳು ರೈತರ ಕಲ್ಯಾಣಕ್ಕಾಗಿ ತಮ್ಮ ಇಡೀ ಜೀವನವನ್ನು ತ್ಯಾಗ ಮಾಡಿದ್ದಾರೆ.

ನಿತ್ಯ ದಾಸೋಹಿ

ಸ್ವಾಮೀಜಿ ಭಿಕ್ಷೆ ಬೇಡುವ ಮೂಲಕ ಬರಿಗಾಲಿನಲ್ಲಿ ತಿರುಗಾಡುವ ಮೂಲಕ ಆದಿ ಚುಂಚನಗಿರಿ ಮಠವನ್ನು ನಿರ್ಮಿಸಿದರು. ಸ್ವಾಮೀಜಿಯವರಿಗೆ ಹಸಿವಿನ ನೋವು ಗೊತ್ತಿತ್ತು, ಆದ್ದರಿಂದ ಶ್ರೀಗಳು ಬಡ ಮಕ್ಕಳ ಅನಾಥರಿಗೆ ಜಾತಿ-ಧರ್ಮದ ಭೇದವಿಲ್ಲದೆ ಉಚಿತ ಹಾಸ್ಟೆಲ್‌ಗಳನ್ನು ಪ್ರಾರಂಭಿಸಿದರು. ಇಂದಿಗೂ ಚುಂಚನಗಿರಿ ಮಹಾ ಸಂಸ್ಥಾನ ಮಠದ ವತಿಯಿಂದ ವಿದ್ಯಾರ್ಥಿಗಳಿಗೆ, ಭಕ್ತರಿಗೆ ಉಚಿತ ಊಟ ನೀಡಲಾಗುತ್ತಿದೆ

ಸನಾತನ ಸಂಸ್ಕೃತಿಯ ಪರಿಪಾಲಕರು

ಶ್ರೀಗಳು ನಾಥ ಸಂಪ್ರದಾಯದ ಪರಿಪಾಲನೆಯ ಜೊತೆಗೇ, ಸನಾತನ ದರ್ಮದ ಸಂಸ್ಕಾರಗಳನ್ನು ತಿಳಿಸಲು ಇಂದಿನ ಯುವ ಜನಾಂಗಕ್ಕೆ ಹಲವು ಕಾರ್ಯಕ್ರಮಗಳ ಮೂಲಕ ದೇಶದ ಸಂಸ್ಕೃತಿ, ಪರಂಪರೆಗಳನ್ನು ತಿಳಿಸಿದಾರೆ, ದರ್ಮದ ಪ್ರವರ್ಧನೆಯಾಗಿ ಶ್ರೀಗಳು ಶ್ರೀಗಳು ಹಲವಾರು ಉಪ ಶಾಖೆಗಳನ್ನು ತೆರೆದರು.

Exit mobile version