Site icon Vistara News

ಕೇರಳದಲ್ಲಿ ಸಿಪಿಐ (ಎಂ) ಮುಖಂಡನ ಹತ್ಯೆ; ಸ್ವಾತಂತ್ರ್ಯ ದಿನಕ್ಕೆ ಸಿದ್ಧತೆ ಮಾಡುತ್ತಿದ್ದವನ ಮೇಲೆ ಅಟ್ಯಾಕ್​

Kerala CPI (M) Murder

ತಿರುವನಂತಪುರಂ: ಕೇರಳದ ಕಮ್ಯೂನಿಸ್ಟ್​ ಪಾರ್ಟಿ ಆಫ್​ ಇಂಡಿಯಾ (ಮಾರ್ಕ್ಸಿಸ್ಟ್​) (CPI(M)ದ ಮುಖಂಡನೊಬ್ಬನನ್ನು ಹತ್ಯೆ ಮಾಡಲಾಗಿದೆ. ಆರು ಜನರಿರುವ ಒಂದು ಗುಂಪು ಈ ಕೃತ್ಯ ಎಸಗಿದ್ದು ಗೊತ್ತಾಗಿದೆ. ಮೃತ ಮುಖಂಡನ ಹೆಸರು ಕೆ.ಶಾಜಹಾನ್​​ ಎಂದಾಗಿದ್ದು, ಸಿಪಿಐ (ಎಂ)ನ ಸ್ಥಳೀಯ ಸಮಿತಿ ಸದಸ್ಯ. ಇವರಿಗೆ ಇನ್ನೂ 40ವರ್ಷ ವಯಸ್ಸು. ಭಾನುವಾರ (ಆಗಸ್ಟ್​ 14) ರಾತ್ರಿ 9.30ರ ಹೊತ್ತಿಗೆ ಕೇರಳದ ಪಲಕ್ಕಾಡ್​​ನ ಕೊಟ್ಟೆಕಾಡ್​ ಎಂಬಲ್ಲಿ ಶಾಜಹಾನ್​ಗೆ ಚಾಕುವಿನಿಂದ ಇರಿಯಲಾಗಿತ್ತು. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಲ್ಲಿಗೆ ಹೋಗುವಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ. ಶಾಜಹಾನ್​​ ಹತ್ಯೆಗೆ ಆರ್​ಎಸ್​​ಎಸ್​​-ಬಿಜೆಪಿಯೇ ಕಾರಣ ಎಂದು ಸಿಪಿಐ(ಎಂ) ಆರೋಪಿಸಿದೆ. ಆದರೆ ಬಿಜೆಪಿ ಈ ಆರೋಪವನ್ನು ತಳ್ಳಿಹಾಕಿದೆ.

ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದೇವೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ. ಈಗಾಗಲೇ ಸಿಸಿಟಿವಿ ಫೂಟೇಜ್​​ಗಳನ್ನೆಲ್ಲ ಪಡೆದಿದ್ದೇವೆ ಎಂದು ಪಲಕ್ಕಾಡ್​ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಆರ್​.ವಿಶ್ವನಾಥ್​ ಹೇಳಿದ್ದಾರೆ. ಈ ಶಾಜಹಾನ್​​ ​ ಸ್ವಾತಂತ್ರ್ಯೋತ್ಸವ ಆಚರಣೆಯ ಸಿದ್ಧತೆ ನಡೆಸುತ್ತಿದ್ದಾಗ ಅವರ ಮೇಲೆ ಗುಂಪಾಗಿ ಹಲ್ಲೆ ನಡೆಸಲಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾಗಿಯೂ ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.

‘ಶಾಜಹಾನ್​​ ​ ಹತ್ಯೆ ಮಾಡಿದವರು ಸಿಪಿಐ (ಎಂ)ನವರೇ ಎಂದು ಇನ್ನೊಬ್ಬ ಪ್ರತ್ಯಕ್ಷದರ್ಶಿ ಹೇಳಿದ್ದಾರೆ ಎಂದು ಪೊಲೀಸರು ತಿಳಿಸುತ್ತಿದ್ದಂತೆ, ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಇ.ಎನ್​.ಸುರೇಶ್​ ಬಾಬು ಪ್ರತಿಕ್ರಿಯೆ ನೀಡಿ, ‘ಈಗ ಹತ್ಯೆ ಕೇಸ್​​ನಲ್ಲಿ ಹೆಸರು ಕೇಳಿಬರುತ್ತಿರುವವರೆಲ್ಲ ಮೊದಲು ನಮ್ಮ ಪಕ್ಷದಲ್ಲೇ ಇದ್ದರು. ಆದರೆ ಅವರು ಪಕ್ಷ ತೊರೆದು, ಬಿಜೆಪಿ ಸೇರಿ ತುಂಬ ದಿನ ಆಯಿತು’ ಎಂದಿದ್ದಾರೆ. ಇವರ ಈ ಆರೋಪಕ್ಕೆ ಉತ್ತರಿಸಿದ ಬಿಜೆಪಿ ನಾಯಕ ಸಿ. ಕೃಷ್ಣಕುಮಾರ್​, ‘ಸಿಪಿಐ (ಎಂ)ನಲ್ಲಿನ ಆಂತರಿಕ ಕಚ್ಚಾಟದಿಂದಲೇ ಈ ಹತ್ಯೆ ಮಾಗಿದೆ. ಆದರೆ ಈಗ ಎಲ್ಲ ಆರೋಪವನ್ನೂ ಸಂಘ ಪರಿವಾರದ ಮೇಲೆ ಹಾಕಲಾಗುತ್ತಿದೆ. 2008ರಲ್ಲಿ ಹತ್ಯೆಯಾಗಿದ್ದ ಬಿಜೆಪಿ ಕಾರ್ಯಕರ್ತ ಅರುಚಾಮಿ ಹತ್ಯೆ ಆರೋಪಿಗಳಲ್ಲಿ ಒಬ್ಬನಾಗಿದ್ದ ಈಗ ಕೊಲೆಯಾದ ಶಾಜಹಾನ್​ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ‌Praveen Nettaru | ಕೊಲೆ ಆರೋಪಿಗಳಿಗೆ ಆಶ್ರಯ ಕೊಟ್ಟ ವ್ಯಕ್ತಿ ಕೇರಳದಲ್ಲಿ ಅರೆಸ್ಟ್, ಹಂತಕರ ಜತೆ ಸಂಪರ್ಕ

Exit mobile version