Site icon Vistara News

Accident In Delhi | ಕಾರಿನಡಿ ಎಳೆಯಲ್ಪಟ್ಟ ಯುವತಿ ಮೇಲೆ ರೇಪ್​ ಆಗಿರಬಹುದು ಎಂದ ಆಪ್​; ಕಾರ್ಯಕರ್ತರಿಂದ ಪ್ರತಿಭಟನೆ

AAP Protest

ದೆಹಲಿಯಲ್ಲಿ ಕಾರಿನಡಿ ಆಗಿ ಭಯಾನಕವಾಗಿ ಎಳೆಯಲ್ಪಟ್ಟು ದಾರುಣವಾಗಿ ಮೃತಪಟ್ಟ ಯುವತಿ ಕೇಸ್​​ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಆಕೆ ಮೇಲೆ ಅತ್ಯಾಚಾರ ಆಗಿರಬಹುದು ಎಂಬ ಅನುಮಾನವನ್ನು ಆಮ್​ ಆದ್ಮಿ ಪಕ್ಷ ವ್ಯಕ್ತಪಡಿಸಿದೆ. ಇದೊಂದು ಅತ್ಯಂತ ಅಪರೂಪದ ಕ್ರೈಂ ಕೇಸ್​ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ ಹೇಳಿದ್ದಾರೆ. ಇನ್ನು ಈ ಕೇಸ್​​ನಲ್ಲಿ ಬಿಜೆಪಿ ಮುಖಂಡ ಅಮಿತ್​ ಮಿತ್ತಲ್​ ಸೇರಿ ಐವರು ಅರೆಸ್ಟ್ ಆಗುತ್ತಿದ್ದಂತೆ, ಆಮ್​ ಆದ್ಮಿ ಪಕ್ಷ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದೆ.

ದೆಹಲಿ ಕೇಂದ್ರಾಡಳಿತ ಪ್ರದೇಶವಾಗಿದ್ದರಿಂದ, ಕಾನೂನು ಸುವ್ಯವಸ್ಥೆ ನೇರವಾಗಿ ಕೇಂದ್ರ ಸರ್ಕಾರದಡಿ ಬರುತ್ತದೆ. ಲೆಫ್ಟಿನೆಂಟ್​ ಗವರ್ನರ್​ ನಿಯಂತ್ರಣಕ್ಕೆ ಒಳಪಡುತ್ತದೆ. ಅದನ್ನೇ ಈಗ ಆಮ್​ ಆದ್ಮಿ ಪಕ್ಷ ಅಸ್ತ್ರವನ್ನಾಗಿಸಿಕೊಂಡಿದೆ. ಇಲ್ಲಿನ ಲೆಫ್ಟಿನೆಂಟ್​ ಗವರ್ನರ್​ ವಿ.ಕೆ.ಸಕ್ಸೇನಾ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾ ನಿರತ ಆಪ್​ ಕಾರ್ಯಕರ್ತರು ಆಗ್ರಹ ಮಾಡಿದ್ದಾರೆ. ಇವರೆಲ್ಲ ಲೆಫ್ಟಿನೆಂಟ್​ ಗವರ್ನರ್​ ನಿವಾಸದ ಎದುರು ಸೇರಿ ಹೋರಾಟ ನಡೆಸಿದ್ದಾರೆ.

ಜನವರಿ 1ರಂದು ದೆಹಲಿಯ ಸುಲ್ತಾನ್​ಪುರಿಯಲ್ಲಿ ಈ ದುರ್ಘಟನೆ ನಡೆದಿತ್ತು. ಯುವತಿಯ ಸ್ಕೂಟರ್​ಗೆ ಕಾರು ಡಿಕ್ಕಿಯಾಗಿ ಆಕೆ ಕೆಳಗೆ ಬಿದ್ದಿದ್ದಳು. ಚಾಲಕ ಅದೆಷ್ಟು ನಿರ್ಲಕ್ಷ್ಯ ವಹಿಸಿದ್ದ ಎಂದರೆ, ಬಿದ್ದವಳು ಏನಾದಳು ಎಂಬುದನ್ನು ನೋಡದೆ ಆತ ಕಾರು ಚಲಾಯಿಸಿಕೊಂಡು ಹೋಗಿದ್ದ. ಆ ಹುಡುಗಿ ಕಾರಿನಡಿಯಲ್ಲಿ ಸಿಲುಕಿ 12 ಕಿಮೀ ದೂರ ಎಳೆಯಲ್ಪಟ್ಟಿದ್ದಳು. ಬಳಿಕ ನಗ್ನಾವಸ್ಥೆಯಲ್ಲಿ ರಸ್ತೆ ಮಧ್ಯೆ ಬಿದ್ದಿದ್ದಳು. ಕಾರು ಯೂಟರ್ನ್​ ತೆಗೆದುಕೊಳ್ಳುವ ಸಂದರ್ಭದಲ್ಲಿ ನಡೆದ ದುರ್ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: Accident in Delhi | ಯುವತಿಯ ದೇಹವನ್ನು ಎಳೆದುಕೊಂಡೇ ಹೋದ ಕಾರು, ಸಿಸಿಟಿವಿಯಲ್ಲಿ ದೃಶ್ಯ ಸೆರೆ

Exit mobile version