Site icon Vistara News

Kabaddi player ends life : ಖ್ಯಾತ ಕಬಡ್ಡಿ ಆಟಗಾರ್ತಿ ಆತ್ಮಹತ್ಯೆ; ದಸರಾ ನೋಡಿ ಬಂದವಳಿಗೆ ಏನಾಯ್ತು?

Kabaddi Player Dhanalakshmi ends life

ನೆಲಮಂಗಲ: ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ್ತಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಆತ್ಮಹತ್ಯೆ (Kabaddi Player ends life) ಮಾಡಿಕೊಂಡಿದ್ದಾರೆ. ಖ್ಯಾತ ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ (25) (kabaddi player Dhanalakshmi) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು.

ನೆಲಮಂಗಲ ತಾಲೂಕಿನ ಅರಶಿನ ಕುಂಟೆಯ ಆದರ್ಶ ನಗರದಲ್ಲಿ ತಮ್ಮ ತಂದೆ-ತಾಯಿ ಜತೆ ವಾಸಿಸುತ್ತಿದ್ದ ಧನಲಕ್ಷ್ಮಿ ಅವರು ಮನೆಯಲ್ಲೇ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಅವರು ಯಾವುದೇ ಆತ್ಮಹತ್ಯೆ ಟಿಪ್ಪಣಿ ಬರೆದಿಟ್ಟಿಲ್ಲ. ಹೀಗಾಗಿ ಸಾವಿನ ನಿಜವಾದ ಕಾರಣ ಸ್ಪಷ್ಟವಾಗಿಲ್ಲ.

ಧನಲಕ್ಷ್ಮಿ ಅವರು ಮೂಲತಃ ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣದ ಕೆ. ತಿಮ್ಮಲಾಪುರದವರು. ಕಳೆದ 5 ವರ್ಷದಿಂದ ನೆಲಮಂಗಲದ ಅರಿಶಿನಕುಂಟೆಯ ಆದರ್ಶ ನಗರದಲ್ಲಿ ವಾಸವಾಗಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂರು ಬಾರಿ ಕಬಡ್ಡಿ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದರು.

ಮೈಸೂರು ದಸರಾ ನೋಡಿಕೊಂಡು ಬಂದಿದ್ದರು

ಧನಲಕ್ಷ್ಮಿ ಅವರ ಕಬಡ್ಡಿ ಕ್ರೀಡೆ, ಶಿಕ್ಷಣ ಮತ್ತು ವೃತ್ತಿ ಬದುಕಿಗೆ ಮನೆಯವರು ತುಂಬ ಚೆನ್ನಾಗಿ ಸ್ಪಂದಿಸಿದ್ದರು. ಧನಲಕ್ಷ್ಮಿ ಅವರು ಮಾಸ್ಟರ್ಸ್‌ ಇನ್‌ ಕಂಪ್ಯೂಟರ್‌ ಅಪ್ಲಿಕೇಶನ್ಸ್‌ ಅಧ್ಯಯನ ಮಾಡಬೇಕು ಎಂಬ ಕಾರಣಕ್ಕಾಗಿ ಬೆಂಗಳೂರಿಗೆ ಬಂದಾಗ ಇಡೀ ಕುಟುಂಬ ಶಿಫ್ಟ್‌ ಆಗಿತ್ತು. ಅದಾದ ಬಳಿಕ ಅವರು ಕಾಡುಗೋಡಿಯಲ್ಲಿರುವ ನೆಕ್ಸ್ಟ್‌ ಸ್ಟೇ ಖಾಸಗಿ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದ್ದರು.

ಮೂರು ದಿನಗಳ ಹಿಂದೆ ಅವರು ಮೈಸೂರಿಗೆ ಜಂಬೂ ಸವಾರಿ ನೋಡಲು ಫ್ರೆಂಡ್ಸ್‌ ಜತೆ ಹೋಗಿದ್ದರು. ಅಲ್ಲಿಂದ ಖುಷಿಖುಷಿಯಾಗೇ ಮರಳಿದ್ದರು. ಗುರುವಾರ ಮುಂಜಾನೆ ಖುಷಿ ಖುಷಿಯಾಗಿಯೇ ಇದ್ದ ಅವರು ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ತಂದೆ ಮತ್ತು ತಮ್ಮ ಮನೆಯಲ್ಲಿದ್ದಾಗಲೇ ಆಕೆ ಹೀಗೆ ಪ್ರಾಣ ಕಳೆದುಕೊಂಡಿದ್ದಾರೆ. ಅವರನ್ನು ನೇಣಿನಿಂದ ಇಳಿಸಿ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅದಕ್ಕಿಂತ ಮೊದಲೇ ಅವರು ಪ್ರಾಣ ಕಳೆದುಕೊಂಡಿದ್ದರು.

ಖುಷಿಯಾಗಿಯೇ ಇದ್ದ ಧನಲಕ್ಷ್ಮಿ ಯಾಕೆ ಹೀಗೆ ಮಾಡಿಕೊಂಡರು ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ. ಅದಕ್ಕೆ ಉತ್ತರ ಹೇಳಬಹುದಾದ ಡೆತ್‌ ನೋಟ್‌ಗಳೇನೂ ಮನೆಯಲ್ಲಿ ಸಿಕ್ಕಿಲ್ಲ. ಹೀಗಾಗಿ ಸಾವಿನ ಕಾರಣ ಸದ್ಯಕ್ಕೆ ನಿಗೂಢವಾಗಿದೆ.

ಇದನ್ನೂ ಓದಿ : Self Harming : ರಾಷ್ಟ್ರಮಟ್ಟದ ಬಾಕ್ಸಿಂಗ್‌ ಪಟು ಉಡುಪಿಯ ವಿರಾಜ್‌ ಮೆಂಡನ್‌ ಆತ್ಮಹತ್ಯೆ

ಹೆಚ್ಚುತ್ತಿರುವ ಕ್ರೀಡಾಪಟುಗಳ ಸಾವು

ಕಳೆದ ಕೆಲವು ಸಮಯದಿಂದ ಕ್ರೀಡಾಪುಟಗಳ ಸಾವು ಹೆಚ್ಚುತ್ತಿದೆ. ಕೆಲವು ಕ್ರೀಡಾಪಟುಗಳು ಹೃದಯಾಘಾತದಿಂದ ಪ್ರಾಣ ಕಳೆದುಕೊಂಡರೆ ಇನ್ನು ಕೆಲವರು ಆತ್ಮಹತ್ಯೆಗೆ ಶರಣಾಗಿರುವುದು ಪತ್ತೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕಬಡ್ಡಿ ಆಟಗಾರರೊಬ್ಬರು ಆನ್‌ಲೈನ್‌ ಗೇಮ್‌ಗೆ, ಯಾವುದೋ ಬ್ಲಾಕ್‌ಮೇಲ್‌ಗೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದರು. ಉಡುಪಿಯ ಒಬ್ಬ ಕ್ರೀಡಾಪಟು ಕೂಡಾ ಸಾವಿಗೆ ಶರಣಾಗಿದ್ದರು.

Exit mobile version