Site icon Vistara News

ರಿಸೆಪ್ಷನ್​​ಗೂ ಮುಂಚೆ ಕೋಣೆ ಹೊಕ್ಕು ಬಾಗಿಲು ಹಾಕಿಕೊಂಡ ನವದಂಪತಿ; ಪೊಲೀಸರೇ ಬಂದು ಶವಗಳನ್ನು ಹೊರತೆಗೆದರು!

Chhattisgarh Crime

#image_title

ರಾಯ್ಪುರ: ಮದುವೆಯಾಗಿ ಎರಡನೇ ದಿನಕ್ಕೆ, ಆರತಕ್ಷತೆ ದಿನವೇ ವಧು-ವರ ಇಬ್ಬರೂ ಮೃತಪಟ್ಟ ಘಟನೆ ಛತ್ತೀಸ್​ಗಢ್​​ನ ಬ್ರಿಜ್​​ನಗರದಲ್ಲಿ ನಡೆದಿದೆ. ವರ ಮೊದಲು ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಮೇಲ್ನೋಟಕ್ಕೆ ಕಾಣಿಸುವ ವಿಚಾರ. ನಾವು ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಸ್ಲಾಂ (24) ಮತ್ತು ಕಹಕಶಾ ಬಾನೋ (22) ಭಾನುವಾರ ಮದುವೆಯಾಗಿದ್ದರು. ಮಂಗಳವಾರ ಸಂಜೆ ಇವರಿಬ್ಬರ ರಿಸೆಪ್ಷನ್​ ಏರ್ಪಡಿಸಲಾಗಿತ್ತು. ಇನ್ನೇನು ಸಮಾರಂಭ ಶುರುವಾಗಬೇಕು ಎನ್ನುವಷ್ಟರಲ್ಲಿ ಅಸ್ಲಾಂ ಮತ್ತು ಕಹಕಶಾ ಇಬ್ಬರೂ ಒಂದು ಕೋಣೆ ಸೇರಿಕೊಂಡು, ಬಾಗಿಲು ಹಾಕಿಕೊಂಡಿದ್ದರು. ಅವರೇನೋ ರೆಡಿ ಆಗುತ್ತಿರಬೇಕು ಎಂದು ಮನೆಯವರೂ ಸುಮ್ಮನಿದ್ದರು. ಆದರೆ ತುಂಬ ಹೊತ್ತಾದ ಬಳಿಕವೂ ಗಂಡ-ಹೆಂಡತಿ ಬಾಗಿಲು ತೆಗೆಯದೆ ಇದ್ದಾಗ ಮನೆಯವರಿಗೆ ಅನುಮಾನ ಬಂದಿದೆ. ಅಷ್ಟಲ್ಲದೆ, ಕಹಕಶಾ ಅರಚಿದಂತೆ ಕೇಳಿದೆ ಎಂದು ಅಸ್ಲಾಂ ತಾಯಿ ಕೂಡ ಹೇಳಿದ್ದಾರೆ. ಹೀಗಾಗಿ ಮನೆಯವರು ಕಿಟಕಿ ಮೂಲಕ ನೋಡಿದ್ದಾರೆ. ಆಗ ಅಸ್ಲಾಂ ಮತ್ತು ಕಹಕಶಾ ಇಬ್ಬರೂ ರಕ್ತದ ಮಡುವಲ್ಲಿ ಬಿದ್ದಿದ್ದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: Road accident : ಹುಳಿಯಾರ್‌ ಗೇಟ್‌ ಬಳಿ ಭೀಕರ ಅಪಘಾತ; ನವ ವಿವಾಹಿತ ಟೆಕ್ಕಿ ದಂಪತಿ ಸ್ಥಳದಲ್ಲೇ ಮೃತ್ಯು

ಪೊಲೀಸರು ಮನೆಗೆ ಬಂದು, ಬಾಗಿಲು ಒಡೆಯುವಷ್ಟರಲ್ಲಿ ಇಬ್ಬರ ಜೀವವೂ ಹೋಗಿತ್ತು. ಮೃತದೇಹಗಳನ್ನು ಪೋಸ್ಟ್​ಮಾರ್ಟಮ್​​ಗೆ ಕಳಿಸಲಾಗಿದೆ. ಹೀಗೆ ಮದುವೆಯಾದ ಎರಡನೇ ದಿನಕ್ಕೆ, ಈ ದಂಪತಿ ಮಧ್ಯೆ ಸಮಸ್ಯೆ ಏನಿತ್ತು ಎಂಬ ಬಗ್ಗೆ ಪೊಲೀಸರು ಕುಟುಂಬದವರನ್ನೂ ವಿಚಾರಣೆ ನಡೆಸುತ್ತಿದ್ದಾರೆ.

Exit mobile version