Site icon Vistara News

ವಿಸ್ತಾರ ಸಂಪಾದಕೀಯ: ನ್ಯಾಯದಾನ ವ್ಯವಸ್ಥೆ ಚುರುಕಾಗಲಿ, ನ್ಯಾಯಾಂಗಕ್ಕೇ ಕಳಂಕ ಅಂಟದಿರಲಿ

Court

ಕಳೆದ 30 ವರ್ಷಗಳಲ್ಲಿ ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ 71 ಸಾವಿರಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ಸುಮಾರು 1.01 ಲಕ್ಷ ಪ್ರಕರಣಗಳು 30ಕ್ಕೂ ಅಧಿಕ ವರ್ಷಗಳಿಂದ ಕೆಳ ನ್ಯಾಯಾಲಯಗಳಲ್ಲಿ ಹಾಗೇ ಇವೆ ಎಂದು ಕೇಂದ್ರದ ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘ್ವಾಲ್‌ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್‌, 25 ಹೈಕೋರ್ಟ್‌ಗಳು ಹಾಗೂ ಇನ್ನಿತರ ಕೆಳ ನ್ಯಾಯಾಲಯಗಳಲ್ಲಿ ಒಟ್ಟಾರೆ 5.02 ಕೋಟಿ ಪ್ರಕರಣಗಳು ಬಾಕಿ ಇವೆಯಂತೆ. ಇಂಟಿಗ್ರೇಟೆಡ್‌ ಕೇಸ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ ಡೇಟಾ ಪ್ರಕಾರ ಸುಪ್ರೀಂ ಕೋರ್ಟ್‌ನಲ್ಲಿ 69,766 ಪ್ರಕರಣಗಳು ಬಾಕಿ ಇವೆ. ಇದು ನಮ್ಮ ದೇಶದ ನ್ಯಾಯದಾನ ವ್ಯವಸ್ಥೆಯ ಕಳವಳಕಾರಿ ಚಿತ್ರಣ.

ಇದಕ್ಕೆ ಅನೇಕ ಕಾರಣಗಳಿರಬಹುದು. ನ್ಯಾಯಮೂರ್ತಿಗಳ- ನ್ಯಾಯವಾದಿಗಳ ಅಲಭ್ಯತೆ, ನ್ಯಾಯಾಂಗ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕೊರತೆ, ಮೂಲಸೌಕರ್ಯ ಕೊರತೆ, ಸಾಕ್ಷಿಗಳ ಸ್ವರೂಪ ಹಾಗೂ ಕೊರತೆ, ವಕೀಲರು- ತನಿಖಾ ಸಂಸ್ಥೆಗಳು- ದೂರುದಾರರು- ಸಾಕ್ಷಿಗಳ ನಡುವಿನ ಹೊಂದಾಣಿಕೆಯ ಸಮಸ್ಯೆ, ನಿಯಮಾವಳಿಗಳ ಸಮರ್ಪಕ ಅನ್ವಯದ ಕೊರತೆ ಇತ್ಯಾದಿಗಳೆಲ್ಲಾ ಈ ವಿಳಂಬಕ್ಕೆ ಕಾರಣವಾಗಿವೆ. ಏನೇ ಕಾರಣವಿದ್ದರೂ ಸಂತ್ರಸ್ತರಿಗೆ ಸಕಾಲದಲ್ಲಿ ನ್ಯಾಯ ದೊರೆಯುತ್ತಿಲ್ಲ ಎಂಬುದು ಮಾತ್ರ ನಿಜ. ʼವಿಳಂಬ ನ್ಯಾಯದಾನ, ಸಂತ್ರಸ್ತನಿಗೆ ನ್ಯಾಯವನ್ನು ನಿರಾಕರಿಸಿದಂತೆಯೇ ಸರಿʼ ಎಂಬ ಮಾತೇ ಇದೆ. ನಮ್ಮ ನ್ಯಾಯಾಂಗ ವ್ಯವಸ್ಥೆ ಹೆಚ್ಚಾಗಿ ʼʼನೂರು ಅಪರಾಧಿಗಳಿಗೆ ಶಿಕ್ಷೆ ತಪ್ಪಿದರೂ ಚಿಂತೆಯಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದುʼʼ ಎಂಬ ಸೂತ್ರವನ್ನೇ ಕೇಂದ್ರೀಕರಿಸಿದೆ. ಹೀಗಾಗಿ ಕ್ರಿಮಿನಲ್‌ ಪ್ರಕರಣಗಳಲ್ಲಿ ಆರೋಪಿಯ ಅಪರಾಧವನ್ನು ರುಜುವಾತುಪಡಿಸಲು ಸಂತ್ರಸ್ತರ ಕಡೆಯ ನ್ಯಾಯವಾದಿಗಳು ಹೆಣಗಾಡಿದಷ್ಟು, ತಪ್ಪಿಸಿಕೊಳ್ಳಲು ಆರೋಪಿಯ ಕಡೆಯವರು ಪ್ರಯತ್ನಿಸಬೇಕಿಲ್ಲ.

ಆದರೆ, ನ್ಯಾಯದಾನ ಕೇಳಿ ಕೋರ್ಟಿಗೆ ಹೋದ ವ್ಯಕ್ತಿ ವಯಸ್ಸಾಗಿ ನಿಧನ ಹೊಂದಿದ ಬಳಿಕವೂ ಕೆಲವೊಮ್ಮೆ ನ್ಯಾಯ ಸಿಗುವುದಿಲ್ಲ ಎಂದರೇನರ್ಥ? ಇದು ಪ್ರಜಾಪ್ರಭುತ್ವದ ಒಂದು ಅಂಗ ಊನಗೊಂಡಿರುವುದರ ದ್ಯೋತಕ. ಇಲ್ಲಿ ನಾಲ್ಕೂ ಅಂಗಗಳೂ ಸರಿಯಾಗಿ ಕಾರ್ಯಾಚರಿಸಬೇಕು. ನ್ಯಾಯದಾನ ವಿಳಂಬವಾದಷ್ಟೂ ಸಾಕ್ಷಿಗಳು, ಕಕ್ಷಿದಾರರು ಕೇಸ್‌ನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಕೆಲವು ದಾಖಲೆ ಪತ್ರಗಳು ನಾಶವಾಗಬಹುದು, ಸಾಕ್ಷಿಗಳು ಇಲ್ಲವಾಗಬಹುದು. ಕಾಲದ ಹೊಡೆತಕ್ಕೆ ಸಿಲುಕಿ, ಪ್ರತಿ ತಿಂಗಳೂ ಕೋರ್ಟಿಗೆ ಅಲೆದು ಹೈರಾಣಾಗುವ ಪರಿಸ್ಥಿತಿಯಿಂದ ರೋಸಿಹೋಗಿ ರಾಜಿ ಮಾಡಿಕೊಂಡ ಎಷ್ಟೋ ಪ್ರಕರಣಗಳು ಇವೆ. ಇದು ನ್ಯಾಯ ಬೇಡವೆಂದಲ್ಲ, ಶಿಕ್ಷೆಗಿಂತಲೂ ನಿಷ್ಕರುಣಿಯಾಗಿರುವ ಕಟಕಟೆಯ ಸಹವಾಸ ಬೇಡವೆಂದು. ಜತೆಗೆ, ಭಾರತದಲ್ಲಿ ಜೈಲುಗಳಲ್ಲಿ ಕೊಳೆಯುತ್ತಿರುವ ವಿಚಾರಣಾಧೀನ ಕೈದಿಗಳ ಪ್ರಮಾಣವೂ ಲಕ್ಷಗಳ ಸಂಖ್ಯೆಯಲ್ಲಿದೆ. ಇದರಲ್ಲಿ ವಿಚಾರಣೆ ಸಾಂಗವಾಗಿ ನಡೆದು ಪ್ರಕರಣ ಇತ್ಯರ್ಥವಾಗುವವರೆಗೂ ಆರೋಪಿತನು ಅಪರಾಧಿಯೆಂದು ನಿರ್ಣಯವಾಗುವಂತಿಲ್ಲ. ಪ್ರಕರಣ ಇತ್ಯರ್ಥವಾಗದೆ ವರ್ಷಗಳ ಕಾಲ ಎಳೆದರೆ ಅನ್ಯಾಯವಾಗಿ ಆರೋಪಿಯ ಆಯುಷ್ಯ ಸರಳುಗಳ ನಡುವೆ ವ್ಯರ್ಥ. ಆತ ಅಪರಾಧಿಯಲ್ಲದೇ ಇದ್ದರೆ, ನಿಜಕ್ಕೂ ಅದು ಅವನ ಮೇಲೆ ಈ ವ್ಯವಸ್ಥೆ ನಡೆಸುವ ಕ್ರೌರ್ಯವೇ ಸರಿ. ಜಾಮೀನಿನ ಮೇಲೆ ಹೊರಗೆ ಬಂದಿದ್ದರೂ, ಆರೋಪವನ್ನು ಹೊತ್ತುಕೊಂಡು ವರ್ಷಗಳ ಕಾಲ ಓಡಾಡುವುದು ಯಾರಿಗೂ ಹಿತವಲ್ಲ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಮೌಢ್ಯಕ್ಕೆ ಮಗು ಬಲಿ, ಗೊಲ್ಲರಹಟ್ಟಿಯ ಮಹಿಳೆಯರ ಸಂಕಟ ಇಲ್ಲಿಗೇ ಕೊನೆಯಾಗಲಿ

ಇದು ಕ್ರಿಮಿನಲ್‌ ಪ್ರಕರಣಗಳ ವಿಚಾರವಾದರೆ, ಸಿವಿಲ್‌ ಪ್ರಕರಣಗಳೂ ಹೀಗೇ ನ್ಯಾಯವಂಚಿತ ಭಾವವನ್ನು ಸಂತ್ರಸ್ತರಲ್ಲೂ, ಅನ್ಯಾಯದ ಸಮರ್ಥನೆಯ ಭಾವವನ್ನು ಅಪರಾಧಿಗಳಲ್ಲೂ ಮೂಡಿಸುತ್ತದೆ. ಇವೆಲ್ಲವನ್ನೂ ಸರಿಪಡಿಸಬೇಕಾದ್ದು ಹೇಗೆ? ನ್ಯಾಯದಾನ ಚುರುಕಾಗಲು ನ್ಯಾಯಮೂರ್ತಿಗಳೂ ಸೇರಿದಂತೆ ಸಾಕಷ್ಟು ಸಿಬ್ಬಂದಿ ಬೇಕು. ಆದರೆ ಕೇಂದ್ರ ಸರ್ಕಾರ ಮತ್ತು ನ್ಯಾಯಾಂಗ ನಡುವಿನ ಸಂಘರ್ಷವೂ ನ್ಯಾಯಾಂಗ ಸಿಬ್ಬಂದಿ ನೇಮಕ ವಿಳಂಬಕ್ಕೆ ಕಾರಣವಾಗುತ್ತಿದೆ. ಇದನ್ನು ಸರಿಪಡಿಸಬೇಕು. ತನಿಖಾ ಸಂಸ್ಥೆಗಳು ಇನ್ನಷ್ಟು ಚುರುಕಾಗಿ ಕೇಸ್‌ ಫೈಲ್‌ ಮಾಡುವುದು ಅಗತ್ಯ. ಕಾರ್ಯಾಂಗ ಮತ್ತು ನ್ಯಾಯಾಂಗಗಳು ಸಮನ್ವಯ ಸಾಧಿಸಿ ಪ್ರಕರಣಗಳ ತ್ವರಿತ ವಿಚಾರಣೆಗೆ ದಾರಿ ಮಾಡಿ ಕೊಡಬೇಕು. ಇಲ್ಲವಾದರೆ ಅಪರಾಧಿಗಳನ್ನು ರಕ್ಷಿಸಿದ, ಸಂತ್ರಸ್ತರನ್ನು ಮತ್ತಷ್ಟು ಪೀಡಿಸಿದ ಕಳಂಕ ನ್ಯಾಯಾಂಗಕ್ಕೇ ಮೆತ್ತಿಕೊಳ್ಳುತ್ತದೆ.

Exit mobile version