Site icon Vistara News

Banavasi Chariot: ಬನವಾಸಿ ಮಧುಕೇಶ್ವರ ದೇಗುಲಕ್ಕೆ ಫೆ. 25ರಂದು ಬರಲಿದೆ 3 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ʼಮಹಾಸ್ಯಂದನʼ ರಥ

New chariot to arrive at Banavasi Sri Madhukeshwara Temple on Feb 25

#image_title

| ಭಾಸ್ಕರ್ ಆರ್. ಗೆಂಡ್ಲ, ಶಿರಸಿ

ದೇಶದಲ್ಲೇ ಪ್ರಸಿದ್ಧಿ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯ ಐತಿಹಾಸಿಕ ಶ್ರೀ ಮಧುಕೇಶ್ವರ ದೇವಸ್ಥಾನದ ನೂತನ ರಥದ (Banavasi Chariot) ಆಗಮನಕ್ಕೆ ಬನವಾಸಿ ಪಟ್ಟಣ ಶೃಂಗಾರಗೊಳ್ಳುತ್ತಿದೆ. ಮಧುಕೇಶ್ವರ ದೇವರ ಈ ಹಿಂದಿನ ರಥ 415 ವರ್ಷ ಹಳೆಯದಾಗಿದ್ದು, ಶಿಥಿಲಾವಸ್ಥೆಗೆ ತಲುಪಿದ್ದರಿಂದ ನೂತನ ರಥ ನಿರ್ಮಾಣಕ್ಕೆ ಕಳೆದ ವರ್ಷ ತೀರ್ಮಾನಿಸಲಾಗಿತ್ತು. ಅದರಂತೆ ಶ್ರೀ ಮಧುಕೇಶ್ವರ ನೂತನ ಮಹಾರಥ ನಿರ್ಮಾಣವಾಗಿದ್ದು‌ ಫೆ.೨೫ಕ್ಕೆ ಬನವಾಸಿ ತಲುಪಲಿದೆ.

1608ರಲ್ಲಿ ಐತಿಹಾಸಿಕ ಬನವಾಸಿ‌ ಮಧುಕೇಶ್ವರ ದೇವಸ್ಥಾನಕ್ಕೆ ಸೋಂದಾ ರಾಮಚಂದ್ರ ನಾಯಕ ಅವರು ʼಮಹಾಸ್ಯಂದನʼ ರಥವನ್ನು ಸಿದ್ಧಪಡಿಸಿ ನೀಡಿದ್ದರು. 415 ವರ್ಷಗಳಷ್ಟು ಹಳೆಯದಾದ ರಥದಲ್ಲಿಯೇ ಪ್ರತಿ ವರ್ಷ ತೇರು ಉತ್ಸವ ನಡೆಸುತ್ತಾ ಬರಲಾಗಿತ್ತು. ಈ ರಥ ನೂರಾರು ವರ್ಷಗಳ ಹಳೆಯದಾಗಿದ್ದರಿಂದ ಇದರ ಬದಲಿಗೆ ನವ ರಥ ನಿರ್ಮಾಣ ಮಾಡಲಾಗಿದೆ.

ಇದನ್ನೂ ಓದಿ | Karwar News: ನರೇಗಾ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಫೆ. 28ರೊಳಗೆ ಪೂರ್ಣಗೊಳಿಸಲು ತಾಪಂ ಆಡಳಿತಾಧಿಕಾರಿ ಸೂಚನೆ

ಉಡುಪಿ ಜಿಲ್ಲೆಯ ಕೋಟೇಶ್ವರದ ರಾಷ್ಟ್ರ ಪ್ರಶಸ್ತಿ ವಿಜೇತ ರಥ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಹಾಗೂ ಅವರ ಮಗ ರಾಜಗೋಪಾಲ ಆಚಾರ್ಯ ಅವರ ಒಂದು ವರ್ಷದ ಕಠಿಣ ಪರಿಶ್ರಮದಿಂದ ನೂತನ ರಥ ನಿರ್ಮಾಣಗೊಂಡು ಕದಂಬ ರಾಜಧಾನಿ ಬನವಾಸಿಗೆ ಬರಲು ಸಜ್ಜಾಗಿದೆ.

ಫೆ.23ರಂದು ರಥ ನಿರ್ಮಾಣ ಸ್ಥಳ ಧಾರ್ಮಿಕ ಪೂಜಾ ವಿಧಿ ವಿಧಾನ ನಡೆದ ನಂತರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಹಾಗೂ ನೂತನ ರಥ ನಿರ್ಮಾಣ ಸಮಿತಿ ರಥವನ್ನು ತರಲು ತಯಾರಿ ಮಾಡಿಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಕುಂಭಾಶಿಯಿಂದ ಹೊರಟು ಕುಂದಾಪುರ, ಶಿರಾಲಿ, ಭಟ್ಕಳ, ಹೊನ್ನಾವರ, ಕರ್ಕಿ, ಕುಮಟಾ, ಅಂಕೋಲ, ಬಾಳೆಗುಳಿ, ಅರೇಬೈಲ್, ಯಲ್ಲಾಪುರ, ಶಿರಸಿ ಮಾರ್ಗವಾಗಿ ಬನವಾಸಿಗೆ ತಲುಪಲಿದೆ. ಫೆ.25ರಂದು ರಥದ ಭವ್ಯ ಮೆರವಣಿಗೆ ಅದ್ಧೂರಿಯಾಗಿ ನಡೆಯಲಿದೆ.

ʼಮಹಾಸ್ಯಂದನʼ ನೂತನ ರಥದ ಪುರಪ್ರವೇಶ ಹಾಗೂ ಭವ್ಯ ಮೆರವಣಿಗೆಗೆ ಪಟ್ಟಣ ಸರ್ವಸನ್ನದ್ಧಗೊಂಡಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. 415 ವರ್ಷಗಳ ಹಿಂದೆ ರಾಜ ಮಹಾರಾಜರು ರಥ ನಿರ್ಮಾಣ ಮಾಡಿದ್ದರು. ಈಗ ಪ್ರಜೆಗಳೇ ಮಹಾ ರಥ ನಿರ್ಮಾಣ ಮಾಡಿ ಇತಿಹಾಸ ಮರುಕಳಿಸುವಂತೆ ಮಾಡಲು ಕಾತರದಿಂದ ಕಾಯುತ್ತಿದ್ದಾರೆ.

ರಥ ನಿರ್ಮಾಣದ ಅಗತ್ಯ ನಾಟಾಗಳನ್ನು‌ ಸ್ಥಳೀಯರು ತಮ್ಮ ಹೊಲ, ಭೂಮಿಯಲ್ಲಿ ಬೆಳೆದದ್ದನ್ನೇ ನೀಡಿದ್ದು, ಕರಿಮತ್ತಿ, ರಂಜ, ಸಾಗುವಾನಿ, ಹೊನ್ನೆ, ಹೆಬ್ಬಲಸು, ಮಾವು ಮುಂತಾದ ಜಾತಿಯ ಮರಗಳನ್ನು ಭಕ್ತರು ಒದಗಿಸಿದ್ದರು. ರಥದ ಮೂರ್ತಿಗಳು ಮತ್ತು ಮಧ್ಯ ಭಾಗದ ಕೆತ್ತನೆಗಳಿಗಾಗಿ ಸಾಗುವಾನಿ ಹಾಗೂ ದೇವರನ್ನು ಕೂರಿಸುವ ಪೀಠ ನಿರ್ಮಾಣಕ್ಕೆ ಹಲಸಿನ ಮರ ಬಳಕೆ ಮಾಡಲಾಗಿದೆ‌. ಹಳೆಯ ರಥದಂತೆ ನೂತನ ರಥವೂ ಅದ್ಭುತವಾಗಿ ಮೂಡಿಬಂದಿದೆ.

ʼಮಹಾಸ್ಯಂದನʼ ನೂತನ ರಥಕ್ಕೆ 3 ಕೋಟಿ ರೂಪಾಯಿ ವೆಚ್ಚ

ಅಂದಹಾಗೆ, ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆಂದು ನಿರ್ಮಾಣವಾಗುತ್ತಿರುವ ನೂತನ ರಥ ನಿರ್ಮಾಣಕ್ಕೆ 3 ಕೋಟಿ ರೂ. ವೆಚ್ಚವಾಗಿದೆ. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಮುತುವರ್ಜಿ ವಹಿಸಿ ರಥ ನಿರ್ಮಾಣಕ್ಕೆ ಹಣ ಮಂಜೂರು ಮಾಡಲು ಅವಕಾಶ ಇಲ್ಲದಿದ್ದರೂ, ಮುಖ್ಯಮಂತ್ರಿಗಳ ಮಟ್ಟದಲ್ಲಿ ಪ್ರಯತ್ನಿಸಿ ಸರ್ಕಾರದಿಂದ 3 ಕೋಟಿ ರೂ. ಮಂಜೂರು ಮಾಡಿಸಿದ್ದಾರೆ. ಇದರ ಜತೆಗೆ ಸಾರ್ವಜನಿಕರೂ ಉದಾರವಾಗಿ ನೀಡಿದ ಹಣ 95 ಲಕ್ಷ ರೂ.ನಷ್ಟು ಸಂಗ್ರಹವಾಗಿತ್ತು. ಈ ಎಲ್ಲಾ ಹಣವನ್ನು ಬಳಕೆ ಮಾಡಿಕೊಂಡು ಇದೇ ಫೆ. ೨೭ರ ಕದಂಭೋತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ ಉದ್ಘಾಟನೆ ಮಾಡಿಸಲು ಭಕ್ತರು ಹಾಗೂ ದೇವಳದ ರಥ‌ ನಿರ್ಮಾಣ ಸಮಿತಿಯವರು ನಿರ್ಧರಿಸಿದ್ದಾರೆ.

ಇದನ್ನೂ ಓದಿ | Shivamogga Airport: ವಿಮಾನ ನಿಲ್ದಾಣ ಉದ್ಘಾಟನೆ; ಫೆ. 25ರಂದು ಮುಗಿಲೆತ್ತರಕ್ಕೆ ಮಲೆನಾಡು ಕಾರ್ಯಕ್ರಮ ಆಯೋಜನೆ

ಇದರ ಜತೆ 415 ವರ್ಷಗಳ ಹಿಂದಿನ ರಥವನ್ನೂ ಸ್ವಚ್ಛಗೊಳಿಸುವ ಕೆಲಸವೂ ನಡೆಯುತ್ತಿದ್ದು, ನವರಥ ನಿರ್ಮಾಣವಾದ ನಂತರ ಹಳೇಯ ರಥವನ್ನು ಪ್ರವಾಸಿಗರ ಆಕರ್ಷಣೆಯಾಗಿ ಇಡುವ ಯೋಚನೆ ಆಡಳಿತ ಮಂಡಳಿಯದ್ದಾಗಿದೆ.

ಒಟ್ಟಿನಲ್ಲಿ ಬನವಾಸಿ ಮಧುಕೇಶ್ವರ ದೇವಾಲಯದಲ್ಲಿ ಶ್ರೀ ಮಧುಕೇಶ್ವರನಿಗಾಗಿ ನೂತನ ರಥ ನಿರ್ಮಾಣಗೊಂಡಿದ್ದು, ಅದರ ಆಗಮನಕ್ಕೆ ಜ‌ನರು ಸಾಕಷ್ಟು ಸಂತೋಷದಲ್ಲಿದ್ದಾರೆ. ಅಲ್ಲದೇ, ಇತಿಹಾಸ ಪ್ರಸಿದ್ಧ ರಥವೂ ಇನ್ನು ಮುಂದೆ ಪ್ರಮುಖ ಆಕರ್ಷಣಾ ಕೇಂದ್ರವಾಗಿ ಸಂರಕ್ಷಿಸಲ್ಪಡಲಿರುವುದರಿಂದ ರಾಜರ ಕಾಲದ ಗತ ವೈಭವಗಳ ಕಥೆಯನ್ನು ಈ ರಥ ಸಾರಲಿದೆ.

Exit mobile version