Site icon Vistara News

Puri Jagannath Yatra: ಜುಲೈ 7ರಂದು ಪುರಿ ಜಗನ್ನಾಥ ರಥಯಾತ್ರೆ; ಇದಕ್ಕಿದೆ ಪೌರಾಣಿಕ ಹಿನ್ನೆಲೆ

Puri Jagannath Yatra

ಒಡಿಶಾದ (odisha) ಪುರಿಯ ಜಗನ್ನಾಥ ರಥಯಾತ್ರೆಯು (Puri Jagannath Yatra) ಭಾರೀ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಒಂಬತ್ತು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮಕ್ಕೆ ಜಗತ್ತಿನಾದ್ಯಂತ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಬಾರಿ ಜುಲೈ 7ರಂದು ಜಗನ್ನಾಥ ಯಾತ್ರೆ ನಡೆಯಲಿದೆ.

ಈ ರಥಯಾತ್ರೆಯು ಜಗನ್ನಾಥ ದೇವಾಲಯದಿಂದ ದೇವರ ಜನ್ಮಸ್ಥಳವೆಂದು ನಂಬಲಾದ ಗುಂಡಿಚಾ ದೇವಾಲಯಕ್ಕೆ ಭಗವಾನ್ ಜಗನ್ನಾಥ, ಭಗವಾನ್ ಬಲಭದ್ರ ಮತ್ತು ಸುಭದ್ರಾ ದೇವಿಯನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಿ ಗೌರವಿಸಲಾಗುತ್ತದೆ. ಮೂರು ದೇವತೆಗಳನ್ನು ಪ್ರತಿ ವರ್ಷ ಹೊಸದಾಗಿ ನಿರ್ಮಿಸಲಾದ ಮೂರು ಬೃಹತ್ ಮತ್ತು ಅಲಂಕಾರಿಕ ರಥಗಳಲ್ಲಿ ಕೊಂಡೊಯ್ಯಲಾಗುತ್ತದೆ ಜಗನ್ನಾಥನ ರಥವನ್ನು ನಂದಿಘೋಷ, ಬಲಭದ್ರನ ರಥವನ್ನು ತಾಳಧ್ವಜ ಮತ್ತು ಸುಭದ್ರೆಯ ರಥವನ್ನು ದರ್ಪದಲನ ಎಂದು ಕರೆಯುತ್ತಾರೆ.


ಜಗನ್ನಾಥ ರಥ ಯಾತ್ರೆ ಯಾವಾಗ?

ಜೂನ್ ಅಥವಾ ಜುಲೈನಲ್ಲಿ ಬರುವ ಆಷಾಢ ಮಾಸದಲ್ಲಿ ಶುಕ್ಲ ಪಕ್ಷದ ಎರಡನೇ ದಿನದಂದು ಜಗನ್ನಾಥನ ರಥಯಾತ್ರೆ ನಡೆಯುತ್ತದೆ. ಈ ವರ್ಷ ಜುಲೈ 7ರಂದು ಭಗವಾನ್ ಜಗನ್ನಾಥನ ರಥಯಾತ್ರೆಯನ್ನು ಆಚರಿಸಲಾಗುತ್ತದೆ. ದ್ವಿತೀಯ ತಿಥಿಯು ಜುಲೈ 7 ರಂದು ಬೆಳಗ್ಗೆ 4.26ಕ್ಕೆ ಪ್ರಾರಂಭವಾಗಿ ಜುಲೈ 8ರಂದು ಬೆಳಗ್ಗೆ 4.59ಕ್ಕೆ ಕೊನೆಗೊಳ್ಳುತ್ತದೆ. ಜುಲೈ 16ರಂದು ನಡೆಯುವ ಬಹುದಾ ಯಾತ್ರೆಯೊಂದಿಗೆ ಉತ್ಸವವು ಮುಕ್ತಾಯಗೊಳ್ಳುತ್ತದೆ.

ಜಗನ್ನಾಥ ರಥ ಯಾತ್ರೆಯ ಇತಿಹಾಸ

ಜಗನ್ನಾಥ ರಥ ಯಾತ್ರೆಯ ಕುರಿತು ಹಲವಾರು ದಂತಕಥೆಗಳಿವೆ. ಒಂದು ಕಥೆಯ ಪ್ರಕಾರ ಭಗವಾನ್ ಜಗನ್ನಾಥ ಅವನ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರೆ ವರ್ಷಕ್ಕೊಮ್ಮೆ ಗುಂಡಿಚಾ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ರಾಜ ಇಂದ್ರದ್ಯುಮ್ನ ಜಗನ್ನಾಥ ದೇವಾಲಯವನ್ನು ಸ್ಥಾಪಿಸಿದರು.

ಪುರಾಣಗಳ ಪ್ರಕಾರ ಭಗವಾನ್ ವಿಶ್ವಕರ್ಮನು ಗುಂಡಿಚಾ ದೇವಸ್ಥಾನದಲ್ಲಿ ಭಗವಾನ್ ಜಗನ್ನಾಥ, ಭಗವಾನ್ ಬಲಭದ್ರ ಮತ್ತು ಸುಭದ್ರಾ ದೇವಿಯ ಪ್ರಸ್ತುತ ಪ್ರತಿಮೆಗಳನ್ನು ಮರದ ದಿಮ್ಮಿಯಿಂದ ರಚಿಸಿದನು. ಅವನು ವಿಗ್ರಹಗಳನ್ನು ರಚಿಸುವಾಗ ರಾಣಿ ಗುಂಡಿಚಾ ದೇವಾಲಯದ ಬಾಗಿಲನ್ನು ತೆರೆದಳು ಮತ್ತು ಅನಂತರ ಭಗವಾನ್ ವಿಶ್ವಕರ್ಮನು ಕಣ್ಮರೆಯಾಯಿತು. ದೇವತೆಗಳ ಮೂರ್ತಿ ಅಪೂರ್ಣವಾಯಿತು ಎಂದು ಹೇಳಲಾಗುತ್ತದೆ.

ಅಂದಿನಿಂದ ರಾಣಿ ಗುಂಡಿಚಾಗೆ ನೀಡಿದ ಭರವಸೆಯನ್ನು ಪೂರೈಸಲು ದೇವರುಗಳು ವರ್ಷಕ್ಕೊಮ್ಮೆ ಮಾತ್ರ ತಮ್ಮ ದೇವಾಲಯದಿಂದ ಹೊರಬರುತ್ತಾರೆ ಎನ್ನಲಾಗುತ್ತದೆ. ರಾಣಿಯ ಹೆಸರಿನ ಗುಂಡಿಚಾ ದೇವಾಲಯವು ಮುಖ್ಯ ದೇವಾಲಯದಿಂದ ಮೂರು ಕಿಲೋಮೀಟರ್ ದೂರದಲ್ಲಿದೆ. ಒಂಬತ್ತನೇ ದಿನದಂದು ಬಹುದಾ ಯಾತ್ರೆ ಎಂದು ಕರೆಯಲ್ಪಡುವ ಮುಖ್ಯ ದೇವಾಲಯಕ್ಕೆ ಹಿಂದಿರುಗುವ ಮೊದಲು ದೇವತೆಗಳು ಎಂಟು ದಿನಗಳವರೆಗೆ ಅಲ್ಲಿ ನೆಲೆಸುತ್ತಾರೆ. ದೇವತೆಗಳು ದೇವಾಲಯವನ್ನು ಪ್ರವೇಶಿಸುವ ದಿನವನ್ನು ನೀಲಾದ್ರಿ ಬಿಜೆ ಎಂದು ಕರೆಯಲಾಗುತ್ತದೆ. ಇದರೊಂದಿಗೆ ಹಬ್ಬ ಮುಕ್ತಾಯವಾಗುತ್ತದೆ.

ಇದನ್ನೂ ಓದಿ: Koppala News: ಅಂಜನಾದ್ರಿ ದೇಗುಲ ಹುಂಡಿಯಲ್ಲಿ 32.95 ಲಕ್ಷ ರೂ; ವಿವಿಧ ದೇಶಗಳ ನೋಟುಗಳು


ಜಗನ್ನಾಥ ರಥಯಾತ್ರೆಯ ಮಹತ್ವ

ಈ ಹಬ್ಬವು ಭಗವಾನ್ ಜಗನ್ನಾಥ ಅವನ ಸಹೋದರ ಬಲಭದ್ರ ಮತ್ತು ಅವರ ಸಹೋದರಿ ಸುಭದ್ರೆಯ ಗುಂಡಿಚಾ ದೇವಸ್ಥಾನಕ್ಕೆ ಹೋಗುವುದನ್ನು ಸೂಚಿಸುತ್ತದೆ. ಭವ್ಯವಾದ ರಥವನ್ನು ಎಳೆಯಲು ಸಾವಿರಾರು ಭಕ್ತರು ಸೇರುತ್ತಾರೆ. ಉತ್ಸವದಲ್ಲಿ ಭಾಗವಹಿಸಿ ರಥಗಳನ್ನು ಎಳೆಯುವುದರಿಂದ ಪುಣ್ಯ ಲಭಿಸುತ್ತದೆ ಮತ್ತು ಆತ್ಮ ಶುದ್ಧಿಯಾಗುತ್ತದೆ ಎಂದು ನಂಬಲಾಗಿದೆ. ಈ ಯಾತ್ರೆಯು ಕೆಡುಕಿನ ಮೇಲೆ ಒಳಿತಿನ ವಿಜಯವನ್ನು ಸೂಚಿಸುತ್ತದೆ. ಇದು ಕೇವಲ ಹಬ್ಬವಾಗದೆ ಸಂಸ್ಕೃತಿ, ಏಕತೆ, ಸಮಾನತೆ ಮತ್ತು ಆಧ್ಯಾತ್ಮಿಕತೆಯ ಆಚರಣೆಯಾಗಿದೆ.

Exit mobile version