Site icon Vistara News

Rayara Aradhane 2024 : ಏಕಾಏಕಿ ಸುರಿದ ಮಳೆ; ಭಕ್ತರಿಗೆ ಮಠದ ಪ್ರಾಕಾರದಲ್ಲಿ ಮಲಗಲು ವ್ಯವಸ್ಥೆ ಮಾಡಿಕೊಟ್ಟ ಮಂತ್ರಾಲಯ ಶ್ರೀಗಳು

Rayara Aradhane 2024

ಮಂತ್ರಾಲಯ : ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಸೋಮವಾರ ರಾತ್ರಿ ಏಕಾಏಕಿ ಭರ್ಜರಿ ಮಳೆಯಾಗಿದೆ. ಅಂತೆಯೇ ಪುಣ್ಯ ಕ್ಷೇತ್ರವಾದ ಮಂತ್ರಾಲಯದಲ್ಲೂ ಏಕಾಏಕಿ ಭಾರೀ ಪ್ರಮಾಣದಲ್ಲಿ ಮಳೆ ಬಂದಿದೆ. ಇದರಿಂದಾಗಿ ರಾಯರ ಆರಾಧನೆಗೆ (Rayara Aradhane 2024) ಬಂದಿದ್ದ ಭಕ್ತರಿಗೆ ಸಮಸ್ಯೆ ಉಂಟಾಗಿದೆ. ಅವರೆಲ್ಲರಿಗೂ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರು ಮಠದ ಪ್ರಾಕಾರದಲ್ಲಿ ಮಲಗಲು ಅವಕಾಶ ಮಾಡಿಕೊಟ್ಟು ಭಕ್ತರ ಪಾಲಿಗೆ ಆಪದ್ಬಾಂಧವರೆನಿಸಿಕೊಂಡಿದ್ದಾರೆ.

ಆಗಸ್ಟ್‌ 20ರಿಂದ ಮಂತ್ರಾಲಯದಲ್ಲಿ 353ನೇ ಗುರುರಾಯರ ಆರಾಧಾನ ಮಹೋತ್ಸವ ಆಯೋಜನೆಗೊಂಡಿದೆ. ಇಂದು ಪೂರ್ವಾರಾಧನೆ ನಡೆಯಲಿದೆ. ಹೀಗಾಗಿ ದೊಡ್ಡ ಪ್ರಮಾಣದ ಭಕ್ತರು ಮಂತ್ರಾಲಯಕ್ಕೆ ಸೋಮವಾರ ರಾತ್ರಿಯೇ ಆಗಮಿಸಿದ್ದರು. ಅವರಲ್ಲಿ ಕೊಠಡಿ ಪಡೆಯದವರು ಮಠದ ಕಾರಿಡಾರ್‌ನಲ್ಲಿಯೇ ಮಲಗಿ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ರಾತ್ರಿ ವೇಳೆ ಏಕಾಏಕಿ ಮಳೆ ಸುರಿದಿದೆ.

ಮಳೆ ಸುರಿಯುತ್ತಿರುವ ಮತ್ತು ಭಕ್ತರು ಸಂಕಷ್ಟದಲ್ಲಿರುವ ವಿಷಯ ತಿಳಿಸದ ಸುಬುಧೇಂದ್ರ ಶ್ರೀಗಳು ತಕ್ಷಣ ಅಲ್ಲಿಗೆ ಬಂದಿದ್ದು ಮಳೆಯಲ್ಲಿ ನೆನೆಯುತ್ತಿದ್ದ ಭಕ್ತರಿಗೆ ಮಠದ ಪ್ರಾಕಾರ ಹಾಗೂ ಪ್ರವಚನ ಮಂಟಪದಲ್ಲಿ ಉಳಿದುಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ತಮ್ಮ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿದ ಶ್ರೀಗಳಿಗೆ ಭಕ್ತರು ಅಪಾರ ಗೌರವ ಸಲ್ಲಿಸಿದ್ದಾರೆ.

ಗುರುಗಳ ಜೀವನ ಹೇಗಿತ್ತು, ಸಂದೇಶ ಏನಾಗಿತ್ತು?

ಮಂತ್ರಾಲಯ ಗುರು (Mantralaya guru) ರಾಘವೇಂದ್ರ ಸ್ವಾಮಿಗಳ (Rayara Aradhane 2024) 353ನೇ ಆರಾಧನಾ ಮಹೋತ್ಸವ (Raghavendra Aradhana Mahotsava) ಮಂಗಳವಾರದಿಂದ ಮೂರು ದಿನಗಳ ಕಾಲ ನಡೆಯಲಿದೆ. ಗುರುಗಳು ಬೃಂದಾವನ ಪ್ರವೇಶಿಸಿದ ಈ ದಿನವನ್ನು ದೇಶ, ವಿದೇಶಗಳಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆಗಸ್ಟ್ 20ರಂದು ಪೂರ್ವಾರಾಧನೆ, 21ರಂದು ಮಧ್ಯ ಆರಾಧನೆ ಮತ್ತು 22ರಂದು ಉತ್ತರಾರಾಧನೆ ನಡೆಯಲಿದೆ.

16ನೇ ಶತಮಾನದ ಸಂತರು ಮತ್ತು ಗುರುಗಳಾದ ಶ್ರೀ ರಾಘವೇಂದ್ರ ಸ್ವಾಮಿಗಳು ವೈಷ್ಣವ ಧರ್ಮವನ್ನು ಪ್ರತಿಪಾದಿಸಿದ್ದು, ಮಧ್ವಾಚಾರ್ಯರ ದ್ವೈತ ತತ್ತ್ವವನ್ನು ಜನಪ್ರಿಯಗೊಳಿಸಿದರು. ಗುರುಗಳು ಬೃಂದಾವನ ಪ್ರವೇಶಿಸಿರುವ ಕ್ಷೇತ್ರವಾಗಿರುವ ಮಂತ್ರಾಲಯದಲ್ಲಿ ಗುರುಗಳ ಆರಾಧನೆ ಆಗಸ್ಟ್ 21ರಂದು ನಡೆಯಲಿದೆ.
ಗುರುಗಳ ಆರಾಧನೆ ಎಂದರೇನು?

ರಾಘವೇಂದ್ರ ಸ್ವಾಮಿ ಆರಾಧನೆ ಎಂದರೆ ರಾಯರು ಜೀವಂತವಾಗಿ ಬೃಂದಾವನವನ್ನು ಪ್ರವೇಶಿಸಿರುವ ದಿನ. ದೇಶ ವಿದೇಶಗಳಲ್ಲಿ ಆಚರಿಸಲ್ಪಡುವ ಗುರುಗಳ ಆರಾಧನೆಯು ಹೆಚ್ಚಿನ ಮಠಗಳು ಮತ್ತು ಸಂಸ್ಥೆಗಳಲ್ಲಿ ಪೂರ್ವಾರಾಧನೆಯಿಂದ ಪ್ರಾರಂಭವಾಗುತ್ತದೆ. ಇದನ್ನು ವಾರ್ಷಿಕವಾಗಿ ಶ್ರಾವಣ ಕೃಷ್ಣ ಪಕ್ಷ ದ್ವಿತೀಯ ಅಥವಾ ಕರ್ನಾಟಕದಲ್ಲಿ ಅನುಸರಿಸುವ ಸಾಂಪ್ರದಾಯಿಕ ಹಿಂದೂ ಚಂದ್ರನ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸದಲ್ಲಿ ಚಂದ್ರನ ಕ್ಷೀಣಿಸುತ್ತಿರುವ ಎರಡನೇ ದಿನದಂದು ಆಚರಿಸಲಾಗುತ್ತದೆ.

ರಾಘವೇಂದ್ರ ಸ್ವಾಮಿಯು ವಿಷ್ಣುವಿನ ಶ್ರೇಷ್ಠ ಭಕ್ತರಾಗಿದ್ದರು. 1621 ರಿಂದ 1671ರವರೆಗೆ ಅವರು ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದ ಶ್ರೀ ಮಠದ ಮುಖ್ಯಸ್ಥರಾಗಿದ್ದರು. ತಮ್ಮ ಜೀವನದಲ್ಲಿ ಹಲವಾರು ಪವಾಡಗಳನ್ನು ನಡೆಸಿರುವ ಅವರು ಮಧ್ವಾಚಾರ್ಯರ ಬೋಧನೆಗಳ ಮೇಲೆ ಹಲವಾರು ಭಜನೆ ಮತ್ತು ವ್ಯಾಖ್ಯಾನಗಳನ್ನು ರಚಿಸಿದ್ದಾರೆ. ಗುರು ಶ್ರೀ ರಾಘವೇಂದ್ರ ಸ್ವಾಮಿಗಳು 1671 ರಲ್ಲಿ ಸಮಾಧಿಯನ್ನು ಪ್ರವೇಶಿಸದರು. ಆವರ ಸಮಾಧಿ ಸ್ಥಳವನ್ನು ಬೃಂದಾವನ ಎಂದು ಕರೆಯಲಾಗುತ್ತದೆ. ಇದು ಮಂತ್ರಾಲಯದಲ್ಲಿದೆ.
ಮಂತ್ರಾಲಯದಲ್ಲಿ ಅದ್ಧೂರಿ ಆಚರಣೆ

ಗುರುಗಳ ಆರಾಧನೆಯನ್ನು ಮಂತ್ರಾಲಯದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಮಹಾ ಆರಾಧನೆ ಎಂದೂ ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ, ಮಠದ ಸಂಕೀರ್ಣವನ್ನು ಹಾಗೂ ಮಂತ್ರಾಲಯ ಪಟ್ಟಣವನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಗುರುಗಳ ಮಹಾ ಆರಾಧನೆಯ ಅಂಗವಾಗಿ ನಡೆಯುವ ಮಹಾರಥೋತ್ಸವದಲ್ಲಿ ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ.

ಇದನ್ನೂ ಓದಿ: Raichur News : ಉಸಿರಾಡುತ್ತಿವೆ ಮುಸ್ಲಿಂ ಧರ್ಮಗುರುಗಳ ಗೋರಿಗಳು, ಪವಾಡ ಎಂದ ಭಕ್ತರು

ವಿವಿಧ ಆಚರಣೆಗಳು

ಕಲಿಯುಗದ ಕಾಮಧೇನು ಎಂದೇ ಜಗತ್ಪ್ರಸಿದ್ಧಿ ಪಡೆದ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಮಂತ್ರಾಲಯದಲ್ಲಿ ಭಾನುವಾರವೇ ಆರಂಭಗೊಂಡಿದ್ದು, ಆಗಸ್ಟ್ 24ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ರಾಯರ ಉತ್ಸವ ಮೂರ್ತಿಯ ಬಲಿ, ರಥೋತ್ಸವ, ಗೋ ಪೂಜೆ, ಗಜಪೂಜೆ ಮತ್ತಿತರ ಪೂಜೆಗಳು ನಡೆಯುತ್ತವೆ. ಇದಕ್ಕೂ ಮೊದಲು ಧ್ವಜಾರೋಹಣ ನಡೆಸಿ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ.

ಪೂರ್ವ ಆರಾಧನಾ ದಿನದಂದು ಸಿಂಹ ವಾಹನ ಸವಾರಿ, ಮಧ್ಯ ಆರಾಧನಾ ದಿನದಂದು ಮಹಾ ಪಂಚಾಮೃತ ಅಭಿಷೇಕ, ಉತ್ತರ ಆರಾಧನಾ ದಿನದಂದು ಸ್ವರ್ಣ ರಥೋತ್ಸವವನ್ನು ನಡೆಸಲಾಗುತ್ತದೆ. ಮಠವು ಪ್ರತಿ ವರ್ಷ ಸಮಾಜ ಸೇವೆ ಮಾಡಿದ ಗಣ್ಯರಿಗೆ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ. ಈ ಸಂದರ್ಭದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳನ್ನೂ ನಡೆಸಲಾಗುತ್ತದೆ.

Exit mobile version