Site icon Vistara News

ಪ್ರಯತ್ನಶೀಲರು ಸಮಾಜ ಸಂಘಟನೆಯಲ್ಲಿ ತೊಡಗಬೇಕು ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಕರೆ

ರಾಘವೇಶ್ವರ ಭಾರತೀ ಸ್ವಾಮೀಜಿ

ಕಾರವಾರ: ಸರ್ವಸಮಾಜದ ಒಳಿತಿಗಾಗಿ ಹುಟ್ಟಿಕೊಂಡ ಸಮಾಜ ಹವ್ಯಕ ಸಮುದಾಯವಾಗಿದ್ದು, ಎಲ್ಲ ಸಮುದಾಯಗಳ ಜತೆ ಹೊಂದಿಕೊಂಡು, ಬೆಳೆದುಬಂದಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಗೋಕರ್ಣದ ಅಶೋಕೆಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಅವರು, ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ಗುರುಭಿಕ್ಷಾ ಸೇವೆ ಸ್ವೀಕರಿಸಿ ಮಾತನಾಡಿದರು. ಪ್ರಯತ್ನಶೀಲರು, ಸಮಾಜದ ಹಿತಚಿಂತನೆಯ ಒತ್ತಾಸೆಯಿರುವವರು ಸಂಘಟನೆಯಲ್ಲಿ ತೊಡಗಿಕೊಂಡರೆ ಸಮಾಜಕ್ಕೆ ಒಳಿತಾಗುತ್ತದೆ. ಹವ್ಯಕ ಮಹಾಸಭೆಯ ಪದಾಧಿಕಾರಿಗಳೆಲ್ಲರೂ ಸಮಾಜಕ್ಕಾಗಿ ಬದುಕಿನ ಒಂದು ಭಾಗವನ್ನು ಮೀಸಲಿಟ್ಟು, ಸಮಾಜೋದ್ಧಾರದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಇದನ್ನೂ ಓದಿ | Rain News | ಮುಳುಗಿದ ಪಂಪ್‌ಹೌಸ್‌ನಿಂದ ಇನ್ನೂ 11 ಅಡಿ ನೀರು ಮೇಲೆತ್ತುವುದು ಬಾಕಿ: ಮಂಗಳವಾರ ಮುಕ್ತಿ ಎಂದ ಸಿಎಂ

ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಮಹಾಸಭೆಯ ಜತೆ ನಾವೆಲ್ಲ ಕೈಜೋಡಿಸಬೇಕಿದ್ದು, ಮಹಾಸಭೆಯ ಕಾರ್ಯಗಳಿಗೆ ಸಮಾಜದ ಸಹಕಾರ ಸದಾ ಇರಲಿ ಎಂದು ಹವ್ಯಕ ಸಮಾಜಕ್ಕೆ ಕರೆ ನೀಡಿದ ಅವರು, ನಿತ್ಯ ಪ್ರವಚನ ಮಾಲಿಕೆಯಲ್ಲಿ ʼಕ್ರೋಧ’ದ ವಿಚಾರವಾಗಿ ಪ್ರವಚನವನ್ನು ಅನುಗ್ರಹಿಸಿದರು. ಕ್ರೋಧದ ನಿಯಂತ್ರಣದಲ್ಲಿ ನೀವಿದ್ದಾಗ ಕ್ರೋಧ ದೋಷ. ನಿಮ್ಮ ನಿಯಂತ್ರಣದಲ್ಲಿ ಕೋಪ ಇದ್ದಾಗ ಅದು ಗುಣ. ಕೋಪ ಇರುವುದು ಆತ್ಮರಕ್ಷಣೆಗೆ; ಆದರೆ ಅದು ಇನ್ನೊಬ್ಬರಿಗೆ ಹಾನಿಯನ್ನು ಉಂಟು ಮಾಡಬಾರದು. ನಮ್ಮ ನಿಯಂತ್ರಣದಲ್ಲಿರುವ ಕೋಪ ಪ್ರತಿಯೊಬ್ಬರಿಗೂ ಬೇಕು ಎಂದು ಮಾರ್ಮಿಕವಾಗಿ ನುಡಿದರು.

ಮಹಾಸಭೆಯ ಅಧ್ಯಕ್ಷ ಡಾ.ಗಿರಿಧರ ಕಜೆ ಸ್ವಾಮೀಜಿಗೆ ಮಹಾಸಭೆಯ ಪರವಾಗಿ ಫಲಕಾಣಿಕೆ ಸಮರ್ಪಿಸಿ, ಶ್ರೀಗಳ ಮಾರ್ಗದರ್ಶನ ಕೋರಿದರು. ಕಾರ್ಯದರ್ಶಿ ಪ್ರಶಾಂತ್ ಭಟ್‌ ಮಲವಳ್ಳಿ ದಂಪತಿ ಮಹಾಸಭೆಯ ಪರವಾಗಿ ಶ್ರೀ ಗುರುಭಿಕ್ಷಾಸೇವೆ, ಶ್ರೀ ಗುರುಪಾದ ಪೂಜೆ ನೆರವೇರಿಸಿದರು. ರುದ್ರಹವನ, ರಾಮತಾರಕ ಹವನ, ಚಂಡೀಪಾರಾಯಣ, ನವಚಂಡಿ ಹವನ, ಗಣಪತಿ ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಪ್ರಧಾನ ಕಾರ್ಯದರ್ಶಿ ಸಿ.ಎ.ವೇಣುವಿಘ್ನೇಶ್ ಸಂಪ, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಯಲಹಂಕ, ನಿರ್ದೇಶಕರಾದ ಆರ್‌.ಜಿ.ಹೆಗಡೆ ಹೊಸಾಕುಳಿ, ಹಂಡ್ರಮನೆ ಗೋಪಾಲಕೃಷ್ಣ ಭಟ್‌ ಸೇರಿ ಬೆಂಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಸೇರಿ ಎಲ್ಲ ಭಾಗಗಳ ನಿರ್ದೇಶಕರು, ಸಂಚಾಲಕರು ಉಪಸ್ಥಿತರಿದ್ದರು.

ಇದನ್ನೂ ಓದಿ | ರೈತ, ದಲಿತ ಸಮುದಾಯಗಳಿಗೆ ಡಬಲ್ ಎಂಜಿನ್ ಸರ್ಕಾರದಿಂದ ಡಬಲ್ ದ್ರೋಹ: ಮಾಜಿ ಸಿಎಂ ಸಿದ್ದರಾಮಯ್ಯ

Exit mobile version