Site icon Vistara News

KFCSC Recruitment 2023 : ಆಹಾರ ನಿಗಮದಲ್ಲಿ 386 ಹುದ್ದೆ; ನೇಮಕದ ಸಂಪೂರ್ಣ ಮಾಹಿತಿ ಪ್ರಕಟ

KFCSC Recruitment 2023

#image_title

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದಲ್ಲಿನ (KFCSC Recruitment 2023) ಒಟ್ಟು 386 ಹುದ್ದೆಗಳು ಸೇರಿದಂತೆ ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ 670 ಹುದ್ದೆಗಳ ನೇಮಕ ಪ್ರಕ್ರಿಯೆ (KEA Recruitment 2023) ಆರಂಭಿಸಿದೆ. ಈ ಹಿಂದೆ ಪ್ರಕಟಿಸಿದಂತೆ ಇಂದು (ಜೂನ್‌ 23) ರಂದು ವಿವರವಾದ ಅಧಿಸೂಚನೆ ಪ್ರಕಟಿಸಿ, ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದ 386 ಹುದ್ದೆಗಳಲ್ಲದೆ, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ 26, ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ 186, ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ 72 ಹುದ್ದೆಗಳಿಗೆ ಈ ನೇಮಕ ನಡೆಯುತ್ತಿದೆ.

ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಸಲು ಜುಲೈ 22 ಕೊನೆಯ ದಿನವಾಗಿದೆ. ಅರ್ಜಿ ಶುಲ್ಕವನ್ನು ಆಫ್‌ಲೈನ್‌ನಲ್ಲಿ ಮಾತ್ರ ಪಾವತಿಸಲು (ಅಂಚೆಕಚೇರಿ ಮೂಲಕ) ಅವಕಾಶ ನೀಡಲಾಗಿದೆ. ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ ಮತ್ತು ಪ್ರತ್ಯೇಕವಾಗಿ ಅರ್ಜಿ ಶುಲ್ಕ ಪಾವತಿಸಬೇಕಿರುತ್ತದೆ.

ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 23-06-2023 ಮಧ್ಯಾಹ್ನ 2 ಗಂಟೆಯಿಂದ
ಇ-ಅಂಚೆ ಕಚೇರಿಗಳಲ್ಲಿ ಶುಲ್ಕಪಾವತಿ (ಕಚೇರಿಯ ವೇಳೆಯಲ್ಲಿ) ಬೆಳಗ್ಗೆ11ಗಂಟೆಯಿಂದ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22-07-2023 ಸಂಜೆ 5.30ರ ವರೆಗೆ
ಶುಲ್ಕ ಪಾವತಿಗೆ ಕೊನೆಯ ದಿನಾಂಕ: 25-07-2023

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ವಿಳಾಸ: https://cetonline.karnataka.gov.in/kea

ಯಾವೆಲ್ಲಾ ಹುದ್ದೆಗಳಿಗೆ ನೇಮಕ?

1. ಸಹಾಯಕ ವ್ಯವಸ್ಥಾಪಕರು -10 (ಉಳಿಕೆ ಮೂಲ ವೃಂದ-8 ಕಲ್ಯಾಣ ಕರ್ನಾಟಕ-2)
2. ಗುಣಮಟ್ಟ ನಿರೀಕ್ಷಕರು – 23 (ಉಳಿಕೆ ಮೂಲ ವೃಂದ-18 ಕಲ್ಯಾಣ ಕರ್ನಾಟಕ-1, ಬ್ಯಾಕ್‌ಲಾಗ್‌ -3)
3. ಹಿರಿಯ ಸಹಾಯಕರು (ಲೆಕ್ಕ)- 33 (ಉಳಿಕೆ ಮೂಲ ವೃಂದ-26 ಕಲ್ಯಾಣ ಕರ್ನಾಟಕ-5, ಬ್ಯಾಕ್‌ಲಾಗ್‌ -2)
4. ಹಿರಿಯ ಸಹಾಯಕರು -57 (ಉಳಿಕೆ ಮೂಲ ವೃಂದ-49 ಕಲ್ಯಾಣ ಕರ್ನಾಟಕ-08)
5. ಕಿರಿಯ ಸಹಾಯಕರು – 263 (ಉಳಿಕೆ ಮೂಲ ವೃಂದ-244 ಕಲ್ಯಾಣ ಕರ್ನಾಟಕ-19)

ಯಾವ ಹುದ್ದೆಗೆ ಏನು ವಿದ್ಯಾರ್ಹತೆ?

1. ಸಹಾಯಕ ವ್ಯವಸ್ಥಾಪಕರು
ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿಸಲ್ಪಟ್ಟ ವಿಶ್ವವಿದ್ಯಾಲಯದಿಂದ ಪದವಿ ಪರೀಕ್ಷೆಯಲ್ಲಿ ಕನಿಷ್ಟ ಶೇ.50% ಪಡೆದು ತೇರ್ಗಡೆಯಾಗಿರಬೇಕು ಹಾಗು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿಯನ್ನು ಹಣಕಾಸು ಅಥವಾ ಮಾರ್ಕೆಟಿಂಗ್ ಅಥವಾ ಮಾನವ ಸಂಪನ್ಮೂಲ ವಿಶೇಷತೆಯೊಂದಿಗೆ ಪಡೆದಿರಬೇಕು.

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here ) ಮಾಡಿ.

2. ಗುಣಮಟ್ಟ ನಿರೀಕ್ಷಕರು
ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿಸಲ್ಪಟ್ಟ ವಿಶ್ವವಿದ್ಯಾಲಯದಿಂದ ಕೃಷಿ ವಿಜ್ಞಾನ ಪದವಿಯನ್ನು ಸಹಕಾರ / ಕೃಷಿ ಮಾರುಕಟ್ಟೆ ವಿಶೇಷತೆಯೊಂದಿಗೆ ಪಡೆದಿರಬೇಕು ಅಥವಾ ತತ್ಸಮಾನ ಅರ್ಹತೆಯನ್ನು ಪಡೆದಿರಬೇಕು.

3. ಹಿರಿಯ ಸಹಾಯಕರು (ಲೆಕ್ಕ)
ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿಸಲ್ಪಟ್ಟ ವಿಶ್ವವಿದ್ಯಾಲಯದಿಂದ ವಾಣಿಜ್ಯ ಪದವಿಯನ್ನು ಪಡೆದಿರಬೇಕು ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು.

4. ಹಿರಿಯ ಸಹಾಯಕರು
ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿಸಲ್ಪಟ್ಟ ವಿಶ್ವವಿದ್ಯಾಲಯದಿಂದ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು.

5. ದ್ವಿತೀಯ ದರ್ಜೆ ಸಹಾಯಕರು
ಅಭ್ಯರ್ಥಿಯು ಪಿಯುಸಿ ಅಥವಾ ತತ್ಸಮಾನ ಅರ್ಹತೆಯನ್ನು ಪಡೆದಿರಬೇಕು.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ (Click Here ) ಮಾಡಿ.

ವಯೋಮಿತಿ ಎಷ್ಟು?

ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಸಾಮಾನ್ಯ ಅಭ್ಯರ್ಥಿಗೆ ಗರಿಷ್ಠ ವಯೋಮಿತಿ 35 ವರ್ಷ. ಪ್ರವರ್ಗ- 2ಎ, 2ಬಿ, 3ಎ,3ಬಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 38 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 40 ವರ್ಷ ನಿಗದಿಪಡಿಸಲಾಗುತ್ತದೆ.

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ಹಾಗೂ ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 1,000 ರೂ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ರ ಅಭ್ಯರ್ಥಿಗಳಿಗೆ 750 ರೂ., ಅಂಗವಿಕಲ ಅಭ್ಯರ್ಥಿಗಳು ಮತ್ತು ಮಾಜಿ ಸೈನಿಕರು 250 ರೂ. ನಿಗದಿಪಡಿಸಲಾಗುತ್ತದೆ. ಅರ್ಜಿ ಸಲ್ಲಿಸುವಾಗ ಚಲನ್‌ ಪಡೆದು ಇ-ಅಂಚೆ ಕಚೇರಿ ಮೂಲಕ ಶುಲ್ಕವನ್ನು ಪಾವತಿಸಲು ಅವಕಾಶ ನೀಡಲಾಗುತ್ತದೆ.

ಅರ್ಜಿ ಶುಲ್ಕ ಪಾವತಿಸಲು ಇಲ್ಲಿ ಕ್ಲಿಕ್‌ (Click Here ) ಮಾಡಿ.

ನೇಮಕ ಹೇಗೆ?

ಆಹಾರ ಮತ್ತು ನಾಗರೀಕ ಸರಬರಾಜು ನಿಗಮ(ನಿ)ದಲ್ಲಿನ ಹುದ್ದೆಗಳನ್ನು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಮತ್ತು ಆಯ್ಕೆ) (ಸಾಮಾನ್ಯ) ನಿಯಮಗಳು 2014ರಡಿ ನಿರ್ದಿಷ್ಟಪಡಿಸಲಾದ ಮತ್ತು ಕರ್ನಾಟಕ ನಾಗರೀಕ ಸೇವೆಗಳು (ಲಿಪಿಕ ಹುದ್ದೆಗಳ ನೇಮಕಾತಿ) ನಿಯಮಗಳು 1978ರಡಿ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಲಾಗುತ್ತದೆ.

ಇದನ್ನೂ ಓದಿ : Police recruitment : ಇನ್ನೊಂದು ವಾರದಲ್ಲಿ 3,500 ಪೊಲೀಸರ ನೇಮಕಕ್ಕೆ ಅಧಿಸೂಚನೆ; ಜಿ ಪರಮೇಶ್ವರ್​​

ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿಯನ್ನು ಮುಂದೆ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಪರೀಕ್ಷೆಯ ಪಠ್ಯಕ್ರಮವನ್ನೂ ಕೆಇಎ ವೆಬ್‌ಸೈಟ್‌ನಲ್ಲಿ ಒದಗಿಸಲಾಗುತ್ತದೆ. ಆಫ್‌ಲೈನ್‌ನಲ್ಲಿ- ಒಎಂಆರ್‌ ಮಾದರಿಯಲ್ಲಿ ಈ ಪರೀಕ್ಷೆ ನಡೆಯಲಿದೆ. ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಬೆಳಗಾವಿ, ಕಲಬುರಗಿ, ವಿಜಯಪುರ, ಶಿವಮೊಗ್ಗ ಮತ್ತು ತುಮಕೂರಿನಲ್ಲಿ ಪರೀಕ್ಷಾ ಕೇಂದ್ರಗಳಿರಲಿವೆ.

Exit mobile version