Site icon Vistara News

ಸಾವಿರ ವರ್ಷಗಳ ಹಳೇ ದೇಗುಲ ಕಾಣೆ; ಕುಣಿಗಲ್‌ನಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳ ಹುಡುಕಾಟ!

ದೇಗುಲ ನಾಪತ್ತೆ

ತುಮಕೂರು: ಚೋಳರ ಕಾಲದ ದೇಗುಲ ಕಾಣೆ ಆಗಿದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರು ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆಯ ಅಧಿಕಾರಿಗಳು ಕುಣಿಗಲ್‌ನ ವಿವಿಧ ಭಾಗಗಳಿಗೆ ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಮಿಳುನಾಡಿನ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎ.ಟಿ.ಪೊನ್ ಮಾಣಿಕ್ಯವೇಲ್ ಎಂಬುವವರು ಕುಣಿಗಲ್‌ನ ಕೊತ್ತಗಿರಿ ಗ್ರಾಮದಲ್ಲಿ ರಾಜ ರಾಜ ಚೋಳ-1ನೇ ವಂಶಸ್ಥರು 949 ವರ್ಷಗಳ ಹಿಂದೆ ನಿರ್ಮಿಸಿದ್ದ ದೇವಸ್ಥಾನದ ಕುರುಹುಗಳು ಹಾಗೂ ದೇಗುಲದಲ್ಲಿದ್ದ ವಿಗ್ರಹವೂ ನಾಪತ್ತೆಯಾಗಿದೆ ಎಂದು ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದಿದ್ದರಿಂದ, ಕರ್ನಾಟಕ ರಾಜ್ಯ ಪುರಾತತ್ವ ಇಲಾಖೆ ನಿರ್ದೇಶಕ ಡಾ.ಆರ್‌.ಗೋಪಾಲ್‌, ಡಾ.ಎಚ್‌.ಎಸ್‌.ಗೋಪಾಲರಾವ್ ಅವರು, ಕೊತ್ತಗೆರೆ ಗ್ರಾಮದ ಹಳ್ಳಿಮರ, ಗಂಗೇನಹಳ್ಳಿ, ದೊಡ್ಡಕೆರೆ ಸೋಮೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚೋಳರಿಂದ ಸ್ಥಾಪಿತವಾಗಿತ್ತು ಪಟ್ಟಣ : ನಿವೃತ್ತ ಐಜಿಪಿ ಎ.ಜಿ.ಪೊನ್ ಮಾಣಿಕ್ಯವೇಲ್, ತಮಿಳುನಾಡು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ರಾಜರಾಜ ಚೋಳ-1, ಅವರ ಮೊಮ್ಮಗ ಹಾಗೂ ರಾಜೇಂದ್ರ ಚೋಳ-1 ಅವರ ಪುತ್ರ ಉದಯ‌ ರಾಜಾಧಿ ರಾಜ ದೇವರು, ಕುಣಿಗಲ್‌ನಲ್ಲಿ ರಾಜೇಂದ್ರ ಚೋಳಪುರಂ ಎಂಬ ಪಟ್ಟಣವನ್ನು ಸ್ಥಾಪಿಸಿದ್ದರು. 949 ವರ್ಷಗಳ ಹಿಂದೆ ಕುಣಿಗಲ್‌ನಿಂದ 5 ಕಿ.ಮೀ ದೂರದಲ್ಲಿರುವ ಕೊತ್ತಗಿರಿ ಗ್ರಾಮದಲ್ಲಿ ತಮ್ಮ ನೆನಪಿಗಾಗಿ ರಾಜೇಂದ್ರ ಚೋಳೀಶ್ವರಂ ಎಂಬ ದೇವಾಲಯ ನಿರ್ಮಿಸಿದ್ದರು ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ | ಗಾಣಗಾಪುರ ದೇವಾಲಯದಲ್ಲಿ ನಕಲಿ ವೆಬ್‌ಸೈಟ್‌ ರಚಿಸಿ ವಂಚನೆ ಮಾಡಿದ್ದ ಅರ್ಚಕರಿಗೆ ನಿರೀಕ್ಷಣಾ ಜಾಮೀನು

ಹಿಂದು ಧಾರ್ಮಿಕ ಹಾಗೂ ದತ್ತಿ ಇಲಾಖೆಗೆ ದೂರು: ದೇವಾಲಯಕ್ಕೆ ಅಪರೂಪದ ಕಂಚಿನ ನಟರಾಜ ವಿಗ್ರಹವನ್ನು (ಈ ವಿಗ್ರಹವನ್ನು ರಾಜಾಧಿರಾಜ ವಿಂಧಗ‌ರ್ ಎಂದು ಕರೆಯುತ್ತಾರೆ) ದಾನ ಮಾಡಲಾಗಿದೆ ಎನ್ನಲಾಗಿದ್ದು, ಇದು ಅಪರೂಪದ ಕಲ್ಲಿನ ವಿಗ್ರಹವಾಗಿದೆ‌. ಅಲ್ಲದೆ, ಈ ಬಗ್ಗೆ ತಮಿಳುನಾಡಿನ ಹಿಂದು ಧಾರ್ಮಿಕ ಹಾಗೂ ದತ್ತಿ ಇಲಾಖೆಗೆ ಮಾಣಿಕ್ಕವೆಲ್ ದೂರು ನೀಡಿ ಗಮನ ಸೆಳೆದಿದ್ದಾರೆ..

ದೇವಾಲಯ ಕಂಡುಬಂದಿಲ್ಲ
ಕೊತ್ತಗೆರೆ ಗ್ರಾಮದಲ್ಲಿ ತಮಿಳು ಶಾಸನ ಇದೆ. ಆದರೆ, ಚೋಳರ ಕಾಲದ ದೇವಾಲಯಗಳು ಕಂಡುಬಂದಿಲ್ಲ. ಗಂಗೇನಹಳ್ಳಿಯಲ್ಲಿ ಮಾಣಿಕ್ಯವೇಲ್‌ ಉಲ್ಲೇಖದಂತೆ ಶಿವಲಿಂಗ, ವೀರಗಲ್ಲು, ಜೈನ ತೀರ್ಥಂಕರನ ಮೂರ್ತಿ, ಕಲ್ಲಿನ ಬಸವಣ್ಣ, ಸೂರ್ಯನ ವಿಗ್ರಹಗಳು ಕಂಡುಬಂದಿವೆ ಎಂದು ಪುರಾತತ್ವ ಇಲಾಖೆ ನಿರ್ದೇಶಕ ಡಾ.ಆರ್.ಗೋಪಾಲ್‌ ತಿಳಿಸಿದ್ದಾರೆ.

ಇದನ್ನೂ ಓದಿ | ಕೇರಳದ ಈ ದೇವಾಲಯದಲ್ಲಿ ಸಂವಿಧಾನವೇ ದೇವರು!

Exit mobile version