Site icon Vistara News

ರಸ್ತೆಗಾಗಿ ರಸ್ತೆಯಲ್ಲೇ ಕತ್ತಿ, ದೊಣ್ಣೆಗಳಿಂದ ಹೊಡೆದಾಟ; 7 ಮಂದಿಗೆ ಗಾಯ

Clash between two families

#image_title

ಮಂಗಳೂರು: ರಸ್ತೆ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದು 7 ಮಂದಿ ಗಾಯಗೊಂಡಿರುವ ಘಟನೆ ಬೆಳ್ತಂಗಡಿ ತಾಲೂಕಿನ (Belthangady News) ನಡ ಗ್ರಾಮದ ದೇರ್ಲಕ್ಕಿ ಎಂಬಲ್ಲಿ ನಡೆದಿದೆ. ರಸ್ತೆ ವಿಚಾರದಲ್ಲಿ 32 ವರ್ಷದಿಂದ ಎರಡು ಕುಟುಂಬಗಳ ನಡುವೆ ತಗಾದೆ ಇತ್ತು. ಸೋಮವಾರ ಎರಡು ಕುಟುಂಬಗಳ ಮಧ್ಯೆ ಮತ್ತೊಮ್ಮೆ ಜಗಳ ನಡೆದಿದ್ದು, ಕತ್ತಿ ಹಾಗೂ ದೊಣ್ಣೆಯಿಂದ‌ ಹೊಡೆದಾಡಿಕೊಂಡಿದ್ದಾರೆ.

ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಈ ನಡುವೆ ರಸ್ತೆ ದುರಸ್ತಿಗೆ ಕುಟುಂಬವೊಂದು ಮುಂದಾಗಿದ್ದರಿಂದ ಮತ್ತೊಂದು ಕುಟುಂಬ ಅಡ್ಡಿಪಡಿಸಿದೆ. ಹೀಗಾಗಿ ಮೊದಲಿಗೆ ಮಾತಿನ ಚಕಮಕಿಯಿಂದ ಆರಂಭವಾದ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ನಂತರ ಎರಡು ಕುಟುಂಬದವರು ಕೈಗೆ ಸಿಕ್ಕ ವಸ್ತುಗಳಿಂದ ಹೊಡೆದಾಡಿದ್ದಾರೆ.

ಇದನ್ನೂ ಓದಿ | Murder Case: ಟೋಲ್‌ ವಿಚಾರಕ್ಕೆ ಕಿರಿಕ್‌; ಹಾಕಿ ಸ್ಟಿಕ್‌ನಿಂದ ಬಡಿದು ಕೊಂದೇಬಿಟ್ಟರು ದುರುಳರು

ಕತ್ತಿ, ದೊಣ್ಣೆಗಳಿಂದಲೂ ಹಲ್ಲೆ ನಡೆಸಿಕೊಂಡಿದ್ದರಿಂದ 7 ಮಂದಿ ಗಾಯಗೊಂಡಿದ್ದಾರೆ. ಹೊಡೆದಾಟದಲ್ಲಿ ಎರಡೂ ಕುಟುಂಬದವರಿಗೂ ಗಾಯಗಳಾಗಿದ್ದು, ಅವರನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಗೆ ಎರಡೂ ಕುಟುಂಬದಿಂದಲೂ ದೂರು ನೀಡಲಾಗಿದೆ.

ಕನಕಪುರದಲ್ಲಿ ಯುವಕನಿಗೆ ಚಾಕು ಇರಿತ

ರಾಮನಗರ: ಬೈಕ್‌ನಲ್ಲಿ ಕಬ್ಬು ಸಾಗಿಸುವಾಗ ಕಬ್ಬು ತಗಲಿದ್ದಕ್ಕೆ ಯುವಕನೊಬ್ಬನಿಗೆ ಚಾಕು ಇರಿದಿರುವ ಘಟನೆ ಕನಕಪುರ ತಾಲೂಕು ಕಬ್ಬಾಳಮ್ಮ ದೇವಸ್ಥಾನ ಬಳಿ ನಡೆದಿದೆ.

ಶಿವಶಂಕರ್ (22) ಗಾಯಾಳು. ವೆಂಕಟಪ್ಪನದೊಡ್ಡಿ ಗ್ರಾಮದ ಕುಮಾರ್ ಆರೋಪಿಯಾಗಿದ್ದಾನೆ. ಮುಖದ ಭಾಗಕ್ಕೆ ಚಾಕು ಇರಿದ ಪರಿಣಾಮ ಶಿವಶಂಕರ್‌ಗೆ ಗಂಭೀರ ಗಾಯಗಳಾಗಿವೆ. ಶಿವಶಂಕರ್ ಕಬ್ಬು ಸಾಗಾಣಿಕೆ ಮಾಡುವಾಗ‌ ಕುಮಾರ್‌ಗೆ ಕಬ್ಬು ತಗಲಿದೆ. ಹೀಗಾಗಿ ಮಾತಿನ ಚಕಮಕಿ ಶುರುವಾಗಿದೆ. ಈ ವೇಳೆ ಬೈಕ್‌ನಲ್ಲಿದ್ದ ಯುವಕನಿಗೆ ಆರೋಪಿ ಚಾಕು ಇರಿದಿದ್ದಾನೆ. ಸಾತನೂರು ಪೋಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version