Site icon Vistara News

Aam Aadmi Party : ಆಮ್‌ ಆದ್ಮಿ ಪಾರ್ಟಿಯ ನೂತನ ಪದಾಧಿಕಾರಿಗಳ ಘೋಷಣೆ

Aam Aadmi Party announces new office bearers

ಬೆಂಗಳೂರು: ಕರ್ನಾಟಕದ ಘಟಕವನ್ನು ವಿಸರ್ಜಿಸಿದ್ದ ಆಮ್‌ ಆದ್ಮಿ ಪಾರ್ಟಿಯು (Aam Aadmi Party) ಹೊಸ ಪದಾಧಿಕಾರಿಗಳನ್ನು ಒಳಗೊಂಡ ನೂತನ ಸಂಘಟನಾ ಘಟಕವನ್ನು ಸೋಮವಾರ ಘೋಷಿಸಿದೆ. ಆಮ್‌ ಆದ್ಮಿ ಪಾರ್ಟಿಯ ಕರ್ನಾಟಕ ಚುನಾವಣಾ ಉಸ್ತುವಾರಿ ದಿಲೀಪ್‌ ಪಾಂಡೆಯವರು, ರಾಜ್ಯದ ನೂತನ ಘಟಕ ಹಾಗೂ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳನ್ನು ಘೋಷಿಸಿದ್ದಾರೆ.

ನಗರದ ಪ್ರೆಸ್‌ ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿಲೀಪ್‌ ಪಾಂಡೆ, ಕಳೆದ ವಾರ ಕರ್ನಾಟಕದಲ್ಲಿ ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಹಾಗೂ ಜಿಲ್ಲಾ ಘಟಕಗಳನ್ನು ವಿಸರ್ಜನೆ ಮಾಡಲಾಗಿತ್ತು. ಹೀಗಾಗಿ ಪದಾಧಿಕಾರಿಗಳನ್ನು ಘೋಷಿಸಲಾಗಿದೆ. ಇದು ಪದಾಧಿಕಾರಿಗಳ ಮೊದಲ ಪಟ್ಟಿಯಾಗಿದೆ ಹಾಗೂ ಮುಂದಿನ ದಿನಗಳಲ್ಲಿ ಇನ್ನಷ್ಟು ಪಟ್ಟಿಗಳನ್ನು ನಿರೀಕ್ಷಿಸಬಹುದು ಎಂದು ಹೇಳಿದ್ದಾರೆ.

ಗ್ರಾಮ ಸಂಪರ್ಕ ಅಭಿಯಾನದಿಂದಾಗಿ (ಜಿಎಸ್‌ಎ) ಆಮ್‌ ಆದ್ಮಿ ಪಾರ್ಟಿಗೆ ಕನ್ನಡಿಗರಿಂದ ಅಭೂತಪೂರ್ವ ಬೆಂಬಲ ದೊರೆತಿದ್ದು, ರಾಜ್ಯಾದ್ಯಂತ ಸಾವಿರಾರು ಕಾರ್ಯಕರ್ತರು, ಹಿತೈಷಿಗಳು, ಬೆಂಬಲಿಗರು ಹಾಗೂ ರಾಜಕೀಯ ಹೋರಾಟಗಾರರು ಸಿಕ್ಕಿದ್ದಾರೆ. ಇದರ ಪರಿಣಾಮವಾಗಿ ನಾವು ಕರ್ನಾಟಕದ ಎಲ್ಲ ಜಿಲ್ಲೆಗಳು ಹಾಗೂ ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡದಾಗಿ ಬೆಳೆದಿದ್ದೇವೆ. ಇವರು ಎಲ್ಲ ಮೂರು ಸಾಂಪ್ರದಾಯಿಕ ಪಕ್ಷಗಳಿಂದ ಮೋಸ ಹೋಗಿರುವವರು ಹಾಗೂ ಬಿಜೆಪಿಯ 40 ಪರ್ಸೆಂಟ್ ಸರ್ಕಾರದಿಂದ ಬೇಸತ್ತಿರುವವರಾಗಿದ್ದಾರೆ ಎಂದು ಹೇಳಿದರು.

ಜಿಎಸ್‌ಎ ಭಾಗವಾಗಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮುಂತಾದ ವಿವಿಧ ರಾಜಕೀಯ ಪಕ್ಷಗಳ ಜನರು ನಮ್ಮೊಂದಿಗೆ ಕೈಜೋಡಿಸುತ್ತಿದ್ದಾರೆ. ಇವರು ಕರ್ನಾಟಕದಲ್ಲಿ ಉತ್ತಮ ಬದಲಾವಣೆ ತರಬೇಕೆಂದು ಬಯಸುವ ಉತ್ತಮ ವ್ಯಕ್ತಿಗಳಾಗಿದ್ದಾರೆ. ಕರ್ನಾಟಕವು ಎಎಪಿ ಮೇಲೆ ವಿಶ್ವಾಸವಿಟ್ಟಿದೆ ಎನ್ನುವುದನ್ನು ಇದು ಸೂಚಿಸುತ್ತಿದೆ. ಅವರ ಬೆಂಬಲದಿಂದಾಗಿ ಆಮ್‌ ಆದ್ಮಿ ಪಾರ್ಟಿಯು ವಿಜಯದತ್ತ ಸಾಗಲಿದೆ. ಇಂದು ನಾವು ರಾಜ್ಯ ಮಟ್ಟದ ಹಾಗೂ ಜಿಲ್ಲೆಗಳ ಪದಾಧಿಕಾರಿಗಳನ್ನು ಘೋಷಣೆ ಮಾಡಿದ್ದೇವೆ. ಈ ಘೋಷಣೆಯ ಭಾಗವಾಗಿ, ನಾವು ಪಟ್ಟಿಯ ಮೂರು ಪ್ರಮುಖ ಹುದ್ದೆಗಳನ್ನು ಹೇಳಿದ್ದೇವೆ. ಉಳಿದ ಭಾಗವಾದ ಬ್ಲಾಕ್‌ ಹಾಗೂ ಸರ್ಕಲ್‌ ಸಮಿತಿಗಳನ್ನು ಜಿಲ್ಲಾ ಮಟ್ಟದಲ್ಲಿ ಘೋಷಿಸಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ | Republic Day : ಒಂದೇ ವಾರಕ್ಕೆ ಸಿದ್ಧವಾಯಿತು ʼನಾರಿಶಕ್ತಿʼ ಸ್ತಬ್ಧ ಚಿತ್ರ: ಕರ್ತವ್ಯ ಪಥದಲ್ಲಿ ಪೂರ್ವಾಭ್ಯಾಸ

ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಹಲವು ಆಕಾಂಕ್ಷಿಗಳು ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಿಕ್ಕಿದ್ದಾರೆ. ಸಾಧ್ಯವಾದಷ್ಟು ಬೇಗನೇ ರಚನೆಯನ್ನು ಜಾರಿಗೆ ತಂದು, ಫೆಬ್ರವರಿ ಮೊದಲ ವಾರದಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸುತ್ತೇವೆ. ಫೆಬ್ರವರಿ ಎರಡನೇ ವಾರದೊಳಗೆ ಜಿಲ್ಲೆಗಳ ಹಾಗೂ ಸರ್ಕಲ್‌ಗಳ ಸಂಘಟನಾ ರಚನೆಯನ್ನು ಘೋಷಿಸುತ್ತೇವೆ. ಅದೇ ವೇಳೆಗೆ ಎಎಪಿಯು ಕರ್ನಾಟಕದ ಎಲ್ಲ 58,000 ಬೂತ್‌ಗಳನ್ನು ತಲುಪಲಿದೆ. ಬೇರೆ ಪಕ್ಷಗಳ ಸಂಘಟನೆಗಳಲ್ಲಿದ್ದು, ಅವರನ್ನು ನಂಬಿ ಮೋಸ ಹೋಗಿರುವ ಉತ್ತಮ ವ್ಯಕ್ತಿಗಳು ರಾಜ್ಯದಲ್ಲಿ ಬದಲಾವಣೆ ತರಲು ನಮ್ಮೊಂದಿಗೆ ಕೈಜೋಡಿಸಬಹುದು ಎಂದು ದಿಲೀಪ್‌ ಪಾಂಡೆ ಹೇಳಿದರು.

ಎಎಪಿ ರಾಜ್ಯ ಸಂಘಟನಾ ಉಸ್ತುವಾರಿ ದಾಮೋದರನ್‌, ರಾಜ್ಯ ಸಂಘಟನಾ ಸಹ ಉಸ್ತುವಾರಿ ಉಪೇಂದ್ರ ಗಾವಂಕರ್‌, ಮಾಧ್ಯಮ ಮತ್ತು ಸಂವಹನಾ ವಿಭಾಗದ ಉಸ್ತುವಾರಿ ಬ್ರಿಜೇಶ್‌ ಕಾಳಪ್ಪ, ಮಾಧ್ಯಮ ಉಸ್ತುವಾರಿ ಜಗದೀಶ್‌ ವಿ ಸದಂ ಮತ್ತಿತರರು ಭಾಗವಹಿಸಿದ್ದರು.

Exit mobile version