Site icon Vistara News

ನನ್ನ ಕೊಲೆಯಾದರೆ ಅದಕ್ಕೆ ಶಾಸಕ ಪ್ರೀತಂಗೌಡ ಕಾರಣ: ಅಗಿಲೆ ಯೋಗೇಶ್ ಹೇಳಿಕೆ

ಅಗಿಲೆ ಯೋಗೇಶ್

ಹಾಸನ: ನನ್ನ ಕೊಲೆಯಾದರೆ ಅದಕ್ಕೆ ಹಾಸನ ಶಾಸಕ ಪ್ರೀತಂಗೌಡರೇ ಕಾರಣ, ನನಗೆ ರಾಜಕೀಯವಾಗಿ ಯಾರೂ ವೈರಿಗಳಿಲ್ಲ, ಅವರಿಗೆ ನಾನೊಬ್ಬನೇ ಪ್ರಬಲ ಎದುರಾಳಿ. ಹಾಗಾಗಿ ನನ್ನನ್ನು ಮುಗಿಸಬೇಕೆಂದು ಪ್ಲಾನ್ ಮಾಡಿದ್ದಾರೆ ಎಂದು ಜೆಡಿಎಸ್ ಮುಖಂಡ ಅಗಿಲೆ ಯೋಗೇಶ್ ಆರೋಪಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಕೊಲೆ ಬೆದರಿಕೆ ಇದೆ, ಓರ್ವ ಗನ್ ಮ್ಯಾನ್ ಕೊಡುತ್ತೇನೆ ಎಂದು ಹಿಂದಿನ ಎಸ್‌ಪಿ ಹೇಳಿದ್ದರು. ಆದರೆ ಈವರೆಗೂ ನನಗೆ ಯಾವುದೇ ರೀತಿಯ ರಕ್ಷಣೆ ಒದಗಿಸಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಎಚ್.ಡಿ.ರೇವಣ್ಣ ಅವರು ನಿನಗೆ ಜೀವ ಬೆದರಿಕೆ ಇದೆ, ಹುಷಾರಾಗಿರು ಎಂದು ಹೇಳುತ್ತಾರೆ. ಶಾಸಕ ಪ್ರೀತಮ್‌ ಗೌಡ ಬೆಂಬಲಿಗರು ನಾನು ಎಲ್ಲೇ ಹೋದರೂ ಚುನಾವಣಾ ಪ್ರಚಾರಕ್ಕೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ ನನಗೆ ಯಾವುದೇ ರಕ್ಷಣೆ ಸಿಕ್ಕಿಲ್ಲ. ಹೀಗಿದ್ದಾಗ ಯಾವ ಕಾರಣ ಕೊಟ್ಟು ನಾನು ಜೆಡಿಎಸ್‌ ಬಾವುಟ ಇಟ್ಟುಕೊಂಡು ಕುಣಿಯಲಿ ಎಂದರು.

2018ರಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಯೋಗೇಶ್‌ಗೆ ಟಿಕೆಟ್ ಕೈತಪ್ಪಿತ್ತು. ಚುನಾವಣೆ ನಂತರ ಜೆಡಿಎಸ್ ಸೇರಿದ್ದ ಅವರು ಜೆಡಿಎಸ್‌ನಲ್ಲಿ ಸೂಕ್ತ ಸ್ಥಾನ ಮಾನ ಸಿಗದ ಹಿನ್ನೆಲೆಯಲ್ಲಿ ತೊರೆಯುವುದಾಗಿ ಸುದ್ದಿಗೋಷ್ಠಿಯಲ್ಲಿ ಘೋಷಣೆ ಮಾಡಿದರು.

ಇದನ್ನೂ ಓದಿ | ಹಾಸನ ಶಾಸಕರು ಲೂಟಿ ಮಾಡಲು ಅವಕಾಶ: ಸಂಪುಟ ನಿರ್ಧಾರದ ಕುರಿತು ಹೆಚ್.ಡಿ. ಕುಮಾರಸ್ವಾಮಿ ಟೀಕೆ

Exit mobile version