Site icon Vistara News

Agriculture award : ಕೃಷಿ ಪ್ರಶಸ್ತಿ ಪುರಸ್ಕೃತರ ಮಕ್ಕಳ ಉನ್ನತ ಅಧ್ಯಯನಕ್ಕೆ ಸರಕಾರದಿಂದಲೇ ಶುಲ್ಕ ಪಾವತಿ

CM Basavaraja Bommai

#image_title

ಧಾರವಾಡ: ಕೃಷಿ ಪ್ರಶಸ್ತಿಗೆ ಭಾಜನರಾದವರ ಮಕ್ಕಳಿಗೆ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಸೇರಿದಂತೆ ಉನ್ನತ ಶಿಕ್ಷಣದ ಶುಲ್ಕವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಅವರು ಕೃಷಿ ಇಲಾಖೆ ಹಾಗೂ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ರೈತ ಶಕ್ತಿ, ಕೃಷಿ ಕಾರ್ಮಿಕರ ಮಕ್ಕಳಿಗೆ ರೈತ ವಿದ್ಯಾ ನಿಧಿ, ಕೃಷಿ ಸಂಜೀವಿನಿ ವಾಹನಗಳ, ಡಾ. ಎಸ್.ವಿ.ಪಾಟೀಲ್, ಕೃಷಿ ಸಂಶೋಧನೆ, ತರಬೇತಿ ಹಾಗೂ ರೈತರ ಶ್ರೇಯೋಭಿವೃದ್ಧಿ ಪೀಠದ ಲೋಕಾರ್ಪಣೆ ನರವೇರಿಸಿ ಕೃಷಿ ಪಂಡಿತ ಮತ್ತು ಕೃಷಿ ಪ್ರಶಸ್ತಿ (Agriculture award) ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ರೈತರ ಪರವಾಗಿ ವಿಶೇಷ ಬಜೆಟ್
ಈ ಬಾರ ರೈತರ ಪರವಾಗಿ ವಿಶೇಷವಾದ ಬಜೆಟ್ ಇರಲಿದೆ. ಗ್ರಾಮೀಣ ಬದುಕು ಹಸನಾಗಬೇಕು. ಅಲ್ಲಿ ಆರ್ಥಿಕತೆ ಬೆಳೆದು ಸಾಮಾಜಿಕವಾಗಿ ಸಮಾನತೆ ತರುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಸಿಎಂ ಹೇಳಿದರು. ಅದಕ್ಕಾಗಿ ಧಾರವಾಡ ಕೃಷಿ ವಿವಿ ಸ್ಥಾಪಕರಾದ ಡಾ. ಎಸ್.ವಿ ಪಾಟೀಲ್ ಅವರ ಹೆಸರಿನಲ್ಲಿ ಪೀಠ ಸ್ಥಾಪಿಸಿ ಉದ್ಘಾಟಿಸಲಾಗಿದೆ. ಕೃಷಿಗೆ ಪೂರಕವಾಗಿರುವ ಇತರೆ ಕಸುಬುದಾರರಿಗೆ ಕಾಯಕ ಯೋಜನೆ ರೂಪಿಸಲಾಗಿದೆ. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯನ್ನು ಮುಂದಿನ ವಾರ ಉದ್ಘಾಟಿಸಲಾಗುತ್ತಿದೆ. ಹಾಗೂ ಸ್ತ್ರೀ ಶಕ್ತಿ ಯೋಜನೆ ಜಾರಿಗೆ ತಂದು ಸ್ವಯಂ ಉದ್ಯೋಗಕ್ಕೆ ನೆರವು ನೀಡಲಾಗುತ್ತಿದೆ ಎಂದರು.

ಹೊಸ ಪದ್ಧತಿಯ ಗೋದಾಮುಗಳ ನಿರ್ಮಾಣಕ್ಕೆ ಚಿಂತನೆ
ಕೃಷಿ ಇನ್ನಷ್ಟು ಉತ್ತಮಗೊಳ್ಳಲು ಸಣ್ಣ ಸಣ್ಣ ರೈತರ ಮಟ್ಟಿಗೆ ಗ್ರಾಮಾಂತರ ಪ್ರದೇಶಗಳಲ್ಲಿ ಹೊಸ ಮಾದರಿಯ ಗೋದಾಮುಗಳನ್ನು ನಿರ್ಮಿಸುವುದಕ್ಕೆ ಸರ್ಕಾರ ಚಿಂತನೆ ಮಾಡುತ್ತಿದೆ. ಈ ಮೂಲಕ ರೈತ ತನ್ನ ಬೆಳೆಗೆ ಬೆಲೆ ಬಂದಾಗ ಮಾರಾಟ ಮಾಡಬಹುದು ಎಂದರು.

ಕೃಷಿ ಪ್ರಶಸ್ತಿ ಪುರಸ್ಕೃತರ ಜತೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕೃಷಿ ಸಚಿವ ಬಿ.ಸಿ. ಪಾಟೀಲ್‌

ಕೃಷಿ ಸಚಿವ ಬಿ.ಸಿ. ಪಾಟೀಲರು ರಾಜ್ಯದಲ್ಲಿ ಪ್ರಥಮ ಬಾರಿಗೆ 12 ಶೀತಲಾಗಾರಗಳನ್ನು ಸ್ಥಾಪಿಸಿದ್ದಾರೆ. ರೈತ ಸಂಜೀವಿನಿ ವಾಹನಗಳು, ಪ್ರಯೋಗಾಲಯಗಳಿಂದ ರೈತರ ಹೊಲಕ್ಕೆ ಸಂಶೋಧನೆಗಳು ಬರುತ್ತಿವೆ. ಕೃಷಿಯಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಇಂದು ಪ್ರಶಸ್ತಿ ನೀಡಲಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಕ್ರಾಂತಿಕಾರಿ ಕಾರ್ಯಕ್ರಮ
ರೈತ ಕೂಲಿಕಾರರ ಬಗ್ಗೆ ಯಾರೂ ಈವರೆಗೆ ಚಕಾರ ಎತ್ತಿರಲಿಲ್ಲ. ಧ್ವನಿ ಇಲ್ಲದ ಅವರಿಗೆ ಮನವಿ ನೀಡಬೇಕೆಂದು ಕೂಡ ತಿಳಿಯದ ಈ ದುಡಿಯುವ ವರ್ಗದ ಮಕ್ಕಳೂ ವಿದ್ಯೆ ಕಲಿಯಬೇಕು. ಅವರೂ ಗುಡಿಸಲಿನಿಂದ ಹೊರಗೆ ಬರಬೇಕು. ಆದ್ದರಿಂದ ಇದು ಕ್ರಾಂತಿಕಾರಿ ಕಾರ್ಯಕ್ರಮವಾಗಿದೆ. ಬದಲಾವಣೆ ಅತ್ಯಂತ ತಳಮಟ್ಟದಿಂದ ಆಗಬೇಕು. ಕಾರ್ಯಕ್ರಮಗಳನ್ನು ರೂಪಿಸುವಾಗ ಕಟ್ಟಕಡೆಯ ವ್ಯಕ್ತಿಯ ಬದುಕನ್ನು ಗಮನದಲ್ಲಿರಿಸಿಕೊಂಡು ಕಾರ್ಯಕ್ರಮ ರೂಪಿಸಬೇಕು. ಸರ್ಕಾರದ ಆರ್ಥಿಕ ನೆರವಿನಿಂದ ತಮ್ಮ ಮಕ್ಕಳನ್ನು ಓದಿಸಬಹುದೆಂಬ ಆತ್ಮವಿಶ್ವಾಸ ಈ ಕುಟುಂಬಗಳಿಗೆ ಬಂದಿದೆ. ಕಟ್ಟಡ ಕೂಲಿಕಾರ್ಮಿಕರ 5 ಲಕ್ಷ ವಿದ್ಯಾರ್ಥಿಗಳಿಗೆ ಯೋಜನೆ ತಲುಪಿದೆ. ದುಡಿಯುವ ವರ್ಗಕ್ಕೆ ಬಲ ತುಂಬಬೇಕು ಎಂದರು.

11 ಲಕ್ಷ ರೈತರ ಮಕ್ಕಳಿಗೆ 488 ಕೋಟಿ ರೈತ ವಿದ್ಯಾನಿಧಿ
ʻʻಕೃಷಿ ಕ್ಷೇತ್ರದ ಅಭಿವೃದ್ಧಿಯಾಗುತ್ತಿದ್ದರೂ ರೈತರ ಸ್ಥಿತಿ ಸುಧಾರಿಸಿಲ್ಲ. ಆದ್ದರಿಂದ ರೈತರು ಸ್ವಾವಲಂಬನೆಯ ಬದುಕು ಬದುಕಲು, ಆದಾಯ ಹೆಚ್ಚಿಸಲು, ರೈತ ಮಕ್ಕಳು ವಿವಿಧ ವೃತ್ತಿಯಲ್ಲಿ ತೊಡಗಿಕೊಳ್ಳಬೇಕೆಂಬ ಉದ್ದೇಶದಿಂದ ಸರ್ಕಾರ ರೈತ ವಿದ್ಯಾನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಕೇವಲ ನಗರಪ್ರದೇಶದ ಮಕ್ಕಳಿಗೆ ಶಿಕ್ಷಣ ಮೀಸಲಾಗಬಾರದು. ಗ್ರಾಮೀಣ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಿ ಅವಕಾಶಗಳನ್ನು ನೀಡುವ ಸಲುವಾಗಿ ರೈತ ವಿದ್ಯಾನಿಧಿಯನ್ನು ಜಾರಿಗೆ ತಂದಿದೆ. 11 ಲಕ್ಷ ರೈತರ ಮಕ್ಕಳಿಗೆ 488 ಕೋಟಿ ರೂ.ಗಳ ವಿದ್ಯಾನಿಧಿ ನೀಡಲಾಗಿದೆ. ಇಂದು ನೀಡಲಾಗಿರುವ ರೈತಶಕ್ತಿ ಯೋಜನೆ, ರೈತ ವಿದ್ಯಾನಿಧಿ ಯೋಜನೆಗಳಿಗೆ ಫಲಾನುಭವಿಗಳಿಂದ ಯಾವುದೇ ಅರ್ಜಿ ಪಡೆಯಲಾಗಿಲ್ಲ. ಒಮ್ಮೆ ದಲಿತ ರೈತರ ಮಗಳು ನನ್ನನ್ನು ಭೇಟಿಯಾದಳು. ಆ ಹೆಣ್ಣುಮಗಳು ಎಸ್ ಸಿ ಎಸ್ ಟಿ ವಿದ್ಯಾರ್ಥಿ ವೇತನ ಹಾಗೂ ರೈತ ವಿದ್ಯಾನಿಧಿಗಳೆರಡೂ ಲಭಿಸಿದೆʼʼ ಎಂದು ಸಂತೋಷ ವ್ಯಕ್ತಪಡಿಸಿದ್ದನ್ನು ಮುಖ್ಯಮಂತ್ರಿಗಳು ಸ್ಮರಿಸಿದರು.

ಎರಡೇ ತಿಂಗಳಲ್ಲಿ ಬೆಳೆಹಾನಿ ಪರಿಹಾರ
ಕೇಂದ್ರ ಸರ್ಕಾರ ನೀಡುವ ಬೆಳೆಹಾನಿ ಪರಿಹಾರದ ಜೊತೆಗೆ ರಾಜ್ಯಸರ್ಕಾರದ ಪರಿಹಾರವನ್ನು ಸೇರಿಸಿ ದುಪ್ಪಟ್ಟು ಬೆಳೆಹಾನಿ ಪರಿಹಾರವನ್ನು ನೀಡಲಾಗುತ್ತಿದೆ. 14 ಲಕ್ಷ ರೈತರಿಗೆ 1900 ಕೋಟಿ ರೂ.ಗಳ ಬೆಳೆಹಾನಿ ಪರಿಹಾರವನ್ನು ಎರಡು ತಿಂಗಳ ಅವಧಿಯೊಳಗೆ ನೀಡಲಾಗಿದೆ. ರಾಜ್ಯ ಸರ್ಕಾರವು ಈ ಹಿಂದಿನ ಸರ್ಕಾರಗಳ ಪರಿಹಾರಕ್ಕಿಂತ ಹೆಚ್ಚಿನ ಮೊತ್ತವನ್ನು ನಮ್ಮ ಸರ್ಕಾರ ನೀಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ಸಕ್ಕರೆ ಮತ್ತು ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಸಿದ್ದು ಸವದಿ, ಅರವಿಂದ ಬೆಲ್ಲದ್, ಕೃಷಿ ಇಲಾಖೆ ಕಾರ್ಯದರ್ಶಿ ಶಿವಯೋಗಿ ಕಳಸದ್, ಧಾರವಾಡ ವಿವಿ ಕುಲಪತಿ ಡಾ:ಪಿ.ಎಲ್. ಪಾಟೀಲ್, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ | C.T. Ravi : ಕುಮಾರಣ್ಣ, ಅನಿತಕ್ಕಾ ಎದುರು ಶಿಬಿ ಚಕ್ರವರ್ತಿ, ದಧೀಚಿ ಮಹರ್ಷಿಯೂ ಕಳೆದೋದ್ರು: ಕ್ಷೇತ್ರ ತ್ಯಾಗದ ಕುರಿತು ಸಿ.ಟಿ. ರವಿ ವ್ಯಂಗ್ಯ

Exit mobile version