Site icon Vistara News

Appu Namana | ಪುನೀತ್‌ ಹೆಸರಲ್ಲಿ ವೃದ್ಧಾಶ್ರಮ, ಕಾಲೋನಿಗೆ ಅಪ್ಪು ಹೆಸರಿಟ್ಟ ಅಭಿಮಾನಿಗಳು!

koppala appu 2

ಕೊಪ್ಪಳ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಲ್ಲದೆ ಒಂದು ವರ್ಷ ಗತಿಸಿದೆ. ಆದರೆ, ಅವರ ಮೇಲಿನ ಪ್ರೀತಿ ಮಾತ್ರ ಜನರಲ್ಲಿ ಇನ್ನೂ ಮಾಸಿಲ್ಲ. ಅವರು ಹಾಕಿಕೊಟ್ಟ ದಾರಿಯಲ್ಲಿಯೇ ಅಭಿಮಾನಿಗಳು ಸಾಗುತ್ತಿದ್ದಾರೆ. ತಮ್ಮ ಕೈಲಾದ ಸೇವೆ ಮಾಡಲು ಮುಂದಾಗುತ್ತಿದ್ದಾರೆ. ಈಗ ಅಪ್ಪು ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ (Appu Namana) ಸಂಬಂಧ ಅಭಿಮಾನಿಗಳು ವೃದ್ಧಾಶ್ರಮ ನಿರ್ಮಾಣಕ್ಕೆ ನಿರ್ಧಾರ ಮಾಡಿದ್ದು, ಇದಕ್ಕಾಗಿ ಗುದ್ದಲಿ ಪೂಜೆಯನ್ನೂ ನೆರವೇರಿಸಿದ್ದಾರೆ.

ಕೊಪ್ಪಳ ಜಿಲ್ಲೆ ಗಂಗಾವತಿಯ ಹೊಸಳ್ಳಿ ರಸ್ತೆಯಲ್ಲಿರುವ ಎಲ್ವಿಟಿ ಕಾಲೋನಿಯಲ್ಲಿ ವೃದ್ಧಾಶ್ರಮಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ಪುನೀತ್‌ ರಾಜಕುಮಾರ್ ಅವರು ಅನೇಕ ವೃದ್ಧಾಶ್ರಮಗಳು, ಅನಾಥಾಲಯಗಳನ್ನು ನಡೆಸುತ್ತಿದ್ದರು. ಅಲ್ಲದೆ, ಅವರು ಯಾರಿಗೂ ತಿಳಿಯದಂತೆ ಅನೇಕರಿಗೆ ಸಹಾಯ, ಸಹಕಾರವನ್ನು ಮಾಡಿದ್ದರು. ಅವರ ಮಾರ್ಗದಲ್ಲಿ ನಾವೂ ಸಾಗುತ್ತಿದ್ದೇವೆ ಎಂದು ಹೇಳಿಕೊಂಡಿರುವ ಕರ್ನಾಟಕ ರತ್ನ ಡಾ. ಪುನೀತ್‌ ರಾಜಕುಮಾರ್‌ ಅಭಿಮಾನಿಗಳ ಸಂಘವು, ವೃದ್ಧಾಶ್ರಮ ತೆರೆಯುವ ನಿರ್ಧಾರ ಮಾಡಿದೆ. ಈ ನಿಟ್ಟಿನಲ್ಲಿ ವೃದ್ಧಾಶ್ರಮಕ್ಕೆ ಭೂಮಿ ಪೂಜೆ ಕಾರ್ಯವನ್ನು ಹಮ್ಮಿಕೊಂಡಿದ್ದು, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರಿಂದ ಅಡಿಗಲ್ಲು ಹಾಕಿಸಿದ್ದಾರೆ.

ವೃದ್ಧಾಶ್ರಮ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಮಾತನಾಡಿದ ಶಾಸಕ ಪರಣ್ಣ ಮುನವಳ್ಳಿ, ಪುನೀತ್ ಅವರ ಕಾರ್ಯಗಳನ್ನು ನಾವು ಸ್ಮರಿಸಲೇ ಬೇಕು. ಅವರು ಅಪಾರ ಜನಸೇವೆ ಮಾಡಿದ್ದಾರೆ. ಅನೇಕರಿಗೆ ದಾರಿದೀಪವಾಗಿದ್ದರು. ಈಗ ಅವರ ಹಾದಿಯಲ್ಲಿ ಅಭಿಮಾನಿಗಳು ಸಾಗುತ್ತಿದ್ದು, ಈ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಇದನ್ನೂ ಓದಿ | Appu Namana | 500 ಕಿ.ಮೀ. ದೂರದ ಮನಗುಂಡಿಯಿಂದ ಕಾಲ್ನಡಿಗೆಯಲ್ಲಿ ಬಂದು ತಲುಪಿದ ಅಥ್ಲೀಟ್‌ ದಾಕ್ಷಾಯಿಣಿ

ಹಳ್ಳಿ ಬೀದಿಗೆ ಅಪ್ಪು ಹೆಸರು
ತುಮಕೂರು: ನಟ ಪುನೀತ್ ರಾಜಕುಮಾರ್ ಅವರ ಪ್ರಥಮ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ತುಮಕೂರಿನ ಹಳ್ಳಿಯೊಂದರಲ್ಲಿದೆ ಡಾ. ಪುನೀತ್‌ ರಾಜಕುಮಾರ್‌ ನಗರ ಎಂದು ನಾಮಕರಣ ಮಾಡಲಾಗಿದೆ.

ತುಮಕೂರಿನ ವಕ್ಕೋಡಿ ಗ್ರಾಮದಲ್ಲಿ ಗ್ರಾಮಸ್ಥರು ನಟ ಪುನಿತ್ ರಾಜಕುಮಾರ್ ಅವರ ಅಭಿಮಾನಿಗಳಾಗಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮದ ಕಾಲೊನಿಯೊಂದಕ್ಕೆ ಪುನೀತ್‌ ಹೆಸರನ್ನು ಇಟ್ಟಿದ್ದಾರೆ. ಇದಲ್ಲದೆ, ಗ್ರಾಮದಲ್ಲಿ ಪುನೀತ್‌ ಫೋಟೊ, ಬ್ಯಾನರ್‌ಗಳನ್ನು ಹಾಕಲಾಗಿದೆ. ಸ್ವಂತ ಹಣದಲ್ಲೇ ಅಪ್ಪು ಪುತ್ಥಳಿ ನಿರ್ಮಾಣಕ್ಕೂ ಗ್ರಾಮಸ್ಥರು ಸಜ್ಜಾಗಿದ್ದಾರೆ.

ಇದನ್ನೂ ಓದಿ | Appu Namana| ಅಪ್ಪುವಿಗಾಗಿ ಬೃಹತ್‌ ರುದ್ರಾಕ್ಷಿ ಹಾರ ತಂದ ನಾರಾಯಣಪುರ ಗ್ರಾಮಸ್ಥರು, ಮಂತ್ರಾಲಯದಲ್ಲಿ ಟಿಫಿನ್

Exit mobile version