Site icon Vistara News

Assault case: ವಿದ್ಯಾರ್ಥಿನಿ ಮೈ-ಕೈ ಮೇಲೆ ಬಾಸುಂಡೆ ಬರುವಂತೆ ಬಾರಿಸಿದ ಶಿಕ್ಷಕಿ; ಠಾಣೆ ಮೆಟ್ಟಿಲೇರಿದ ಪೋಷಕರು

teacher Assault case

ಚಿಕ್ಕಬಳ್ಳಾಪುರ: ಇತ್ತೀಚೆಗೆ ಕೆಲ ಶಿಕ್ಷಕರಲ್ಲಿ ರಾಕ್ಷಸತ್ವ ಹೆಚ್ಚಾಗುತ್ತಿದ್ದೀಯಾ ಎಂಬ ಅನುಮಾನ ಕಾಡುತ್ತಿದೆ. ಮಕ್ಕಳಿಗೆ ವಿದ್ಯಾಭ್ಯಾಸದ ಮೂಲಕ ಶಿಕ್ಷಿತರನ್ನಾಗಿ ಮಾಡುವ ಬದಲು ಶಿಕ್ಷೆ ನೀಡುವುದೆ ಕಾಯಕವನ್ನಾಗಿ ಮಾಡಿಕೊಂಡಂತೆ ಕಾಣುತ್ತಿದೆ. ಯುಟಿ ಟೆಸ್ಟ್‌ ಸರಿಯಾಗಿ ಬರೆದಿಲ್ಲ ಎಂದು ಸಿಟ್ಟಿಗೆದ್ದ ಶಿಕ್ಷಕಿಯೊಬ್ಬಳು, 4ನೇ ತರಗತಿಯ ವಿದ್ಯಾರ್ಥಿನಿಗೆ (Assault case) ಮನಸೋ ಇಚ್ಛೆ ಥಳಿಸಿದ್ದಾರೆ.

ಚೈತನ್ಯ ಎಂಬಾಕೆ ಚಿಂತಾಮಣಿ ತಾಲೂಕಿನ ತಿಮ್ಮಸಂದ್ರ ಬಳಿಯ ಪ್ರೀತಿ ಪಬ್ಲಿಕ್‌ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದಾಳೆ. ನಿನ್ನೆ (ಜೂ.14) ಇವಿಎಸ್‌ ಯುಟಿ ಟೆಸ್ಟ್‌ನಲ್ಲಿ ಸರಿಯಾಗಿ ಬರೆದಿಲ್ಲವೆಂದು ಶಿಕ್ಷಕಿ ಸಿಂಧೂ ಎಂಬುವವರು ಚೈತನ್ಯಳಿಗೆ ಕೋಲಿನಿಂದ ಮೈಮೇಲೆ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಚೈತನ್ಯ ತಂದೆ ದಯಾನಂದ ಅವರು ಈ ಸಂಬಂಧ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ದೂರು ದಾಖಲಿಸಿದ್ದಾರೆ.

ಹೊಡಿಬಡಿ ಇದೇನು ಮೊದಲಲ್ಲ

ಶಾಲೆಯಿಂದ ಮನೆಗೆ ಬಂದಿದ್ದ ಚೈತನ್ಯ, ಟೀಚರ್‌ ಸಿಂಧೂ ಕೋಲಿನಿಂದ ಹೊಡೆದಿದ್ದಾಗಿ ಹೇಳಿದ್ದಾಳೆ. ಈ ವೇಳೆ ದಯಾನಂದ ದಂಪತಿ ಆಕೆಯ ಯೂನಿಫಾರಂ ತೆಗೆದು ನೋಡಿದಾಗ ಬೆನ್ನಿನ ಎರಡು ಕಡೆ ಊತದ ಗಾಯಗಳಾಗಿರುವುದು ಕಂಡು ಬಂದಿದೆ. ಈ ವಿಚಾರ ತಿಳಿದ ದಯಾನಂದ ಅವರು ಶಾಲೆಗೆ ತೆರಳಿ ವೈಸ್‌ ಪ್ರಿನ್ಸಿಪಾಲ್‌ ತಂಗರಾಜುರಿಗೆ ದೂರು ನೀಡಿದ್ದಾರೆ. ಈ ಹಿಂದೆಯೇ ನನ್ನ ಮಗಳಿಗೆ ಹೊಡೆಯಬಾರೆಂದು ಹೇಳಿದ್ದರೂ ಪುನಃ ಟೀಚರ್‌ ಹೊಡೆದು ಕಳಿಸಿದ್ದಾರೆ ಎಂದು ದಯಾನಂದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಶಾಲೆಯ ಆಡಳಿತ ಮಂಡಳಿ ಮಕ್ಕಳಿಗೆ ಹೊಡೆಬಾರದೆಂದು ಈಗಾಗಲೇ ಶಿಕ್ಷಕ ವರ್ಗಕ್ಕೆ ಸೂಚನೆ ನೀಡಿದ್ದಾರೆ. ಆದರೂ ಸಹ ಶಿಕ್ಷಕಿ ಸಿಂಧೂ ಮಕ್ಕಳಿಗೆ ಹೊಡೆಯುವುದು ಮುಂದುವರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಗಾಯಾಳು ಚೈತನ್ಯಾಳನ್ನು ದಾಖಲಿಸಲಾಗಿದೆ.

ಇದನ್ನೂ ಓದಿ: Cancer disease: ನನ್ನಿಂದಲೇ ಮಗಳಿಗೂ ಹರಡಿತು ಕ್ಯಾನ್ಸರ್‌; ಮನನೊಂದ ಹೆಡ್‌ ಕಾನ್ಸ್‌ಟೇಬಲ್‌ ಆತ್ಮಹತ್ಯೆ

ನನ್ನ ಮಗಳ ಮೇಲೆ ವಿನಾ ಕಾರಣ ಕೋಲಿನಿಂದ ಮೈ ಮೇಲೆ ಬಾಸುಂಡೆ ಬರುವಂತೆ ಹೊಡೆದು ಗಾಯಪಡಿಸಿರುವ ಶಿಕ್ಷಕಿ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿ ಎಂದು ದೂರು ನೀಡಿದ್ದಾರೆ. ಬಿಇಒ ಕಛೇರಿಗೂ ತೆರಳಿ ಅಲ್ಲೂ ದೂರು ನೀಡಿರುವ ದಯಾನಂದ್‌, ಮಗಳ ಪರಿಸ್ಥಿತಿ ಕಂಡು ಕಣ್ಣೀರು ಸುರಿಸಿದ್ದಾರೆ. ಶಾಲೆಗೆ ಚಿಂತಾಮಣಿ ಬಿಇಒ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.‌

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version