Site icon Vistara News

Attempt To Murder : ಒಂದೇ ತಟ್ಟೇಲಿ ಅನ್ನ ತಿಂದು ಮುಹೂರ್ತ ಇಟ್ರಲ್ಲೋ!

attempt murder case

ಆನೇಕಲ್: ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಹಿಂದಿನಿಂದ ಬಂದ ಅನಾಮಿಕರು ಮಚ್ಚು ಬೀಸಿ ಹಲ್ಲೆಗೆ (Attempt To Murder) ಮುಂದಾಗಿದ್ದರು. ಆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಬಚಾವ್‌ ಆಗಿ ಪ್ರಾಣಾಪಾಯದಿಂದ ವ್ಯಕ್ತಿ ಪಾರಾಗಿದ್ದ. ದಾಳಿಕೋರರಿಂದ ತಪ್ಪಿಸಿಕೊಳ್ಳುವಾಗ ಕೈಗೆ ಗಂಭೀರ ಗಾಯವಾಗಿತ್ತು. ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಆ ವ್ಯಕ್ತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಈ ಸಂಬಂಧ ಕೊಲೆ ಯತ್ನ ಕೇಸ್‌ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದಾಗಲೇ ಗೊತ್ತಾಗಿದ್ದು, ಅಣ್ಣನ ಕೊಲೆಗೆ ಸಹೋದರರೇ ಸುಪಾರಿ ನೀಡಿದ್ದು ಎಂದು ತಿಳಿದು ಬಂದಿದೆ.

ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದ ಸಾಯಿಬಾಬಾ ದೇವಾಲಯದ ರಸ್ತೆಯಲ್ಲಿ ಕ್ಯಾಲಸನಹಳ್ಳಿಯ ನಿವಾಸಿ ಚಂದ್ರಪ್ಪ ಎಂಬಾತನ ಹತ್ಯೆಗೆ ಯತ್ನಿಸಲಾಗಿತ್ತು. ಚಂದ್ರಪ್ಪನ ಚಿಕ್ಕಪ್ಪನ ಮಕ್ಕಳಾದ ಸಂಪತ್‌ ಕುಮಾರ್ ಅಲಿಯಾಸ್ ಸಂತೋಷ್, ಅರುಣ್ ಕುಮಾರ್, ಕೆ.ಜೆ.ಕೆ‌ ಮಂಜುನಾಥ್‌ ಒಂದೂವರೆ ಲಕ್ಷಕ್ಕೆ ಸೂಪಾರಿ ನೀಡಿದ್ದರು.

ಆನಂದ್, ಹರ್ಷವರ್ಧನ್ ಹಾಗೂ ವಿಜಯ್ ಕುಮಾರ್ ಎಂಬುವವರು ಸುಪಾರಿ ಪಡೆದುಕೊಂಡು ಸ್ಕೆಚ್‌ವೊಂದನ್ನು ರೂಪಿಸಿದ್ದರು. ಅಂದರಂತೆ ಬೈಕ್‌ನಲ್ಲಿ ತೆರಳುತ್ತಿದ್ದ ಚಂದ್ರಪ್ಪ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು. ಚಾಕುವಿನಿಂದ ಇರಿಯಲು ಬಂದಾಗ ತಪ್ಪಿಸಿಕೊಳ್ಳುವ ಸಮಯದಲ್ಲಿ ಚಂದ್ರಪ್ಪ ಕೈಗೆ ಗಂಭೀರ ಗಾಯವಾಗಿತ್ತು. ಇತ್ತ ಸ್ಕೆಚ್ ಫೆಲ್ಯೂರ್ ಆಗುತ್ತಿದ್ದಂತೆ ಸೂಪಾರಿ ಕಿಲ್ಲರ್ಸ್ ಸ್ಥಳದಿಂದ ಕಾಲ್ಕಿತ್ತಿದ್ದರು.

ಈ ಸಂಬಂಧ ಚಂದ್ರಪ್ಪ ಕುಟುಂಬಸ್ಥರು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇತ್ತ ತಮಗೇನು ತಿಳಿದೇ ಇಲ್ಲ ಎಂಬಂತೆ ಸಂಪತ್‌ ಅಲಿಯಾಸ್‌ ಸಂತೋಷ್‌ ನಾಟಕವನ್ನಾಡಿದ್ದರು. ಆಸ್ಪತ್ರೆಯಿಂದ ಮನೆಗೆ ಬಂದ ಚಂದ್ರಪ್ಪನನ್ನು ನೋಡಲು ಬಂದಿದ್ದ ಸಂಪತ್ ತನಿಖೆಯ ದಾರಿಯನ್ನೂ ತಪ್ಪಿಸಿದ್ದ.

ಆದರೆ ಹೆಬ್ಬಗೋಡಿ ಪೊಲೀಸರ ಚಾಣಾಕ್ಷತನದ ತನಿಖೆಯಿಂದ ಕೊಲೆ ಯತ್ನದ ರಹಸ್ಯ ಹೊರಬಂದಿದೆ. ಚಂದ್ರಪ್ಪ ಹತ್ಯೆಗೆ ಚಿಕ್ಕಪ್ಪನ ಮಕ್ಕಳೇ ಸುಪಾರಿ ಕೊಟ್ಟಿದ್ದರು ಎಂದು ತಿಳಿದು ಬಂದಿದೆ. ಒಂದೂವರೆ ಗುಂಟೆ ಜಾಗಕ್ಕಾಗಿ ಚಂದ್ರಪ್ಪನ ಕೊಲೆಗೆ ಒಂದೂವರೆ ಲಕ್ಷಕ್ಕೆ ಸುಪಾರಿ ನೀಡಿದ್ದರು. ಸದ್ಯ ಸುಪಾರಿ ಕೊಟ್ಟವರನ್ನು ಹಾಗೂ ಸುಪಾರಿ ಪಡೆದ ಒಟ್ಟು ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:Child trafficking: ಬೆಂಗಳೂರಲ್ಲಿ ಮಕ್ಕಳ ಮಾರಾಟ; ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಖತರ್ನಾಕ್‌ ಗ್ಯಾಂಗ್‌!

ಹೆಂಡ್ತಿ ಬಿಟ್ಟು ಹೋಗಿದ್ದಕ್ಕೆ ಮೈದುನನ ಕತ್ತು ಸೀಳಿದ ಪಾಪಿ!

ಆನೇಕಲ್: ಪತ್ನಿ ತವರು ಮನೆ ಸೇರಿ ಡಿವೋರ್ಸ್‌ ಕೊಟ್ಟಿದ್ದಕ್ಕೆ ಸಿಟ್ಟಿಗೆದ್ದ ಪತಿಯೊಬ್ಬ ಪತ್ನಿಯ ತಮ್ಮನ ಕುತ್ತಿಗೆಗೆ ಚಾಕು ಇರಿದು (Attempt to murder) ಪರಾರಿ ಆಗಿರುವ ಘಟನೆ ಆನೇಕಲ್ ತಾಲೂಕಿನ ಸಿಡಿಹೊಸಕೋಟೆಯಲ್ಲಿ ನಡೆದಿದೆ. ಪುನೀತ್ ರಾಜ್ ಹಲ್ಲೆಗೊಳಗಾದವರು.

ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಮನೆಗೆ ನುಗ್ಗಿದ ಮಣಿಕಂಠ ಎಂಬಾತ ಪುನೀತ್‌ ರಾಜ್‌ನ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಆಂಧ್ರಪ್ರದೇಶದ ಪನ್ನೂರಿನ ನಿವಾಸಿಯಾದ ಮಣಿಕಂಠ ಕಳೆದ ಫೆಬ್ರವರಿ ತಿಂಗಳಲ್ಲಿ ಪುನೀತ್‌ ರಾಜ್‌ನ ಅಕ್ಕ ಶ್ವೇತಾಳೊಂದಿಗೆ ಮದುವೆ ಮಾಡಿಕೊಡಲಾಗಿತ್ತು.

ಆದರೆ ಮದುವೆಯಾದ 20 ದಿನಕ್ಕೆ ಶ್ವೇತ ತವರು ಮನೆ ಸೇರಿದ್ದಳು. ಪತಿ ವರ್ತನೆ ಸರಿ ಇಲ್ಲ ಎಂದು ಮಣಿಕಂಠ ಹಾಗೂ ಅವರ ಕುಟುಂಬದವರ ಮೇಲೆ ಪೊಲೀಸರಿಗೆ ದೂರು ಕೊಡಲಾಗಿತ್ತು. ಈ ನಡುವೆ ಶ್ವೇತಾ ಮಣಿಕಂಠನಿಗೆ ಡಿವೋರ್ಸ್‌ ನೋಟಿಸ್ ಸಹ ಕಳುಹಿಸಿದ್ದಳು. ಇದೇ ಕಾರಣಕ್ಕೆ ರೊಚ್ಚಿಗೆದ್ದ ಮಣಿಕಂಠ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಸಿಡಿಹೊಸಕೋಟೆಯಲ್ಲಿರುವ ಪತ್ನಿ ಶ್ವೇತಾ ಮನೆಗೆ ನುಗ್ಗಿದ್ದ.

ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಹಾಕಿಕೊಂಡು ಮನೆಗೆ ನುಗ್ಗಿದಾಗ ಎದುರಿಗೆ ಸಿಕ್ಕ ಪತ್ನಿ ಶ್ವೇತಾಳ ತಮ್ಮ ಪುನೀತ್‌ನಿಗೆ ಚಾಕುವಿನಿಂದ ಕತ್ತು ಸೀಳಿದ್ದಾನೆ. ಮನೆಯವರೆಲ್ಲ ಚೀರಾಡುತ್ತಿದ್ದಂತೆ ಅಲ್ಲಿಂದ ಪರಾರಿ ಆಗಿದ್ದಾನೆ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ಪುನೀತ್‌ನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version