Site icon Vistara News

ಆಸ್ತಿ ವಿಚಾರವಾಗಿ ದಬ್ಬಾಳಿಕೆ ಆರೋಪ: ವಕೀಲೆ ಸಂಗೀತಾ ಶಿಕ್ಕೇರಿ ಮೇಲೆ ಹಲ್ಲೆ

ಸಂಗೀತಾ ಶಿಕ್ಕೇರಿ

ಬಾಗಲಕೋಟೆ: ಬಾಗಲಕೋಟೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿರುದ್ಧ ಆಸ್ತಿ ವಿಚಾರವಾಗಿ ದಬ್ಬಾಳಿಕೆ ಆರೋಪ ಪ್ರಕರಣದಲ್ಲಿ ವಕೀಲೆ ಸಂಗೀತಾ ಶಿಕ್ಕೇರಿ ಮೇಲೆ ನೆರೆಮನೆಯ ಮಹಾಂತೇಶ್‌ ಚೊಳಚಗುಡ್ಡ ಹಲ್ಲೆ ಮಾಡಿದ್ದಾರೆ. ಸಂಗೀತಾಗೆ ಮಹಾಂತೇಶ್‌ ಹಲ್ಲೆ ಮಾಡುತ್ತಿರುವ ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು, ಇಡೀ ಪ್ರಕರಣ ದಿನೇದಿನೆ ಸಂಕೀರ್ಣವಾಗುತ್ತ ಸಾಗಿದೆ.

ವಿನಾಯಕ ನಗರದಲ್ಲಿನ ಸಂಗೀತಾ ಶಿಕ್ಕೇರಿ ಅವರ ಮನೆಯ ಕಂಪೌಂಡ್ ಧ್ವಂಸ ಮಾಡಿದ್ದಾರೆ ಎಂದು ಬಾಗಲಕೋಟೆ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ರಾಜು ನಾಯ್ಕ ವಿರುದ್ಧ ಸಂಗೀತಾ ಶಿಕ್ಕೇರಿ ಆರೋಪ ಮಾಡಿದ್ದರು. ಜೆಸಿಬಿ ಮೂಲಕ ಮನೆ ಮುಂದಿನ ಗೋಡೆ ಧ್ವಂಸ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಇದನ್ನೂ ಓದಿ |ಬಾಗಲಕೋಟೆ BJP ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿರುದ್ಧ ಆಸ್ತಿ ವಿಚಾರವಾಗಿ ದಬ್ಬಾಳಿಕೆ ಆರೋಪ

ಈ ಕುರಿತು ಸ್ಪಷ್ಟನೆ ನೀಡಿದ್ದ ರಮೇಶ್‌ ನಾಯ್ಕ್‌, ಯಾರ ಮೇಲೂ ದೌರ್ಜನ್ಯ ಮಾಡಿಲ್ಲ ಎಂದಿದ್ದರು. ನ್ಯಾಯಾಲಯಕ್ಕೆ ನಾನು ದಾಖಲಾತಿಗಳನ್ನು ಹಾಜರುಪಡಿಸುತ್ತೇನೆ ಎಂದು ತಿಳಿಸಿದ್ದರು. ಇದೀಗ ವಿನಾಯಕ ನಗರದ ನಿವಾಸಿ ಹಾಗೂ ಸಂಗೀತಾ ನೆರೆಮನೆಯಲ್ಲಿರುವ ಮಹಾಂತೇಶ್ ಚೊಳಚಗುಡ್ಡ ಅವರು ಸಂಗೀತಾ ಮೇಲೆ ಹಲ್ಲೆ ಮಾಡಿದ್ದಾರೆ.

ಕಾಲು, ಎದೆಭಾಗ, ತಲೆಗೆ ಪೆಟ್ಟಾಗಿದೆ‌ ಎಂದು ವಕೀಲೆ ಸಂಗೀತಾ ಶಿಕ್ಕೇರಿ ಹೇಳಿದ್ದಾರೆ. ತನ್ನ ಪತಿಗೆ ಕಿವಿ ಹಾಗೂ ತಲೆಗೆ ಗಾಯವಾಗಿದೆ. ಬಿಜೆಪಿ ಮುಖಂಡ ರಾಜು ನಾಯ್ಕರ್ ಕುಮ್ಮಕ್ಕಿನಿಂದ ಮಹಾಂತೇಶ ಚೊಳಚಗುಡ್ಡ  ಹಲ್ಲೆ ಮಾಡಿದ್ದಾರೆಂದು ಸಂಗೀತಾ ಶಿಕ್ಕೇರಿ ಆರೋಪಿಸಿದ್ದಾರೆ. ಮಹಾಂತೇಶ್‌ ಚೊಳಚಗುಡ್ಡ ಪೊಟೋಗ್ರಫರ್‌ ಆಗಿದ್ದು, ತಾನು ಮಾಧ್ಯಮದವನು ಎಂದು ಹೇಳಿ ಎಲ್ಲರಲ್ಲಿಯೂ ಸುಳ್ಳು ಹೇಳಿಕೊಂಡು ದಬ್ಬಾಳಿಕೆ ಮಾಡಿಕೊಂಡು ಬರುತ್ತಿದ್ದ.  ನನ್ನ ಆಸ್ತಿ ಸಲುವಾಗಿ ಹಕ್ಕು ಕೇಳುತ್ತಿದ್ದೇನೆ. ಹಕ್ಕು ಕೇಳುವುದೇ ತಪ್ಪಾ ಎಂದು ಅಳಲು ತೋರಿಕೊಂಡಿದ್ದಾರೆ. ಪತಿಯ ಮೇಲೂ ಹಲ್ಲೆ ನಡೆದಿದ್ದು, ಕಿವಿಯಿಂದ ರಕ್ತ ಸುರಿಯುತ್ತಿದ್ದು, ಬಾಗಲಕೋಟೆಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಈ ಕುರಿತಂತೆ ಸ್ಪಷ್ಟನೆ ನೀಡಿರುವ ಮಹಾಂತೇಶ್‌, ನಾನು ಹಲ್ಲೆ ಮಾಡಿಲ್ಲ. ವಕೀಲೆ ಸಂಗೀತಾ ಶಿಕ್ಕೇರಿ ಪತಿ ಹಾಗೂ ಕುಟುಂಬಸ್ಥರೇ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಪೊಲೀಸರು ವಕೀಲೆಯ ಪಕ್ಕದ ಮನೆಯವರ ಮಾಹಿತಿ ಕೇಳಿದರು. ನಾನು ಮನೆ ತೋರಿಸಿದೆ. ಇದಕ್ಕಾಗಿ ನನ್ನ ಮೇಲೆ ಕೋಪಗೊಂಡಿದ್ದಾರೆ. ಮನೆ ವಿಳಾಸ ಹೇಳಿದ್ದಕ್ಕೆ ಚಪ್ಪಲಿಯಿಂದ ವಕೀಲೆ ನನಗೆ ಹೊಡೆದಿದ್ದಾರೆ. ಆಕೆಯ ಪತಿ ಹಾಗೂ ಕುಟುಂಬಸ್ಥರೇ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮಹಾಂತೇಶ್ ಚೊಳಚಗುಡ್ಡ ಪ್ರತ್ಯಾರೋಪಿಸಿದ್ದಾರೆ.

ಇದನ್ನೂ ಓದಿ |ಬಾಗಕೋಟೆಯಲ್ಲಿ ಗಾಳಿಗೆ ಹಾರಿಹೋದ ಸಂತ್ರಸ್ತರ ಮನೆಯ ಶೀಟ್‌ಗಳು

Exit mobile version