Site icon Vistara News

Bear attack: ಜಮೀನಿಗೆ ತೆರಳಿದ್ದ ವೃದ್ಧೆ ಮೇಲೆ ಕರಡಿಗಳು ದಾಳಿ

Bear attacked in chithraduraga

ಚಿತ್ರದುರ್ಗ: ವೃದ್ಧೆ ಮೇಲೆ ಕರಡಿಗಳು ದಾಳಿ (Bear attack) ಮಾಡಿವೆ. ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ನಡೆದಿದೆ. ಮಂಜಮ್ಮ (64) ಕರಡಿಗಳ ದಾಳಿಗೆ ಒಳಗಾದವರು.

ಮಂಜಮ್ಮ ಜಮೀನಿಗೆ ತೆರಳುವ ವೇಳೆ ಏಕಾಏಕಿ ಮೂರು ಕರಡಿಗಳು ದಾಳಿ ಮಾಡಿವೆ. ಕರಡಿಗಳ ದಾಳಿಯಿಂದ ಬಿಡಿಸಿಕೊಳ್ಳಲು ಕಿರುಚಾಡಿದ್ದಾರೆ. ಈ ವೇಳೆ ಕರಡಿಗಳು ಮಂಜಮ್ಮರ ತಲೆ ಹಾಗೂ ಕೈ ಭಾಗವನ್ನು ಕಿತ್ತುಹಾಕಿದೆ. ಗಂಭೀರ ಗಾಯಗೊಂಡಿರುವ ಮಂಜಮ್ಮ ಸ್ಥಿತಿ ಗಂಭೀರವಾಗಿದೆ.

ಕರಡಿ ದಾಳಿಗೆ ಒಳಗಾದ ಗಾಯಾಳು ಮಂಜಮ್ಮಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಸ್ಥಳಕ್ಕೆ ಪೊಲೀಸರು, ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ಕರಡಿಗಳು ಹಿಡಿದು ದೂರಕ್ಕೆ ಬಿಡುವಂತೆ ಮನವಿ ಮಾಡಿದ್ದಾರೆ. ಇನ್ನು ಕರಡಿಗಳ ದಾಳಿ ವಿಷಯ ತಿಳಿಯುತ್ತಿದ್ದಂತೆ ರೈತರು ಜಮೀನುಗಳಿಗೆ ತೆರಳಲು ಹಿಂದೆಟ್ಟು ಹಾಕುತ್ತಿದ್ದಾರೆ.

ಖಾನಾಪುರದಲ್ಲಿ ಕರಡಿ ದಾಳಿಗೆ ಬಲಿಯಾಗಿದ್ದ ರೈತ

ಬೆಳಗಾವಿಯ ಖಾನಾಪುರದಲ್ಲಿ ಕರಡಿ ದಾಳಿಗೆ ರೈತರೊಬ್ಬರು ಬಲಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಘೋಶೆ ಬುದ್ರುಕ ಗ್ರಾಮದಲ್ಲಿ ರೈತ ಭೀಕಾಜಿ ಮಿರಾಶಿ (63) ಎಂಬುವರು ಕರಡಿ ದಾಳಿಗೆ ಬಲಿಯಾಗಿದ್ದರು. ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಕರಡಿ ದಾಳಿ ಮಾಡಿತ್ತು. ಬಳಿಕ ಕರಡಿ ಅವರ ಶವವನ್ನು ದಾಳಿ ಮಾಡಿದ ಜಾಗದಿಂದ ಸುಮಾರು 2 ಕಿ.ಮೀ. ದೂರದಲ್ಲಿ ಬಿಟ್ಟು ಹೋಗಿತ್ತು.

ಹೊಲದಿಂದ ಸುಮಾರು ಎರಡು ಕಿ.ಮೀ. ದೂರದ ಅರಣ್ಯ ಪ್ರದೇಶದಲ್ಲಿ ಅವರ ಶವ ಪತ್ತೆಯಾಗಿತ್ತು. ಹೊಲದಲ್ಲಿ ಅವರ ಜತೆಗೆ ಬೇರೆಯವರೂ ಕೆಲಸ ಮಾಡುತ್ತಿದ್ದರು. ಆದರೆ, ಯಾವುದನ್ನೂ ಲೆಕ್ಕಿಸದೆ ಕರಡಿ ದಾಳಿ ಮಾಡಿತ್ತು. ಮಿರಾಶಿ ಅವರನ್ನು ಎತ್ತಿಕೊಂಡು ಹೋಗಿ ಕಾಡಿನಲ್ಲಿ ಎಸೆದು ಹೋಗಿತ್ತು.

ಮೈಸೂರಲ್ಲಿ ಬೋನಿಗೆ ಬಿದ್ದ ಹೆಣ್ಣು ಚಿರತೆ

ಮೈಸೂರಿನ ನಂಜನಗೂಡು ತಾಲೂಕಿನ ಮಡುವಿನಹಳ್ಳಿ ಗ್ರಾಮದಲ್ಲಿ‌ ಚಿರತೆಯೊಂದು ಸೆರೆಯಾಗಿದೆ. ಮಡುವಿನಹಳ್ಳಿ ಮತ್ತು ಕಂದೇಗಾಲ ಗ್ರಾಮದ ಸುತ್ತಮುತ್ತ ಚಿರತೆ ಕಾಣಿಸಿಕೊಂಡಿತ್ತು. ಭಯಭೀತರಾಗಿದ್ದ ಜನರು, ಚಿರತೆ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು.

ಚಿರತೆಯ ಚಲನವಲನ ಗಮನಿಸಿ ಹೆಡಿಯಾಲ ಅರಣ್ಯ ಇಲಾಖೆ ಸಹಾಯಕ ಅಧಿಕಾರಿ ಮಹಾಂತೇಶ್ ನೇತೃತ್ವ ತಂಡ ಬೋನು ಇರಿಸಿದ್ದರು. ಇದೀಗ ಬೆಳಗಿನ ಜಾವ ಎರಡು ವರ್ಷದ ಹೆಣ್ಣು ಚಿರತೆ ಬೋನಿಗೆ ಬಿದ್ದಿದೆ. ಸೆರೆಯಾಗಿರುವ ಎರಡು ವರ್ಷದ ಹೆಣ್ಣು ಚಿರತೆಯನ್ನು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮದ್ದೂರು ವಲಯದ ಅರಣ್ಯಕ್ಕೆ ಸ್ಥಳಾಂತರ ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version