Site icon Vistara News

Road Accident : ಬೈಕ್‌ನಿಂದ ಸ್ಕಿಡ್‌ ಆಗಿ ಬಿದ್ದು ಎಎಸ್‌ಐ ಸಾವು; ಹೆಲ್ಮೆಟ್ ಹಾಕಿದ್ದರೆ ಉಳಿಯುತ್ತಿತ್ತು ಜೀವ

ASI Dead in bike accident in Belagavi

ಬೆಳಗಾವಿ : ಕರ್ತವ್ಯ ಮುಗಿಸಿ ಮನೆಗೆ ವಾಪಾಸ್ ಆಗುತ್ತಿದ್ದ ದೊಡವಾಡ ಪೊಲೀಸ್ ಠಾಣೆಯ ಎಎಸ್ಐ ಬೈಕ್‌ ಅಪಘಾತದಲ್ಲಿ (Road Accident) ಮೃತಪಟ್ಟಿದ್ದಾರೆ. ಎಎಸ್ಐ ವಿಜಯಕಾಂತ ಮಿಕಲಿ (51) ಮೃತ ದುರ್ದೈವಿ.

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಬೈಕ್‌ನಲ್ಲಿ ಬರುತ್ತಿದ್ದಾಗ ಸ್ಕಿಡ್ ಆಗಿ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ತಲೆ ಭಾಗಕ್ಕೆ ಬಲವಾಗಿ ಪೆಟ್ಟಾಗಿತ್ತು. ತೀವ್ರ ರಕ್ತಸ್ರಾವವಾಗಿ ವಿಜಯಕಾಂತ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೆಲ್ಮೆಟ್ ಹಾಕದೇ ಇದ್ದ ಕಾರಣಕ್ಕೆ ಕೆಳಗೆ ಬಿದ್ದ ರಭಸಕ್ಕೆ ತಲೆ ಭಾಗಕ್ಕೆ ಜೋರಾಗಿ ಪೆಟ್ಟಾಗಿತ್ತು, ಹೆಲ್ಮೆಟ್‌ ಹಾಕಿದರೆ ಜೀವ ಉಳಿಯುತ್ತಿತ್ತು ಎನ್ನಲಾಗಿದೆ.

ಕರ್ತವ್ಯ ಮುಗಿಸಿ ಠಾಣೆಯಿಂದ ಮನೆಗೆ ತೆರಳುವಾಗ ಈ ಘಟನೆ ನಡೆದಿದೆ. ಯರಗಟ್ಟಿಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಎಎಸ್‌ಐ ಸಾವಿಗೆ ಪಿಎಸ್ಐ ಸಸ್ಪೆಂಡ್!

ಯರಗಟ್ಟಿಯ ಕೃಷ್ಣಾ ಬಡಾವಣೆ ಬಳಿ ತಡರಾತ್ರಿ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ್ದರಿಂದ ಅಪಘಾತದಲ್ಲಿ ಎಎಸ್‌ಐ ಮೃತಪಟ್ಟ ಹಿನ್ನೆಲೆಯಲ್ಲಿ ಪಿಎಸ್‌ಐ ಅಮಾನತ್ತು ಮಾಡಲಾಗಿದೆ. ಹೆಲ್ಮೆಟ್‌ ಧರಿಸದೇ ಅತಿವೇಗವಾಗಿ ಬೈಕ್ ಚಲಾಯಿಸುವಾಗ ಹಂಪ್‌ನಲ್ಲಿ ಜಿಗಿದ ಪರಿಣಾಮ ವಿಜಯಕಾಂತ ಮೃತಪಟ್ಟಿದ್ದರು.

ಎಲ್ಲ ಪೊಲೀಸರು ಹೆಲ್ಮೆಟ್ ಧರಿಸುವುದನ್ನು ಬೆಳಗಾವಿ ‌ಎಸ್‌ಪಿ ಕಡ್ಡಾಯಗೊಳಿಸಿದ್ದಾರೆ. ಮೇಲಾಧಿಕಾರಿಗಳ ನಿರ್ದೇಶನ ಸಮರ್ಪಕವಾಗಿ ಅನುಷ್ಠಾನಗೊಳಿಸದೇ ನಿರ್ಲಕ್ಷ್ಯ ತೋರಿದ ಕಾರಣಕ್ಕೆ ‌ದೊಡವಾಡ ಠಾಣೆ ‌ಪಿಎಸ್ಐ ನಂದೀಶ್‌ ಅವರನ್ನು ಅಮಾನತು ಮಾಡಲಾಗಿದೆ. ಪಿಎಸ್ಐ ನಂದಿಶರನ್ನು ಅಮಾನತು ಮಾಡಿ ಬೆಳಗಾವಿ ‌ಎಸ್‌ಪಿ ಡಾ.‌ಭೀಮಾಶಂಕರ ಗುಳೇದ ಆದೇಶ ಹೊರಡಿಸಿದ್ದಾರೆ.

ಲಾರಿ ಡಿಕ್ಕಿಯಾಗಿ ಎರಡು ತುಂಡಾದರು ಬೈಕ್‌ ಸವಾರರು; ಕಾರಿನ ಬಡಿತಕ್ಕೆ ಮತ್ತಿಬ್ಬರು ಸಾವು

ಕಲಬುರಗಿ/ದಾವಣಗೆರೆ: ಭೀಕರ ರಸ್ತೆ ಅಪಘಾತದಲ್ಲಿ (Road Accident) ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ಶಹಬಾದ್ ತಾಲೂಕಿನ ಭಂಕೂರ ಗ್ರಾಮದಲ್ಲಿ ಕಾರುಗಳ ಮಧ್ಯೆ ಡಿಕ್ಕಿಯಾಗಿ ಇಬ್ಬರು ಸ್ಧಳದಲ್ಲೇ ಮೃತಪಟ್ಟಿದ್ದಾರೆ.

ಸ್ವೀಫ್ಟ್ ಕಾರಿನಲ್ಲಿದ್ದ ಮೂವರ ಪೈಕಿ ಇಬ್ಬರು ಸ್ಥಳದಲ್ಲೆ ಮೃತಪಟ್ಟರೆ, ಓರ್ವನ ಸ್ಥಿತಿ ಗಂಭೀರವಾಗಿದೆ. ಜಾಹೀದ್ ಪಠಾಣ್ (30), ಶಾಕೀರ್ (20) ಮೃತ ದುರ್ದೈವಿಗಳು. ಮೃತರು ಉತ್ತರಪ್ರದೇಶ ಮೂಲದ ಬಟ್ಟೆ ವ್ಯಾಪಾರಿಗಳೆಂದು ತಿಳಿದು ಬಂದಿದೆ.

ರಂಜಾನ್ ಹಿನ್ನೆಲೆಯಲ್ಲಿ ಬಟ್ಟೆ ವ್ಯಾಪಾರ ಮುಗಿಸಿಕೊಂಡು ಕಲಬುರಗಿಯಿಂದ ಯಾದಗಿರಿಗೆ ಹೋಗುತ್ತಿರುವಾಗ ಅಪಘಾತ ಸಂಭವಿಸಿದೆ. ಶಹಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಹಬಾದ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಚಿನ್ನದಂಗಡಿಯಲ್ಲಿ ಕಳವಿಗೆ ಯತ್ನಿಸಿದ ನಾಲ್ವರು ಅಂದರ್;‌ ಗುಂಡು ಹಾರಿಸಿದವರಿಗೇ ಗುಂಡೇಟು

ಬೈಕ್‌ಗೆ ಟಿಪ್ಪರ್‌ ಲಾರಿ ಡಿಕ್ಕಿ; ಬೈಕ್‌ ಸವಾರರು ಸಾವು

ಬೈಕ್‌ಗೆ ಹಿಂದಿನಿಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಹನಗವಾಡಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ಅಪಘಾತ ನಡೆದಿದೆ. ಬಾತಿ ಗ್ರಾಮದ ರಾಕೇಶ್ (22), ಆಕಾಶ್ (23 ) ಮೃತ ದುರ್ದೈವಿಗಳು.

ಟಿಪ್ಪರ್ ಲಾರಿ ಚಾಲಕನ ಅಜಾಗರೂಕತೆಯಿಂದಲೇ ಈ ಅಪಘಾತ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಸವಾರರಿಬ್ಬರ ದೇಹವು ತುಂಡಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಹರಿಹರ ತಾಲೂಕು ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version