Site icon Vistara News

Bengaluru Pothole : ಡಾಂಬರು ಹಾಕಿದ ಎರಡೇ ದಿನಕ್ಕೆ ಕುಸಿದ ರಸ್ತೆ; ಕಂದಕಕ್ಕೆ ಸಿಲುಕಿದ ಲಾರಿ ಚಕ್ರ

ಬೆಂಗಳೂರು: ರಸ್ತೆಗೆ ಡಾಂಬರು (Bengaluru Pothole) ಹಾಕಿದ ಎರಡೇ ದಿನದಲ್ಲಿ ರಸ್ತೆ ಕುಸಿದಿರುವ ಘಟನೆ ಮಹಾಲಕ್ಷ್ಮಿ ಲೇಔಟ್ ಮುಖ್ಯ ರಸ್ತೆ ಸಪ್ತಗಿರಿ ಕಲ್ಯಾಣ ಮಂಟಪದ ಬಳಿ ನಡೆದಿದೆ.

ಮಹಾಲಕ್ಷ್ಮಿ ಲೇಔಟ್ ಮೆಟ್ರೋ ನಿಲ್ದಾಣದ ಪಕ್ಕದಲ್ಲಿರುವ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದ್ದು, ಲಾರಿಯೊಂದು ತೆರಳುತ್ತಿದ್ದಾಗ ಕಂದಕಕ್ಕೆ ಚಕ್ರ ಸಿಲುಕಿ ಪರದಾಡಬೇಕಾಯಿತು. ಅದೃಷ್ಟವಶಾತ್‌ ಯಾವುದೇ ಸಾವು-ನೋವು ಸಂಭವಿಸಿಲ್ಲ.

ಬಿಬಿಎಂಪಿಯ ಕಳಪೆ ಕಾಮಗಾರಿಯಿಂದ ರಸ್ತೆ ಕುಸಿದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಮಂಗಳವಾರ ಮುಂಜಾನೆ ಏಕಾಏಕಿ ರಸ್ತೆ ಕುಸಿದಿದ್ದು, 3.5 ಅಡಿ ಆಳದಷ್ಟು ಕಂದಕ ನಿರ್ಮಾಣವಾಗಿದೆ. ಗುಂಡಿ ಬಿದ್ದಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದ ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರದಿಂದಲೇ ರಸ್ತೆ ಕುಸಿದಿದೆ ಎಂದು ಅಂದಾಜಿಸಲಾಗಿದೆ. ಜಲಮಂಡಳಿಯ ಪೈಪ್‌ಲೈನ್ ಹಾದು ಹೋಗಿರುವ ಜಾಗದಲ್ಲೇ ರಸ್ತೆ ಕುಸಿದಿದ್ದು, ಪರಿಣಾಮ ಜಲಮಂಡಳಿಯ ಪೈಪ್ ತುಂಡಾಗಿದೆ.

ಬೈಕ್‌ನಲ್ಲಿ ತೆರಳುತ್ತಿದ್ದಾಗ ಕುಸಿದಿದ್ದ ರಸ್ತೆ
ಆಡುಗೋಡಿಯಿಂದ ಶಿವಾಜಿನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಕಂದಕಕ್ಕೆ ಸವಾರ ಬಿದ್ದು ಗಾಯಗೊಂಡಿದ್ದ ಘಟನೆ ಜನವರಿ 12ರಂದು ನಡೆದಿತ್ತು. ಸುಮಾರು ಎರಡು ಅಡಿಗಳಷ್ಟು ಅಗಲವಾಗಿ ಗುಂಡಿ ಕುಸಿದಿತ್ತು. ಅದೃಷ್ಟವಶಾತ್‌ ಭಾರಿ ಅನಾಹುತವೊಂದು ತಪ್ಪಿತ್ತು. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಶೋಕ್‌ ನಗರ ಪೊಲೀಸರು ಭೇಟಿ ನೀಡಿ, ರಸ್ತೆ ಮಾರ್ಗವನ್ನು ಬದಲಾವಣೆ ಮಾಡಿದ್ದರು. ಸದಾ ವಾಹನಗಳಿಂದ ಕೂಡಿರುವ ರಸ್ತೆಯ ಮಧ್ಯಭಾಗದಲ್ಲಿ ಮಣ್ಣು ಸಡಿಲವಾಗಿದೆ. ಹೀಗಾಗಿ ರಸ್ತೆಯ ಎರಡು ಭಾಗಗಳ ವಾಹನ ಸಂಚಾರವನ್ನು ನಿರ್ಬಂಧ ಮಾಡಲಾಗಿತ್ತು. ಗುಂಡಿ ಬಿದ್ದ ರಸ್ತೆಗೆ ಮೆಟ್ರೋ ಸಿಬ್ಬಂದಿ ಕಾಂಕ್ರೀಟ್ ಹಾಕಿದ್ದರು. ರಸ್ತೆಯ ಎರಡೂ ಬದಿಗಳಲ್ಲೂ ಕೂಡ ಬಹುಮಹಡಿಯ ವಾಣಿಜ್ಯ ಕಟ್ಟಡಗಳಿದ್ದು, ಏಕಾಏಕಿ ರಸ್ತೆಯ ‌ಮಧ್ಯ ಭಾಗದಲ್ಲಿ ಗುಂಡಿ ಬಿದ್ದು ಆತಂಕಕ್ಕೆ ಕಾರಣವಾಗಿತ್ತು. ಈ ಹಿಂದೆ ಕೂಡ ಟೌನ್‌ ಹಾಲ್ ಸಮೀಪ ರಸ್ತೆಯ ಮಧ್ಯಭಾಗದಲ್ಲಿ ಗುಂಡಿಬಿದ್ದಿತ್ತು.

ಇದನ್ನೂ ಓದಿ | Road accident | ಆಗಷ್ಟೇ ಪೂಜೆ ಮಾಡಿಸಿಕೊಂಡು ಬಂದ ಹೊಸ ಕಾರು ಡಿಕ್ಕಿ: ಫುಟ್‌ಪಾತ್‌ ಮೇಲೆ ಹೋಗಿ ಬಿದ್ದ ಬೈಕ್‌ ಸವಾರ ಮೃತ್ಯು

Exit mobile version