Site icon Vistara News

Love Case : ಪ್ರೀತ್ಸೆ ಪ್ರೀತ್ಸೆ ಎಂದು ಅಪ್ರಾಪ್ತೆಯ ಕೊಂದೇ ಬಿಟ್ಟ ಪಾಗಲ್‌ ಪ್ರೇಮಿ

Lover kidnapped and killed for refusing love

ಬೆಂಗಳೂರು ಗ್ರಾಮಾಂತರ/ಕೋಲಾರ: ಪ್ರೀತ್ಸೆ ಪ್ರೀತ್ಸೆ ಎಂದು ಹಿಂದೆ ಬಿದ್ದ (Love Case) ಪಾಗಲ್‌ ಪ್ರೇಮಿಯೊಬ್ಬ ಬಾಲಕಿಯನ್ನು ಹತ್ಯೆ (Murder Case) ಮಾಡಿದ್ದಾನೆ. 2 ದಿನಗಳ ಹಿಂದೆ ಕಾಣೆಯಾಗಿದ್ದ 15 ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಬೆಂಗಳೂರು ಗ್ರಾಮಾಂತರದ ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶವ ಸಿಕ್ಕಿದೆ. ಕೋಲಾರದ ಮಾಲೂರು ತಾಲೂಕಿನ ದೊಮ್ಮಲೂರು ಗ್ರಾಮದ ನಂದಿತ (15) ಮೃತ ದುರ್ದೈವಿ.

ಬೆಂಗಳೂರು ಗ್ರಾಮಾಂತರದ ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಂದಿತಾಳ ಶವ ಪತ್ತೆಯಾಗಿತ್ತು. ನಂದಿತ ಹಿಂದೆ ಬಿದ್ದಿದ್ದ ನಿತಿನ್‌ ಎಂಬಾತ ಆಕೆಯನ್ನು ಕಿಡ್ನ್ಯಾಪ್‌ ಮಾಡಿ ಕೊಲೆಗೈದಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಬರಗೂರು ಗ್ರಾಮದ ನಿವಾಸಿ ನಿತಿನ್ (23) ನಂದಿತಾಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ.

ಈ ಪಾಗಲ್ ಪ್ರೇಮಿಯ ಪ್ರೀತಿಯನ್ನು ನಂದಿತಾ ನಿರಾಕರಿಸಿದ್ದಳು. ಶಾಲೆ ಮುಗಿಸಿ ಮನೆಗೆ ಬರುವಾಗ ನಂದಿತಾಳನ್ನು ಅಪಹರಿಸಿದ್ದಾನೆ. ಆಗಲೂ ಆಕೆ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಚಾಕುವಿನಿಂದ ತಿವಿದು ಕೊಲೆಗೈದಿದ್ದಾನೆ. ಕೊಲೆ ನಂತರ ಆರೋಪಿ ನಿತಿನ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆ ಮಾಡಿಕೊಳ್ಳುವ ಹೈಡ್ರಾಮಾ ಮಾಡಿದ್ದಾನೆ.

ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಕಳೆದ 15 ದಿನಗಳ ಹಿಂದೆಯೂ ಬಾಲಕಿಯನ್ನು ಚುಡಾಯಿಸಿದ್ದ. ಆಗ ನ್ಯಾಯ ಪಂಚಾಯಿತಿ ಮಾಡಿ ಕಳಿಸಿದ್ದರು. ಆದರೆ ಇದೀಗ ಬಾಲಕಿಯನ್ನು ಕೊಂದಿದ್ದಾನೆ. ಸದ್ಯ ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Bantwal News: ಚಲಿಸುತ್ತಿದ್ದ ಬಸ್‌ನಿಂದ ಆಯ ತಪ್ಪಿ ಬಿದ್ದು ಮಹಿಳೆ ಸಾವು

ಮಾಟ ಮಂತ್ರಕ್ಕೆ ಹೆಂಡ್ತಿ ಸಾಯದ್ದಕ್ಕೆ ಸುಪಾರಿ ಕೊಟ್ಟು ಕೊಂದ

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್‌ನಲ್ಲಿ ಗೃಹಿಣಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ಇದೀಗ ಪ್ರಕರಣವನ್ನು ಭೇದಿಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮಹಿಳೆಯ ಶವ ನೋಡಿದ ಪೊಲೀಸರಿಗೆ ಸಣ್ಣದೊಂದು ಅನುಮಾನ ಬಂದಿತ್ತು. ಮೊದಮೊದಲು ಆತ್ಮಹತ್ಯೆ ಎಂದುಕೊಂಡಿದ್ದ ಪ್ರಕರಣವು ಹತ್ಯೆಯಾಗಿ (Murder Case) ಬದಲಾಗಿದೆ.

ಕಳೆದ ಫೆ.4ರ ಭಾನುವಾರದಂದು ಪ್ರೇಮಲತಾ ಎಂಬಾಕೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಐದು ಅಡಿ ಎತ್ತರದ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಮೊದಲಿಗೆ ಆತ್ಮಹತ್ಯೆ ಎಂದು ಬಿಂಬಿಸಲಾಗಿತ್ತು. ನಂತರ ತನಿಖೆಗಿಳಿದ ಪೊಲೀಸರಿಗೆ ಇದು ಆತ್ಮಹತ್ಯೆ ಅಲ್ಲ ಬದಲಿಗೆ ಕೊಲೆ ಎಂದು ತಿಳಿದಿತ್ತು. ಪ್ರೇಮಲತಾ ಹತ್ಯೆಗೆ ಆಕೆಯ ಪತಿ ಶಿವಶಂಕರ್ ಸ್ನೇಹಿತ ವಿನಯ್‌ಗೆ ಸುಪಾರಿ ನೀಡಿದ್ದ ಎಂದು ತಿಳಿದು ಬಂದಿದೆ.

ಪತ್ನಿ ಶೀಲ ಶಂಕಿಸಿದ್ದ ಶಿವಶಂಕರ

ಹೌಸ್‌ ಕೀಪಿಂಗ್ ಕೆಲಸ ಮಾಡುತ್ತಿದ್ದ ಪ್ರೇಮಲತಾಳ ಮೇಲೆ ಪತಿ ಶಿವಶಂಕರ್‌ಗೆ ವಿಪರೀತ ಅನುಮಾನವಿತ್ತು. ಆಕೆ ಬೇರೆಯವರ ಜತೆ ದೈಹಿಕ ಸಂಪರ್ಕ ಹೊಂದಿದ್ದಾಳೆ, ತನಗೆ ವಂಚನೆ ಮಾಡುತ್ತಿದ್ದಾಳೆ ಎಂದುಕೊಂಡಿದ್ದ. ಈ ವಿಚಾರವಾಗಿ ಅನೇಕ ಬಾರಿ ಪತ್ನಿ ಪ್ರೇಮಲತಾ ಜತೆ ಜಗಳವಾಡಿದ್ದ. ಒಂದು ಹೆಜ್ಜೆ ಮುಂದೆ ಹೋಗಿ ಪತ್ನಿಗೆ ತಿಳಿಯದಂತೆ ಮನೆಗೆ ಸಿಸಿಟಿವಿ ಅಳವಡಿಕೆ ಮಾಡಿದ್ದ. ಆದರೂ ಆತನಿಗೆ ಪತ್ನಿಯ ಮೇಲಿನ ಅನುಮಾನ ಕಡಿಮೆ ಆಗಿರಲಿಲ್ಲ.

ವಾಮಾಚಾರ ಮಾಡಿಸಿ, ಸುಪಾರಿ ಕೊಟ್ಟ

ನನಗೆ ಮೋಸ ಮಾಡುತ್ತಿದ್ದಾಳೆ ಎಂದು ಸಿಟ್ಟಿಗೆದ್ದ ಶಿವಶಂಕರ, ಈ ಹಿಂದೆ ಪತ್ನಿ ಮೇಲೆ ವಾಮಾಚಾರ ಮಾಡಿಸಿದ್ದ. ಆದರೆ ಅದರಿಂದ ಯಾವುದೇ ಎಫೆಕ್ಟ್ ಆಗಲಿಲ್ಲ. ಕಡೆಗೆ ಪತ್ನಿಯನ್ನು ಕೊಂದು ಬಿಡುವ ಎಂದುಕೊಂಡಿದ್ದ. ಹತ್ಯೆಗೆ ಹೊಂಚು ಹಾಕುತ್ತಿದ್ದ ಶಿವಶಂಕರ್‌ಗೆ ಹಂತಕ ವಿನಯ್ ಪರಿಚಯವಾಗಿದ್ದ. ಐಡಿಎಫ್‌ಸಿ ಬ್ಯಾಂಕ್ ಸಂಬಂಧಿತ ಕೆಲಸಗಳಲ್ಲಿ ವಿನಯ್ ಆಪ್ತ ಸ್ನೇಹಿತನಾಗಿದ್ದ. ಈ ಮೊದಲು ವಿನಯ್‌ ಕೂಡ ಪತ್ನಿಯ ಶೀಲ ಶಂಕಿಸಿ ಕೊಲೆ ಕೇಸ್‌ನಲ್ಲಿ ಜೈಲಿಗೆ ಹೋಗಿ ಬಂದಿದ್ದ, ಈ ಬಗ್ಗೆ ಶಿವಶಂಕರ್ ಬಳಿ ಎಲ್ಲವನ್ನೂ ಹೇಳಿಕೊಂಡಿದ್ದ.

ಹುಣಸಮಾರನಹಳ್ಳಿ ಬಳಿ ಇರುವ ಕೆರೆಯಲ್ಲಿ ವಿನಯ್ ಪತ್ನಿ ಶವ ಪತ್ತೆಯಾಗಿತ್ತು. ಮೊದಲಿಗೆ ಆತ್ಮಹತ್ಯೆ ಎಂದುಕೊಂಡಿದ್ದ ಪೊಲೀಸರಿಗೆ ಫೊರೆನ್ಸಿಕ್ ರಿಪೋರ್ಟ್‌ನಲ್ಲಿ ಯಾರೋ ಹಿಂದಿನಿಂದ ನೀರಿಗೆ ದಬ್ಬಿ ಕೊಂದು ಹಾಕಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ವಿನಯ್‌ನನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು.

ಈ ವಿಚಾರ ಶಿವಶಂಕರ್‌ಗೆ ಕನೆಕ್ಟ್ ಆಗಿತ್ತು. ಹೀಗಾಗಿ ವಿನಯ್‌ ಜತೆಗೆ ಶಿವಶಂಕರ್ ತನ್ನ ಸಮಸ್ಯೆ ಹೇಳಿಕೊಂಡಿದ್ದ. ಪತ್ನಿಯನ್ನು ಕೊಲ್ಲಲ್ಲು ಸುಪಾರಿ ಕೊಟ್ಟು ಇಂತಿಷ್ಟು ಹಣ ನೀಡಿದ್ದ. ಅಷ್ಟೆ ಅಲ್ಲದೆ ಸಾಕ್ಷಿ ಸಿಗಬಾರದೆಂದು ಕೊಲೆಯ ದಿನ ಮನೆಗೆ ಅಳವಡಿಸಿದ್ದ ಸಿಸಿಟಿವಿ ತೆಗೆದು ಹಾಕಿದ್ದ.

ತನ್ನ ಮನೆಯ ಫೋಟೊವನ್ನು ವಿನಯ್‌ಗೆ ಕಳಿಸಿದ್ದ. ಕೊಲೆಯಾದ ದಿನ ಶಿವಶಂಕರ್ ತಾನು ಮನೆಯಲ್ಲಿ ಇರಲಿಲ್ಲ ಎಂದು ಬಿಂಬಿಸಿಕೊಳ್ಳಲು ಹೊರಗಡೆ ಹೋಗಿದ್ದ. ನಂತರ ಮನೆಗೆ ಬಂದಿದ್ದ ವಿನಯ್, ಪ್ರೇಮಲತಾಳನ್ನು ಉಸಿರುಗಟ್ಟಿಸಿ ಕೊಂದು ಹಾಕಿದ್ದ. ನಂತರ ಆತ್ಮಹತ್ಯೆ ಎಂದು ಬಿಂಬಿಸಲು ನೇಣು ಬಿಗಿದು ಪರಾರಿಯಾಗಿದ್ದ.

ಇನ್ನು ಈ ಸಂಬಂಧ ಪೊಲೀಸರಿಗೆ ಯಾವುದೇ ಕ್ಲೂ ಇರಲಿಲ್ಲ. ಸಿಡಿಆರ್‌ನಲ್ಲಿ ಕೂಡ ಶಿವಶಂಕರ್‌ ಲೊಕೇಷನ್ ಬೇರೆ ಕಡೆಯೇ ತೋರಿಸುತಿತ್ತು. ಹೀಗಾಗಿ ಆತ ಕೊಲೆ ಮಾಡಿದ್ದಾನೆ ಎಂಬುದಕ್ಕೆ ಸಾಕ್ಷಿ ಇರಲಿಲ್ಲ. ಸುಮಾರು 200ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಒಂದರಲ್ಲಿ ಕಾಣಿಸಿಕೊಂಡ ಹಂತಕನ ಬ್ಯಾಗ್ ಇಡೀ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿತ್ತು. ಆರೋಪಿಗಳನ್ನು ಬಂಧಿಸಿರುವ ಮಹಾಲಕ್ಷ್ಮಿ ಲೇಔಟ್ ಪೊಲೀಸರು ವಿಚಾರಣೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version