Site icon Vistara News

Actor Nagabhushana : ಯಾವ್ಯಾವ ಕೇಸ್‌ನಲ್ಲಿ ನಟ ನಾಗಭೂಷಣ್‌ ಲಾಕ್‌; ಈ ಶಿಕ್ಷೆ ಗ್ಯಾರಂಟಿನಾ

Actor Nagabhushan road accident

ಬೆಂಗಳೂರು: ನಟ ನಾಗಭೂಷಣ ಚಲಾಯಿಸುತ್ತಿದ್ದ (Actor Nagabhushana) ಕಾರು ದಂಪತಿಗೆ ಡಿಕ್ಕಿಯಾಗಿದ್ದು, ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿರುವ ವ್ಯಕ್ತಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಅಪಘಾತದ ಸಂಬಂಧ ಮೃತ ಕುಟುಂಬಸ್ಥರಿಂದ ದೂರು ದಾಖಲಾಗಿದೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ನಾಗಭೂಷಣನನ್ನು ವಶಕ್ಕೆ ಪಡೆದು ಬಳಿಕ ಸ್ಟೇಶನ್‌ ಬೇಲ್‌ ನೀಡಿದ್ದಾರೆ.

ನಟ ನಾಗಭೂಷಣ್‌ ವಿರುದ್ಧ ಐಪಿಸಿ 279 , 337 ಹಾಗೂ 304A ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ನಿರ್ಲಕ್ಷ್ಯದಿಂದ ಕಾರು ಚಾಲನೆ ಹಾಗೂ ಅತಿ ವೇಗವಾಗಿ ಫುಟ್‌ಪಾತ್‌ ಮೇಲೆ ಚಲಾಯಿಸದ್ದಕ್ಕೆ ಐಪಿಸಿ 279 ಹಾಕಲಾಗಿದೆ. 337 ಜೀವಕ್ಕೆ ಹಾನಿ ಹಾಗೂ 304 A ಅಡಿ ಅಪಘಾತ ಪ್ರಕರಣವನ್ನು ದಾಖಲು ಮಾಡಲಾಗಿದೆ.

ನಟ ನಾಗಭೂಷಣ್‌ನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲ್ಲ. ಇದು ಹಿಟ್‌ ಆ್ಯಂಡ್‌ ರನ್ ಕೇಸ್‌ ಅಲ್ಲ, ಇದೊಂದು ಅಪಘಾತದ ಪ್ರಕರಣವಾಗಿದೆ. ಹೀಗಾಗಿ ಠಾಣಾ ಜಾಮೀನು ಕೊಡುತ್ತೇವೆ ಎಂದು ಸಂಚಾರಿ ದಕ್ಷಿಣ ವಿಭಾಗ ಡಿಸಿಪಿ ಶಿವಪ್ರಕಾಶ್ ದೇವರಾಜ್‌ ಪ್ರತಿಕ್ರಿಯಿಸಿದ್ದಾರೆ.

ಶನಿವಾರ ರಾತ್ರಿ 9.30ರ ಸುಮಾರಿ ಅಪಘಾತ ನಡೆದಿದೆ. ಪ್ರೇಮ ಹಾಗೂ ಕೃಷ್ಣ ದಂಪತಿ ವಾಕಿಂಗ್‌ ಮಾಡುವಾಗ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪ್ರೇಮ ಅವರು ಮೃತರಾಗಿದ್ದಾರೆ. ಕೃಷ್ಣ ಅವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಡಿಸಿಪಿ ಶಿವಪ್ರಕಾಶ್ ದೇವರಾಜ್‌ ಮಾಹಿತಿ ನೀಡಿದ್ದಾರೆ.

ಕಾರು ನಿಯಂತ್ರಣ ತಪ್ಪಿ ಫುಟ್‌ಪಾತ್ ಹತ್ತಿದೆ. ನಾಗಭೂಷಣ್ ಎಂಬುವವರನ್ನು ವಶಕ್ಕೆ ಪಡೆದಿದ್ದೇವೆ. ಮದ್ಯಪಾನ ಮಾಡಿ ಕಾರು ಚಲಾಯಿಸುತ್ತಿದ್ದರಾ ಎಂಬುದನ್ನು ತಿಳಿಯಲು ಆಲ್ಕೋಹಾಲ್ ಟೆಸ್ಟ್‌ಗೆ ಕಳುಹಿಸಿದ್ದೇವೆ. ಸದ್ಯ ಆರೋಪಿಗೆ ಠಾಣಾ ಜಾಮೀನು ನೀಡಿ ಕಳುಹಿಸಿದ್ದೇವೆ. ಪ್ರಕರಣ ಸಂಬಂಧ ಮತ್ತೆ ವಿಚಾರಣೆಗೆ ಕರೆಯುತ್ತೇವೆ. ಅಪಘಾತ ನಡೆದ ಸ್ಥಳದಲ್ಲಿ ಎರಡು ಕಡೆ ತಗ್ಗು ಇದೆ. ಹೀಗಾಗಿ ಘಟನೆ ಹೇಗೆ ಆಗಿದೆ ಎಂದು ವಿಚಾರಣೆಯನ್ನು ನಡೆಸಲಾಗುವುದು ಎಂದರು.

ಇದನ್ನೂ ಓದಿ: Actor Nagabhushana: ಡ್ರಿಂಕ್ ಆ್ಯಂಡ್‌ ಡ್ರೈವ್ ಅಲ್ಲ; ಬಂಧನದ ಬಳಿಕ ನಟ ನಾಗಭೂಷಣ ಹೇಳಿದ್ದೇನು?

ಏನಿದು ಘಟನೆ?

ಕೌಸಲ್ಯಾ ಸುಪ್ರಜಾ ರಾಮ ಚಿತ್ರದಲ್ಲಿ ನಟಿಸಿರುವ ನಟ ನಾಗಭೂಷಣ ಅವರ (Actor Nagabhushana) ಕಾರು ದಂಪತಿಗೆ ಡಿಕ್ಕಿಯಾಗಿದ್ದು, ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರಿನ ವಸಂತನಗರ ಮುಖ್ಯರಸ್ತೆಯ ಬಳಿ ಶನಿವಾರ ರಾತ್ರಿ (ಸೆಪ್ಟೆಂಬರ್‌ 30) ದಂಪತಿಯು ನಡೆದುಕೊಂಡು ಹೋಗುವಾಗ ನಾಗಭೂಷಣ ಅವರ ಕಾರು ಡಿಕ್ಕಿಯಾಗಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಕೃಷ್ಣ (58) ಹಾಗೂ ಅವರ ಪತ್ನಿ ಪ್ರೇಮಾ (48) ಅವರು ರಾತ್ರಿ ವಾಕಿಂಗ್‌ ಮಾಡುವಾಗ ನಟ ನಾಗಭೂಷಣ ಅವರು ಚಲಾಯಿಸುತ್ತಿದ್ದ ಕಾರು ಡಿಕ್ಕಿಯಾಗಿದೆ. ಮೊದಲು ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿಯಾಗಿದ್ದು, ನಂತರ ಫುಟ್‌ಪಾತ್‌ ಮೇಲೆ ನಡೆದುಕೊಂಡು ಹೋಗುತ್ತಿದ್ದ ದಂಪತಿಗೆ ಕಾರು ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಪ್ರೇಮಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿರುವ ಕೃಷ್ಣ ಅವರು ಬನ್ನೇರುಘಟ್ಟದಲ್ಲಿರುವ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೃಷ್ಣ ಹಾಗೂ ಪ್ರೇಮಾ.

ಉತ್ತರಹಳ್ಳಿ ಕೋಣನಕುಂಟೆ ಕ್ರಾಸ್ ದಾರಿಯ ಮಧ್ಯೆ ರಾತ್ರಿ 9.45ರ ಸುಮಾರಿಗೆ ಅಪಘಾತ ಸಂಭವಿಸಿದೆ. ಕೃಷ್ಣ ಹಾಗೂ ಪ್ರೇಮಾ ದಂಪತಿಯ ಪುತ್ರ ಪಾರ್ಥ ಎಂಬುವರು ಕುಮಾರಸ್ವಾಮಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಪಾರ್ಟ್‌ಮೆಂಟ್‌ ಬಳಿಯ ಫುಟ್‌ಪಾತ್‌ ಮೇಲೆ ವಾಕಿಂಗ್‌ ಮಾಡುವಾಗ ವೇಗವಾಗಿ ಬಂದ ಕಾರು ಡಿಕ್ಕಿಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕೃಷ್ಣ ಅವರ ಪರಿಸ್ಥಿತಿಯೂ ಗಂಭೀರವಾಗಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಕೃಷ್ಣ ಅವರ ಕೈ, ಕಾಲು ಹಾಗೂ ಬೆನ್ನಿಗೆ ಗಂಭೀರವಾಗಿ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಮೃತ ಪ್ರೇಮಾ ಅವರ ಶವವನ್ನು ಕಿಮ್ಸ್‌ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version