Site icon Vistara News

ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಅನಂತಕುಮಾರ್‌ ಅವರ ಕೊಡುಗೆ ಅಪಾರ: CM ಬಸವರಾಜ ಬೊಮ್ಮಾಯಿ ಶ್ಲಾಘನೆ

ಬೆಂಗಳೂರು: ಕೇಂದ್ರದ ಮಾಜಿ ಸಚಿವರಾಗಿದ್ದ ದಿವಂಗತ ಅನಂತ್ ಕುಮಾರ್ ಅವರು ರಾಜ್ಯದ ನೆಲ ಜಲ ವಿಷಯಗಳಲ್ಲಿ ರಾಜ್ಯ ಹಾಗೂ ಕನ್ನಡ ಜನರ ಪರ ಗಟ್ಟಿ ನಿಲುವು ಹೊಂದಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರಿನ ಜಯನಗರ ಬಡಾವಣೆಯ ಅನಂತ್ ಕುಮಾರ್ ಅವರ ಕಚೇರಿಯಲ್ಲಿ ಅನಂತ ಪ್ರೇರಣಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಬೆಂಗಳೂರಿನ ಮೆಟ್ರೋ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗ, ಕೃಷ್ಣಾ ಮೇಲ್ದಂಡೆ ಯೋಜನೆ, ಕಾವೇರಿ ಜಲ ವಿಷಯದಲ್ಲಿ ಬಿಗಿ ನಿಲುವಿನಿಂದ ರಾಜ್ಯಕ್ಕೆ ಪರಿಹಾರ ಕೊಡಿಸುವಲ್ಲಿ ಅನಂತಕುಮಾರ್ ಅವರು ಪ್ರಮುಖ ಪಾತ್ರ ವಾಹಿಸಿದ್ದಾರೆ. ಅವರು ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ದೊಡ್ಡ ಕೊಡುಗೆಯನ್ನು ನೀಡಿ ಕೇಂದ್ರದಿಂದ ಆಗಬೇಕಾದ ಬೆಂಗಳೂರಿನ ಹಾಗೂ ರಾಜ್ಯದ ಎಲ್ಲ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಹಕಾರ ನೀಡಿದ್ದರು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಅನಂತಕುಮಾರ್ ಒಬ್ಬ ನೈಜ ನಾಯಕ. ಯಾವುದೇ ಸ್ಥಿತಿಯಲ್ಲಿ, ಹಂತದಲ್ಲಿ ನಾಯಕತ್ವವನ್ನು ವಹಿಸುವ ನೈಜ ನಾಯಕ ಎನಿಸಿಕೊಳ್ಳುತ್ತಾರೆ. ವಿದ್ಯಾರ್ಥಿ ದೆಸೆಯಿಂದ ವಿದ್ಯಾರ್ಥಿ ಆಂದೋಲನದಲ್ಲಿ, ಮುಂದೆ ಎಬಿವಿಪಿ ಸಂಘಟನೆಗಳಲ್ಲಿ ನಾಯಕತ್ವ ವಹಿಸಿದರು. ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ನಾಯಕತ್ವ ವಹಿಸಿ ಹಾಗೂ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಬಲಪಡಿಸುವುದರಲ್ಲಿ, ಹತ್ತು ಜನ ಇದ್ದಾಗಲೂ, ಹತ್ತು ಲಕ್ಷ ಜನ ಇದ್ದಾಗಲೂ ನಾಯಕತ್ವ ವಹಿಸಿದ್ದರು. ಬಹಳ ಅಪರೂಪದ ನಾಯಕತ್ವ ಅವರದ್ದು ಹಾಗು ಕೃಷ್ಣಾ ಟ್ರಿಬ್ಯುನಲ್ ವಿಚಾರದಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ನ್ಯಾಯ ಸಮ್ಮತವಾಗಿ ಕರ್ನಾಟಕದ ಪರವಾಗಿ ಹೋರಾಟ ಮಾಡಿ ಕರ್ನಾಟಕದ ಹಿತ ಕಾಪಾಡಿದ್ದಾರೆ. ಆ ಮೂಲಕ ರಾಜ್ಯದ ಆಪತ್ತನ್ನು ಅವರು ತಪ್ಪಿಸಿದರು ಎಂದರು.

ಇದನ್ನೂ ಓದಿ: ನೇಕಾರರ, ಮೀನುಗಾರರ ಮಕ್ಕಳಿಗೂ ರೈತ ವಿದ್ಯಾನಿಧಿ ವಿಸ್ತರಣೆ : CM ಬಸವರಾಜ ಬೊಮ್ಮಾಯಿ

ಯಾವ ಉದ್ದೇಶಕ್ಕಾಗಿ ಬದುಕು ನಡೆಸಿದರೊ ಅದಕ್ಕಾಗಿ ಅವರು ಹೋರಾಟವನ್ನು ಮಾಡಿದವರು ಅನಂತಕುಮಾರ್. ತೇಜಸ್ವಿನಿ ಅನಂತಕುಮಾರ್ ಅವರ ಸಾಮಾಜಿಕ ಚಟುವಟಿಕೆಗಳು, ಅದಮ್ಯಚೇತನದ ಕೆಲಸ, ಸಸ್ಯಾಗ್ರಹ ಕಾರ್ಯಕ್ರಮ ಎಲ್ಲವೂ ಮುಂದುವರೆದಿರುವುದು ಶ್ಲಾಘನೀಯ. ಅನಂತಕುಮಾರ್ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಎಲ್ಲ ಸಹಕಾರ ನೀಡುತ್ತದೆ ಎಂದರು.

Exit mobile version