Site icon Vistara News

Araga Jnanendra : ಸ್ಯಾಂಟ್ರೊ ರವಿಯನ್ನು ಹುಟ್ಟುಹಾಕಿದ್ದು ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ನವರು: ಆರಗ ಜ್ಞಾನೇಂದ್ರ

Home minister araga jnanendra reaction about lokayukta-raid

ಬೆಂಗಳೂರು: ಸ್ಯಾಂಟ್ರೊ ರವಿ ಹಾಗೂ ಅಂಥವರನ್ನು ಹುಟ್ಟುಹಾಕಿದ್ದು ಎಚ್‌.ಡಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ನಂಥವರೇ ವಿನಃ ಬಿಜೆಪಿಯಲ್ಲ ಎಂದು ಗೃಹಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ. ಬಿಜೆಪಿ ವಿರುದ್ಧ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ವಾಗ್ದಾಳಿ ಕುರಿತು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಪ್ರತಿಭಟನೆ ಕುರಿತು ಮಾತನಾಡಿದ ಆರಗ ಜ್ಞಾನೇಂದ್ರ, ಕಾಂಗ್ರೆಸ್‌ನವರು ಎಷ್ಟೇ ಪ್ರತಿಭಟನೆ ಮಾಡಿದರೂ ಜನ ಅವರನ್ನು ನಂಬುವುದಿಲ್ಲ. ಲೋಕಾಯುಕ್ತಕ್ಕೆ ಬಾಗಿಲು ಹಾಕಿದವರು ಅವರು. ಪಿಎಸ್ಐ ಕೇಸ್‌ನಲ್ಲಿ ಕಾಂಗ್ರೆಸ್‌ ಮುಖಂಡ ಆರ್‌ಡಿ ಪಾಟೀಲ್ ಬಂಧನವಾಗಿದೆ. ಈತ ನಮ್ಮವನಲ್ಲ ಅಂತ ಕಾಂಗ್ರೆಸ್‌ನವರು ಹೇಳುತ್ತಿದ್ದರು. ಅವರದ್ದೇ ಪಕ್ಷದ ರಮೇಶ್ ಕುಮಾರ್ ಅವರೇ ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿಕೊಂಡಿರೋದಾಗಿ ಹೇಳಿದ್ದಾರೆ. ಇದಕ್ಕಿಂತಲೂ ಉದಾಹರಣೆ ಬೇಕಾ ಅವರು ಭ್ರಷ್ಡಾಚಾರಿಗಳು ಅನ್ನೋದಿಕ್ಕೆ? ಗಿಮಿಕ್ ಮಾಡಿ ಓಟ್ ಪಡೆಯಲು ಈಥರ ಪ್ರತಿಭಟನೆ ಮಾಡಿದ್ದಾರೆ. ಅವರ ತಂತ್ರ ಫಲ ಕೊಡುವುದಿಲ್ಲ ಎಂದರು.

ಅಯೋಧ್ಯೆ ಹಾಗೂ ದತ್ತಪೀಠ ಹೋರಾಟದ ಕುರಿತು ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಆರಗ ಜ್ಞಾನೇಂದ್ರ, ಅಲ್ಪಸಂಖ್ಯಾತರ ಓಲೈಕೆಗಾಗಿ ಹೀಗೆ ಮಾತಾಡಿದಾರೆ. ಓಲೈಕೆ ಮಾತುಗಳನ್ನಾಡಿಯೇ ಕಾಂಗ್ರೆಸ್ ಕಳೆದುಹೋಗುತ್ತಿದೆ. ಕಾಂಗ್ರೆಸ್ ನವರ ಇಂಥ ಮಾತುಗಳಿಗೆ ಯಾವುದೇ ಬೆಲೆ ಇಲ್ಲ ಎಂದರು.

ಗೃಹ ಸಚಿವ ಒಬ್ಬ ಯೂಸ್ ಲೆಸ್ ಮಿನಿಸ್ಟರ್ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಕೆಲವೊಂದು ಶಬ್ದಗಳನ್ನು ಬಳಕೆ ಮಾಡುತ್ತಿದ್ದಾರೆ. ನಿಜಕ್ಕೂ ಈ ಮಾತುಗಳು ಅವರಿಗೆ ಶೋಭೆ ತರುವಂತಹದ್ದಲ್ಲ. ತಾವು ಮಾಜಿ ಮುಖ್ಯಮಂತ್ರಿ ಎನ್ನುವುದನ್ನು ಅವರು ಅರಿತು ಮಾತನಾಡಲಿ. ಅವರಿಂದ ಸರ್ಟಿಫಿಕೇಟ್ ಪಡೆಯುವ ಅಗತ್ಯತೆಯೂ ನನಗೆ ಇಲ್ಲ ಎಂದರು.

ಇದನ್ನೂ ಓದಿ : Santro Ravi Case: ಸಿಐಡಿ ಅಧಿಕಾರಿಗಳಿಂದ ಸ್ಯಾಂಟ್ರೋ ರವಿ 2ನೇ ಪತ್ನಿ ವಿಚಾರಣೆ, ಸ್ಥಳ ಮಹಜರು

ಸ್ಯಾಂಟ್ರೋ ರವಿ ಬಿಜೆಪಿ ಸರ್ಕಾರದಿಂದ ಹುಟ್ಟಿಕೊಂಡವನಲ್ಲ. 20 ವರ್ಷಗಳಿಂದ ಹಿಂದಿನ ಕಾಂಗ್ರೆಸ್ ಸರ್ಕಾರದಿಂದಲೂ ಹುಟ್ಟಿಕೊಂಡಿರುವವನು. ಸ್ಯಾಂಟ್ರೋ ರವಿಯಂತಹ ಅನೇಕರನ್ನು ಕುಮಾರಸ್ವಾಮಿ ಮತ್ತೆ ಕಾಂಗ್ರೆಸ್‌ನವರು ಹುಟ್ಟಿ ಹಾಕಿದ್ದಾರೆಯೇ ವಿನಃ ಬಿಜೆಪಿಯವರಲ್ಲ ಎಂದರು.

Exit mobile version