Site icon Vistara News

Attempt To Murder : ಸಾಲ ವಾಪಸ್‌ ಕೊಡುವುದಾಗಿ ಹೇಳಿ ಕಾರು ಚಾಲಕನ ತಲೆ ಸೀಳಿದ ಸ್ನೇಹಿತರು

Car driver brutally assaulted

ಬೆಂಗಳೂರು: ಹಣದ ವಿಷಯ ಬಂದರೆ ಸ್ನೇಹಿತರು, ಪರಿಚಿತರು, ಸಂಬಂಧಿಕರೇ ದುಷ್ಟನ್ ಆಗುವ ಕಾಲವಿದು. ಸದ್ಯ ಹಣಕಾಸಿನ ವಿಚಾರಕ್ಕೆ ಬೆಂಗಳೂರಲ್ಲಿ ಯುವಕನ ಮೇಲೆ ಆತನ ಪರಿಚಿತರೇ ಮಾರಣಾಂತಿಕ ಹಲ್ಲೆ (Attempt To Murder) ನಡೆಸಿದ್ದಾರೆ. ಮಾರುತಿ ಎಂಬ ಕಾರು ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮಚ್ಚು, ಲಾಂಗ್‌ನಿಂದ ದಾಳಿ ಮಾಡಿ ತಲೆ ಸೀಳುವಂತೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ.

ಕೆಂಚ ಎಂಬಾತ ಮಾರುತಿ ಬಳಿ 25 ಸಾವಿರ ರೂ. ಹಣವನ್ನು ಪಡೆದಿದ್ದ. ದಿನ ಕಳೆದರೂ ಸಾಲದ ಹಣವನ್ನು ಕೆಂಚ ವಾಪಸ್‌ ಮಾಡಿರಲಿಲ್ಲ. ಮಾರುತಿ ಸಾಲವನ್ನು ವಾಪಸ್ ಕೇಳಿದ್ದಕ್ಕೆ, ಹಣ ನೀಡುವುದಾಗಿ ಹೇಳಿ ಕೆಂಚ ಹೆಬ್ಬೂರಿಗೆ ಕರೆಸಿಕೊಂಡಿದ್ದ. ಹೆಬ್ಬೂರಿಗೆ ಬಂದ ಮಾರುತಿಗೆ ಹಣ ವಾಪಸ್ ಕೊಡದೇ ಕೆಂಚ ಮತ್ತು ಆತನ ಸ್ನೇಹಿತರು ಹಲ್ಲೆ ನಡೆಸಿದ್ದರು.

ಅವರಿಂದ ಹೇಗೋ ತಪ್ಪಿಸಿಕೊಂಡ ಮಾರುತಿ ಕಾರಿನಲ್ಲಿ ಬೆಂಗಳೂರಿಗೆ ವಾಪಸ್‌ ಆಗುತ್ತಿದ್ದ. ಇಷ್ಟಕ್ಕೆ ಸುಮ್ಮನಾಗದ ಕೆಂಚನ ಸ್ನೇಹಿತ ತೇಜು ಎಂಬಾತ ತನ್ನ ಗ್ಯಾಂಗ್‌ ಜತೆಗೆ ಸೇರಿ ಮಾರುತಿ ಕಾರನ್ನು ಹಿಂಬಾಲಿಸಿದ್ದರು. ನಂದಿನಿ ಲೇಔಟ್‌ನ ಲಗ್ಗೆರೆ ಬಳಿ ಬಂದಾಗ ಕಾರು ಅಡ್ಡಗಟ್ಟಿ ಲಾಂಗು, ಮಚ್ಚಿನಿಂದ ಏಕಾಏಕಿ ದಾಳಿ ಮಾಡಿ, ಅಲ್ಲಿಂದ ಕಾಲ್ಕಿತ್ತಿದ್ದರು.

ತುಮಕೂರಿನ ಹೆಬ್ಬೂರಿನಿಂದ ಲಗ್ಗೆರೆವರೆಗೂ ಸುಮಾರು 100 ಕಿ.ಮೀ ವರೆಗೆ ಕಾರನ್ನು ಹಿಂಬಾಲಿಸಿಕೊಂಡು ಮಾರುತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತೇಜು, ನವೀನ್, ವೆಂಕಟೇಶ್, ಕೆಂಚ, ಮಯೂರ್, ಕೆಂಪ ಎಂಬುವವರು ಹಲ್ಲೆಕೋರರಾಗಿದ್ದಾರೆ. ಅಲ್ಲಿದ್ದ ಸ್ಥಳೀಯರು ಗಾಯಾಳು ಮಾರುತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಸಂಬಂಧ ನಂದಿನಿ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ:Durga Mandir : ದುರ್ಗಾ ಪೂಜೆ ವೇಳೆ ಮಂಟಪ ಕುಸಿದು ಮಹಿಳೆ ಸಾವು; 17 ಮಂದಿಗೆ ಗಾಯ

ದೊಡ್ಡಮ್ಮ ನೀಡಿದ ರೇಷನ್‌ ದುಡ್ಡಲ್ಲಿ ಗೆಳೆಯರಿಗೆ ಪಾರ್ಟಿ ಕೊಟ್ಟವನನ್ನೇ ಕೊಂದ ದುಷ್ಟರು; ಐವರ ಬಂಧನ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಪಾರ್ಟಿ ಕೊಡಿಸಿದ ಗೆಳೆಯನನ್ನೇ ಐವರು ಸೇರಿ ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ಜನವರಿ 24ರಂದು ಬೆಳಗಿನ ಜಾವ 2.30ರ ಸುಮಾರಿಗೆ ದರ್ಶನ್‌ (Darshan) ಎಂಬಾತನನ್ನು ಆತನ ಸ್ನೇಹಿತರೇ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯಪುರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ದೊಡ್ಡಮ್ಮ ಕೊಟ್ಟ ದುಡ್ಡಲ್ಲಿ ಪಾರ್ಟಿ

ಮನೆಯ ರೇಷನ್‌ ಸೇರಿ ಹಲವು ದಿನಬಳಕೆ ವಸ್ತುಗಳನ್ನು ಖರೀದಿಸು ಎಂದು ದರ್ಶನ್‌ಗೆ ಆತನ ದೊಡ್ಡಮ್ಮ 3 ಸಾವಿರ ರೂ. ಕೊಟ್ಟಿದ್ದರು. ಇದೇ ದುಡ್ಡಲ್ಲಿ ಗೆಳೆಯರ ಜತೆ ಪಾರ್ಟಿ ಮಾಡಲು ದರ್ಶನ್‌ ಹೋಗಿದ್ದ. ಬಾರ್‌ನಲ್ಲಿ ಗೆಳೆಯರ ಜತೆ ದರ್ಶನ್‌ ಪಾರ್ಟಿ ಮಾಡಿದ್ದ. ಇದಾದ ಕೆಲ ಹೊತ್ತಲ್ಲೇ ಮೊಬೈಲ್‌ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಮಧ್ಯೆಯೇ ಗಲಾಟೆ ನಡೆದಿದೆ. ಇವರ ಸಹವಾಸವೇ ಬೇಡ ಎಂದು ರಮೇಶ್‌ ಎಂಬಾತನ ಮನೆಯಲ್ಲಿ ದರ್ಶನ್‌, ನಿತಿನ್‌ ಹಾಗೂ ರಮೇಶ್‌ ಪಾರ್ಟಿ ಮಾಡುತ್ತಿದ್ದರು.

ಬಂಧಿತ ಆರೋಪಿಗಳು

ಇದನ್ನೂ ಓದಿ: Murder Case : ಬೆಂಗಳೂರಿನಲ್ಲಿ ರೌಡಿ ಶೀಟರ್‌ ಕೊಲೆ; ಮನೆ ಹೊರಗಡೆ ಮಲಗಿದಲ್ಲೇ ಮರ್ಡರ್‌

ಬಾರ್‌ನಲ್ಲಿ ನಡೆದ ಗಲಾಟೆಯನ್ನು ಮರೆತು ಮನೆಗೆ ಹೋಗದ ಚಂದ್ರಶೇಖರ್‌, ಪ್ರೀತಂ, ಯಶವಂತ್‌, ಪ್ರಶಾಂತ್‌, ಲಂಕೇಶ್‌ ಹಾಗೂ ಮತ್ತೊಬ್ಬ ದರ್ಶನ್‌ ಎಂಬುವರು ರಮೇಶ್‌ ಮನೆಗೆ ಬಂದಿದ್ದಾರೆ. ಅಲ್ಲಿ ಪ್ರೀತಂ ಹಾಗೂ ನಿತಿನ್‌ ಮಧ್ಯೆ ಭಾರಿ ಗಲಾಟೆ ನಡೆದಿದೆ. ಇದೇ ವೇಳೆ, ಹೋಗ್ಲಿ ಬಿಡ್ರೋ ಎಂದು ದರ್ಶನ್‌ ಜಗಳ ಬಿಡಿಸಲು ಮುಂದಾಗಿದ್ದಾನೆ. “ನಿನ್ನಿಂದಲೇ ಎಲ್ಲ ಆಗಿದ್ದು” ಎಂದು ಪ್ರೀತಂ ಹಾಗೂ ಆತನ ಗೆಳೆಯರು ದರ್ಶನ್‌ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ದರ್ಶನ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಇದಾದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಸುಬ್ರಹ್ಮಣ್ಯಪುರ ಪೊಲೀಸರು ಪ್ರೀತಂ ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version