Site icon Vistara News

Bengaluru News : ಮುಟ್ಟಾಗಿದೆ, ಹೊಟ್ಟೆನೋವು ಅಂದ್ರೂ ಡಿಪೋ ಮ್ಯಾನೇಜರ್‌ ಬಿಡ್ತಿಲ್ಲ ಎಂದು ಅತ್ತ ಕೆಎಸ್‌ಆರ್‌ಟಿಸಿ ಕಂಡಕ್ಟರ್‌

KSRTC women Conductor Torture by Depot manager

ಬೆಂಗಳೂರು: ರಾಜ್ಯ ಸರ್ಕಾರವು ಮಹಿಳೆಯರ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ ಜಾರಿ ಮಾಡಿದೆ. ಆದರೆ ಶಕ್ತಿ‌ ಯೋಜನೆಗಾಗಿ ಹಗಲಿರುವ ಶ್ರಮಿಸುವ ಮಹಿಳಾ ಕಂಡೆಕ್ಟರ್‌ಗೆ (KSRTC Conductor) ಕಿರುಕುಳ ನೀಡುತ್ತಿರುವ (‌Torture) ಆರೋಪವೊಂದು (Depot manager Torture) ಕೇಳಿ ಬಂದಿದೆ. ಮುಟ್ಟಾಗಿದೆ (Periods)ಅಂದರೂ ಡ್ಯೂಟಿ ಮಾಡಿ ಅಂತಾರೆ ಎಂದು ಕೆಎಸ್‌ಆರ್‌ಟಿಸಿಯ ನಿರ್ವಾಹಕಿ ಕಣ್ಣೀರು ಹಾಕಿದ್ದಾರೆ. ಬೆಂಗಳೂರಿನ ದೀಪಾಂಜಲಿ ನಗರದ ಕೆಎಸ್‌ಆರ್‌ಟಿಸಿ ಡಿಪೋ 5ರ ಕಂಡೆಕ್ಟರ್ ಮಂಜಮ್ಮ ಎಂಬುವವರು ವಿಡಿಯೊ ಮಾಡಿ ಗಳಗಳನೆ ಅತ್ತಿದ್ದಾರೆ.

ಡಿಪೋ ಮ್ಯಾನೇಜರ್‌ ಎಂ ಕೃಷ್ಣಪ್ಪ ಎಂಬುವವರು ಕಿರುಕುಳ ನೀಡುತ್ತಿದ್ದಾರೆ ಎಂದು ಮಂಜಮ್ಮ ಆರೋಪಿಸಿದ್ದಾರೆ. ಕೃಷ್ಣಪ್ಪನ ಟಾರ್ಚರ್ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಕ್ಕೆ ಕೆಲಸಕ್ಕೆ ಬೇಗ ಬಂದರೂ ಡ್ಯೂಟಿ ನೀಡದೆ ಸತಾಯಿಸುತ್ತಿದ್ದಾರೆ. ಎಷ್ಟೇ ತಡವಾದರೂ ಕೆಲಸ ಮುಗಿಸಿ ಮನೆಗೆ ಹೋಗುವಂತೆ ಕಿರಿಕಿರಿ ಮಾಡುತ್ತಿದ್ದಾರೆ ಎಂದಿದ್ದಾರೆ. ಅಧಿಕಾರಿಗಳ ಕಿರುಕುಳಕ್ಕೆ ರೋಸಿ ಹೋಗಿ ಮಂಜಮ್ಮ ಸೇರಿ 44 ಸಿಬ್ಬಂದಿ ಸಿಎಂ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರಿಗೆ ಪತ್ರವನ್ನು ಬರೆದಿದ್ದಾರೆ.

ಇದನ್ನೂ ಓದಿ: Road Accident : ಬೈಕ್‌ನಿಂದ ಸ್ಕಿಡ್‌ ಆಗಿ ಬಿದ್ದು ಎಎಸ್‌ಐ ಸಾವು; ಹೆಲ್ಮೆಟ್ ಹಾಕಿದ್ದರೆ ಉಳಿಯುತ್ತಿತ್ತು ಜೀವ

ಪತ್ರದಲ್ಲಿ ಏನಿದೆ?

-ಕೆಲಸಕ್ಕೆ ಹಾಜರಾಗಿದ್ದರೂ, ಬೆಳಗ್ಗೆಯಿಂದ ಸಂಜೆವರೆಗೂ ಡ್ಯೂಟಿ ನೀಡದೆ ಸುಮ್ಮನೆ ರಜೆ ಎಂದು ಬರೆಯುತ್ತಿದ್ದಾರೆ.
-ತಡವಾಗಿ ಗಾಡಿ ಕೊಟ್ಟು ಪೂರ್ತಿ ಕಿಲೋ ಮೀಟರ್ ಮಾಡಬೇಕು ಎಂದು ಕಿರುಕುಳ ನೀಡುತ್ತಿದ್ದಾರೆ.
-ಡಿಪೋ ಮ್ಯಾನೇಜರ್ ಕೇಳಿದರೆ ಬಾಯಿಗೆ ಬಂದ ಹಾಗೆ ಬೈದು ನಿಂದಿಸುತ್ತಾರೆ.
-ಘಟಕದಲ್ಲಿ ಸುಮ್ಮನೆ ಮೂರ್ನಾಲ್ಕು ದಿನ ಕೂರಿಸಿಕೊಂಡು ರಜೆ ಅರ್ಜಿ ಬರೆಸಿಕೊಳ್ಳುತ್ತಿದ್ದಾರೆ ಎಂದು ಹಲವು ಅಂಶಗಳನ್ನು ಪತ್ರದಲ್ಲಿ ಬರೆದು, 44 ಜನರ ಸಹಿ ಹಾಕಿಸಿ ಸಾರಿಗೆ ಸಚಿವರಿಗೆ ಪತ್ರ ಬರೆದಿದ್ದಾರೆ. ಜತೆಗೆ ಸಿಎಂ ಸಿದ್ದರಾಮಯ್ಯರ ಜನಸ್ಪಂದನ ಕಾರ್ಯಕ್ರಮದಲ್ಲೂ ದೂರು ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version